ಬೆಳ್ತಂಗಡಿ : ದಿನೇ ದಿನೇ ಏರುತ್ತಿರುವ ತಾಪಮಾನದಿಂದ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಬಾವಿ, ಕೆರೆ, ಕೊಳವೆ ಬಾವಿಗಳು ತಳ ಹಿಡಿಯುತ್ತಿವೆ. ನೀರಿನ ಒರತೆ ಕಡಿಮೆಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ಬರ ಭೀತಿಯಿದೆ. ಕೃಷಿಕರು ಕಂಗಾಲಾ ಗಿದ್ದಾರೆ. ಪ್ರಾಣಿ, ಪಕ್ಷಿ ಸಂಕುಲ ನೀರಿನ ದಾಹಕ್ಕೆ ಹಾತೊರೆಯುವಂತಾಗಿದೆ. ನದಿ, ಕೆರೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ವಿವಿಧ ಪ್ರಭೇದಗಳ ಮತ್ಸé ಸಂಕುಲವೂ ಅವನತಿಯತ್ತ ಮುಖ ಮಾಡತೊಡಗಿದೆ.
ಕ್ಷೀಣಿಸಿದ ಹರಿವು
ತಾಲೂಕಿನಾದ್ಯಂತ ಬಹು ತೇಕ ನದಿಗಳು ಬತ್ತುತ್ತಿದ್ದು, ನೇತ್ರಾವತಿ, ಸೋಮಾವತಿ, ಮೃತ್ಯುಂಜಯ ಮೊದಲಾದ ನದಿಗಳಲ್ಲಿ ನೀರಿನ ಹರಿವು ಕ್ಷೀಣಿ ಸಿದೆ. ಬೆಳ್ತಂಗಡಿ ನಗರ ವ್ಯಾಪ್ತಿಗೆ ನೀರಿನಾಶ್ರಯವಾಗಿರುವ ಸೋಮಾವತಿ ನದಿ ವರ್ಷಂಪ್ರತಿ ಎಪ್ರಿಲ್ ಕೊನೆಯಲ್ಲಿ ಬತ್ತುತ್ತಿದ್ದು, ಈ ಬಾರಿ ಮಾರ್ಚ್ ಆರಂಭದಲ್ಲೇ ಬತ್ತಿದ್ದು, ಬೆಳ್ತಂಗಡಿ ನಗರದಲ್ಲಿ ನೀರಿನ ಕೊರತೆ ಆಗುವ ಸೂಚನೆ ನೀಡಿದಂತಿದೆ.
ಬೆಳ್ತಂಗಡಿ ನಗರಕ್ಕೆ ಸುಧಾರಿತ ನೀರು ಸರಬರಾಜು ಮಾಡುವ ಉದ್ದೇಶದಿಂದ ಇಲ್ಲಿನ ಸೋಮಾವತಿ ನದಿ ದಡದಲ್ಲಿ ಅಂದಾಜು 13 ಕೋ. ರೂ. ವೆಚ್ಚ ದಲ್ಲಿ ಜ್ಯಾಕ್ವೆಲ್ ಹಾಗೂ ಪಂಪ್ಹೌಸ್ ನಿರ್ಮಿಸಿ ಇದರಲ್ಲಿ ಶುದ್ಧೀಕರಿಸಿದ ನೀರು ನಗರದ ಬಹುತೇಕ ಕಡೆಗೆ ಉಪಯೋಗಕ್ಕೆ ಬಳಸಲಾಗುತ್ತಿದೆ. ಈ ಟ್ಯಾಂಕ್ಗೆ ನೀರು ತುಂಬಲು ಮಳೆಗಾಲ ಮುಗಿದ ಬಳಿಕ ತಾತ್ಕಾಲಿಕವಾಗಿ ಮಣ್ಣಿನಿಂದ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ ಈ ಬಾರಿ ಕಟ್ಟ ನಿರ್ಮಿಸಿದ ಕೆಲವು ದಿನಗಳಲ್ಲೇ ನೀರಿನ ಪ್ರಮಾಣ ಕಡಿಮೆಯಾಗಿ ನೀರಿನ ಬರ ಎದುರಿಸುವ ಮುನ್ಸೂಚನೆ ರವಾನೆ ಮಾಡಿದಂತಿದೆ. ಇನ್ನು ಅನೇಕರು ನಗರ ಪ್ರದೇಶದಲ್ಲಿರುವ ಕೊಳವೆ ಬಾವಿಗಳನ್ನು ನಂಬಿದ್ದು ಅದರಲ್ಲೂ ಎಪ್ರಿಲ್, ಮೇ ತಿಂಗಳಲ್ಲಿ ಜಲಮಟ್ಟ ಇಳಿಕೆಯಾಗುವ ಸಾಧ್ಯತೆಯಿದೆ.
ಕೊಳವೆ ಬಾವಿಗೆ ಬೇಡಿಕೆ
ತಾಲೂಕಿನಾದ್ಯಂತ ಕೆಲವು ಕಡೆಗಳಲ್ಲಿ ಕೊಳವೆ ಬಾವಿ ತೆಗೆದರೂ ನೀರು ಸಿಗದೇ ಇರುವ ಉದಾಹರಣೆಗಳಿವೆ. ಒಂದು ಕೊಳವೆ ಬಾವಿಯನ್ನು ಸುಮಾರು 700 ಅಡಿ ತನಕ ಕೊರೆಯಬೇಕಾದ ಪರಿಸ್ಥಿತಿ ಇದ್ದು, ಇದಕ್ಕೆ ಸುಮಾರು 1.5 ಲಕ್ಷ ರೂ. ತನಕ ವೆಚ್ಚ ಮಾಡಬೇಕಾಗಿದೆ.
ದುರಸ್ತಿ ಕಾರ್ಯವಾಗಲಿ
ತಾಲೂಕಿನ ಕೆಲವು ಗ್ರಾಮಗಳಲ್ಲಿರುವ ಅಲ್ಪಸ್ವಲ್ಪ ನೀರಿದ್ದು, ಪಾಳು ಬಿದ್ದಿರುವ ಸರಕಾರಿ ಬಾವಿ, ಕೆರೆಗಳ ದುರಸ್ತಿ ಕಾರ್ಯ ನಡೆಸಿದರೆ ಗ್ರಾಮೀಣ ಭಾಗದ ಕೆಲವು ಕುಟುಂಬಗಳಿಗೆ ನೀರಿನ ಪ್ರಯೋಜನವಾಗಬಹುದು.