Advertisement

ಬೆಳ್ತಂಗಡಿ: ಅಪ್ಪ , ಅಣ್ಣನಿಂದಲೇ ಕೊಲೆ

11:45 AM Feb 13, 2018 | Team Udayavani |

ಬೆಳ್ತಂಗಡಿ: ನಗರದ ಮಟ್ಲದಲ್ಲಿ ರವಿವಾರ ರಾತ್ರಿ ಯುವಕನನ್ನು ಬರ್ಬರವಾಗಿ ಇರಿದು ಕೊಲೆಗೈಯಲಾಗಿದೆ. ಸ್ಥಳೀಯ ನಿವಾಸಿ ನವೀನ್‌ (28) ಮೃತಪಟ್ಟವರು. ತಂದೆ ಹಾಗೂ ಅಣ್ಣನೇ ಈ ಕೃತ್ಯ ಎಸಗಿದ್ದಾರೆ.

Advertisement

ಮಟ್ಲದ ಓಂ ಶ್ರೀ ಗಜಮಾರುತಿ ನಿಲಯದಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಾದ ತಂದೆ ಮಂಜುನಾಥ ಎಸ್‌.ಜಿ. (53) ಹಾಗೂ ಸಹೋದರ ರಾಘವೇಂದ್ರ ಎಂ.ಎಂ.(30) ಅವರನ್ನು ದುಷ್ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಒಂದೇ ಮನೆಯಲ್ಲಿ 3 ಕುಟುಂಬ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡಮಗೆಯ ಸುಡುಗಾಡು ಸಿದ್ದ ಜನಾಂಗದವನಾದ ಮಂಜುನಾಥ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕೃಷಿ ಹಾಗೂ ಜೋತಿಷ ವೃತ್ತಿ ನಡೆಸುತ್ತಿದ್ದಾನೆ. ರಾಘವೇಂದ್ರ, ಪ್ರಸನ್ನ, ನವೀನ್‌ ಆತನ ಪುತ್ರರು. ಈ ಪೈಕಿ ಪ್ರಸನ್ನ ಲಾೖಲದ ಕೈಪ್ಲೋಡಿಯಲ್ಲಿ ಪತ್ನಿ ಜತೆ ವಾಸವಿದ್ದಾರೆ. ಮಟ್ಲದ ಮನೆಯ ಕೆಳ ಅಂತಸ್ತಿನಲ್ಲಿ ನವೀನ್‌ ಹಾಗೂ ಪತ್ನಿ, ಮಕ್ಕಳು; ಮೇಲಂತಸ್ತಿನಲ್ಲಿ ಮಂಜುನಾಥ ದಂಪತಿ, ಅದಕ್ಕೂ ಮೇಲಿನ ಅಂತಸ್ತಿನಲ್ಲಿ ರಾಘವೇಂದ್ರ ದಂಪತಿ ವಾಸಿಸುತ್ತಿದ್ದರು. ಮಂಜುನಾಥ ಹಾಗೂ ರಾಘವೇಂದ್ರ ಬೆಳ್ತಂಗಡಿಯಲ್ಲಿ ಜೋತಿಷ ವೃತ್ತಿ ನಡೆಸುತ್ತಿದ್ದರೆ ನವೀನ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ತಂದೆ – ಮಕ್ಕಳು ಆಗಾಗ ಮನೆಯಲ್ಲಿ ಜತೆಗೂಡಿ ಮದ್ಯದ ಪಾರ್ಟಿ ಮಾಡುವ  ಕ್ರಮವಿತ್ತು. ಆ ಸಂದರ್ಭದಲ್ಲಿ ಜಗಳವೂ ನಡೆಯುತ್ತಿತ್ತು. ಬಳಿಕ ವಾತಾವರಣ ತಿಳಿಯಾಗುತ್ತಿತ್ತು. ಆದರೆ ರವಿವಾರ ರಾತ್ರಿ ಜಗಳ ತಾರಕಕ್ಕೇರಿ ಹತ್ಯೆಯಲ್ಲಿ ಪರ್ಯವಸಾನಗೊಂಡಿತು. ಮಗನೊಂದಿಗೆ ಜಗಳಕ್ಕಿಳಿದ ತಂದೆ ಮಂಜುನಾಥ, “ನಿನ್ನಿಂದಾಗಿ ಅವಮಾನ ಆಗಿದೆ. ನಿನ್ನನ್ನು ಮುಗಿಸದೇ ಬಿಡುವುದಿಲ್ಲ’ ಎಂದು ಬೆದರಿಸಿದ. ಸಹೋದರ ರಾಘವೇಂದ್ರನೂ ಸೇರಿಕೊಂಡಾಗ ಜಗಳ ತಾರಕಕ್ಕೇರಿತು. ಅಪ್ಪ,
ಅಣ್ಣ ಚಾಕುವಿನಿಂದ ಇರಿದರು. ಇನ್ನೋರ್ವ ಸಹೋದರ ಪ್ರಸನ್ನ ಆಸ್ಪತ್ರೆಗೆ ಕರೆದೊಯ್ದರೂ ನವೀನ್‌ ಬದುಕಲಿಲ್ಲ.

ಆಸ್ತಿ ವೈಷಮ್ಯ ಕಾರಣ?
ಡಿ. 31ರಂದು ಮನೆಯಲ್ಲಿ ಹೊಸ ವರ್ಷ ಆಚರಣೆ ಸಂದರ್ಭ ನವೀನ ಮತ್ತು ಮಂಜುನಾಥ ಅವರ ನಡುವೆ ಜಗಳವಾಗಿ ನವೀನ್‌ ತಂದೆಗೆ ಹೊಡೆದಿದ್ದನು ಹಾಗೂ ಕಿಟಿಕಿ ಗಾಜುಗಳನ್ನು ಪುಡಿ ಮಾಡಿದ್ದನು. ಬಳಿಕ ರಾಜಿಯಲ್ಲಿ ಪ್ರಕರಣ ಮುಗಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟು ರವಿವಾರ ಮತ್ತೆ ತಂದೆ ಜಗಳ ತೆಗೆದಿದ್ದ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಅವರೊಳಗೆ ಆಸ್ತಿ ವೈಷಮ್ಯವೂ ಇದ್ದು ಕೊಲೆಗೆ ಅದೇ ಕಾರಣ ಎಂದೂ ಹೇಳಲಾಗುತ್ತಿದೆ. ನವೀನ ಅವರ ಪತ್ನಿ ಬೇಬಿ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ ಅವರು ತನಿಖೆ ನಡೆಸುತ್ತಿದ್ದಾರೆ.

Advertisement

ಕೆಲವೇ ತಾಸುಗಳಲ್ಲಿ  ಬಂಧನ
ಕೃತ್ಯ ಎಸಗಿದ ಆರೋಪಿಗಳಿಬ್ಬರೂ ತತ್‌ಕ್ಷಣ ತಮ್ಮ ಝೈಲೋ ಕಾರಿನಲ್ಲಿ ಪರಾರಿಯಾಗಿದ್ದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ ಸೂಚನೆಯಂತೆ ಎಸ್‌ಐ ರವಿ ಹಾಗೂ ತಂಡ ತತ್‌ಕ್ಷಣ ಕಾರ್ಯಾಚರಣೆಗಿಳಿದರು. ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿಗಳು ಅರ್ಧ ತಾಸು ವಿಶ್ರಾಂತಿ ಪಡೆದ ಮಾಹಿತಿ ದೊರೆಯಿತು. ಅಲ್ಲಿ ದೊರೆತ ಮಾಹಿತಿಯಂತೆ ಆರೋಪಿಗಳ ಬೆನ್ನತ್ತಿದ ಪೊಲೀಸರು ಚಿಕ್ಕಮಗಳೂರು ನಗರದ ಉಪ್ಪಳಿ ದರ್ಗಾದ ಬಳಿ ಬಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next