Advertisement

ಬೆಳ್ತಂಗಡಿ: ಮೊಗೆದಷ್ಟು ಬೇಡಿಕೆಗಳು ನಮ್ಮವು

08:00 AM Apr 21, 2018 | Team Udayavani |

ಕೃಷಿ, ಕೈಗಾರಿಕೆಗಳು, ಧಾರ್ಮಿಕ ಸ್ಥಳಗಳು, ಪ್ರವಾಸೀ ತಾಣಗಳು  ಇರುವ ಬೆಳ್ತಂಗಡಿ ದಕ್ಷಿಣ ಕನ್ನಡದ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯವಾದದ್ದು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯನ್ನೇ ಹೊಂದಿದೆ. ಹಳ್ಳಿ ಮತ್ತು ಅರೆಪಟ್ಟಣ ಪ್ರದೇಶಗಳನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಬೆಳ್ತಂಗಡಿ ಕ್ಷೇತ್ರ ನಕ್ಸಲ್‌ ಬಾಧಿತ ಪ್ರದೇಶಗಳನ್ನೂ ಒಳಗೊಂಡಿದೆ. ಇಲ್ಲಿಯ ಜನರ ಬೇಡಿಕೆಗಳು ಹತ್ತು ಹಲವು.

Advertisement

1. ಎಳನೀರು- ಸಂಸೆ ರಸ್ತೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ನಿವಾಸಿಗಳು ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಸುತ್ತಿಬಳಸಿ ಬರಬೇಕಿದೆ. ದಿಡುಪೆ- ಎಳನೀರು- ಸಂಸೆ ರಸ್ತೆ ಸಂಪರ್ಕ ಸಾಧ್ಯವಾದಲ್ಲಿ ಈ ಪರದಾಟ ತಪ್ಪಲಿದೆ.

2. ಎಂಡೋ – ಶಾಶ್ವತ ಪರಿಹಾರ
ಎಂಡೋಸಲ್ಫಾನ್‌ ಪೀಡಿತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ನಡೆದಿಲ್ಲ. ವಿಶೇಷ ಆಸ್ಪತ್ರೆ ಕೈಗೂಡಿಲ್ಲ. ಕೇರಳ ಮಾದರಿ ಅಥವಾ ವಿಶೇಷ ಪ್ಯಾಕೇಜ್‌ ನಿಜವಾದ ಎಂಡೋ ಪೀಡಿತರಿಗೆ ಒದಗಿಸಬೇಕಿದೆ.

3. ನಕ್ಸಲ್‌ ಬಾಧಿತ ಪ್ರದೇಶಗಳ ಅಭಿವೃದ್ಧಿ
ಕುತ್ಲೂರು, ನಾರಾವಿ, ನಾವರ, ಸುಲ್ಕೇರಿ, ಸುಲ್ಕೇರಿ ಮೊಗ್ರು, ಶಿರ್ಲಾಲು, ಸವಣಾಲು, ನಡ, ಮಲವಂತಿಗೆ, ನಾವೂರು, ಮಿತ್ತಬಾಗಿಲು ಮೊದಲಾದ ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.

4. ರಸ್ತೆ ಅಭಿವೃದ್ಧಿ
ಸೀಟು- ಕಾಯರ್ತೋಡಿ, ಉಜಿರೆ- ಬೆಳಾಲು, ಪರಪ್ಪು- ಕೊಯ್ಯೂರು, ಬಳ್ಳ ಮಂಜ – ಕಲ್ಲೇರಿ, ಕುತ್ರೊಟ್ಟು- ಚಂದ್ಕೂರು, ಸೋಮಂತಡ್ಕ- ಗುಂಡಿರಸ್ತೆ, ರೇಷ್ಮೆರೋಡ್‌ -ಕಿನ್ನಿ ಗೋಳಿ- ಮದ್ದಡ್ಕ ರಸ್ತೆ ಅಭಿವೃದ್ಧಿಗೆ ಒತ್ತು ಬೇಕಿದೆ.

Advertisement

5. ರಾಷ್ಟ್ರೀಯ ಹೆದ್ದಾರಿ 
ಬಂಟ್ವಾಳ ವಿಲ್ಲುಪುರಂ ರಾ. ಹೆ.ತಾಲೂಕಿ ನಲ್ಲಿ ಹಾದು ಹೋಗುತ್ತದೆ. ರಸ್ತೆ ಅಗಲ ಕಿರಿದಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಬಂಟ್ವಾಳ ಹಾಗೂ ತಾಲೂಕಿನ ರಸ್ತೆ ದ್ವಿಪಥಗೊಳಿಸಲು ಸಂಬಂಧಪಟ್ಟವರಿಗೆ ಒತ್ತಾಯ ಹೇರಬೇಕಿದೆ.

6. ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ
ತಾಲೂಕು ಆಸ್ಪತ್ರೆ ಆಧುನೀಕರಣಗೊಳಿಸುವ ಜತೆಗೆ ಸಮರ್ಪಕ ಸಿಬಂದಿ ನಿಯೋಜಿಸಿ ಇಲ್ಲಿಯೇ ಜನರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕಿದೆ. ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕಿದೆ.

7. ಕ್ರೀಡಾಂಗಣ, ಹಾಸ್ಟೆಲ್‌
ತಾಲೂಕು ಕ್ರೀಡಾಂಗಣ  ಹದಗೆಟ್ಟಿದ್ದು ತಾಲೂಕಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಮರ್ಪಕ ಅಭಿವೃದ್ಧಿ ಮಾಡುವ ಜತೆಗೆ ಕ್ರೀಡಾ ಹಾಸ್ಟೆಲ್‌ ತೆರೆದು ತಾಲೂಕಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಿದೆ.

8. ಪ್ರವಾಸೋದ್ಯಮ
ಗಡಾಯಿಕಲ್ಲು, ವೇಣೂರು, ಎರ್ಮಾಯಿ ಜಲಪಾತ, ಆನಡ್ಕ, ಬಂಡಾಜೆ ಜಲಪಾತ, ಶಿಶಿಲ, ಶ್ರೀಕ್ಷೇತ್ರ ಧರ್ಮಸ್ಥಳ, ಸುರ್ಯ, ಸೌತಡ್ಕ ದೇವಸ್ಥಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಬೇಕಿದೆ.

9. ನೀರಾವರಿ
ತಾಲೂಕಿನಲ್ಲಿ ಬೇಸಗೆ ವೇಳೆಗೆ ನದಿ ತೊರೆಗಳು ಬತ್ತುತ್ತಿದ್ದು, ಕಿಂಡಿ ಅಣೆಕಟ್ಟು ಗಳನ್ನು ಎಲ್ಲೆಡೆ ನಿರ್ಮಿಸಿ, ತಾಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕಿದೆ.

10. ಮೆಡಿಕಲ್‌, ನರ್ಸಿಂಗ್‌ ಕಾಲೇಜು
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರಕಾರಿ ಮೆಡಿಕಲ್‌ ಹಾಗೂ ನರ್ಸಿಂಗ್‌ ಕಾಲೇಜುಗಳ ಆವಶ್ಯಕತೆ ಇದೆ. ತಾಲೂಕಿನ ವಿದ್ಯಾರ್ಥಿಗಳು ಮಂಗಳೂರು ಮೊದಲಾದೆಡೆ ತೆರಳಿ ಅಭ್ಯಾಸ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

11. ಕೈಗಾರಿಕೆಗಳ ಸ್ಥಾಪನೆ
ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಕಿದೆ. ಸರಕಾರಿ ಜಾಗ ನಿಯೋಜನೆಯಾಗಿದ್ದರೂ ಬೆಳವಣಿಗೆ ಕಂಡುಬಂದಿಲ್ಲ. ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಜನತೆಗೂ ಅನುಕೂಲವಾಗಲಿದೆ.

12. ಚರಂಡಿ ವ್ಯವಸ್ಥೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕಿದೆ. ಮಳೆ ಬಂದಾಗ ತಾಲೂಕಿನ ವಿವಿಧೆಡೆ ನೀರು ನಿಲ್ಲುತ್ತಿದ್ದು, ಸಮರ್ಪಕವಾಗಿ ಹರಿಯಲು ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next