Advertisement

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಪಣ ನೀಡಿ

01:30 PM Feb 27, 2020 | Naveen |

ಬಳ್ಳಾರಿ: ಮಕ್ಕಳಿಗೆ ಶೇ. 85ರಷ್ಟು ಕಲಿಕಾ ಸಾಮರ್ಥ್ಯ 3-6 ವರ್ಷಗಳ ಅವಧಿ ಯಲ್ಲಿದ್ದು, 10-15 ಭಾಷೆ ಕಲಿಯುವ ಶಕ್ತಿ ಅವರಲ್ಲಿರುತ್ತದೆ. ಹಾಗಾಗಿ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಎಲ್ಲ ಅಂಗನವಾಡಿಗಳನ್ನು ಮಾಂಟೆಸರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವಥ್‌ ನಾರಾಯಣ ಹೇಳಿದರು.

Advertisement

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಆವರಣದಲ್ಲಿ ಕೇಂದ್ರೀಯ ಗ್ರಂಥಾಲಯ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬಹುಚಟುವಟಿಕಾ ಕೇಂದ್ರಗಳ ಉದ್ಘಾಟನೆ, ಡಾ| ಬಿ.ಆರ್‌. ಅಂಬೇಡ್ಕರ್‌, ಬಾಬು ಜಗಜೀವನರಾಮ್‌ ಪುತ್ಥಳಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ 3-6 ವರ್ಷದ ಅವ ಧಿಯಲ್ಲಿ ಹೆಚ್ಚಿನ ಕಲಿಕಾ ಸಾಮರ್ಥ್ಯ ಅಡಗಿರುತ್ತದೆ. ನಮ್ಮಲ್ಲಿ 6ನೇ ವರ್ಷದಿಂದ 1ನೇ ತರಗತಿಗೆ ಸೇರಿಸುವ ಪದ್ಧತಿಯಿದೆ. ಪರಿಣಾಮ ಶೇ. 30ರಷ್ಟು ಜನರು ಮಾತ್ರ ಗಣಿತ, ಇಂಗ್ಲಿಷ್‌ ಸೇರಿ ಉನ್ನತ ಮಟ್ಟದ ಶಿಕ್ಷಣ ಪಡೆದವರಿದ್ದಾರೆ. ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಸಕರು, ಸಂಸದರು, ಜಿಲ್ಲಾ ಧಿಕಾರಿಗಳು ನಿರ್ಣಯ ಕೈಗೊಂಡಿದ್ದು, ಎಲ್ಲ ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದವರು ತಿಳಿಸಿದರು.

ವಿವಿಗಳಿಗೆ ಹೊಸ ಪದ್ಧತಿ: ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯ ಮ್ಯಾನೇಜ್ಮೆಂಟ್‌ ಸಿಸ್ಟಂ ಎಂಬ ಹೊಸ ಪದ್ಧತಿಯನ್ನು ಜಾರಿಗೆ ತರಲಾಗುತ್ತದೆ. ಇದರಲ್ಲಿ ವಿವಿ ಆಡಳಿತ, ಸಿಬ್ಬಂದಿ ನೇಮಕಾತಿ, ಪರೀಕ್ಷೆ ನಡೆಸುವುದು ಸೇರಿದಂತೆ ಎಲ್ಲ ವಿಚಾರಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬಹುದಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಕಾಲೇಜು ಸ್ವಾಯತ್ತ ಸಂಸ್ಥೆಯಾಗಬೇಕು. ಪ್ರತಿಯೊಂದು ಶಿಕ್ಷಣ ಸಂಸ್ಥೆ ವಿವಿ ಆಗಬೇಕು. ಮುಂದಿನ ದಿನಗಳಲ್ಲಿ ಇವುಗಳನ್ನು ಜಾರಿಗೆ ತರಲಾಗುವುದು. ಸಮಾಜದ ಆಶಯ, ಚಿಂತನೆ, ಅಭಿವೃದ್ಧಿಗಳು ವಿವಿಗಳಿಂದ ಆಗಬೇಕು. ವಿವಿಗಳು ಚಿಂತನಾ ಕೇಂದ್ರಗಳಾಗಿ ಇರಬೇಕು. ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಸಂಸ್ಥೆಗಳೇ ನಾಯಕತ್ವವಹಿಸಿಕೊಳ್ಳಬೇಕು ಎಂದು ವಿವರಿಸಿದರು.

ಯೂತ್‌ ಎಂಪವರ್‌ವೆುಂಟ್‌ ಸೆಲ್‌ ಆರಂಭ: ಯುವಕರಿಗಾಗಿ ಯೂತ್‌ ಎಂಪವರ್‌ವೆುಂಟ್‌ ಸೆಲ್‌ ಆರಂಭಿಸಲಾಗುವುದು. ಇದರಲ್ಲಿ ಎಲ್ಲೇ ಉದ್ಯೋಗ ಸೇರಿ ಇತರೆ ಅವಕಾಶಗಳು ಇದ್ದಲ್ಲಿ ಮಾಹಿತಿ ನೀಡಲಾಗುವುದು. ಉದ್ಯೋಗ ಅವಕಾಶಗಳು ಇದ್ದಲ್ಲಿ ಅರ್ಹತೆ, ಅವಶ್ಯಕತೆ ಬಗ್ಗೆ ತಿಳಿಸಿ ಸಹಕರಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶಿಕ್ಷಣ ಸಾಲ ಕೊಡಿಸಲು ಪ್ರಯತ್ನಿಸಲಾಗುವುದು. ಯುವಕರ ಭವಿಷ್ಯ ರೂಪಿಸಲು ಬೇಕಾದ ವೇದಿಕೆಯನ್ನು ನಿರ್ಮಿಸಲಾಗುವುದು ಎಂದರು.

ಭೂಮಿ, ಕಟ್ಟಡ ಇದ್ದಲ್ಲಿ ಮಂಜೂರು: ಈ ಮೊದಲು ಭೂಮಿ, ಕಟ್ಟಡ ಇಲ್ಲದಿದ್ದರೂ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರದಿಂದ ಒಮ್ಮೆ ಕಾಲೇಜು ಮಂಜೂರು ಮಾಡಿದ ಬಳಿಕ ಅದನ್ನು ಮುಚ್ಚುವುದು ಕಷ್ಟ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವುದೇ ಟ್ರಸ್ಟ್‌ಗಳಿಗೆ ಕಾಲೇಜು ಮಂಜೂರು ಮಾಡಬೇಕಾದರೆ ಜಮೀನು, ಕಟ್ಟಡ ಕಡ್ಡಾಯವಾಗಿ ಇರಬೇಕು. ಎಲ್ಲ ದಾಖಲೀಕರಣವೂ ಆನ್‌ಲೈನ್‌ ಮೂಲಕವೇ ಆಗಬೇಕು ಎಂದರು.

Advertisement

ಕಳೆದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಗೆ 5500 ಕೋಟಿ ರೂ. ಮೀಸಲಿಡಲಾಗಿತ್ತು. ಇದೀಗ 7ನೇ ವೇತನ ಅನುಷ್ಠಾನಗೊಂಡಿದ್ದರಿಂದ ಇದೀಗ 7500 ಕೋಟಿ ರೂಗಳನ್ನು ಮೀಸಲಿಡಬೇಕಾಗಿದೆ. ಇದರಲ್ಲಿ 6500 ಕೋಟಿ ರೂ. ಕೇವಲ ವೇತನ, ಶೈಕ್ಷಣಿಕ ಸಾಲ, ಕೌಶಲ್ಯಾಭಿವೃದ್ಧಿ ತರಬೇತಿಗೆ ಹೋಗುತ್ತದೆ. ಹೊಸ ನೇಮಕಾತಿಗಳು ನಡೆದಲ್ಲಿ 7500 ಕೋಟಿ ರೂ. ಇದಕ್ಕೆ ಖರ್ಚಾದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಪದವಿ ಕಾಲೇಜುಗಳಲ್ಲಿ 1750 ಉಪನ್ಯಾಸಕರ ನೇಮಕಾತಿಗೆ ಕ್ರಮಕೈಗೊಳ್ಳಲಾಗಿದೆ. ಜತೆಗೆ ವರ್ಗಾವಣೆ ಪಾಲಿಸಿಯನ್ನೂ ತರಲಾಗುತ್ತಿದ್ದು, ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಾಗದಂತೆ ಸಮಾನವಾಗಿ ಹಂಚಿಕೆಯಾಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, 2008ರಲ್ಲಿ ಶಾಸಕನಾಗಿದ್ದಾಗ ಸ್ನೇಹಿತ ಅಬ್ದುಲ್ಲಾರೊಂದಿಗೆ ಅಂದಿನ ಹಾಗೂ ಹಾಲಿ ಸಿಎಂ ಯಡಿಯೂರಪ್ಪರ ಬಳಿ ಪ್ರಸ್ತಾಪಿಸಿದಾಗ ಕೇವಲ ನಾಲ್ಕು ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿದರು. ಮಾಜಿ ಸಚಿವ ಜನಾರ್ದನರೆಡ್ಡಿ ಇದ್ದಾಗ ಪವರ್‌ ಹಂಗಿತ್ತು. ಹಾಗಾಗಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ, ಜಿಲ್ಲಾ ಖನಿಜ ನಿಧಿಯಿಂದ ನನಗೆ ಬರುವ ಅನುದಾನವನ್ನು ವಿವಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕುಲಪತಿ ಪ್ರೊ| ಸಿದ್ದು ಪಿ.ಅಲಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ಪ್ರೊ| ಬಿ.ಕೆ. ತುಳಸಿಮಾಲಾ ಸ್ವಾಗತಿಸಿದರು. ಸಂಸದ ದೇವೇಂದ್ರಪ್ಪ, ಕುಲಸಚಿವ ರಮೇಶ್‌ ಓಲೇಕಾರ್‌, ಐಎಎಸ್‌ ಅಧಿಕಾರಿ ಪ್ರದೀಪ್‌ ಸೇರಿದಂತೆ ವಿವಿ ಸಿಂಡಿಕೇಟ್‌ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next