Advertisement

ಗಣಿನಾಡಿನಲ್ಲಿ ಅಸ್ತಿತ್ವ ಉಳಿಸಿಕೊಂಡ ಬಿಜೆಪಿ

03:16 PM May 24, 2019 | Naveen |

ಬಳ್ಳಾರಿ: ಗಣಿಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಭರ್ಜರಿ ಗೆಲುವಿನಿಂದಾಗಿ ಅಸ್ತಿತ್ವ ಕ್ಷೀಣಿಸುತ್ತಿದ್ದ ಬಿಜೆಪಿಗೆ ಮರು ಜೀವಬಂದಂತಾಗಿದ್ದು, ಆಂತರಿಕ ಬಿಕ್ಕಟ್ಟಿನಿಂದಾಗಿ ಸೋತ ಕಾಂಗ್ರೆಸ್‌ ಪಕ್ಷದಲ್ಲಿ ಅಸ್ತಿತ್ವ ಕುಸಿಯುವ ತಳಮಳ ಆರಂಭವಾಗಿದೆ.

Advertisement

ಲೋಕಸಭೆಗೆ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 14 (ಒಂದು ಉಪಚುನಾವಣೆ ಸೇರಿ) ಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್‌ ಪಕ್ಷ ನಂತರ 14 ವರ್ಷಗಳ ಕಾಲ ವನವಾಸ ಅನುಭವಿಸಿದ್ದು, ಬಿಜೆಪಿ ಜಯಗಳಿಸಿತ್ತು. 2004, 2009, 2014ರಲ್ಲಿ ಸತತವಾಗಿ ಜಿಲ್ಲೆಯಲ್ಲಿ ಜಯಗಳಿಸಿ ಬಿಜೆಪಿ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ರಾಮುಲು ರಾಜೀನಾಮೆಯಿಂದಾಗಿ ಕಳೆದ 2018ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿತು. ಈ ಮೂಲಕ ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವನ್ನು ಪುನಃ ಸ್ಥಾಪಿಸಿಕೊಂಡಿತು ಎಂದೇ ವಿಶ್ಲೇಷಿಲಾಯಿತಾದರೂ, ಈ ದಾಖಲೆ ಕಾಂಗ್ರೆಸ್‌ ಪಾಲಿಗೆ ಹೆಚ್ಚು ಕಾಲ ಉಳಿಯದೇ, ಇದೀಗ 7 ತಿಂಗಳ ಅವಯಲ್ಲೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪುನಃ ಜಯಗಳಿಸುವ ಮೂಲಕ ಜಿಲ್ಲೆಯಲ್ಲಿನ ಕಾಂಗ್ರೆಸ್‌ ಪಕ್ಷದ ಅಸ್ತಿತ್ವ ಕ್ಷೀಣಿಸುವಂತೆ ಮಾಡಿದ್ದು, ಪಕ್ಷದ ಮುಖಂಡರಲ್ಲಿ ಅಂತರಿಕವಾಗಿ ತಳಮಳ ಶುರುವಾಗಿದೆ.

ಸದಾ ಒಡೆದ ಮನೆಯಂತಿರುವ ಕಾಂಗ್ರೆಸ್‌: ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಪಕ್ಷ ಸದಾ ಮನೆಯೊಂದು ಬಾಗಿಲು ಮೂರು ಎಂಬಂತಿದೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಘಟಾನುಘಟಿ ನಾಯಕರು ಇದ್ದರೂ, ಪ್ರತಿಷ್ಠೆ, ಆಂತರಿಕ ಮುನಿಸಿನಿಂದಾಗಿ ಒಗ್ಗೂಡುವುದೇ ಇಲ್ಲ. ಕೇವಲ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಬಂದಾಗಲಷ್ಟೇ ವೇದಿಕೆಗಳ ಮೇಲೆ ಒಗ್ಗಟ್ಟು ಪ್ರದರ್ಶಿಸುವ ಈ ನಾಯಕರು ನಂತರ ದಿನಗಳಲ್ಲಿ ಪಕ್ಷಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ತಮ್ಮ ಪಾಡಿಗೆ ತಾವಿರುತ್ತಾರೆ. ಇದು ಇದೀಗ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪರನ್ನು ಏಕಾಂಗಿಯನ್ನಾಗಿ ಮಾಡಿದ್ದು, ಪಕ್ಷದ ಶಾಸಕರು, ಮುಖಂಡರ ಅಸಹಕಾರದಿಂದಾಗಿ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಒಂದೊಂದೇ ಕ್ಷೀಣಿಸುವ ಸಾಧ್ಯತೆಯಿದ್ದು, ಪಕ್ಷದಲ್ಲಿ ಆಂತರಿಕ ತಳಮಳ ಆರಂಭವಾಗಿದೆ ಎನ್ನಲಾಗುತ್ತಿದೆ.

ಕ್ಷೇತ್ರದ ಹಿಡಿತ ತಪ್ಪುವ ಸಾಧ್ಯತೆ?
ಕಳೆದ 2013 ವಿಧಾನಸಭೆ ಚುನಾವಣೆಯಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಕಾಂಗ್ರೆಸ್‌ಗೆ 2018ರ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಕ್ಷೇತ್ರದ ಮೇಲಿನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿತ್ತು. ಆದರೆ, ಶಾಸಕರು, ಮುಖಂಡರಲ್ಲಿನ ಆಂತರಿಕ ಭಿನ್ನಮತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಪ್ರಮುಖ ಕಾರಣಗಳಾಗಿವೆ. ಈ ಎಲ್ಲವನ್ನು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನಡೆಸುವ ನಾಯಕತ್ವದ ಕೊರತೆ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದ್ದು, ಇದು ಹೀಗೆ ಮುಂದುವರಿದರೆ ಶೀಘ್ರದಲ್ಲೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next