Advertisement

ಬಿಜೆಪಿ ಟೀಕಿಸುವ ನೈತಿಕತೆ ಕಾಂಗ್ರೆಸ್‌ಗಿಲ್ಲ

01:50 PM Feb 09, 2020 | Naveen |

ಬಳ್ಳಾರಿ: ಸಂಘಟನೆ ಕೊರತೆಯಿಂದಾಗಿ ವಿರೋಧ ಪಕ್ಷದಲ್ಲಿ ಕೂರಲು ನಾಲಾಯಕ್‌ ಆಗಿರುವ ಕಾಂಗ್ರೆಸ್‌ ಬಿಜೆಪಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕುಟುಕಿದರು.

Advertisement

ನಗರದ ಬಸವ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅದೊಂದು ಕಾಲವಿತ್ತು. ದೇಶದಲ್ಲೆಲ್ಲಾ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿತ್ತು. ಕಾಂಗ್ರೆಸ್‌ನಿಂದ ವಿದ್ಯುತ್‌ ಕಂಬವನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದರು ಎನ್ನಲಾಗುತ್ತಿತ್ತು. ಅಂದು ಬಿಜೆಪಿ ಪಕ್ಷ ಕೇವಲ 2 ಸಂಸದರನ್ನು ಮಾತ್ರ ಹೊಂದಿತ್ತು. ಆದರೆ ಇಂದು ಸಂಘಟನೆಯ ಕೊರತೆಯಿಂದಾಗಿ ಕಾಂಗ್ರೆಸ್‌ ದೇಶಾದ್ಯಂತ ಶಕ್ತಿ ಕಳೆದುಕೊಂಡಿದೆ.

ಸುಮಾರು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್‌ ಇಂದು ಕೇವಲ 40 ಸ್ಥಾನಗಳಿಗೆ ಕುಸಿದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲೂ ಅರ್ಹತೆ ಇಲ್ಲವಾಗಿದೆ. ಆದರೆ ಅಂದು ಕೇವಲ 2 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಸಂಘಟನೆ ಶಕ್ತಿಯಿಂದಾಗಿ ಇಂದು ದೇಶಾದ್ಯಂತ ಗೆಲುವು ಸಾಧಿಸಿದ್ದು, ಕೇಂದ್ರ, ರಾಜ್ಯ ಸರ್ಕಾರದಲ್ಲೂ ಅಧಿಕಾರಕ್ಕೆ ಬಂದಿದೆ. ಇಂಥ ಬಿಜೆಪಿ ಪಕ್ಷದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುತ್ತಿದ್ದಂತೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ತಮ್ಮ ಸ್ಥಾನಕ್ಕ ರಾಜೀನಾಮೆ ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಆ ಸ್ಥಾನ ಖಾಲಿಯಿದ್ದು, ಒಬ್ಬ ರಾಜ್ಯಾಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಬಿಜೆಪಿ ಪಕ್ಷದಲ್ಲಿನ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರಕ್ಕೆ ಭದ್ರತೆ ಒದಗಿಸಿದ್ದ 10 ಜನರನ್ನು ಸಂಪುಟಕ್ಕೆ ಸೇರಿಸಿಕೊಂಡು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದವರು ಪಕ್ಷಕ್ಕೆ ತಂದೆ ಇದ್ದಂತೆ ಎಂದ ಕಟೀಲ್‌ ಅವರು, ಪಕ್ಷದ ಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ಭಾವನೆಗಳನ್ನು ಹೃದಯದಲ್ಲಿ ಇರಿಸಿಕೊಂಡು ಪಕ್ಷವನ್ನು ಕಟ್ಟಬೇಕು. ವಿಜಯನಗರ ಸಾಮ್ರಾಜ್ಯದ ನೆಲೆ ಬೀಡು, ಮತ್ತು ಸುಷ್ಮಾಸ್ವರಾಜ್‌ ಸ್ಪರ್ಧೆಯಿಂದ ಬಳ್ಳಾರಿ ನನಗೆ ಇಷ್ಟ ಎಂದ ಅವರು, ಬರುವ ದಿನಗಳಲ್ಲಿ ಬಳ್ಳಾರಿಯಲ್ಲಿ ಮಂಗಳೂರಿಗಿಂತಲೂ ಪಕ್ಷವನ್ನು ಸಮರ್ಥವಾಗಿ ಕಟ್ಟಬೇಕು ಎಂದರು.

Advertisement

ಮುಂದಿನ ಗುರಿ: ನಮ್ಮ ಮುಂದಿನ ಗುರಿ ಗ್ರಾಮಪಂಚಾಯ್ತಿ, ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾಚಣೆಯಲ್ಲಿನ ಗೆಲುವು ಎಂದರು. ಈಗ ನಾವು ಅನುಕಂಪ, ಅಭಿವೃದ್ಧಿ, ನಾಯಕತ್ವದ ಮೇಲೆ ಚುನಾವಣೆ ಎದುರಿಸುವುದು ಅಲ್ಲ, ಸಂಘಟನೆಯ ಮೂಲಕ ಎಂದರು. ನಮ್ಮ ಪಕ್ಷ ಕೊಟ್ಟ ಮಾತನ್ನು ಈಡೇರಿಸಲಿದೆ ಎಂದು ಅದಕ್ಕೆ ಸಾಕ್ಷಿ ಹತ್ತು ಜನರಿಗೆ ಸಚಿವ ಸ್ಥಾನ ನೀಡಿದ್ದು ಎಂದ ಅವರು, ನಮ್ಮ ಪಕ್ಷದಲ್ಲಿ ಒಂದೇ ತಾಸಿನಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಯ್ತು, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧ್ಯಕ್ಷರನ್ನು ಅಯ್ಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಸಹ ಅದು ಅಸಮರ್ಥವಾಗಿದೆಂದು ಟೀಕಿಸಿದರು.

ಭ್ರಷ್ಟಾಚಾರದ ಆರೋಪವಿಲ್ಲದ ಸರ್ಕಾರ ನಮ್ಮದು, ದೇಶದಲ್ಲಿ ಉಗ್ರರ ನೆಲೆ ಕಾಶ್ಮೀರದಲ್ಲಿ ಈಗ ಬಾಂಬ್‌ ಸದ್ದು ಕೇಳದಂತೆ ಮಾಡಿದ್ದೇವೆಂದರು. ಗಾಂಧಿಧೀಜಿ ಹೇಳಿದ್ದರು: ಪಾಕಿಸ್ತಾನದಲ್ಲಿ 23ರಷ್ಟಿದ್ದ ಹಿಂದುಗಳ ಸಂಖ್ಯೆ ಇಂದು ಕೇವಲ ಶೇ.3ಕ್ಕೆ ಇಳಿಕೆಯಾಗಿದೆ. ಪಾಕಿಸ್ತಾನದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಹಿಂದುಳಿಗೆ ಭಾರತದಲ್ಲಿ ಪೌರತ್ವ ನೀಡಬೇಕು ಎಂದು ಗಾಂಧೀಜಿ ಹೇಳಿದ್ದರು. ಆ ಕೆಲಸವನ್ನು ಇಂದು ಬಿಜೆಪಿ ಮಾಡುತ್ತಿದೆ. ಗಾಂಧೀಜಿಯವರನ್ನು ಕಾಂಗ್ರೆಸ್‌ ಮತಕ್ಕಾಗಿ ಬಳಕೆ ಮಾಡಿಕೊಂಡಿದೆ. ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಅಬ್ದುಲ್‌ ಕಲಾಂ ಅವರನ್ನು ಬಿಜೆಪಿ ಸರ್ಕಾರ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈ ದೇಶದ ಯಾವೊಬ್ಬ ನಾಗರಿಕರಿಗೆ ಸಮಸ್ಯೆ ಇಲ್ಲ. ಅದರಲ್ಲೂ ಮುಸಲ್ಮಾನರಿಗೆ ಯಾವುದೇ ಸಮಸ್ಯೆಯಾಗಲ್ಲ. ಕಾಂಗ್ರೆಸ್‌ನವರು ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಂಬಬಾರದು. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ನಿಮ್ಮ ಅಸಮಾಧಾನಗಳಿದ್ದರೆ ರಸ್ತೆಯಲ್ಲಿ ಮಾತನಾಡದೆ ನೇರವಾಗಿ ನಮಗೆ ಬಂದು ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಚನ್ನಬಸವನಗೌಡರಿಗೆ ಬಿಜೆಪಿ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಪದಗ್ರಹಣ ಮಾಡಿದ ಚೆನ್ನಬಸನಗೌಡ ಪಾಟೀಲ್‌ ಮಾತನಾಡಿ, ಕಳೆದ 30 ತಿಂಗಳ ಅವಧಿಯಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಸಂಘಟಿಸಲು ಎಲ್ಲರೂ ನೀಡಿದ ಸಹಕಾರ ಸ್ಮರಣೀಯವಾಗಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಮಲಿಂಗಪ್ಪ ಮಾತನಾಡಿ, ಕಳೆದೆರಡು ತಿಂಗಳಿಂದ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನದ ನೇಮಕದ ಕುರಿತು ಇದ್ದ ಸುದ್ದಿಗೆ ತೆರೆ ಬಿದ್ದಿದೆ. ಹಣ ಬಲ, ತೋಳ್ಬಲಕ್ಕೆ ಪಕ್ಷ ಮಣಿಯಲ್ಲ. ನಾನೂ ಜಿಲ್ಲಾಧ್ಯಕ್ಷ ಆಗಬೇಕೆಂದು ಬಯಸಿದ್ದೆ ಆದರೆ, ಪಕ್ಷ ತೀರ್ಮಾನಿಸಿದ್ದನ್ನು ನಾನು ಸದಾ ಸ್ವಾಗತಿಸುವೆ. ಜಿಲ್ಲಾ, ತಾಲೂಕು, ಪದಾಧಿಕಾರಿಗಳ, ಕಾರ್ಯಕರ್ತರನ್ನು ಪಕ್ಷ ಗುರುತಿಸಲಿದೆ ಎಂದರು.

ಹರಪನಹಳ್ಳಿ ಶಾಸಕ ಜಿ. ಕರುಣಾಕರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ, ಅಶೋಕ್‌ ಗಸ್ತಿ, ಮಾಜಿ ಶಾಸಕರಾದ ಚಂದ್ರನಾಯ್ಕ, ನೇಮಿರಾಜ್‌ ನಾಯ್ಕ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್‌, ಪಕ್ಷದ ಮುಖಂಡರುಗಳಾದ ಡಾ| ಮಹಿಪಾಲ್‌, ಎಸ್‌. ಗುರುಲಿಂಗನಗೌಡ, ಮುರಹರಿಗೌಡ, ಗುತ್ತಿಗನೂರು ವಿರುಪಾಕ್ಷಗೌಡ, ಗೋನಾಳ್‌ ರಾಜಶೇಖರ ಗೌಡ, ಎಚ್‌. ಹನುಮಂತಪ್ಪ, ಬಿ. ಶಿವಕುಮಾರ್‌, ಮೋತ್ಕರ್‌ ಶ್ರೀನಿವಾಸ್‌, ವೀರಶೇಖರ ರೆಡ್ಡಿ, ಓಬಳೇಶ್‌, ಎ.ಎಂ. ಸಂಜಯ್‌, ಅನಿಲ್‌ ನಾಯ್ಡು, ಶ್ರೀನಿವಾಸ್‌ ಪಾಟೀಲ್‌ ಇತರರಿದ್ದರು.

ಶಾಸಕರು ಗೈರು: ಶಾಸಕರಾದ ಸೋಮಲಿಂಗಪ್ಪ, ಸೋಮಶೇಖರ ರೆಡ್ಡಿ, ಗೋಪಾಲಕೃಷ್ಣ, ಸಚಿವ ಆನಂದ್‌ ಸಿಂಗ್‌, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ ಮೊದಲಾದವರು ಸಮಾರಂಭಕ್ಕೆ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next