Advertisement

ಬುಡಾ ಅಧ್ಯಕ್ಷ ಸ್ಥಾನ ವಿವಾದಕ್ಕೆ ಬಿತ್ತು ತೆರೆ

12:46 PM Dec 19, 2019 | |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಬಿಜೆಪಿ ಕಾರ್ಯಕರ್ತರ  ಸಾಮೂಹಿಕ ರಾಜೀನಾಮೆಗೆ ಕಾರಣವಾಗಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಿವಾದಕ್ಕೆ ಅಧಿಕೃತ ತೆರೆಬಿದ್ದಿದೆ.

Advertisement

ಬುಡಾ ಕ್ಕೆ ನೇಮಕವಾಗಿದ್ದ ದಮ್ಮೂರು ಶೇಖರ್‌ ಅವರ ಅಧ್ಯಕ್ಷ ಸ್ಥಾನ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧಿಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಮ್ಮೂರು ಶೇಖರ್‌ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಅ. 25ರಂದು ಆದೇಶ ಹೊರಡಿಸಿತ್ತು. ಅ. 27ರಂದು ಶೇಖರ್‌ ಅವರು ಅಧಿಕಾರವನ್ನೂ ಸ್ವೀಕರಿಸಿದ್ದರು. ಆದರೆ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಹಿರಿಯ ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಎಚ್‌. ಹನುಮಂತಪ್ಪ, ಮುರಹರಿಗೌಡ ಸೇರಿದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರು ಇದನ್ನು ವಿರೋಧಿಸಿದ್ದರು. ಜತೆಗೆ ಪಕ್ಷದ ಸದಸ್ಯತ್ವ ಸ್ಥಾನಕ್ಕೂ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಸಿಎಂ ಯಡಿಯೂರಪ್ಪ ಸೇರಿ ಪಕ್ಷದ ಹಿರಿಯ ಮುಖಂಡರ ಗಮನ ಸೆಳೆದಿದ್ದರು. ಕಾರ್ಯಕರ್ತರ ವಿರೋಧಕ್ಕೆ ಮಣಿದಿದ್ದ ಸಿಎಂ ಯಡಿಯೂರಪ್ಪ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಬುಡಾ ಅಧ್ಯಕ್ಷರ ನೇಮಕಾತಿ ಆದೇಶ ರದ್ದುಗೊಳಿಸಿ ಪಕ್ಷದಲ್ಲಿ ಭುಗಿಲೆದ್ದಿದ್ದ ವಿರೋಧಕ್ಕೆ ತೆರೆ ಎಳೆದಿದ್ದರು.

ಇದೀಗ ಉಪಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಬುಡಾ ಅಧ್ಯಕ್ಷರ ನೇಮಕಾತಿ ವಿಷಯ ಪುನಃ ಮುನ್ನೆಲೆಗೆ ಬರುವ ಮುನ್ನವೇ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ದಮ್ಮೂರು ಶೇಖರ್‌ ಅವರ ಬುಡಾ ಅಧ್ಯಕ್ಷ ಸ್ಥಾನದ ನೇಮಕಾತಿ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಕಾರ್ಯಕರ್ತರಲ್ಲಿ ನೆಮ್ಮದಿ ಮೂಡಿಸಿದೆ.

ಮಾತಿನ ಜಟಾಪಟಿಗೆ ವೇದಿಕೆಯಾಗಿದ್ದ ನೇಮಕಾತಿ: ಬಳ್ಳಾರಿ ಬುಡಾ ಅಧ್ಯಕ್ಷರ ನೇಮಕಾತಿ ವಿಷಯ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಅವರ ನಡುವೆ ಮಾತಿನ ಜಟಾಪಟಿಗೂ ಕಾರಣವಾಗಿತ್ತು. ಬುಡಾ ಅಧ್ಯಕ್ಷರಾಗಿ ದಮ್ಮೂರು ಶೇಖರ್‌ ಅಧಿಕಾರ ಸ್ವೀಕಾರದ ವೇಳೆ ನಗರ ಶಾಸಕ ಜಿ. ಸೋಮಶೇಖರ್‌ ರೆಡ್ಡಿಯವರು “ಬಿಜೆಪಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಕೆಪಾಸಿಟಿ ಏನು ಅಂತ ಎಲ್ಲರಿಗೂ ಗೊತ್ತು. ಅವರ ನೇತೃತ್ವದಲ್ಲಿ ಎಷ್ಟು ಚುನಾವಣೆ ಗೆದ್ದಿದ್ದೇವೆ ನೋಡಿಲ್ವಾ’ ಎನ್ನುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಪ್ರಧಾನ ಕಾರ್ಯದರ್ಶಿ ಮುರಹರಿಗೌಡ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಶಾಸಕ ಸೋಮಶೇಖರರೆಡ್ಡಿ ಅಸಮಾಧಾನದ ಮಾತುಗಳ ಬೆನ್ನಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಪ್ರಧಾನ ಕಾರ್ಯದರ್ಶಿ ಮುರಹರಿಗೌಡ, ಹಿರಿಯ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಚ್‌. ಹನುಮಂತಪ್ಪ ಸೇರಿದಂತೆ ಇತರೆ ಮುಖಂಡರು, ತಾಲೂಕು ಘಟಕದ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ, ಸೋಮಶೇಖರರೆಡ್ಡಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಜಿಲ್ಲಾಧ್ಯಕ್ಷರ ಕೆಪಾಸಿಟಿಯನ್ನು ಕೇಳುವ ಸೋಮಶೇಖರರೆಡ್ಡಿಯವರು, ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪಕ್ಷದ ಪರ ಕೆಲಸ ಮಾಡಿದ್ದಾರೆ? ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಎಷ್ಟು ಮತಗಳನ್ನು ಲೀಡ್‌ ನೀಡಿದ್ದಾರೆ ಎಂದು ಮರು ಪ್ರಶ್ನಿಸಿ, ಅವರ ಕೆಪಾಸಿಟಿ ಏನು ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಗುಡುಗಿದ್ದರು.

Advertisement

ಬುಡಾ ಅಧ್ಯಕ್ಷ ಸ್ಥಾನದಿಂದ ದಮ್ಮೂರು ಶೇಖರ್‌ ಕೆಳಗಿಳಿಸುವವರೆಗೆ ನಾವು ಹೋರಾಟ ಮಾಡುತ್ತೇವೆ. ರಾಜೀನಾಮೆ ಸಲ್ಲಿಕೆ ಇದೀಗ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜೀನಾಮೆ ಪರ್ವವೇ ನಡೆಯಲಿದೆ. ನೇಮಕಾತಿ ಆದೇಶ ರದ್ದುಮಾಡುವ ತನಕ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಸೇರಿ ಪಕ್ಷದ ಹಿರಿಯ ಮುಖಂಡರ ಗಮನ ಸೆಳೆದಿದ್ದರು.

ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಉಪ ಚುನಾವಣೆ ಮುಗಿಯುವ ತನಕ ನೇಮಕಾತಿ ರದ್ದುಗೊಳಿಸಿದ್ದರು. ಇದೀಗ ಸರ್ಕಾರದಿಂದ ಡಿ. 12ರಂದು ಪ್ರಕಟಗೊಂಡ ಸೂಚನಾ ಪತ್ರವೊಂದು ಜಿಲ್ಲಾಧಿಕಾರಿಗಳಿಗೆ ತಲುಪಿದೆ. ಅದರಂತೆ ಡಿ. 12ರಿಂದ ಜಾರಿಗೆ ಬರುವಂತೆ ದಮ್ಮೂರು ಶೇಖರ್‌ ಅವರ ನೇಮಕಾತಿಯನ್ನು ರದ್ದುಮಾಡಲಾಗಿದೆ. ಹೊಸ ಅಧ್ಯಕ್ಷರ ನೇಮಕಾತಿ ಮಾಡುವರೆಗೆ ಜಿಲ್ಲಾ ಧಿಕಾರಿ ಎಸ್‌.ಎಸ್‌. ನಕುಲ್‌ ಬುಡಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡರು ಮೇಲುಗೈ ಸಾಧಿಸಿದಂತಾಗಿದೆ. ಹಿನ್ನಡೆಯಾಗಿರುವ ಶಾಸಕ ಜಿ. ಸೋಮಶೇಖರರೆಡ್ಡಿಯವರು ಮುಂದೇನು ಮಾಡುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next