Advertisement

ಬಾರದ ಮಳೆ; ಬರಿದಾಯ್ತು ತುಂಗಭದ್ರಾ ಜಲಾಶಯ

11:02 AM Jun 27, 2019 | Naveen |

ಬಳ್ಳಾರಿ: ಅಂತಾರಾಜ್ಯ ಜಿಲ್ಲೆಯ ರೈತರು ಹಾಗೂ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಬರಿದಾಗುತ್ತಿದ್ದು, ನೀರಿನ ಮಟ್ಟ ತಳ ಸೇರಿದೆ. ಕಳೆದ ವರ್ಷ ಇದೇ ಸಮಯಕ್ಕೆ 26 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದ್ದ ಜಲಾಶಯದಲ್ಲಿ ಈ ಬಾರಿ ಜೂನ್‌ ತಿಂಗಳು ಮುಗಿಯುತ್ತಿದ್ದರೂ, ಹನಿ ನೀರು ಹರಿದು ಬಂದಿಲ್ಲ.

Advertisement

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆರು ಜಿಲ್ಲೆಗಳ ರೈತರ ಪಾಲಿಗೆ ಈ ಜಲಾಶಯ ಜೀವನಾಡಿಯಾಗಿದೆ. ಈ ಮೊದಲು ಪ್ರತಿವರ್ಷ ಎರಡು ಬೆಳೆಗೆ ನೀರುಣಿಸುತ್ತಿದ್ದ ಜಲಾಶಯ, ಕಳೆದ ಕೆಲ ವರ್ಷಗಳಿಂದ ಸಮರ್ಪಕ ಮಳೆ ಕೊರತೆ ಮತ್ತು ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳಿನಿಂದಾಗಿ ಎರಡು ಬೆಳೆಗೆ ನೀರು ಪೂರೈಸುತ್ತಿಲ್ಲ. ಕಳೆದ ಎರಡು ದಶಕಗಳಲ್ಲಿ ಹಲವು ವರ್ಷ ಬರ ಪರಿಸ್ಥಿತಿ ಎದುರಾಗಿದ್ದರೂ, ಕನಿಷ್ಠ ಒಂದು ಬೆಳೆಗಾದರೂ ಜಲಾಶಯದಿಂದ ನೀರು ಒದಗಿಸಲಾಗುತ್ತಿತ್ತು. ಆದರೆ, ಈ ವರ್ಷ ಇನ್ನೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಸುರಿಯದ್ದರಿಂದ ಭಾರೀ ಸಮಸ್ಯೆ ಎದುರಾಗಿದೆ. ಕನಿಷ್ಠ ಒಂದು ಬೆಳೆ ಬೆಳೆಯಲಾದರೂ ಜಲಾಶಯದಿಂದ ನೀರು ದೊರೆಯಲಿದೆಯೋ, ಇಲ್ಲವೋ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.

ತುಂಗಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 1573.71 ಅಡಿಗಳಿದ್ದು, ಕೇವಲ 1.99 ಟಿಎಂಸಿಯಷ್ಟು ನೀರು ಸಂಗ್ರಹವಿದೆ. 190 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ ಈ ವರೆಗೂ ದಾಖಲಾಗಿಲ್ಲ. ಇರುವ 2 ಟಿಎಂಸಿ ಡೆಡ್‌ ಸ್ಟೋರೇಜ್‌ ನೀರನ್ನು ಸಹ ಬಳಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಜೂನ್‌ ಆರಂಭದಲ್ಲೇ ಮುಂಗಾರು ಮಳೆ ಭರ್ಜರಿಯಾಗಿದ್ದರಿಂದ ಜಲಾಶಯಕ್ಕೆ ನಿರೀಕ್ಷೆಗೂ ಮೀರಿ ನೀರು ಹರಿದು ಬಂದಿತ್ತು.

ಒಂದು ಬೆಳೆಗಷ್ಟೇ ನೀರು?: ಕಳೆದ ಎರಡು ದಶಕಗಳಲ್ಲಿ ಹಲವಾರು ವರ್ಷ ಸಮರ್ಪಕ ಮಳೆಯಾಗಿಲ್ಲ. ಹೀಗಾಗಿ ಒಟ್ಟು 6 ವರ್ಷ ಕೇವಲ ಒಂದು ಬೆಳೆಗಷ್ಟೇ ಜಲಾಶಯದಿಂದ ನೀರು ಪೂರೈಸಲಾಗಿದೆ. 2001-02, 2002-03, 2003-04, 2015-16, 2016-17, 2018-19ನೇ ಸಾಲಿನಲ್ಲಿ ಎರಡು ಬೆಳೆಗೆ ನೀರು ಪೂರೈಸಲಾಗಿಲ್ಲ. ಕಳೆದ 2018-19ನೇ ಸಾಲಿನಲ್ಲಿ ಮುಂಗಾರು ಉತ್ತಮ ಆರಂಭ ಪಡೆದುಕೊಂಡಿತ್ತು. ಸುಮಾರು 200ಕ್ಕೂ ಹೆಚ್ಚು ಟಿಎಂಸಿ ನೀರನ್ನು ನದಿಗೆ ಹರಿಸಲಾಯಿತು. ಆದರೆ, ಹಿಂಗಾರು ಮಳೆ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಪುನಃ ಎರಡನೇ ಬೆಳೆಗೆ ನೀರು ಪೂರೈಸಿಲ್ಲ. ಹೀಗೆ ಈ ಹಿಂದೆಯೂ ಜಲಾಶಯದಲ್ಲಿ ಎರಡನೇ ಬೆಳೆಗೆ ಸಮರ್ಪಕ ನೀರು ಲಭ್ಯವಿಲ್ಲದಿದ್ದರೂ, ರೈತರ ಒತ್ತಾಯದ ಮೇರೆಗೆ ಪೂರೈಕೆ ಮಾಡಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಜುಲೈನಲ್ಲಿ ಲಭ್ಯ: ಜಲಾಶಯದ 30 ವರ್ಷಗಳ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ 4 ವರ್ಷ ಕಾಡಿದೆ. ಜೂನ್‌ನಲ್ಲಿ ಜಲಾಶಯ ಭರ್ತಿಯಾಗಿದ್ದೇ ಕಡಿಮೆ. 1995-96, 1997-98, 2005-06, 2012-13ರಲ್ಲಿ ಅತ್ಯಂತ ಕಡಿಮೆ ಟಿಎಂಸಿ ನೀರು ಸಂಗ್ರಹವಾಗಿತ್ತು. ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಈ ಬಾರಿಯೂ ಜುಲೈ ತಿಂಗಳಲ್ಲಿ ವರುಣದೇವ ಕೃಪೆ ತೋರುವ ಸಾಧ್ಯತೆಗಳಿವೆ ಎಂಬುದು ನೀರಾವರಿ ತಜ್ಞರ ವಿಶ್ವಾಸ.

Advertisement

ಭದ್ರಾ ಜಲಾಶಯದಿಂದ ನೀರು ಅನುಮಾನ: ತುಂಗಭದ್ರಾ ಜಲಾಶಯದಲ್ಲಿ ನೀರು ತಳಮಟ್ಟ ಸೇರುತ್ತಿದ್ದು, ಡೆಡ್‌ ಸ್ಟೋರೇಜ್‌ ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಭದ್ರಾ ಜಲಾಶಯದಿಂದ ನೀರು ಲಭಿಸುವುದು ಅನುಮಾನವಾಗಿದೆ. ಮೇಲಾಗಿ ಇಂಥ ಸಂದರ್ಭದಲ್ಲಿ ಈ ವರೆಗೂ ಒಮ್ಮೆಯೂ ಭದ್ರಾ ಜಲಾಶಯದಿಂದ ನೀರು ಪಡೆದಿರುವ ಉದಾಹರಣೆಗಳಿಲ್ಲ. ಹಡಗಲಿಯಲ್ಲಿನ ಮೈಲಾರಲಿಂಗ ಜಾತ್ರೆ ನಿಮಿತ್ತ ಅಲ್ಲಿನ ಭಕ್ತರ ಅನುಕೂಲಕ್ಕಾಗಿ ಒಂದಷ್ಟು ನೀರನ್ನು ಭದ್ರಾ ಜಲಾಶಯದಿಂದ ಪಡೆಯಲಾಗುತ್ತಿತ್ತು.

ಸದ್ಯ ಭದ್ರಾ ಜಲಾಶಯದಿಂದಲೂ ನದಿಗೆ ಹರಿಸಲಾಗಿರುವ 1400 ಕ್ಯೂಸೆಕ್‌ ನೀರು ತುಂಗಭದ್ರಾ ಜಲಾಶಯಕ್ಕೆ ಬರಲ್ಲ. ನದಿ ಪಾತ್ರದಲ್ಲಿರುವ ಪ್ರಾಣಿಗಳ ಅನುಕೂಲಕ್ಕಾಗಿ ಈ ನೀರನ್ನು ಹರಿಸಲಾಗಿದೆ ಎನ್ನಲಾಗುತ್ತಿದೆ.

ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಈವರೆಗೂ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ವರುಣನ ಆಗಮನಕ್ಕಾಗಿ ಜಪ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮುಂಗಾರು ಆರಂಭವಾಗಿದ್ದರೂ, ಬಿತ್ತನೆಗಾಗಿ ಕಾದು ಕುಳಿತಿರುವ ರೈತರಿಗೆ ವರುಣನ ಕೃಪೆ ಇಲ್ಲದಂತಾಗಿದೆ. ಮೋಡ ಕವಿದ ವಾತಾವರಣವಿದ್ದರೂ, ಒಂದೆರಡು ತುಂತುರು ಹನಿ ಉದುರಿಸಿ ಗಾಳಿಗೆ ಮೋಡಗಳು ಮರೆಯಾಗುತ್ತಿವೆ. ಜಲಾಶಯಕ್ಕೆ ನೀರು ಹರಿದು ಬರುವ ಮಲೆನಾಡಿನಲ್ಲೂ ಈ ಬಾರಿ ಮಳೆಯಾಗದಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next