Advertisement

ಮುಂಗಾರು ಬೆಳೆಗೆ ಸಿಕ್ಕೀತೆ ನೀರು?

11:06 AM Jul 18, 2019 | Team Udayavani |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಅಂತಾರಾಜ್ಯಗಳ ಜೀವನಾಡಿ ಯಾಗಿರುವ ತುಂಗಭದ್ರಾ ಜಲಾಶಯದಿಂದ ಈ ಬಾರಿಯೂ ಮುಂಗಾರು ಹಂಗಾಮು ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದೆ.

Advertisement

ಜುಲೈ ತಿಂಗಳು ಕಳೆಯುತ್ತಿದ್ದು, ಈ ವರೆಗೂ ಜಲಾನಯನ ಪ್ರದೇಶದಲ್ಲಿ ಸಮರ್ಪಕವಾಗಿ ನಿರಂತರ ಮಳೆಯಾಗದ್ದರಿಂದ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಅಲ್ಲದೆ ಒಳಹರಿವಿನ ಪ್ರಮಾಣವೂ ಕುಸಿದಿದ್ದು, ಮಳೆ ಬಾರದಿದ್ದಲ್ಲಿ ಸಮಸ್ಯೆ ಉಲ್ಬಣಗೊಳ್ಳಲಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ 6 ಜಿಲ್ಲೆಗಳ ಒಟ್ಟು 12 ಲಕ್ಷ ಎಕರೆಗೂ ಹೆಚ್ಚು ಜಮೀನುಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತುಂಗಾ ಜಲಾಶಯದಿಂದಲೂ ನದಿಗೆ ಹರಿದುಬರುವ ನೀರಿನ ಪ್ರಮಾಣ ಕುಸಿದಿದೆ. ಜುಲೈ ತಿಂಗಳು ಮುಗಿಯುತ್ತಿದ್ದರೂ ಜಲಾಶಯಕ್ಕೆ ಗರಿಷ್ಠ ಪ್ರಮಾಣದ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಈ ಬಾರಿ ಮುಂಗಾರು ಬೆಳೆಗೆ ಜಲಾಶಯದಿಂದ ನೀರು ದೊರಕುವುದು ಅನುಮಾನ ಎನ್ನಲಾಗುತ್ತಿದ್ದು ರೈತರನ್ನು ಆತಂಕಕ್ಕೀಡು ಮಾಡಿದೆ.

60-70 ಟಿಎಂಸಿ ಇದ್ದರೆ ಭತ್ತಕ್ಕೆ ನೀರು: ಮೂರು ಜಿಲ್ಲೆಗಳಲ್ಲಿ ಬೆಳೆಯಲಾಗುವ ಭತ್ತಕ್ಕೆ ಕನಿಷ್ಠ 70ರಿಂದ 80 ಟಿಎಂಸಿ ನೀರು ಬೇಕಾಗಲಿದ್ದು, ಕನಿಷ್ಠ 60ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾದಾಗ ಭತ್ತಕ್ಕೆ ನೀರು ಕೊಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲ ಬೆಳೆಗೇ ನೀರಿಲ್ಲ: ತುಂಗಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಸುರಿಯುವ ನಿರೀಕ್ಷೆಯಿದ್ದರೂ, ಗಾಳಿಗೆ ಮೋಡಗಳು ಚದುರಿದ್ದರಿಂದ ಮುಂಬೈ, ಗುಜರಾತ್‌ನಲ್ಲಿ ನಿರಂತರ ಮಳೆ ಸುರಿದಿದೆ. ಈ ವರೆಗೆ ಇದ್ದ ಎಲ್ಲ ನಿರೀಕ್ಷೆಗಳು ಹುಸಿಯಾಗಿದ್ದು, ಇದೀಗ ಜುಲೈ 1 ರಿಂದ ಇನ್ನೂ ಎರಡು ಮಳೆ ಸುರಿಯುವ ನಿರೀಕ್ಷೆಯಿದೆ.ಅವೂ ಕೈಕೊಟ್ಟರೆ, ಮೊದಲನೇ ಬೆಳೆಗೆ ನೀರು ಹರಿಸುವುದು ಕಷ್ಟವಾಗಲಿದೆ.

50 ಟಿಎಂಸಿ ನೀರು ಬೇಕು
ಒಂದು ಹಂಗಾಮಿನ ಬೆಳೆಗೆ ನೀರು ಕೊಡಲು ಜಲಾಶಯದಲ್ಲಿ ಕನಿಷ್ಠ 40 ರಿಂದ 50 ಟಿಎಂಸಿ ನೀರು ಲಭ್ಯವಿರಬೇಕು. 2017ರಲ್ಲಿ ಸಮರ್ಪಕ ಮಳೆಯಾಗದಿದ್ದರೂ, ಜುಲೈ ತಿಂಗಳ ಮೂರನೇ ವಾರದೊಳಗೆ 20 ರಿಂದ 25 ಟಿಎಂಸಿ ನೀರು ಹರಿದು ಬಂದಿತ್ತು. ಆಗಸ್ಟ್‌ ತಿಂಗಳೊಳಗಾಗಿ 40 ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿತ್ತು. ಆಗ ಆಗಸ್ಟ್‌ನಲ್ಲಿ ಐಸಿಸಿ ಸಭೆ ನಡೆಸಿ ಸೆಪ್ಟೆಂಬರ್‌ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಲಾಯಿತು. ಆದರೆ ಈ ಬಾರಿ ಸದ್ಯ ಸಂಗ್ರಹವಿರುವ 14.30 ಟಿಎಂಸಿ ನೀರು ಆರು ಜಿಲ್ಲೆಗಳ ಜನರಿಗೆ ಕುಡಿಯಲೂ ಸಾಲುವುದಿಲ್ಲ.
ಮಂಜಪ್ಪ,
ಮುಖ್ಯ ಅಭಿಯಂತರರು, ಟಿಬಿ ಮಂಡಳಿ
Advertisement

Udayavani is now on Telegram. Click here to join our channel and stay updated with the latest news.

Next