Advertisement

ಜಿಲ್ಲಾದ್ಯಂತ ಭಾವೈಕ್ಯತೆ ಮೊಹರಂ

01:39 PM Sep 11, 2019 | Naveen |

ಬಳ್ಳಾರಿ: ಹಿಂದೂ-ಮುಸಲ್ಮಾನರು ಭಾವೈಕ್ಯತೆಯಿಂದ ಆಚರಿಸಲಾಗುವ ಮೊಹರಂ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಜಿಲ್ಲೆಯಾದ್ಯಂತ ಮಂಗಳವಾರ ಆಚರಿಸಲಾಯಿತು.

Advertisement

ಪೀರಲ ಹಬ್ಬ, ಹಲೆ ಹಬ್ಬ ಎಂಬ ಭಿನ್ನ ಹೆಸರಿನಲ್ಲಿ ಹಿಂದು, ಮುಸ್ಲಿಂ ಬಾಂಧವರು ಒಟ್ಟಿಗೆ ಹಬ್ಬ ಆಚರಿಸಿದ್ದು ಜಿಲ್ಲೆಯ ವಿಶೇಷವಾಗಿತ್ತು. ಮೂಲತಃ ಹಿಜಿರಾ ಕ್ಯಾಲೆಂಡರ್‌ನ ಹೊಸ ಮಾಸ ಆರಂಭಕ್ಕೆ ಆಚರಿಸಲಾಗುವ ಮುಸಲ್ಮಾನರ ಈ ಹಬ್ಬ ಬಳ್ಳಾರಿ ಮಟ್ಟಿಗೆ ಸಕಲರ ಹಬ್ಬವಾಗಿ ಆಚರಿಸಲ್ಪಡುತ್ತದೆ. ನಗರ, ಗ್ರಾಮೀಣ ಪ್ರದೇಶ ಎಂಬ ಭೇದಭಾವ ಇಲ್ಲದೆ ಹಬ್ಬದ ಆಚರಣೆ ಕಳೆಗಟ್ಟಿದ್ದು ವಿಶೇಷ.

ಸೋಮವಾರ ರಾತ್ರಿಯಿಂದ ಅಗ್ನಿ ಆಚರಣೆ ಆರಂಭವಾಯಿತು. ರಾತ್ರಿ ಇಡೀ ಜನರು ತಮಟೆ ವಾದನ, ವಾದ್ಯ ಮೇಳದೊಂದಿಗೆ ಕುಣಿದು ಕುಪ್ಪಳಿಸಿ ಪೀರಲು ದೇವರ ಮೆರವಣಿಗೆ ನಡೆಸಿದರು. ದರ್ಗಾ ಮುಂದೆ ಗುಂಡಿ ತೆಗೆದು ಹಾಕಲಾಗಿದ್ದ ಅಗ್ನಿಯ ಸುತ್ತಲೂ ಒಟ್ಟಾಗಿ ತಾಳಕ್ಕೆ ತಕ್ಕ ಹಾಗೆ ನೃತ್ಯ ಮಾಡಿ ಹಬ್ಬವನ್ನು ಸಂಭ್ರಮಿಸಿದರು. ಬೆಳಗಿನ ಜಾವ ಅಗ್ನಿಪ್ರವೇಶ ಮಾಡುವ ಮೂಲಕ ಕೊನೆ ಆಚರಣೆ ಕೈಗೊಂಡರು. ಕೆಲವು ಕಡೆ ಮಂಗಳವಾರ ಬೆಳಗ್ಗೆ ಸಹ ಅಗ್ನಿ ಸುತ್ತಲಿನ ನೃತ್ಯದಾಟ ಮುಂದುವರಿದಿತ್ತು. ಮಧ್ಯಾಹ್ನದ ವೇಳೆ ಪೀರಲು ದೇವರು ದರ್ಗಾ ಸೇರುವುದರೊಂದಿಗೆ ಆಚರಣೆ ಸಂಪನ್ನಗೊಂಡಿತು. ಹಿಂದು, ಮುಸ್ಲಿಂ ಬಾಂಧವರು ಹೊಸ ವಸ್ತ್ರ ಧರಿಸಿ, ಮನೆಯಲ್ಲಿ ಸಿಹಿ ತಿಂಡಿ, ತಿನಿಸು ಮಾಡಿ ಸವಿದರು. ಪೀರಲು ದೇವರಿಗೆ ಸಕ್ಕರೆ ಸಮರ್ಪಿಸಿ ಭಕ್ತಿ ಮೆರೆದರು. ಕೆಲ ಕಡೆ ಯುವಕರು ವಿವಿಧ ಬಣ್ಣದ ಪುಡಿಗಳನ್ನು ಎರಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next