Advertisement

ನಿಂಗಪ್ಪ ಗುಂಪಿಗೆ ಭರ್ಜರಿ ಗೆಲುವು

11:51 AM Jun 15, 2019 | Naveen |

ಬಳ್ಳಾರಿ: ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಹುನಿರೀಕ್ಷಿತ ಅಭ್ಯರ್ಥಿಗಳೆಲ್ಲರೂ ಪರಾಭವಗೊಂಡಿದ್ದು, ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಬೇಕೆಂಬ ಹಾಲಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಈ ಬಾರಿಯಾದರೂ ಅಧ್ಯಕ್ಷರಾಗಬೇಕೆಂಬ ಪ್ರಯತ್ನದಲ್ಲಿದ್ದ ಡಾ.ರಾಜಶೇಖರ್‌ ಗಾಣಿಗೇರ ಅವರ ಕನಸು ಕಮರಿ ಹೋಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಲ್ಲೇಶರ ಗುಂಪು ಸೋಲು ಕಂಡಿದ್ದು, ನಿಂಗಪ್ಪ ಅವರ ಗುಂಪು ಭರ್ಜರಿ ಜಯಗಳಿಸಿದೆ. ಎನ್‌.ಪಿ.ಎಸ್‌ ನೌಕರರ ಪ್ರಯತ್ನ ಫಲ ನೀಡಿಲ್ಲ.

Advertisement

ಜಿಲ್ಲಾ ಸಂಘದ ಒಟ್ಟು 62 ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ 28 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 34 ಸದಸ್ಯ ಸ್ಥಾನಗಳಿಗೆ 86 ಜನ ಸ್ಪರ್ಧಾ ಕಣದಲ್ಲಿದ್ದರು. ಬುಧವಾರ ನಗರದ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಏರ್ಪಡಿಸಲಾಗಿದ್ದ 26 ಮತಗಟ್ಟೆಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ನಂತರ ನಡೆದ ಎಣಿಕೆ ಕಾರ್ಯದಲ್ಲಿ 34 ಸ್ಥಾನಗಳ ಫಲಿತಾಂಶ ಪ್ರಕಟವಾಯಿತು.

ಗೆದ್ದವರು; ಪಶು ಸಂಗೋಪನಾ ಇಲಾಖೆ ಕ್ಷೇತ್ರಕ್ಕೆ ಯು.ತಿಮ್ಮಪ್ಪ, ಆರ್ಥಿಕ ಮತ್ತು ಸಾಂಖೀಕ್ಯ ಇಲಾಖೆಗೆ ರಾಕೇಶ್‌, ವಾಣಿಜ್ಯ ತೆರಿಗೆ ಇಲಾಖೆಯ ಎರಡು ಸ್ಥಾನಗಳಿಗೆ ಈ.ಗುರುಸ್ವಾಮಿ, ಎಸ್‌.ಡೊಮಾನಿಕ್‌, ಲೊಕೋಪಯೋಗಿ ಇಲಾಖೆಯ ಎರಡು ಸ್ಥಾನಗಳಿಗೆ ಆಸಿಫ್‌, ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆಗೆ ಎಂ.ಬಸವರಾಜ್‌ ಹಿರೇಮಠ, ಅಬಕಾರಿ ಇಲಾಖೆಗೆ ಡಿ.ಗುರುರಾಜ್‌, ಅರಣ್ಯ ಇಲಾಖೆಗೆ ಸಿ.ನಾಗರಾಜ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂರು ಸ್ಥಾನಗಳಿಗೆ ನಾಗರಾಜ್‌, ಕೆ.ಶ್ರೀನಿವಾಸಲು, ಜ್ಯೋತಿ ಲಕ್ಷ್ಮಿ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಯ ಎರಡು ಸ್ಥಾನಗಳಿಗೆ ಹನುಮಂತರಾಯ, ಮಾರೆಪ್ಪ, ಆಯುಷ್‌ ಎಸ್‌ಐ ತಾರಾನಾಥ್‌ ಶರಣಪ್ಪ ಎಸ್‌.ಜಿನಗಾ, ತೋಟಗಾರಿಕೆ ಇಲಾಖೆ ವಿಭಾಗದಲ್ಲಿ ಡಿ.ಪ್ರವೀಣ ಕುರ್ಮಾ ಅವರು ಗೆಲುವು ಸಾಧಿಸಿದ್ದಾರೆ.

ಪ್ರಾಥಮಿಕ ಶಾಲೆ ಶಿಕ್ಷಕರ ನಾಲ್ಕು ಸ್ಥಾನಗಳಿಗೆ ಸಿ.ನಿಂಗಪ್ಪ, ಡಿ.ರಾಘವೇಂದ್ರ, ವಾಸುದೇವ, ಚೆನ್ನಬಸಪ್ಪ, ಪ್ರೌಢ ಶಾಲಾ ವಿಭಾಗದ ಎರಡು ಸ್ಥಾನಗಳಿಗೆ ಹರಿಪ್ರಸಾದ, ಮೊಹ್ಮದ್‌ ರಿಜ್ವಾನ್‌ ಉಲ್ಲಾ, ಸರ್ಕಾರಿ ಕಿರಿಯ ಶಾಲಾ ವಿಭಾಗದಲ್ಲಿ ಎಸ್‌.ಶ್ರೀಧರ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅಬ್ದುಲ್ ರೆಹಮಾನ್‌, ಭೂ ಮಾಪನ, ಕಂದಾಯ ಹಾಗೂ ಭೂ ದಾಖಲೆ ಇಲಾಖೆ ರಮೇಶ್‌, ಎನ್‌ಸಿಸಿ ಹಾಗೂ ಕಾರಾಗೃಹ ಇಲಾಖೆಯಿಂದ ವೆಂಕಟೇಶ್‌, ಖಜಾನೆ ಇಲಾಖೆಯಿಂದ ಅಲ್ಲಾಬಕ್ಷ, ಕಾರ್ಖಾನೆ ಹಾಗೂ ಬಾಯ್ಲರ್‌ ಇಲಾಖೆಯಿಂದ ಕೆ.ಧರ್ಮರೆಡ್ಡಿ, ನ್ಯಾಯಾಂಗ ಇಲಾಖೆಯ ಎರಡು ಸ್ಥಾನಗಳಿಗೆ ಮಲ್ಲಿಕಾರ್ಜುನ ಗೌಡ ಹೊಸಮನಿ, ಭಾಸ್ಕರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಎಂ.ಸಿ.ಶಂಕರಮೂರ್ತಿ, ಡಯಟ್ ಶಿಕ್ಷಣ ಸಂಸ್ಥೆ, ಲಿಪಿಕ್‌ ನೌಕರರ ಶಿಕ್ಷಣ ಇಲಾಖೆಯಿಂದ ಮಹೇಶ್‌, ಪ್ರಾದೇಶಿಕ ಔಷಧ ನಿಯಂತ್ರಣ ಇಲಾಖೆ ಶ್ರೀನಿವಾಸ್‌ ರೆಡ್ಡಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನು ಮುಂದೆ ತಾಲೂಕು ಅಧ್ಯಕ್ಷರ ಚುನಾವಣೆ ನಡೆದು ಜಿಲ್ಲಾ ಘಟಕಕ್ಕೆ ಸದಸ್ಯರಾಗಲಿದ್ದಾರೆ. ಇದರಿಂದ ಜಿಲ್ಲಾ ಘಟಕದ ಸದಸ್ಯರ ಸಂಖ್ಯೆ 72ಕ್ಕೆ ಏರಲಿದ್ದು, ಇವರು ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ, ರಾಜ್ಯ ಘಟಕದ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next