Advertisement

ಕಾರ್ಮಿಕರ ಕ್ಷಯರೋಗ ತಪಾಸಣೆ ಕಡ್ಡಾಯ

11:16 AM Jul 10, 2019 | Team Udayavani |

ಬಳ್ಳಾರಿ: ಕ್ಷಯರೋಗ ಪತ್ತೆ ಆಂದೋಲನವನ್ನು ಜಿಲ್ಲೆಯಲ್ಲಿ ಜು.15ರಿಂದ 27ರವರೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು. ಈ ವೇಳೆ ಪೌರಕಾರ್ಮಿಕರಿಗೆ, ಗಣಿ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಡ್ಡಾಯವಾಗಿ ಕ್ಷಯರೋಗ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಕ್ಷಯರೋಗ ಮತ್ತು ಅದರ ಲಕ್ಷಣಗಳು ಹಾಗೂ ಅದಕ್ಕಿರುವ ಚಿಕಿತ್ಸೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಶಾಲಾ ಮಕ್ಕಳ ಜಾಥಾ, ಡಂಗೂರ ಬಾರಿಸುವಿಕೆ, ಕರಪತ್ರಗಳ ಹಂಚುವಿಕೆ, ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ, ಕಸದ ವಾಹನಗಳ ಜಿಂಗಲ್ಸ್ ಮೂಲಕ ಪ್ರಚಾರ ಸೇರಿದಂತೆ ವಿವಿಧ ರೀತಿಯ ಕ್ರಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಆಂದೋಲನಕ್ಕೆ ಯಶಸ್ಸಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯ. ಎಲ್ಲರೂ ತಮಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಕೆ.ನಿತೀಶ್‌ ಮಾತನಾಡಿ, ಕ್ಷಯರೋಗ ಪತ್ತೆ ಆಂದೋಲನ ಪರಿಣಾಮಕಾರಿಯಾಗಿ ಮಾಡಿ ಮತ್ತು ಪ್ರತಿನಿತ್ಯ ವರದಿಗಳನ್ನು ನಮಗೆ ಸಲ್ಲಿಸುವಂತೆ ಸೂಚಿಸಿದರು.

ಕ್ಷಯರೋಗ ಪತ್ತೆ ಆಂದೋಲನ ಮತ್ತು ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳ ವಿರುದ್ಧ ಅನುಸರಿಸಬೇಕಾದ ಕ್ರಮಗಳ ಕುರಿತು ಇಡೀ ಜಿಲ್ಲೆಯಾದ್ಯಂತ ಒಂದು ದಿನ ತರಬೇತಿಯನ್ನು ತಾಲೂಕುವಾರು ಏಕಕಾಲಕ್ಕೆ ನಡೆಸಬೇಕು. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಅಗತ್ಯ ತರಬೇತಿ ನೀಡಬೇಕು. ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ನಮಗೆ ನೀಡಿದಲ್ಲಿ ನಾವು ಕೂಡ ಸ್ವಚ್ಛ ಭಾರತ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರೊಜೆಕ್ಟರ್‌ ಮೂಲಕ ಅರಿವು ಮೂಡಿಸಲಾಗುವುದು ಎಂದರು.

Advertisement

35 ಗ್ರಾಪಂಗಳಲ್ಲಿ ಮನೆ ಕಸ ಸಂಗ್ರಹ: ನಗರಗಳಂತೆ ಗ್ರಾಪಂಗಳ ಮಟ್ಟದಲ್ಲಿಯೂ ಸಹ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದಕ್ಕೆ ಬಳ್ಳಾರಿ ಜಿಪಂ ಮುಂದಾಗಿದ್ದು, ಮೊದಲ ಹಂತದಲ್ಲಿ 35 ಗ್ರಾಪಂಗಳಲ್ಲಿ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ಗ್ರಾಪಂಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್‌ ಹೇಳಿದರು. ಗ್ರಾಮದ ಒಳಗಡೆ ಇರುವ ತಿಪ್ಪೆಗುಂಡಿಗಳನ್ನು ತಕ್ಷಣಕ್ಕೆ ತೆರವು ಮಾಡಲು ಆಗದಿದ್ದರೂ ಇನ್ನೂ ಕೆಲ ದಿನಗಳಲ್ಲಿ ಒಂದು ಪ್ಲಾನ್‌ ಮಾಡಿ ಅವುಗಳನ್ನು ತೆಗೆಯಲಾಗುವುದು ಎಂದರು.

ಇಲಾಖೆಗಳ ಸಹಕಾರ ಅಗತ್ಯ: ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಡೆಂಘೀ ಮತ್ತು ಚಿಕೂನ್‌ಗುನ್ಯಾದಂತ ಕಾಯಿಲೆಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳಿಗೆ ತನ್ನದೇಯಾದ ಜವಾಬ್ದಾರಿ ವಹಿಸಲಾಗಿದ್ದು, ಎಲ್ಲ ಇಲಾಖೆಗಳ ಸಮನ್ವಯ ಮತ್ತು ಸಹಕಾರಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್ ಸೂಚನೆ ನೀಡಿದರು.

ಕಳೆದ ವರ್ಷ ಇದೇ ಸಮಯದಲ್ಲಿ 18 ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದವು. ಈ ವರ್ಷ ಇಲ್ಲಿಯವರೆಗೆ 9 ಪ್ರಕರಣಗಳು ದೃಢಪಟ್ಟಿವೆ. ಡೆಂಘೀ ಪ್ರಕರಣಗಳು ಕಳೆದ ವರ್ಷ ಇದೇ ಸಮಯದಲ್ಲಿ 1188 ಸಂಶಯಾಸ್ಪದ ಪ್ರಕರಣಗಳಾಗಿದ್ದವು. ಅದರಲ್ಲಿ 52 ಪ್ರಕರಣಗಳು ಪಾಸಿಟಿವ್‌ ಎಂದು ದೃಢಪಡಿಸಲಾಗಿತ್ತು. ಈ ವರ್ಷ 1320 ಸಂಶಯಾಸ್ಪದ ಪ್ರಕರಣಗಳಿದ್ದು 33 ಪಾಸಿಟಿವ್‌ ಎಂದು ದೃಢಪಟ್ಟಿವೆ. ಚಿಕೂನ್‌ಗುನ್ಯಾ ಕಳೆದ ವರ್ಷ 116 ಸಂಶಯಾಸ್ಪದ ಪ್ರಕರಣಗಳಿದ್ದು, ಅದರಲ್ಲಿ 23 ಪಾಸಿಟಿವ್‌ ಎಂದು ದೃಢಪಟ್ಟಿದ್ದವು. ಈ ವರ್ಷ 21 ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು 04 ಪಾಸಿಟಿವ್‌ ಎಂದು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಅಬ್ದುಲ್ಲಾ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ ಹೆಡೆ ಸೇರಿದಂತೆ ವಿವಿಧ ಆರೋಗ್ಯ ಇಲಾಖೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next