Advertisement

ಘಂಟೆಯ ಕೊರಳೊಳಗಿಂದ…

02:24 PM Oct 20, 2018 | |

 ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ…

Advertisement

ನಾವು ಯಾವುದೇ ದೇವಾಲಯಕ್ಕೆ ಹೋದರೂ ಬೇರೆಬೇರೆ ಗಾತ್ರದ, ಬಗೆಬಗೆಯ ಆಕೃತಿಯ ಘಂಟೆಗಳು ತೂಗಿಹಾಕಿರುವುದನ್ನು ಕಾಣುತ್ತೇವೆ. ಅಲ್ಲದೇ, ನಮಗೆ ಅರಿವಿ¨ªೋ ಅರಿವಿಲ್ಲದೆಯೋ ಅವುಗಳಲ್ಲಿ ಒಂದು ಘಂಟೆಯನ್ನು ಬಾರಿಸಿ ದೇವರಿಗೆ ನಮಸ್ಕರಿಸುತ್ತೇವೆ. ಇನ್ನು ಕೆಲವರು ದೇಗುಲದಲ್ಲಿ ಮೌನವನ್ನು ಬಯಸುವುದುಂಟು. ಬಂದವರೆಲ್ಲರೂ ಘಂಟೆಯನ್ನು ಬಾರಿಸುತ್ತ ಶಬ್ದಮಾಲಿನ್ಯವನ್ನು ಮಾಡುತ್ತಾರಲ್ಲ ಎಂದು ಅವರಿಗೆ ಅನ್ನಿಸಬಹುದು. ಅದು ತಪ್ಪೇನೂ ಅಲ್ಲ. ಯಾಕೆಂದರೆ, ಕೈಗೆ ಘಂಟೆ ಸಿಕ್ಕಿತೆಂದರೆ ಅದನ್ನು ಐದಾರು ಬಾರಿ ಬಾರಿಸಿ ಗಲಾಟೆ ಎಬ್ಬಿಸುವವರನ್ನು ನಾವೆಲ್ಲರೂ ನೋಡಿರುತ್ತೇವೆ. ಘಂಟೆ ಬಾರಿಸುವ ಕ್ರಮ ಮತ್ತು ಅದರ ಅಗತ್ಯವನ್ನು ತಿಳಿಯದೇ ಇ¨ªಾಗ ಘಂಟೆಯ ಶಬ್ದಗಳು ದೇವರಲ್ಲಿ ಭಕ್ತಿ ಹುಟ್ಟಿಸುವ ಬದಲು ಶಬ್ದಮಾಲಿನ್ಯವನ್ನೇ ಉಂಟುಮಾಡುತ್ತವೆ.

  ಮಂಗಳಾರತಿಯ ಸಂದರ್ಭವನ್ನು ಹೊರತುಪಡಿಸಿ, ನಾವು ನಮಸ್ಕರಿಸುವ ಮೊದಲು ಘಂಟೆಯನ್ನು ಕೇವಲ ಒಂದು ಬಾರಿ ಮಾತ್ರ ಬಾರಿಸಬೇಕು. ಇದು ಕ್ರಮ. ಆದರೆ, ಮನಬಂದಂತೆ ಮೂರೋ- ನಾಲ್ಕೋ ಅಥವಾ ಅದಕ್ಕೋ ಹೆಚ್ಚು ಬಾರಿ “ಢಣ್‌ ಢಣ್‌ ಢಣ್‌ ಢಣ್‌ ಢಣ್‌’ ಎಂದು ಬಾರಿಸುತ್ತ ಹೋದರೆ ಅದು ದೇಗುಲದ ಮೌನವನ್ನು ಹಾಳು ಮಾಡಿದಂತೆಯೇ ಸರಿ. ಹಾಗಾಗಿ, ಒಮ್ಮೆ ಮಾತ್ರ ಬಾರಿಸುವುದು ಸೂಕ್ತ.

ಘಂಟೆ ಬಾರಿಸಲೂ ಒಂದು ಕಾರಣ…
 ಯಾಕೆ ಒಮ್ಮೆ ಮಾತ್ರ ಬಾರಿಸಬೇಕು? “ಅದು ನನ್ನಿಷ್ಟ, ಎಷ್ಟು ಬಾರಿಯಾದರೂ ಘಂಟೆಯನ್ನು ಬಾರಿಸುತ್ತೇನೆ’ ಎಂದು ಸಮರ್ಥನೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ, ಗಂಟಾನಾದದ ಹಿಂದೆ ಒಂದು ವಿಶೇಷ ಮಹತ್ವವಿದೆ. ನಾವು ಒಮ್ಮೆ ಬಾರಿಸಿದ ಘಂಟೆಯ ಶಬ್ದ ಸಣ್ಣದಾಗುತ್ತ ಹೋಗಿ ಕೊನೆಗೊಳ್ಳುತ್ತದೆ. ಅದು ಅರ್ಧದಿಂದ ಒಂದು ನಿಮಿಷಗಳ ಕಾಲಾವಧಿಯೂ ಇರಬಹುದು. ಇದು ಘಂಟೆಯ ಗಾತ್ರ ಹಾಗೂ ಬಾರಿಸಿದ ರೀತಿಯನ್ನು ಅವಲಂಬಿಸಿದೆ. ಸಣ್ಣದಾಗಿ ಬಾರಿಸಿದಾಗ ಕಡಿಮೆ ಅವಧಿಯಲ್ಲಿಯೂ ದೊಡ್ಡದಾಗಿ ಅಥವಾ ಗಟ್ಟಿಯಾಗಿ ಬಾರಿಸಿದಾಗ ದೀರ್ಘಾವಧಿಯಲ್ಲಿಯೂ ಅದರ ಶಬ್ದ ಕ್ಷೀಣಿಸುತ್ತ ಹೋಗಿ ಮರೆಯಾಗುತ್ತದೆ. ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ.

ಏಕಾಗ್ರತೆಯೇ ದೇವರು
  ನಾವು ದೇಗುಲಕ್ಕೆ ಹೋಗುವ ಮೊದಲ ಕಾರಣವೇ ಮಾನಸಿಕ ನೆಮ್ಮದಿಗಾಗಿ. ಬದುಕಿನ ಜಂಜಾಟದಿಂದಾಗಿ ತಲೆಯಲ್ಲಿ ಓಡಾಡುವ ಚಿಂತೆಗಳನ್ನು ಇಟ್ಟುಕೊಂಡು ದೇಗುಲಕ್ಕೆ ಹೋಗಿ ನಮಸ್ಕರಿಸುವಾಗಲೂ ನಮ್ಮ ತಲೆಯಲ್ಲಿ ಯಾವುದೋ ಆಲೋಚನೆಗಳು ಓಡಾಡುವ ಸಾಧ್ಯತೆಗಳಿವೆ. ಅಲ್ಲದೇ, ನಮ್ಮ ಚಿತ್ತ ದೇವಾಲಯದಲ್ಲಿನ ಆಗುಹೋಗುಗಳ ಕಡೆಗೆ ಗಮನಕೊಡುವ ಸಾಧ್ಯತೆಯೂ ಇದೆ. ಆದುದರಿಂದಲೇ ನಾವು ದೇವಾಲಯಕ್ಕೆ ಕಾಲಿಟ್ಟ ತಕ್ಷಣ ಅಥವಾ ನಮಸ್ಕರಿಸುವ ಮೊದಲು ಘಂಟೆಯನ್ನು ಬಾರಿಸುತ್ತೇವೆ. ಆ ಘಂಟೆ “ನೀನೀಗ ದೇಗುಲದಲ್ಲಿದ್ದೀಯ, ಮನದಲ್ಲಿ ಬೇರೆ ಯಾವುದೇ ಯೋಚನೆಗಳಿಲ್ಲದೇ, ಭೌತಿಕ ಬಾಧೆಗಳನ್ನೂ ಮರೆತು ನಮಸ್ಕರಿಸು’ ಎಂದು ನಮ್ಮನ್ನು ಎಚ್ಚರಿಸುತ್ತದೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ.

Advertisement

ಏಕಾಗ್ರತೆಯೂ ಒಂದು ಸಾಧನೆ. ಈ ಘಂಟೆ ಆ ಕ್ಷಣದ ಏಕಾಗ್ರತೆಯ ಮಾರ್ಗ. ಏಕಾಗ್ರತೆ ಮನುಷ್ಯನ ಶಕ್ತಿಯೂ ಹೌದು; ಭಕ್ತಿಯೂ ಹೌದು.

ಘಂಟೆಯ 6 ತತ್ವಗಳು
1. ಘಂಟೆಯನ್ನು ಒಮ್ಮೆ ಮಾತ್ರ ಬಾರಿಸಬೇಕು. 
2. ಆ ಘಂಟೆ ಕೊನೆಯಾಗುವ ತನಕವೂ ಅದರಲ್ಲಿಯೇ ನಿಮ್ಮ ಗಮನವಿರಲಿ. 
3. ಘಂಟಾನಾದದ ದೀರ್ಘ‌ತೆಯು ಬದುಕಿನ ಸುದೀಘತೆಗೆ ಶ್ರುತಿಯಾಗಿ, ಮಾನವ ಜನ್ಮದ ಮೌಲ್ಯದ ಅರಿವಾಗುತ್ತದೆ.
4. ಘಂಟೆಯಿಂದ ಹೊರಡುವ “ಓಂ’ ಎಂಬ ಶಬ್ದವು ಮನಸ್ಸನ್ನು ಭಕ್ತಿ-ಭಾವದಿಂದ ತಾಜಾವಾಗಿಸುತ್ತದೆ.
5. ಘಂಟೆಯ ನಾದದ ಕಡೆಗೇ ಗಮನ ಕೊಟ್ಟರೆ, ಏಕಾಗ್ರತೆಯ ಮಿಂಚೊಂದು ನಿಮ್ಮೊಳಗೆ ಬೆಳಕಾಗುತ್ತದೆ.
6. ಆ ನಾದವು ಮನಸ್ಸನ್ನು ಶುದ್ಧವಾಗಿಸುತ್ತದೆ. ಶುದ್ಧಮನಸ್ಸಿನಿಂದ ನಮಸ್ಕರಿಸಿದರೆ, ದೇವರು ಸಂಪ್ರೀತನಾಗುತ್ತಾನೆ. ನಿಮ್ಮ ಮನಸ್ಸೂ ಉಲ್ಲಸಿತವಾಗುತ್ತದೆ.

ವಿಷ್ಣು ಭಟ್ಟ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next