Advertisement

ಯೋಜನೆ ವಿಳಂಬಕ್ಕೆ  ಆಕ್ರೋಶ

11:09 AM Mar 16, 2019 | Team Udayavani |

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಹಾಗೂ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

Advertisement

ಉತ್ತರ ಕರ್ನಾಟಕ ಪ್ರಾದೇಶಿಕ ಅಸಮತೋಲನ, ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ರೈತ ಕಳಸಾ-ಬಂಡೂರಿ ಹೋರಾಟ ಸಮಿತಿ ಸೇರಿದಂತೆ ಇತರೆ ಸಂಘಟನೆಗಳು ಶುಕ್ರವಾರ ಕೆಲವು ನಿರ್ಣಯಗಳನ್ನು ತೆಗೆದುಕೊಂಡವು.

ಉತ್ತರ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನ್ಯಾಯಾಧಿಕರಣ ತೀರ್ಪು ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಹಾಗೂ ತೀರ್ಪಿನಂತೆ ಮಹದಾಯಿ ನೀರು ಬಳಸಿಕೊಳ್ಳುವಲ್ಲಿ ಸರಕಾರ ಮೀನಮೇಷ ಎಣಿಸುತ್ತಿದೆ. ಪ್ರಾದೇಶಿಕ ಅಸಮತೋಲನದಿಂದ ಈ ಭಾಗದ ಜನ ತತ್ತರಿಸಿದ್ದು, ಉ.ಕ. ಭಾಗದ ರೈತರಿಗೆ ಅನ್ಯಾಯ ಮಾಡುತ್ತಿರುವ ಸರಕಾರಗಳು ಚುನಾವಣೆಯೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ಮಾತನಾಡಿ, ಸುಪ್ರೀಂ ಕೋರ್ಟ್‌ ಆದೇಶ ನೀಡಿದರೂ ರಾಜ್ಯ ಸರ್ಕಾರ ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಗೋವಾ ಸರಕಾರ ಈಗಾಗಲೆ ಕಳಸಾ-ಬಂಡೂರಿ ನಾಲಾ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ. ಆದರೆ ರಾಜ್ಯ ಸರಕಾರ ಕೇಂದ್ರ ಸರ್ಕಾರವನ್ನು ದೂಷಿಸುತ್ತ ಕಾಲಹರಣ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕ ಭಾಗದ ಬಹುತೇಕ ನೀರಾವರಿ ಯೋಜನೆಗಳು ಇನ್ನೂವರೆಗೆ ಮುಗಿದಿಲ್ಲ. ಬಿಜೆಪಿ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರದೇ ಕೇವಲ ಹೇಳಿಕೆಗಳನ್ನು ಕೊಡುತ್ತ ಸುಮ್ಮನೇ ಕುಳಿತಿದ್ದಾರೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರು ಕುಡಿಯುವ ನೀರು ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

Advertisement

ರೈತ ಮುಖಂಡ ಸಿದಗೌಡ ಮೋದಗಿ ಮಾತನಾಡಿ, ಕೇವಲ ಎರಡು ವರ್ಷದ ಹಿಂದೆ ನಡೆದ ಹೋರಾಟಕ್ಕೆ ಮಣಿದು ಮೇಕೆದಾಟು ಯೋಜನೆಗೆ ಸರಕಾರ ಚಾಲನೆ ನೀಡಿದೆ. 5500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ. 50 ವರ್ಷಗಳಿಂದ ಮಹದಾಯಿಗಾಗಿ ನಿರಂತರ ಹೋರಾಟ ನಡೆದಿದ್ದರೂ ಸರಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಅನೇಕ ಸಲ ಹೋರಾಟ ನಡೆಸಿ ಸರಕಾರದ ಕಣ್ಣು ತೆರೆಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.

ಕಾವೇರಿ ಹೋರಾಟಗಾರರ ಮೇಲಿನ ಕೇಸ್‌ ಗಳನ್ನು ಹಿಂಪಡೆಯಲಾಗಿದೆ. ಆದರೆ ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತ ಬರಲಾಗಿದೆ ಎಂದು ದೂರಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋರಾಟಕ್ಕಾಗಿ ನಿರ್ಮಿಸಿಕೊಂಡಿದ್ದ ಪೆಂಡಾಲ್‌ ಹಾಗೂ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲದ ನಿಯಮ ಈಗ ಏಕೆ ಬಂತು. ಚುನಾವಣೆ ಬಳಿಕ ಪೆಂಡಾಲ್‌ ನಿರ್ಮಿಸದಿದ್ದರೆ ಹೋರಾಟ ಮಾಡುವುದಾಗಿ ಎಂದು ಎಚ್ಚರಿಕೆ ನೀಡಿದರು. ಮುಖಂಡ ಲಕ್ಷ್ಮಣ ಬಕಾಯಿ ಮಾತನಾಡಿ, ಗೋವಾ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ, ಕಾಮಗಾರಿ ಆರಂಭಿಸಿದೆ. ಆದರೆ ರಾಜ್ಯ ಸರಕಾರ ಮಾತ್ರ ಸುಮ್ಮನೆ ಕುಳಿತಿದೆ. ರಾಜ್ಯದ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ರೈತರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ನೀರಿನ ಸದ್ಬಳಕೆ ಆಗದಿದ್ದರೆ ಕರ್ನಾಟಕಕ್ಕೆ ನೀರಿನ ಅಗತ್ಯವಿಲ್ಲ ಎಂದು ಗೋವಾ ಸರಕಾರ ಕೋರ್ಟ್‌ನಲ್ಲಿ ವಾದ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ತ್ವರಿತ ಗತಿಯಲ್ಲಿ ಅವಕಾಶ ನೀಡಿದಂತಾಗುತ್ತದೆ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಕಣಕುಂಬಿಯಲ್ಲಿ ನಿರ್ಮಿಸಲಾಗಿರುವ ತಡೆಗೋಡೆಯನ್ನು ಸರಕಾರ ತೆರವುಗೊಳಿಸಬೇಕು. ಇಲ್ಲದಿದ್ದರೆ ಹೋರಾಟಗಾರರೇ ಸ್ಥಳಕ್ಕೆ ಹೋಗಿ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಮುಖಂಡ ಅಶೋಕ ಪೂಜಾರಿ, ಹೋರಾಟಗಾರರಾ ಬಿ.ಎ. ಮುಧೋಳ, ರಮೇಶ ಭೋಸಲೆ, ನಿಂಗಮ್ಮ ಮಾಳೇರ, ಎ.ಎಸ್‌. ಪೀರಜಾದೆ, ಕರೆಪ್ಪ ಹೊನ್ನಾಪುರ, ಇಲಿಯಾಸ ಪಾಟೀಲ ಸೇರಿದಂತೆ ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರು ಭಾಗವಹಿಸಿದ್ದರು.

ಕಣಕುಂಬಿಗೆ ತೆರಳಲು ರೈತ ಮುಖಂಡರ ಪಟ್ಟು 
ಕಣಕುಂಬಿಗೆ ಹೋಗಿ ಕಳಸಾ-ಬಂಡೂರಿ ಯೋಜನೆಯ ಸದಸ್ಯದ ಸ್ಥಿತಿಗತಿ ಪರಿಶೀಲಸಲು 
ತೆರಳಲು ಪಟ್ಟು ಹಿಡಿದ ರೈತ ಮುಖಂಡರನ್ನು ಪೊಲೀಸರು ತಡೆ ಹಿಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಸದ್ಯ ಸಂಬಂಧಿಸಿದ ಅಧಿಕಾರಿಗಳನ್ನಾದರೂ ಕರೆಯಿಸಬೇಕು ಇಲ್ಲವೇ ಸ್ಥಳಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈಗ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಅನುಮತಿ ಪಡೆದುಕೊಂಡು ತಾವು ಅಲ್ಲಿಗೇ ಹೋಗಬೇಕು ಎಂದು ಹೇಳಿದರು. ಆದರೆ ಇದಕ್ಕೆ ಒಪ್ಪದೇ ಸ್ಥಳಕ್ಕೆ ಹೋಗಲು ಪಟ್ಟು ಹಿಡಿದರು. ನಂತರ ಪೊಲೀಸರು ಕೆಲವು ನಿಯಮಗಳನ್ನು ಹಾಕಿ ಬಂದೋಬಸ್ತಿನಲ್ಲಿ ಖಾನಾಪುರಕ್ಕೆ ಕರೆದುಕೊಂಡು ಹೋದರು.

Advertisement

Udayavani is now on Telegram. Click here to join our channel and stay updated with the latest news.

Next