Advertisement

ಕಾಂಗ್ರೆಸ್‌ ಪ್ರಚಾರ ಮಂಕು, ನಿರಾಣಿ ಹಾದಿ ಸುಗಮ?

11:35 PM Jun 09, 2022 | Team Udayavani |

ಬೆಳಗಾವಿ: ನಿರಾಣಿ ಸಹೋದರರ ಪ್ರಾಬಲ್ಯದ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ ಸಂಕ ಹಾಗೂ ಅವರ ನಾಯಕರ ರಾಜಕೀಯ ತಂತ್ರಗಾರಿಕೆ ಫಲ ಕೊಟ್ಟೀತೇ..?

Advertisement

– ಈ ಪ್ರಶ್ನೆ ಈಗ ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರನ್ನು ಕಾಡುತ್ತಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ. ಜೆಡಿಎಸ್‌ ಇಲ್ಲಿ ಸ್ಪರ್ಧೆ ಮಾಡಿಲ್ಲ. ಹೀಗಾಗಿ ಎಲ್ಲರ ಗಮನ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಮೇಲೆಯೇ ನೆಟ್ಟಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಮಹದೇವಪ್ಪ ಕಲಕುಟ್ರಿ, ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಟೇಲ ಹಾಗೂ ಏಳು ಜನ ಪಕ್ಷೇತರರು ನೆಪಮಾತ್ರಕ್ಕೆ ಇದ್ದಂತಿದೆ.

ಆದರೆ ಇದುವರೆಗಿನ ಪಕ್ಷಗಳ ಪ್ರಚಾರ, ಅಭ್ಯರ್ಥಿಯ ಪ್ರಭಾವ ನೋಡಿದರೆ ಕ್ಷೇತ್ರದ

ವಾಸ್ತವ ಸ್ಥಿತಿ ಬೇರೆ ಇದೆ. ಬಿಜೆಪಿಯಲ್ಲಿದ್ದಷ್ಟು ಹುಮ್ಮಸ್ಸು, ಪ್ರಚಾರದ ಭರಾಟೆ ಕಾಂಗ್ರೆಸ್‌ ಪಾಳೆಯದಲ್ಲಿ ಕಾಣುತ್ತಿಲ್ಲ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿದ್ದ ಉತ್ಸಾಹ ಮುಖಂಡರ ಭೇಟಿ ಅನಂತರ ಅಷ್ಟಾಗಿ ಕಂಡಿಲ್ಲ.

ಪದವೀಧರ ಕ್ಷೇತ್ರ ಕಬ್ಬಿಣದ ಕಡಲೆ ಎಂದು ಭಾವಿಸಿದಂತೆ ಕಾಣುತ್ತಿರುವ ಕಾಂಗ್ರೆಸ್‌ ಇಲ್ಲಿ ಅಷ್ಟೊಂದು ತುರುಸಿನ ಪ್ರಚಾರ ಮಾಡುತ್ತಿಲ್ಲ. ಅಭ್ಯರ್ಥಿ ಸುನೀಲ ಸಂಕ ಸೇರಿ ಜಿಲ್ಲೆಯ ನಾಯಕರು ಆಸಕ್ತಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವಂತೆ ಕಂಡಿಲ್ಲ. ಆದರೆ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಪಕ್ಷದ ನಾಯಕರ ಗಮನ ಈ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿದೆ.

Advertisement

ಹನುಮಂತ ನಿರಾಣಿ ನಿರಾಳ: ಕಳೆದ ಬಾರಿ ತೀವ್ರ ಪೈಪೋಟಿ ಇದ್ದರೂ ನಿರಾಯಾಸವಾಗಿ ಜಯಗಳಿಸಿದ್ದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಈ ಬಾರಿ ಸಾಕಷ್ಟು ನಿರಾಳರಾಗಿರುವಂತೆ ಕಾಣುತ್ತಿದೆ. ಕಾರಣ ಕಾಂಗ್ರೆಸ್‌ನಲ್ಲಿ ಚುನಾವಣೆ ಬಗ್ಗೆ ಅಂತಹ ಗಂಭೀರತೆ ಕಾಣದೇ ಇರುವುದು ಬಿಜೆಪಿಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನೊಂದು ಕಡೆ ವಾಯವ್ಯ ಪದವೀಧರ ಕ್ಷೇತ್ರದಲ್ಲಿ 99 ಸಾವಿರ ಮತದಾರರಿದ್ದು ಅದರಲ್ಲಿ ಸುಮಾರು 40 ಸಾವಿರ ಮತದಾರರು ಹನುಮಂತ ನಿರಾಣಿ ಅವರ ಬೆಂಬಲಿಗರು. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹನುಮಂತ

ನಿರಾಣಿ ತಮ್ಮ ಪರವಾಗಿ ನಿಲ್ಲುವಂತೆ 40 ಸಾವಿರ ಪದವೀಧರ ಮತದಾರರನ್ನು ನೋಂದಣಿ ಮಾಡಿಸಿದ್ದಾರೆ. ಇದರಿಂದ ಬಿಜೆಪಿ ಈಗಾಗಲೇ ಗೆದ್ದ ವಿಶ್ವಾಸದಲ್ಲಿದೆ.

ಕ್ಷೇತ್ರದಲ್ಲಿ ಹನುಮಂತ ನಿರಾಣಿ ಅವರ ವರ್ಚಸ್ಸು  ಕಡಿಮೆಯಾಗಿಲ್ಲ. ಮಿತ ಭಾಷಿಯಾಗಿದ್ದರೂ ಪದವೀಧರರನ್ನು ಆಕರ್ಷಿಸಿ ಮತ ಸೆಳೆಯುವ ಚಾಣಾಕ್ಷತನ ಸಿದ್ಧಿಸಿಕೊಂಡಿದ್ದಾರೆ. ಕಳೆದ ಬಾರಿ ಪೈಪೋಟಿಯ ನಡುವೆ ಚೊಚ್ಚಲ ಬಾರಿಗೆ  ಪರಿಷತ್‌ ಪ್ರವೇಶಿಸಿದ್ದರು. ಅನಂತರದ ಆರು ವರ್ಷಗಳ ಸುದೀರ್ಘ‌ ಪಯಣದಲ್ಲಿ ಅವರು ಪದವೀಧರರ ಸಮಸ್ಯೆಗಳ ಬಗ್ಗೆ ತೋರಿದ ಕಳಕಳಿ ಈ ಬಾರಿಯೂ ಅವರಿಗೆ ಪರಿಷತ್‌ ಪ್ರವೇಶ ಸುಲಭ ಎಂಬ  ವಾತಾವರಣ ನಿರ್ಮಾಣ ಮಾಡಿದೆ.

ಸುನೀಲ ಹಾದಿ ದುರ್ಗಮ: ಮೊದಲ ಬಾರಿಗೆ ಪರಿಷತ್‌ ಚುನಾವಣೆ ಅಖಾಡಕ್ಕೆ ಇಳಿದಿರುವ ಸುನೀಲ ಸಂಕ ಚುನಾವಣ ರಾಜಕೀಯ ಪಟ್ಟುಗಳನ್ನು ಇನ್ನೂ ಕಲಿಯಬೇಕಿದೆ. ಇಲ್ಲಿನ ಹೊಂದಾಣಿಕೆ ರಾಜಕಾರಣ ಹಾಗೂ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಇನ್ನೂ ಕರಗತವಾಗಿಲ್ಲ. ಹೀಗಾಗಿ ಗೆಲುವಿನ ಹಾದಿ ದುರ್ಗಮವಾಗಿರುವಂತೆ  ಕಾಣುತ್ತಿದೆ. ಒಂದು ವೇಳೆ ಈ ಹಾದಿಯನ್ನು ಸುನೀಲ ಸಂಕ ಸುಗಮವಾಗಿ ದಾಟಿ ಜಯದ ನಗೆ ಬೀರಿದರೆ ಅದೊಂದು  ಪವಾಡವೇ ಸರಿ.

ಮುಖ್ಯವಾಗಿ ಕಾಂಗ್ರೆಸ್‌ ಪಾಳೆಯದಲ್ಲಿ ಆತ್ಮವಿಶ್ವಾಸದ ಹಾಗೂ ಎಲ್ಲರೂ ಒಂದಾಗಿ ಹೋಗುವ ಕೊರತೆ ಎದ್ದು ಕಂಡಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನವೋ ಏನೋ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರದ ಸುದ್ದಿಯಾಗಲಿಲ್ಲ. ಮೊದಲ ಬಾರಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಸುನೀಲ ಸಂಕ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪರಿಚಯದ ನಾಯಕರಾಗಿ ಗುರುತಿಸಿಕೊಂಡಿಲ್ಲ. ಮೇಲಾಗಿ ಸುನೀಲ ಅವರಿಗೆ ಪದವೀಧರರ ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲದ ಸಂಗತಿ.

99,598

ಒಟ್ಟು ಮತದಾರರು

45,124

ಬೆಳಗಾವಿ

33,651

ಬಾಗಲಕೋಟೆ

20,873

ವಿಜಯಪುರ

ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಆರು ವರ್ಷ ಗಳ ಕಾಲ ಪದವೀಧರರ ಸಮಸ್ಯೆ ಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡಿದ್ದೇನೆ. ಎಲ್ಲ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಪಕ್ಷದ ಮುಖಂಡರ ಆಶೀರ್ವಾದ ಇದೆ. ಮೂರೂ ಜಿಲ್ಲೆಗಳಲ್ಲೂ ನಮ್ಮ ಪರ ಅಲೆ ಇದೆ.-ಹನುಮಂತ ನಿರಾಣಿ, ಬಿಜೆಪಿ ಅಭ್ಯರ್ಥಿ

ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ ಪದವೀಧರರ ಸಮಸ್ಯೆಗಳ ಅರಿವಿದೆ. ಪಕ್ಷದ ಮುಖಂಡರು ಒಗ್ಗಟ್ಟಿನಿಂದ ನನ್ನ ಪರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯೊಳಗಿನ ಅಸಮಾಧಾನ ನಮ್ಮ ನೆರವಿಗೆ ಬರಲಿದೆ. ಮತದಾರರೂ ಬದಲಾವಣೆ ಬಯಸಿದ್ದಾರೆ. ಗೆಲುವಿನ ವಿಶ್ವಾಸ ಇದೆ.-ಸುನೀಲ ಸಂಕ,  ಕಾಂಗ್ರೆಸ್‌ ಅಭ್ಯರ್ಥಿ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next