Advertisement

Belagavi: ಗಡಿಯಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಬೇಕಿದೆ-ಶ್ರೀ

06:32 PM Oct 31, 2023 | Team Udayavani |

ಬೆಳಗಾವಿ: ಬೆಳಗಾವಿಯಂತಹ ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ. ಇಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಿದರೆ ಅನ್ಯಭಾಷೆಗಳು ಪ್ರವೇಶಿಸುವುದಿಲ್ಲ. ಇದರ ಬಗ್ಗೆ ಯಾವುದೇ ತರಹದ ನಿರ್ಲಕ್ಷ ಸಲ್ಲದು. ಕನ್ನಡ ಕಾರ್ಯಕ್ರಮಗಳಲ್ಲಿ ಹೆಚ್ಚಿನ  ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಗದಗ ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ದರಾಮ ಸ್ವಾಮಿಗಳು ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಲ್ಯಾಣರಾವ ಮುಚಳಂಬಿಯವರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಜರುಗಿದ ಕಲ್ಯಾಣ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲ್ಯಾಣರಾವ ಮುಚಳಂಬಿಯವರು ನಿಧನರಾಗಿ ಎರಡು ವರ್ಷಗಳು ಗತಿಸಿದರೂ ಅವರ ನೆನಪುಗಳು ನಮ್ಮಲ್ಲಿ ಇನ್ನೂ ಹಚ್ಚ ಹಸಿರಾಗಿ ಇರಲು ಅವರ ಒಳ್ಳೆಯ ಗುಣಗಳೇ ಕಾರಣ. ಸ್ನೇಹ  ಜೀವಿಯಾಗಿದ್ದ ಅವರು ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಎಲ್ಲ ಸಲಹೆ ಸೂಚನೆಗಳನ್ನು ಆಲಿಸಿ ತಮಗೆ ಯಾವುದು ಸರಿ ಅನ್ನಿಸುತ್ತದೆಯೋ ಅದನ್ನೆ ಮಾಡುವ ವ್ಯಕ್ತಿ ಕಲ್ಯಾಣರಾವ್‌ ಮುಚಳಂಬಿಯವರು ಆಗಿದ್ದರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಎಮ್‌.ಬಿ.ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಎಲ್‌.ಎಸ್‌. ಶಾಸ್ತ್ರಿ, ಸಾಹಿತಿ ಮಂಗಳಾ ಮೆಟಗುಡ್ಡ ಮತ್ತು ರೈತ ಹೋರಾಟಗಾರ್ತಿ ಪಾರ್ವತಿ ಕಳಸಣ್ಣವರ ಅವರಿಗೆ ಕಲ್ಯಾಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ ಕವನ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವೀರಶೈವ ಮಹಾಸಭೆ ಜಿಲ್ಲಾ ಅಧ್ಯಕ್ಷ ರತ್ನಪ್ರಭಾ ಬೆಲ್ಲದ, ಮಲ್ಲಿಕಾರ್ಜುನ ವಾಲಿ, ಜಲತ್ಕುಮಾರ ಪುಣಜಗೌಡಾ, ಸ.ರಾ.ಸುಳಕುಡೆ, ಮುರಗೇಶ ಶಿವಪೂಜಿ, ವಿಜಯಕುಮಾರ ಪಾಟೀಲ, ಬಸವರಾಜ ಗಾರ್ಗಿ, ಬಸವರಾಜ ಸುಣಗಾರ, ವೀರಭದ್ರಪ್ಪಾ ಅಂಗಡಿ, ಕೆ.ಎಸ್‌.ನಾಗರಾಜ, ಮುನ್ನಾ
ಬಾಗವಾನ, ಮಹಾಂತೇಶ ಕುರಬೇಟ, ಗಂಗಾಧರ ಗುಜನಟ್ಟಿ ಉಪಸ್ಥಿತರಿದ್ದರು. ವಿಜಯಕುಮಾರ ಮುಚಳಂಬಿ ಸ್ವಾಗತಿಸಿದರು. ಆಶಾ ಯಮಕನಮರ್ಡಿ ಪಾರ್ಥಿಸಿದರು. ರಾಜಶ್ರೀ ಹಿರೇಮಠ ನಿರೂಪಿಸಿದರು. ಎಮ್‌.ವೈ. ಮೆಣಸಿನಕಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next