ಬೆಳಗಾವಿ: ಈ ದೇಶದ ಸಂವಿಧಾನ ಎಲ್ಲರಿಗೂ ಸಹಾಯ ಮಾಡುವಂತೆ ಹೇಳಿದೆ. ಎಸ್ಸಿ ಎಸ್ಟಿಗೆ ಮಾಡುತ್ತೇವೆ, ಹಿಂದುಳಿದ ವರ್ಗದವರಿಗೆ ಮಾಡುತ್ತೇವೆ. ಎಲ್ಲ ಜನಾಂಗದವರನ್ನು ರಕ್ಷಣೆ ಮಾಡಬೇಕು. ಎಲ್ಲರಿಗೂ ಸಮಪಾಲು ಸಮಬಾಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಅವರು ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದಾರೆಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ತೆಲಂಗಾಣ ಜನರು, ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹತ್ತು ವರ್ಷ ಚಂದ್ರಶೇಖರ್ ರಾವ್ ರಾಜ್ಯ ನಡೆಸಿದ್ದರು. ಈಗ ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಇಂದು ಸರ್ಕಾರ ರಚನೆ ಆಗಿದೆ ಎಲ್ಲರೂ ಶುಭ ಹಾರೈಸಿ ಬಂದಿದ್ದೇವೆ ಎಂದು ಹೇಳಿದರು.
ಮಾತನಾಡಿದ ಅವರು, ಎಲ್ಲ ಶಾಸಕರು ಹೋಗಿ ಮೂರು ತಿಂಗಳು ಅಲ್ಲಿ ಇದ್ದರು. ಅಲ್ಲಿ ಶಾಸಕರು ಬಂದು ನಮ್ಮಲ್ಲಿ ಕೆಲಸ ಮಾಡಿದ್ದರು. ಹದಿನೈದು ಜನರನ್ನು ನಾವು ಅಲ್ಲಿಗೆ ಕಳುಹಿಸಿದ್ದೇವೆ ಎಂದರು.
ಬಿಜೆಪಿಯವರು ಬರಗಾಲ ಬಂದಿದೆ, ವಿಪಕ್ಷ ನಾಯಕರು ಎಲ್ಲ ಕಡೆ ಓಡಾಡಿದ್ದಾರೆ. ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಲಿ ಅವರು. ಕಾನೂನು ಪ್ರಕಾರ ನರೇಗಾ 150 ದಿನ ಕೂಲಿ ಕೊಡಬೇಕು ಯಾಕೆ ಘೋಷಣೆ ಮಾಡಿಸುತ್ತಿಲ್ಲ. ಈಗ ಅವರು ತಿರುಗಿದ ವರದಿ ಇಟ್ಟುಕೊಂಡು ದೆಹಲಿಗೆ ಹೋಗಿ ಕೊಡಲಿ. ಬರಗಾಲ ಬಂದಿದೆ ನಾವೆಲ್ಲಾ ಅಧ್ಯಾಯ ಮಾಡಿ ವರದಿ ಕೊಟ್ಟಿದ್ದೇವೆ. ಇಷ್ಟು ಹಣ ಬೇಕೆಂದು ಕೇಳಿದ್ದೇವೆ, ಆದರೆ ಒಂದು ಬಿಡಿಗಾಸು ಕೊಟ್ಟಿಲ್ಲ. ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ ನಾವು ಪರಿಹಾರ ಕೊಡುತ್ತೇವೆ. ಕುಡಿಯುವ ನೀರಿಗೆ, ಮೇವಿಗೆ ಹಿಂದೆ ಮುಂದೆ ನೋಡದೆ ಖರ್ಚು ಮಾಡುವಂತೆ ಹೇಳಿದ್ದಾರೆ ಎಂದರು.