Advertisement

Belagavi: ಗಣಪನ ವೀಕ್ಷಿಸಲು ಜನಜಂಗುಳಿ-ಮಧ್ಯರಾತ್ರಿಯವರೆಗೂ ವೀಕ್ಷಣೆ

05:45 PM Sep 25, 2023 | Team Udayavani |

ಬೆಳಗಾವಿ: ಬಹುಸಂಸ್ಕೃತಿಯ ನಗರಿ ಬೆಳಗಾವಿಯಲ್ಲಿಗಣೇಶ ಹಬ್ಬದ ಅಬ್ಬರ ಜೋರಾಗಿದ್ದು, ಗಣೇಶ ಪ್ರತಿಷ್ಠಾಪನೆ ಆಗಿ ಆರು ದಿನಗಳು ಕಳೆದಿವೆ. ಒಂದಕ್ಕಿಂತ ಒಂದು ಆಕರ್ಷಕವಾಗಿರುವ ಬೆಳಗಾವಿಯ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.

Advertisement

ಬೆಳಗಾವಿ ಗಣೇಶೋತ್ಸವ ಎಂದರೆ ಇಡೀ ಕರ್ನಾಟಕದಲ್ಲಿಯೇ ಅತ್ಯಂತ ವೈಭವ ಹಾಗೂ ಸಂಭ್ರಮದ ಹಬ್ಬವಾಗಿದೆ. ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಆಗಿರುವ ಮೂರ್ತಿಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಈ ಗಣಪನ ಮೂರ್ತಿಗಳನ್ನು ವೀಕ್ಷಿಸುವುದೇ ಒಂದು ಸಂಭ್ರಮ-ಸಂತಸ. ಒಂದು ವಾರದಿಂದ ಬೆಳಗಾವಿಗೆ ಗಣೇಶ ಮೂರ್ತಿ ನೋಡಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆಯಿಂದ ಬರುತ್ತಿರುವ ಜನರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ.

ಮಧ್ಯರಾತ್ರಿವರೆಗೂ ಜನರು ಬೆಳಗಾವಿ ನಗರಕ್ಕೆ ಬರುತ್ತಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ರಾತ್ರಿವರೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್‌ ದೀಪಗಳ ಅಲಂಕಾರದಿಂದ ಗಣೇಶ ಮಂಡಳಿಗಳು ಕಂಗೊಳಿಸುತ್ತಿವೆ. ಓಣಿ ತುಂಬೆಲ್ಲ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಈ ಅಲಂಕಾರ ಭಕ್ತರನ್ನು ಆಕರ್ಷಿಸುತ್ತಿದೆ.

ಬೆಳಗಾವಿ ಸುತ್ತಲಿನ ಹಳ್ಳಿಗಳು ಸೇರಿದಂತೆ ಖಾನಾಪುರ, ಹುಕ್ಕೇರಿ, ರಾಯಬಾಗ, ಚಿಕ್ಕೋಡಿ, ಸಂಕೇಶ್ವರ, ಬೈಲಹೊಂಗಲ, ನಿಪ್ಪಾಣಿ, ಸವದತ್ತಿ ಕಡೆಗಳಿಂದ ಸಂಜೆ ಹೊತ್ತು ಬೆಳಗಾವಿಗೆ ಬಂದು ಗಣೇಶ ಮೂರ್ತಿಗಳನ್ನು ವೀಕ್ಷಿಸುತ್ತಿದ್ದಾರೆ. ಜತೆಗೆ
ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಮಹಾರಾಷ್ಟ್ರ ಹಾಗೂ ಗೋವಾ ಕಡೆಗಳಿಂದಲೂ ಜನರು ಬೆಳಗಾವಿಗೆ ಬರುತ್ತಿದ್ದಾರೆ. ವಾರಾಂತ್ಯದ ಶನಿವಾರ ಮತ್ತು ರವಿವಾರವಂತೂ ಗಣಪನ ವೀಕ್ಷಣೆಗೆ ಜನಜಂಗುಳಿಯೇ ಸೇರಿತ್ತು. ಭಕ್ತರ ಸಂಖ್ಯೆ  ಅಧಿಕವಾಗಿದ್ದರಿಂದ ಕೆಲವು ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಎಲ್ಲಿ ನೋಡಿದರಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ.

ವಾಹನ ಸಂಚಾರ ಅಧಿಕವಾಗಿದ್ದು, ಕೆಲವು ಕಡೆಗಳಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳು ಓಣಿ ಒಳಗೆ ಪ್ರವೇಶಿಸದಂತೆ ತಡೆ ಹಿಡಿಯಲಾಗುತ್ತಿದೆ. ರಸ್ತೆ ತುಂಬೆಲ್ಲ ಪ್ರಖರ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದ್ದು, ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

Advertisement

ಸಾಮಾಜಿಕ ಸಂದೇಶ ಸಾರುವ ರೂಪಕಗಳು 
ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ 378ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಒಂದಕ್ಕಿಂತ ಒಂದು ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಭಕ್ತರನ್ನು ಆಕರ್ಷಿಸಲು ಕೆಲ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿಗಳು ವಿವಿಧ ರೂಪಕಗಳನ್ನು ತಯಾರಿಸಿವೆ. ಪ್ರಚಲಿತ ವಿದ್ಯಮಾನಗಳು, ಮಕ್ಕಳಿಗೆ ಶಿಕ್ಷಣ ಕಲಿಸಿ ಎನ್ನುವ ಶಿಕ್ಷಣ ಜಾಗƒತಿ, ಚಂದ್ರಯಾನ-3 ಯಶಸ್ವಿ ಉಡಾವಣೆ, ನೇಕಾರರ ಶ್ರಮ, ರೈತರು ಹೊಲದಲ್ಲಿ ಉಳುಮೆ ಮಾಡುತ್ತಿರುವುದು, ಹಿಮಾಲಯ ಪರ್ವತ ಮಾದರಿ ನಿರ್ಮಾಣ, ಸೇತುವೆ ನಿರ್ಮಾಣ, ಚಕ್ಕಡಿ ಗಾಡಿ ಶರ್ಯತ್ತಿನ ಮಾದರಿ ಹೀಗೆ ವಿವಿಧ ಮಾದರಿಗಳು ಸಾಮಾಜಿಕ ಸಂದೇಶ ಸಾರುತ್ತಿವೆ.

ಆಕರ್ಷಕ ಭಂಗಿಯ ಮೂರ್ತಿಗಳು
ಈ ವರ್ಷ ವಿವಿಧ ಭಂಗಿ ಹಾಗೂ ಅವತಾರಗಳ ಬೆನಕನನ್ನು ಸಾರ್ವಜನಿಕ ಮಂಡಳಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಲಾವಿದನ ಕೈಚಳಕದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಗರುಡ ಮೇಲೆ ಗಣಪ, ಗದೆ ಮೇಲೆ ಕುಳಿತಿರುವ ಗಣೇಶ, ಬಾಲ ಗಣಪ, ನೃತ್ಯ ಮಾಡುತ್ತಿರುವುದು, ಕೃಷ್ಣನ ಅವತಾರ, ಛತ್ರಪತಿ ಶಿವಾಜಿ ಮಹಾರಾಜರ ಅವತಾರ, ಕೃಷ್ಣೆ-ರಾಧೆಯ ನೃತ್ಯ, ಮಹಿಳೆಯನ್ನು ಛೇಡಿಸುತ್ತಿರುವ ವ್ಯಕ್ತಿಗೆ ಗಣಪನಿಂದ ಶಿಕ್ಷೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆನಕ, ಹಾವಿನ ಮೇಲೆ ನಿಂತಿರುವ ವಿಘ್ನನಿವಾರಕ, ಡಮರುಗ-ತ್ರಿಶೂಲದಲ್ಲಿ ವಿನಾಯಕ ಹೀಗೆ ವಿವಿಧ ಅತ್ಯಾಕರ್ಷಕ ಭಂಗಿಯ ಗಣಪತಿ ಮೂರ್ತಿಗಳು ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಆಗಿವೆ.

ಪ್ರತಿ ವರ್ಷ ನಾವು ಗಣೇಶ ಮೂರ್ತಿಗಳನ್ನು ವೀಕ್ಷಿಸಲು ಬೆಳಗಾವಿಗೆ ಬರುತ್ತಿವೆ. ಮುಂಬೈ, ಪುಣೆ ಹೊರತುಪಡಿಸಿದರೆ ಬೆಳಗಾವಿಯಲ್ಲಿ ಅತ್ಯಂತ ಆಕರ್ಷಕ ಮೂರ್ತಿಗಳು ಗಮನಸೆಳೆಯುತ್ತಿವೆ. ನಾವು ಕುಟುಂಬ ಸಮೇತರಾಗಿ ಬಂದಿದ್ದೇವೆ.
ಮಹಾದೇವ ಕಲ್ಲಣ್ಣವರ, ಬೈಲಹೊಂಗಲ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next