ಬೆಳ್ಮಣ್: ಕಾರ್ಕಳ ತಾಲೂಕಿನ ಬೋಳದಿಂದ ಕಾಂತಾವರ ಬೇಲಾಡಿಗೆ ಸಂಪರ್ಕ ಬೆಸೆಯುವ ಕಿರು ಸೇತುವೆ ಬಹಳ ಇಕ್ಕಟ್ಟಾಗಿದೆ. ಇದರಿಂದ ಇಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ.
ಸರಣಿ ಅಪಘಾತ
ಕಾಂತಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಲಾಡಿಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆ ಇಕ್ಕಟ್ಟಾಗಿರುವುದರಿಂದ ಎರಡು ವಾಹನಗಳು ಏಕಕಾಲಕ್ಕೆ ಸಂಚರಿಸಲು ಸಾಧ್ಯವಿಲ್ಲ. ಸೇತುವೆಯ ಎರಡೂ ಬದಿಗಳಲ್ಲಿ ತಿರುವು ಹಾಗೂ ತಗ್ಗು ಪ್ರದೇಶವಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅಪಘಾತಕ್ಕೊಳಗಾಗುತ್ತವೆ.
ಮೂಡುಬಿದಿರೆ ಬಲು ಹತ್ತಿರ
ಮಂಜರಪಲ್ಕೆಯಿಂದ ಬೋಳ ಮಾರ್ಗವಾಗಿ ಕಾಂತಾವರ, ಬೆಳುವಾಯಿ ಹಾಗೂ ಮೂಡುಬಿದಿರೆ ಮುಖ್ಯ ಪೇಟೆ ಪ್ರದೇಶವನ್ನು ಸೇರಲು ಹತ್ತಿರದ ರಸ್ತೆಯಾದ ಪರಿಣಾಮ ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಎಲ್ಲ ಕಡೆ ರಸ್ತೆಗಳು ಅಭಿವೃದ್ಧಿಯಾಗಿದ್ದರೂ ಬೇಲಾಡಿಯ ಈ ಕಿರು ಸೇತುವೆ ಮತ್ತು ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ. ಈ ಭಾಗದ ಸಾಕಷ್ಟು ಗ್ರಾಮಸ್ಥರು ಪ್ರತಿ ಬಾರಿಯೂ ಸ್ಥಳೀಯಾಡಳಿತಕ್ಕೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದು ಇಲ್ಲಿಯ ವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಕಿರು ಸೇತುವೆಯ ಅಭಿವೃದ್ಧಿ ಕೂಡಲೇ ಆಗಬೇಕಾಗಿದೆ ಎನ್ನುವುದು ಕಾಂತಾವರ ಹಾಗೂ ಬೇಲಾಡಿ ಗ್ರಾಮಸ್ಥರ ಹಲವು ವರ್ಷಗಳಲ್ಲಿ ಬೇಡಿಕೆಯಾಗಿದೆ.
ಬಿರುಕು ಬಿಟ್ಟಿದೆ
ಕಿರು ಸೇತುವೆ ಅತ್ಯಂತ ಹಳೆಯ ಸೇತುವೆಯಾಗಿದ್ದು ತಳ ಭಾಗದ ಕಲ್ಲುಗಳು ಮಳೆಯ ನೀರಿನಲ್ಲಿ ಜಾರಿ ಹೋಗಿವೆ. ಇದರಿಂದ ಸೇತುವೆ ಬಿರುಕುಬಿಟ್ಟಿದೆ. ಸೇತುವೆಯ ಪಿಲ್ಲರುಗಳು ಕೂಡ ಅಲ್ಲಲ್ಲಿ ಬಿರುಕುಬಿಟ್ಟಿವೆ. ಸೇತುವೆ ತಡೆಗೋಡೆಯೂ ಒಂದು ಭಾಗದಲ್ಲಿ ಮುರಿದು ಬಿದ್ದಿದೆ.
ತುರ್ತು ಅಭಿವೃದ್ಧಿ ಅಗತ್ಯ
ಇಕ್ಕಟ್ಟಾದ ಈ ಸೇತುವೆ ಸಹಿತ ರಸ್ತೆಯ ಅಭಿವೃದ್ಧಿ ತುರ್ತಾಗಿ ನಡೆಯಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಂಪರ್ಕಿಸಿ ಪ್ರಯತ್ನಿಸುತ್ತೇನೆೆ.
– ರಾಜೇಶ್ ಕೋಟ್ಯಾನ್, ಕಾಂತಾವರ ಗ್ರಾ.ಪಂ. ಅಧ್ಯಕ್ಷ
ಕೂಡಲೇ ಕ್ರಮ ಕೈಗೊಳ್ಳಿ
ಇಲ್ಲಿನ ಕಿರು ಸೇತುವೆ ವಿಸ್ತರಣೆ ಅಗತ್ಯವಿದೆ. ವಾಹನಗಳು ಎದುರುಬದುರಾಗಿ ಬರುವಾಗ ಸಮಸ್ಯೆಯಾಗುತ್ತದೆ. ಕೂಡಲೇ ರಸ್ತೆ ಸಹಿತ ಸೇತುವೆಯ ವಿಸ್ತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ.
– ಮನೀಶ್ ಬೇಲಾಡಿ, ಗ್ರಾಮಸ್ಥ