Advertisement

ಬೇಕಲ ಠಾಣೆ: ತುಕ್ಕು ಹಿಡಿಯುತ್ತಿವೆ ವಾಹನಗಳು

12:23 AM Aug 23, 2019 | Team Udayavani |

ಕಾಸರಗೋಡು: ಕಾನೂನು ಪಾಲಿಸುತ್ತಿರುವ ಬೇಕಲ ಪೊಲೀಸ್‌ ಠಾಣೆ ಪರಿಸರದಲ್ಲಿ ಲಕ್ಷಾಂತರ ರೂ. ಮೌಲ್ಯದ ವಾಹನಗಳು ತುಕ್ಕು ಹಿಡಿದು ನಾಶದಂಚಿಗೆ ಸರಿದಿದೆ. ಠಾಣೆ ಪರಿಸರದಲ್ಲಿ ಇರಿಸಿರುವ ವಾಹನಗಳ ಸುತ್ತ ಕಾಡು ಪೊದೆ ಬೆಳೆದು, ಸೊಳ್ಳೆ ಕಾಟಕ್ಕೂ ಕಾರಣವಾಗಿದೆ.

Advertisement

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ವಶಪಡಿಸಿಕೊಂಡಿರುವ ಬೇಕಲ ಠಾಣೆ ಪೊಲೀಸರು ಠಾಣೆ ಪರಿಸರದಲ್ಲಿ ಇರಿಸಿದ್ದಾರೆ. ಹಲವು ವರ್ಷಗಳ ಹಿಂದಿನ ವಾಹನಗಳು ಇಲ್ಲಿ ಇರಿಸಲಾಗಿದ್ದು, ವಾಹನಗಳು ತುಕ್ಕು ಹಿಡಿಯುತ್ತಾ ನಾಶದತ್ತ ಸಾಗಿವೆ. ಮದ್ಯ ಸಾಗಾಟ, ಮರಳು ಸಾಗಾಟ, ಗಾಂಜಾ ಮೊದಲಾದ ಮಾದಕ ವಸ್ತುಗಳ ಸಾಗಾಟ, ಹಿಂಸೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡು ಇಲ್ಲಿ ಇರಿಸಲಾಗಿದೆ. ಈ ವಾಹನಗಳನ್ನು ಬಿಟ್ಟು ಕೊಡಬೇಕಾದರೆ ಪ್ರಕರಣಗಳ ತೀರ್ಪು ಬರಬೇಕು. ಅಲ್ಲಿಯ ವರೆಗೆ ಈ ವಾಹನಗಳು ಮಳೆ, ಬಿಸಿಲಿಗೆ ಮೈಯೊಡ್ಡಿ ತುಕ್ಕು ಹಿಡಿಯುತ್ತಾ ಇಲ್ಲಿಯೇ ಇರಬೇಕಾಗುತ್ತದೆ. ನ್ಯಾಯಾಲಯದ ತೀರ್ಪು ಬರುವ ವೇಳೆಗೆ ಈ ವಾಹನಗಳು ಸಂಪೂರ್ಣವಾಗಿ ತುಕ್ಕು ಹಿಡಿದು ನಾಶವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಈಗಾಗಲೇ ಹಲವು ವಾಹನಗಳನ್ನು ಸಾಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ದಿನದಿಂದ ದಿನಕ್ಕೆ ವಾಹನಗಳಿಗೆ ಹೆಚ್ಚೆಚ್ಚು ತುಕ್ಕು ಹಿಡಿಯುತ್ತಿದ್ದು ಮುಂದಕ್ಕೆ ಇದನ್ನು ಬಳಸಲು ಸಾಧ್ಯವಾಗದಂತಿದೆ. ಲಕ್ಷಾಂತರ ರೂ. ಮೌಲ್ಯದ ಈ ವಾಹನಗಳು ಹೀಗೆ ನಾಶವಾಗುತ್ತಿದ್ದು, ಪರಿಸರದಲ್ಲಿ ಸೊಳ್ಳೆ ಕಾಟವು ಅಧಿಕವಾಗಿದೆ.

ದಾಖಲೆ ಪತ್ರ ವಾಹನ
ಇವುಗಳಲ್ಲಿ ಹಲವು ಕಳವು ಮಾಡಿದ ವಾಹನಗಳೂ ಇವೆ. ಕಳವು ಮಾಡಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಇಲ್ಲಿರಿಸಿದ್ದಾರೆ. ಇನ್ನು ಕೆಲವು ವಾಹನಗಳಿಗೆ ಸರಿಯಾದ ದಾಖಲೆ ಪತ್ರಗಳು ಇಲ್ಲದ ಕಾರಣಕ್ಕೆ ವಶಪಡಿಸಿಕೊಳ್ಳ ಲಾಗಿದ್ದು, ಅದರ ವಾರಸುದಾರರು ಇಂತಹ ವಾಹನಗಳನ್ನು ಕೊಂಡೊಯ್ಯಲು ಬಂದಿಲ್ಲ. ಈ ಕಾರಣದಿಂದ ಇಲ್ಲೇ ಇರಿಸಬೇಕಾಗಿ ಬಂದಿದೆ. ಕೆಲವು ವಾಹನಗಳಿಗೆ ಸಂಬಂಧಿಸಿ ತೀರ್ಪು ಬಂದಿದ್ದರೂ, ಅಂತಹ ವಾಹನಗಳನ್ನು ಕೊಂಡೊಯ್ಯಲು ವಾರೀಸುದಾರರು ಬಂದಿಲ್ಲ. ಈ ವಾಹನಗಳ‌ನ್ನು ಕೊಂಡೊಯ್ದು ಏನು ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಯಾರೂ ಕೊಂಡೊಯ್ದಿಲ್ಲ. ಈ ವಾಹನಗಳು ಧೂಳು ತಿನ್ನುತ್ತಾ, ತುಕ್ಕು ಹಿಡಿಯುತ್ತಾ ಸಂಪೂರ್ಣ ನಾಶವಾಗುತ್ತಿದೆ.

ಚಾಲು ಮಾಡಲು ಸಾಧ್ಯವಿಲ್ಲ
ಠಾಣೆಯಿಂದ ಈ ವಾಹನಗಳನ್ನು ಕೊಂಡೊಯ್ದರೂ ಇದನ್ನು ದುರಸ್ತಿ ಮಾಡಿ ಮತ್ತೆ ಚಾಲು ಮಾಡಲು ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಈ ಕಾರಣದಿಂದ ನ್ಯಾಯಾಲಯದಿಂದ ತೀರ್ಪಾದರೂ ವಾಹನವನ್ನು ಯಾರೂ ಕೊಂಡು ಹೋಗುವುದಿಲ್ಲ. ಇದರಿಂದಾಗಿ ಬೇಕಲ ಪೊಲೀಸ್‌ ಠಾಣೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು. ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂತಹ ಪರಿಸ್ಥಿತಿ ಬೇಕಲ ಪೊಲೀಸ್‌ ಠಾಣೆಗೆ ಮಾತ್ರ ಸೀಮಿತವಾಗಿಲ್ಲ. ಕಾಸರಗೋಡು ಜಿಲ್ಲೆಯ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಆದೂರು ಹೀಗೆ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಇದೇ ಪರಿಸ್ಥಿತಿಯಿದೆ.

ಕಾಡು ಪೊದೆ
ವಾಹನಗಳಲ್ಲೂ ಕಾಡು ಪೊದೆ ಬೆಳೆದು ಹಾವು ಮೊದಲಾದವು ಇದರಲ್ಲಿ ಬೀಡು ಬಿಟ್ಟಿವೆ. ರಾಶಿ ಹಾಕಿರುವ ಈ ವಾಹನ ಗಳಿಗೆ ಅಕಸ್ಮಾತ್‌ ಬೆಂಕಿ ಹತ್ತಿಕೊಂಡರೆ ಸಂಪೂರ್ಣ ನಾಶವಾಗುವುದು ಖಚಿತ ಎಂಬಂತಿದೆ. ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಚೆರ್ಕಳದಲ್ಲಿ ಇರಿಸಲಾಗಿದ್ದು, ಒಂದೆರಡು ಬಾರಿ ಬೆಂಕಿ ಹತ್ತಿಕೊಂಡ ಘಟನೆ ನಡೆದಿತ್ತು. ಹಲವು ವಾಹನಗಳು ಸಂಪೂರ್ಣ ನಾಶವಾಗಿದ್ದವು. ಅಂತಹ ಪ್ರಸಂಗ ಬೇಕಲ ಠಾಣೆ ಪರಿಸರದಲ್ಲಿ ಇರಿಸಿರುವ ವಾಹನಗಳಿಗೂ ಬರಬಹುದು ಎಂಬುದಾಗಿ ಸಾರ್ವತ್ರಿಕವಾಗಿ ಅಭಿಪ್ರಾಯ ಕೇಳಿಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next