Advertisement

ಇದು…ಕನ್ನಡಿಗರು ನಿರ್ಮಿಸಿರುವ ಪ್ರಕೃತಿ ಸೌಂದರ್ಯದ “ಬೇಕಲ ಕೋಟೆ”

04:04 PM Apr 20, 2018 | Sharanya Alva |

ಸುತ್ತಲೂ ಹಚ್ಚ ಹಸುರಿನಿಂದ  ಕಂಗೊಳಿಸುವ ಪ್ರದೇಶ ನೆಲಕ್ಕೆ ಹಸಿರ ಹೊದಿಕೆ ಹಾಸಿದಂತೆ ಕಾಣುವ ನಯನ  ಮನೋಹರ ಹೂ ಬಳ್ಳಿಗಳು,  ಎತ್ತ ನೋಡಿದರೂ ನಮಗೆ ರಕ್ಷಣೆಗೆ ನಿಂತಂತೆ ಭಾಸವಾಗುವ ಕೆಂಪು ಕೋಟೆ, ಕೋಟೆಯ ಮೇಲೆ ಹತ್ತಿ ನೋಡಿದರೆ ಕೋಟೆಗೆ ಮುತ್ತಿಕ್ಕುತಿರುವ ಸಮುದ್ರದ ಅಲೆಗಳು, ಇದುವೇ ನಾನು ಹೇಳಲು ಹೊರಟಿರುವ ಪ್ರಕೃತಿ ರಮಣೀಯ ಸ್ಥಳ ಬೇಕಲ ಕೋಟೆ, ಬನ್ನಿ ಈ ಕೋಟೆಯ ಸುತ್ತ ಒಂದು ಸುತ್ತು ಹಾಕಿ ಬರೋಣ ಜೊತೆಗೆ ಇಲ್ಲಿನ ಇತಿಹಾಸ ತಿಳಿದುಕೊಳ್ಳೋಣ.

Advertisement

ಕೋಟೆಯ ಇತಿಹಾಸ;

ಬೇಕಲ ಹಿಂದಿನ ಕಾಲದಲ್ಲಿ ಕರ್ನಾಟಕದ ರಾಜಮನೆತನವಾದ ಕದಂಬರ ಆಳ್ವಿಕೆಯಲ್ಲಿತ್ತು ಹಾಗೂ ಇದು ಕೇರಳದ ಪ್ರಸಿದ್ಧ ನಗರವೂ ಆಗಿತ್ತು. ಆ ಸಂದರ್ಭದಲ್ಲಿ ವಿಜಯನಗರ ಯುರೋಪ್ ಮತ್ತು ಪೋರ್ಚುಗೀಸ್ ದೇಶಗಳೊಂದಿಗೆ ವಾಣಿಜ್ಯ ವ್ಯವಹಾರ ಸಂಪರ್ಕವನ್ನು ಹೊಂದಿತ್ತು, ವಿಜಯನಗರದ ಅಧಿಪತ್ಯ ಪತನಗೊಂಡ ನಂತರದಲ್ಲಿ ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಒಂದು ಭಾಗವು ಕೆಳದಿ ನಾಯಕರ ಪಾಲಾಯಿತು. ಕೆಳದಿಯ ನಾಯಕ ವೆಂಕಟಪ್ಪ ನಾಯಕ ಈ ಕೋಟೆಯ ನಿರ್ಮಾಣ ಕಾರ್ಯ ಆರಂಭಿಸಿದ್ದರೂ ಪೂರ್ಣಗೊಳಿಸಿದ ಕೀರ್ತಿ ಶಿವಪ್ಪ ನಾಯಕನಿಗೆ ಸಲ್ಲುತ್ತದೆ. ಮುಂದೆ ಇಲ್ಲಿ ಹೈದರಾಲಿ ಮತ್ತು ಟಿಪ್ಪುವಿವ ಪ್ರಭಾವ ಹೆಚ್ಚಾಗುತಿದ್ದಂತೆ ಕೋಟೆಯು ಟಿಪ್ಪುವಿನ ತೆಕ್ಕೆಗೆ ಸೇರುತ್ತದೆ. ಈ ಸಂದರ್ಭದಲ್ಲಿ ಬೇಕಲಕೋಟೆ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂದು ಹೇಳಲಾಗಿದೆ.

ಅಂತಿಮವಾಗಿ 1799 ರಲ್ಲಿ ನಡೆದ ನಾಲ್ಕನೇ ಆಂಗ್ಲೋ – ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಹತ್ಯೆಯಾಗಿ ಬೇಕಲಕೋಟೆ  ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಒಳಪಡುತ್ತದೆ.  1992ರಲ್ಲಿ ಭಾರತ ಸರಕಾರವು ಬೇಕಲ ಕೋಟೆಯನ್ನು ವಿಶೇಷ ಪ್ರವಾಸಿ ಪ್ರದೇಶವಾಗಿ ಘೋಷಿಸಿತು.  ಮುಂದೆ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1995 ರಲ್ಲಿ ಬೇಕಲ್ ಪ್ರವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ ನಂತರದಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಜನರು ಭೇಟಿ ನೀಡಲು ಆರಂಭಿಸಿದರು.

Advertisement

ಆಕರ್ಷಣಾ ಕೇಂದ್ರ:

ಬೇಕಲ ಕೋಟೆ ಪ್ರವೇಶ ದ್ವಾರದ  ಹೆಬ್ಟಾಗಿಲಿನಲ್ಲಿ ಮುಖ್ಯಪ್ರಾಣ ದೇವರನ್ನು ನಮಸ್ಕರಿಸಿ ಮುಂದೆ ಸಾಗಿದರೆ ಹೆಬ್ಟಾಗಿಲು ಪ್ರವೇಶಿಸುತ್ತಿದ್ದಂತೆ ಬಗೆ ಬಗೆಯ ಹೂವುಗಳು ನಮ್ಮನ್ನು ಸ್ವಾಗತಿಸುತ್ತವೆ. ಸುಮಾರು ನಲವತ್ತು ಎಕರೆಯಷ್ಟು ಪ್ರದೇಶವನ್ನು ಆವರಿಸಿರುವ ಕೋಟೆ, ಕೋಟೆಯ ಸುತ್ತಲು  ನಡೆದಾಡಲು ರತ್ನ ಕಂಬಳಿ ಹಾಸಿದಂತೆ ಭಾಸವಾಗುವ ಕೆಂಪು ಕಲ್ಲುಗಳಿಂದ ನಿರ್ಮಾಣ ಮಾಡಿರುವ ವಾಕಿಂಗ್ ಟ್ರಾಕ್, ಇದರಲ್ಲಿ ನಡೆದಾಡಲು ಪ್ರಾರಂಭಿಸಿದರೆ ಇಲ್ಲಿನ ನಾನಾ  ಆಕರ್ಷಣೆಯ  ಕೇಂದ್ರಗಳು ನಮ್ಮನ್ನು ಆಯಾಸವಿಲ್ಲದೆ ನಡೆದಾಡುವಂತೆ ಮಾಡುತ್ತದೆ.

ಪ್ರಮುಖ ಆಕರ್ಷಣೆ ಎಂದರೆ ಇಲ್ಲಿರುವ ಪರಿವೀಕ್ಷಣಾ ಗೋಪುರ ಈ ಗೋಪುರಕ್ಕೆ ಹತ್ತಿ ಇಳಿಯುವುದೇ ಒಂದು ಆನಂದ ಈ ಗೋಪುರದ ಮೇಲೆ ನಿಂತು ಕಣ್ಣು ಹಾಯಿಸಿದರೆ ವಿಶಾಲವಾದ ಪ್ರಕೃತಿಯ ಸೊಬಗನ್ನು ಮೈಗೂಡಿಸಕೊಳ್ಳಬಹುದು. ಒಂದು ಬದಿಯಲ್ಲಿ ಹಸಿರು ಹಸಿರಾಗಿರುವ ಹೂ ಗಿಡಗಳು ಮತ್ತೊಂದು ಕಡೆ ಕಡು ನೀಲಿ ಬಣ್ಣದಿಂದ ಕಂಗೊಳಿಸುತ್ತಿರುವ ಸಮುದ್ರ. ಕೋಟೆಯ ಸುತ್ತಲೂ ವೀಕ್ಷಣಾ ಗೋಪುರಗಳಿವೆ  ಪ್ರತಿಯೊಂದು ಗೋಪುರದಲ್ಲಿಯೂ ಸಣ್ಣ ಸಣ್ಣ ಕಿಂಡಿಗಳು ಇದ್ದು ಇದರಿಂದ ಕೋಟೆಯ ಹೊರಗಿನ ಸೊಬಗನ್ನು ವೀಕ್ಷಿಸಬಹುದಾಗಿದೆ.

ಸಂಜೆಯ ಹೊತ್ತು ಈ ಕೋಟೆಯ ಮೇಲೆ ನಿಂತು ಸೂರ್ಯಾಸ್ತ ನೋಡುವುದೇ ಒಂದು ಅದ್ಬುತ ಎಂದು ಹೇಳುತ್ತಾರೆ ಇಲ್ಲಿಯ ಪ್ರವಾಸಿಗರು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋದ ಅನುಭವವಾಗುತ್ತದೆ. ಕೋಟೆಯಿಂದ ಸಮುದ್ರಕ್ಕೆ ತೆರಳಲು ಸುರಂಗ ಮಾರ್ಗವಿದೆ  ಜೊತೆಗೆ ಶಸ್ತ್ರಾಸ್ತ್ರಗಳನ್ನು ಇಡುವ ಕೊಠಡಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರೀಕರಣದ ತಾಣ:

ಬೇಕಲ ಕೋಟೆಯಲ್ಲಿ ಹಲವಾರು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ ಅದರಲ್ಲಿ ನಿರ್ದೇಶಕ ಮಣಿರತ್ನಂ  ನಿರ್ದೇಶನದ ಬಾಂಬೆ ಚಿತ್ರದ ಹಾಡಿನ ಚಿತ್ರೀಕಣದಿಂದ ಹೆಚ್ಚು ಜನಪ್ರೀಯತೆ ಪಡೆದುಕೊಂಡಿತು ತದನಂತರದಲ್ಲಿ ಹಲವಾರು ಭಾಷೆಯ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡವು.

ಪ್ರಯಾಣ ಹೇಗೆ? :

ಬಸ್ ಅಥವಾ ರೈಲಿನ ಮೂಲಕ ಕಾಸರಗೋಡಿಗೆ ಬಂದರೆ ಸ್ಥಳೀಯ ಬಸ್ಸಿನ ಮೂಲಕ 20 ನಿಮಿಷದಲ್ಲಿ ಕೋಟೆ ತಲುಪಬಹುದು. ಮಂಗಳೂರಿನ ಪುತ್ತೂರು, ಸುಳ್ಯ ಭಾಗದಿಂದ ಬರುವ ಪ್ರವಾಸಿಗರು ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೇಕಲ ಕೋಟೆಗೆ ತೆರಳಬಹುದು. ಕಾಸರಗೋಡಿನಿಂದ 9 ಕಿ.ಮೀ.ದೂರದಲ್ಲಿರುವ ಬೇಕಲ ಕೋಟೆ, ಕರ್ನಾಟಕದ ಕೊಡಗು ಜಿಲ್ಲೆಗೂ ಹತ್ತಿರವಾಗಿದೆ. ಮಂಗಳೂರಿನಿಂದ 63 ಕಿ.ಮೀ.ದೂರದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next