Advertisement

ಹೆಣ್ಣುಮಕ್ಕಳ ತಲೆ ನೋವಿನ ಹಿಂದೆ

09:53 AM Mar 07, 2020 | mahesh |

ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ದುಡಿಯುವ ವರ್ಗ ಎಂದರೆ ಮಹಿಳೆಯರೇ. ಅದು ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ. ಆದರೆ, ಅದಕ್ಕೆ ಸರಿಯಾದ ಸ್ಥಾನಮಾನ, ವೇತನ ದೊರಕುತ್ತಿದೆಯಾ? ಎಂಬುದು ಇವತ್ತಿಗೂ ಕೂಡ ಪ್ರಶ್ನೆಯೇ. ಅದರಲ್ಲೂ ತೀರಾ ಅಸಮಾನತೆಗೆ ಒಳಗಾಗುವವರು ನಮ್ಮ ಗೃಹಿಣಿಯರು, ಕೂಲಿಕಾರ್ಮಿಕ ಮತ್ತು ರೈತಾಪಿ ಮಹಿಳೆಯರು. ನಿಮ್ಮ ದುಡಿಮೆ ತಕ್ಕ ಫ‌ಲ ದೊರಕುತ್ತಿದೆಯಾ? ಅನ್ನುವ ಪ್ರಶ್ನೆ ಕೇಳಿದರೆ ಒಂದು ನಿಡುಸುಯ್ಯುವಿಕೆಯೇ ಅವರ ಉತ್ತರವಾಗಬಹುದು. ಈ ಸಂದಿಗ್ಧತೆಯಲ್ಲಿ ದಿನವೊಂದು ನೆಮ್ಮದಿಯಲ್ಲಿ ಕಳೆದರೆ ಸಾಕೆನ್ನುವ ಧೋರಣೆಯಲ್ಲಿ ಅವಳು ತನ್ನ ಕನಿಷ್ಠ ಸ್ವಾತಂತ್ರ್ಯಕ್ಕೂ, ಆಸೆಗಳಿಗೂ ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದಷ್ಟು ಅಪವಾದಗಳು ಕೂಡ ಇರಬಹುದು. ಆದರೆ, ಬಹುತೇಕ ಹೆಣ್ಮಕ್ಕಳದ್ದು ಒಂದು ರೀತಿಯ ಆತಂಕದಲ್ಲೇ ಕಳೆಯಬೇಕಾದ ತೊಳಲಾಟದ ಬದುಕು. ಈ ದಿಗಿಲಿನಲ್ಲೇ ತನ್ನ ಇಡೀ ಜೀವಮಾನ ಸವೆಸುವಾಗ ಅವಳಿಗೆ ತವರು ಮನೆ ಮತ್ತು ಗಂಡನ ಮನೆಗಳ ಬೆಸೆಯುವ ತಂತು ಅಂತ ಹಣೆಪಟ್ಟಿ ಕೂಡ ಅಂಟಿಸಿ ಬಿಟ್ಟಿರುತ್ತಾರೆ.

Advertisement

ಪೇಟೆಯಲ್ಲಿ ಗೃಹಿಣಿಯಾಗಿ ಜೀವನ ನಿರ್ವಹಿಸುವ ಗೆಳತಿಯೊಬ್ಬಳಿಗೆ ಯಾವೊತ್ತೂ ತಲೆನೋವು ಅಂತ ಗೋಗೆರೆಯುತ್ತಲೇ ಇರುತ್ತಾಳೆ. ನನಗೆ ಗೊತ್ತಿರುವ ಮನೆಮದ್ದಿನ ಪಟ್ಟಿಯನ್ನೆಲ್ಲ ಅವಳ ಮುಂದೆ ಬಿಚ್ಚಿಡುತ್ತ ಸಣ್ಣ ಮಟ್ಟಿನ ವೈದ್ಯೆಯೇ ಆಗಿದ್ದೆ. ಕೊನೆಗೊಮ್ಮೆ ಅವಳ ಒಡಲೊಳಗಿನ ಸಂಕಟಗಳನ್ನೆಲ್ಲ ಕಕ್ಕಿಕೊಂಡಾಗ ತಲೆನೋವಿನ ಅಸಲಿ ಕಾರಣ ತೆರೆದುಕೊಂಡದ್ದು. ಎಳವೆಯಲ್ಲಿ ಪ್ರಾಥಮಿಕ ಶಾಲೆಯ ವಿಜ್ಞಾನ ಟೀಚರು ನಮ್ಮೊಂದಿಗೆ ನೀರು ತರಲು ಹೇಳಿ ತಲೆನೋವೆಂದು ಮಾತ್ರೆ ನುಂಗಿ ಪಾಠ ಶುರು ಮಾಡುತ್ತಿದ್ದರು. ಈ ಘಟನೆಯ ಹಿಂದಿನ ಕತೆಯಲ್ಲಿ ಇಂತಹುದೇ ಕಾರಣ ಇದ್ದಿರಬೇಕು ಅಂತ ಈಗ ನನಗೆ ಅನ್ನಿಸುತ್ತಿದೆ.

ಪೇಟೆಯ ಸಂಬಂಧಿಕರು, ಪರಿಚಿತರು ನಮ್ಮ ಹಳ್ಳಿಯ ಪ್ರಶಾಂತ ವಾತಾವರಣಕ್ಕೆ ಮನಸೋತು ತಮ್ಮ ತಲೆನೋವು ಕಡಿಮೆ ಮಾಡಿಕೊಳ್ಳಬೇಕೆಂದು ಬರುತ್ತಾರೆ. ಅವರೇನೋ ತಲೆನೋವು ಕಡಿಮೆ ಮಾಡಿಕೊಂಡು ಹೋಗುತ್ತಾರೇನೋ ಹೌದು. ಆದರೆ, ಯಾವುದೇ ವೀಕೆಂಡ್‌ಗಳ ಪರಿಜ್ಞಾನ ಇಲ್ಲದೆ ದುಡಿಯುವ ನಮ್ಮ ಶ್ರಮಿಕರು ಎಲ್ಲಿಗೆ ಹೋಗಬೇಚಕು?

ಕಳೆದ ವರ್ಷ ಮಹಿಳಾ ದಿನಾಚರಣೆಯ ನೆಪದಲ್ಲಿ ಗೆಳತಿಯೊಬ್ಬಳಿಗೆ ಶುಭಾಶಯ ಕೋರೋದಿಕ್ಕೆ ಫೋನಾಯಿಸಿದಾಗ, “ಯಾವಾಗ ಯಾವುದೇ ಕಿರಿಕಿರಿಯಿಲ್ಲದೆ ನನಗೆ ಒಪ್ಪಿತವಾದಂತೆ ಬದುಕಲು ಸಾಧ್ಯವೋ ಆಗ ನನಗೆ ನಿಜವಾದ ಮಹಿಳಾ ದಿನಾಚರಣೆ’ ಅಂತ ನಕ್ಕಿದ್ದಳು. ಈ ನಗುವಿನ ಹಿಂದೆ ಉತ್ತರವಿಲ್ಲದ ಅನೇಕ ಪ್ರಶ್ನೆಗಳಿವೆ. ಇದರಿಂದ ಬಿಡುಗಡೆ ಸಿಕ್ಕಿದಾಗ ತನ್ನ ಕೆಲಸಕ್ಕೆ ವೇತನವಿಲ್ಲದಿದ್ದರೂ, ಮಾನ್ಯತೆಯಾದರೂ ದಕ್ಕಿದಾಗ, ತನ್ನ ಅಭಿವ್ಯಕ್ತಿಗೆ, ವಿಚಾರಗಳಿಗೆ ಮನ್ನಣೆ ದೊರಕಿದಾಗ ಮಾತ್ರ ನಮ್ಮ ಹೆಣ್ಣು ಮಕ್ಕಳು ಮುಕ್ತವಾಗಿ ನಗಬಲ್ಲರು. ತಲೆನೋವು ಬಾರದೆ, ದಿಂಬಿನಡಿಯಲ್ಲಿ ಗುಳಿಗೆ ಇಡದೆ ನಿಶ್ಚಿಂತೆಯಿಂದ ನಿದ್ದೆ ಮಾಡಬಲ್ಲರೇನೋ.

ಹೀಗೇ ಲೋಕಾಭಿರಾಮ ಮಾತಾಡುತ್ತ ಗೆಳತಿಯೊಬ್ಬಳು ತನ್ನೂರಿನ ಪಕ್ಕದ ಶಾಲೆಯಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಇಬ್ಬರು ಎಳೆಯ ಮಕ್ಕಳನ್ನು ಕಟ್ಟಿಕೊಂಡು ರಾತ್ರಿ ಹೊತ್ತಿನಲ್ಲಿ ಶಾಲೆಯಲ್ಲಿ ಬಂದು ತಂಗುತ್ತಿದ್ದ ವಿಷಯವನ್ನು ಹೇಳುತ್ತಿದ್ದಳು. ಕುಡುಕ ಗಂಡ. ಹೊಡೆಯುತ್ತಾನೆ, ಬಡಿಯುತ್ತಾನೆ, ಹೊರಗೆ ದಬ್ಬುತ್ತಾನೆ. ರಾತ್ರೋ ರಾತ್ರಿ ಆಕೆ ಎಲ್ಲಿಗೆ ತಾನೇ ಓಡಿ ಬರಬೇಕು? ಶಾಲೆಯ ಜಗಲಿಯಷ್ಟೇ ಆಶ್ರಯ ತಾಣ. ಈ ಹಿಂದೆ ಮಕ್ಕಳನ್ನು ಕಟ್ಟಿಕೊಂಡು ಶಾಲೆಗೆ ಓಡಿಬಂದು ತಂಗುತ್ತಿದ್ದ , ಅಜ್ಜಿ ಅವರಿವರೊಂದಿಗೆ ಹೇಳುತ್ತಿದ್ದ ಅದೆಷ್ಟೋ ಅಮ್ಮಂದಿರ ಕತೆಗಳಿಗೆ ಕಿವಿಯಾಗಿದ್ದೆ. ಆದರೆ, ಆ ಸ್ಥಿತಿ ಇವತ್ತಿಗೂ ಹಲವು ಕಡೆ ಮುಂದುವರಿಯುತ್ತ¤ ಬಂದಿದೆಯಲ್ಲ ಅಂತ ಖೇದವಾಯಿತು.

Advertisement

ನಡುರಾತ್ರಿಯಲ್ಲಿ ಇವತ್ತಿಗೂ ನಮ್ಮ ಹೆಣ್ಮಕ್ಕಳನ್ನು ಮನೆಯಿಂದ ಹೊರಗೆ ದಬ್ಬಿ ಬಿಡುವ ಪ್ರಸಂಗಗಳು ಬರುತ್ತವೆ ಎಂದಾದರೆ ಸಮಾನತೆ ಅಂತ ಕೂಗುವ ಘೋಷಣೆಗೂ, ಮಹಿಳಾ ದಿನಾಚರಣೆಯೆಂಬ ಒಂದು ದಿನದ ಪ್ರಹಸನಕ್ಕೂ ಎಷ್ಟು ಅರ್ಥ ಒದಗಿ ಬರಬಲ್ಲದು ಅಂತ ವಿಷಾದವೆನ್ನಿಸುತ್ತದೆ. ಈ ಘಟನೆಗಳ ಹಿಂದಿನ ಕಾರಣದ “ಸರಿ-ತಪ್ಪು’ಗಳ ತುಲನೆ ನಂತರದ್ದು. ಆದರೆ, ಮನೆಯೊಳಗೆ ಸಮಸ್ಯೆಗಳು, ಬಿನ್ನಾಭಿಪ್ರಾಯಗಳು ಎದುರಾದಾಗ ಬೀದಿಗೆ ಬೀಳುವ ಸರದಿ ಹೆಣ್ಣು ಮಕ್ಕಳದ್ದೇ ಆಗುತ್ತದೆ ಅಂತಾದರೆ ಇದು ಹೆಣ್ಣು ಜೀವಗಳ ಅಸಹಾಯಕ ಸ್ಥಿತಿ ಆಗಿರಬಹುದು, ಆಕೆಯ ಕುರಿತು ಅವರಿವರು ನಡೆದುಕೊಳ್ಳುವ ರೀತಿಯಾಗಿರಬಹುದು, ಎಲ್ಲವೂ ಭಯ ಹುಟ್ಟಿಸುವಂಥದ್ದು. ಇದು ಒಂದು ಉದಾಹರಣೆಯಷ್ಟೆ. ಇಂತಹ ಹಲವು ಕತೆಗಳು ಹಲವು ಬಗೆಯಲ್ಲಿ ಇರಬಹುದು. ಹೇಗೆ ಹೆಣ್ಣುಮಕ್ಕಳನ್ನು ಸುಲಭವಾಗಿ ಬೀದಿ ಪಾಲು ಮಾಡಿ ಬಿಡುತ್ತಾರೆ ಅಥವಾ ನಾವುಗಳು ಎಲ್ಲಿ ಬೀದಿ ಪಾಲಾಗಿ ಬಿಡಬಹುದೋ ಅನ್ನೋ ಆತಂಕದಲ್ಲಿಯೇ ಜೀವ ಸವೆಸಬೇಕಾದ ಅನಿವಾರ್ಯತೆ ಇರುವುದು ನಿಜಕ್ಕೂ ದಿಗಿಲು ಹುಟ್ಟಿಸುವ ಸಂಗತಿ.

ಈಗ ಜಗತ್ತು ಮುಂದುವರೆದಿದೆ. ಹೆಣ್ಣಿನ ಸ್ಥಾನಮಾನಗಳು ಬದಲಾಗಿವೆ. ಆದರೆ ಅವಳ ಸಾಧನೆಯ ಹಿಂದೆ ನೋವು, ಸಂಘರ್ಷ, ಅಪಮಾನಗಳಿವೆ. ಇವುಗಳನ್ನು ಎದುರಿಸಿದ ಮೇಲಷ್ಟೇ ಆಕೆಗೆ ದಿಟ್ಟೆಯ ಪಟ್ಟ. ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಆಕೆಗೆ ಅನುಮತಿ ಸಿಗದೇ ಇರುವ ಸಂದರ್ಭದಲ್ಲಿ ಉದ್ಯೋಗದಲ್ಲಿರುವ ಹೆಣ್ಣೊಬ್ಬಳು ತನ್ನ ಮಗಳನ್ನು ತನ್ನ ಆಸಕ್ತಿಯ ತರಗತಿಗಳಿಗೆ ಕಳುಹಿಸುತ್ತ ಅವಳೊಂದಿಗೆ ತಾನೂ ಕದ್ದು ಮುಚ್ಚಿ ಅಭ್ಯಾಸ ಮಾಡಿ ಪರೀಕ್ಷೆ ಬರೆದು ತನ್ನ ಕನಸನ್ನು ಈಡೇರಿಸಿಕೊಂಡೆ ಅಂತ ಆತ್ಮವಿಶ್ವಾಸದಿಂದ ಹೇಳುವಾಗ ಆಕೆಯ ಕಣ್ಣಿನ ಆಳದಲ್ಲಿ ನೋವು ಕೆನೆಗಟ್ಟಿ ನಿಂತಂತಿತ್ತು.

ಹೆಚ್ಚಿನ ರೈತಾಪಿ ಹೆಣ್ಮಕ್ಕಳು ಬೆವರಿಳಿಸಿ ದುಡಿಯುವ ವರ್ಗವೇ. ಅತಂತ್ರ ಸ್ಥಿತಿಯಲ್ಲಿರುವ ಕೃಷಿಯಲ್ಲಿ ಲಾಭಾಂಶ ಕಡಿಮೆ ಆಗಿರುವ ಕಾರಣ ಮನೆ ಕೆಲಸಗಳನ್ನೆಲ್ಲ ಪೂರೈಸಿ ಕೃಷಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಆಕೆಗೆ ಇದೆ. ಹಳ್ಳಿ ವಾತಾವರಣದಲ್ಲಿ ಹೀಗೆ ತಮ್ಮ ಆಸಕ್ತಿಗಳಲ್ಲಿ ತೊಡಗಿಸಿಕೊಂಡರೆ ಅವರನ್ನು ಮೂರ್ಖರೆಂದೇ ಪರಿಗಣಿಸಿ ಬಿಡುತ್ತಾರೆ. ಮಾಡಲು ಕೈತುಂಬಾ ಕೆಲಸ ಇರುವಾಗ ಇವುಗಳೆಲ್ಲ ಕೆಲಸವಿಲ್ಲದವರ ಕಾಯಕ ಅಂಥ ಹೆಚ್ಚಿನವರ ಅಂಬೋಣ. ಇಂತಹ ಹೊತ್ತಿನಲ್ಲಿ ನಿರಂತರ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅದನ್ನು ಪೂರ್ತಿ ಮುಗಿಸಿದ ಮೇಲೆಯೇ ಅವರಿಗದು ಬಿಡುಗಡೆ. ಒಂದಷ್ಟು ಹೊತ್ತು ಕಾಲು ಚಾಚಿ ಕುಳಿತ ಸಮಯದಲ್ಲಿ ಆಚೆ ಕಡೆಯಿಂದ ಫೋನು ಬಂದರೆ ಒಂದಷ್ಟು ಲಗುಬಗೆಯಲ್ಲಿ ಮಾತು ಮುಗಿಸಿದರೆ ಉಳಿದಂತೆ ಟಿ. ವಿ. ಸೀರಿಯಲ್‌ ನೋಡುವಾಗಲೂ, ಬೀನ್ಸ್‌ ಮುರಿಯುತ್ತಲೋ, ಕಾಳುಮೆಣಸು ಬಿಡಿಸುತ್ತಲೋ ಯಾವುದೋ ಕೆಲಸವನ್ನು ಹಚ್ಚಿಕೊಂಡಿರುತ್ತದೆ.

ಸ್ಮಿತಾ ಅಮೃತರಾಜ್‌

Advertisement

Udayavani is now on Telegram. Click here to join our channel and stay updated with the latest news.

Next