Advertisement

ವಚನಗಳ ಅರ್ಥ ಅರಿತು ನಡೆಯೋಣ

11:52 AM Jan 24, 2020 | Naveen |

ಬೀದರ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ರಚಿಸಿದ ಬಸವಾದಿ ಶರಣರ ವಚನಗಳ ಅರ್ಥವನ್ನು ಅರಿತು ಅದರಂತೆ ನಾವು ನಡೆದುಕೊಳ್ಳಬೇಕು ಎಂದು ಶಾಸಕ ರಹೀಂ ಖಾನ್‌ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆಶ್ರಯದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಭೇದ ಮಾಡಬಾರದು. ಮೇಲು ಕೀಳು ಅನ್ನುವ ಭಾವನೆ ಇರಬಾರದು. ಸುಳ್ಳು ಹೇಳಬಾರದು ಎನ್ನುವಂತಹ ಅನೇಕ ಸಂದೇಶಗಳನ್ನು ಶರಣರ ವಚನಗಳು ನೀಡುತ್ತವೆ. ಅದರಲ್ಲೂ ಅಂಬಿಗರ ಚೌಡಯ್ಯನವರು ನೇರ ನಿಷ್ಠುರವಾಗಿ ಹೇಳಿದ ಕ್ರಾಂತಿಕಾರಿ ಶರಣರಾಗಿದ್ದಾರೆ ಎಂದು ತಿಳಿಸಿದರು.

ಮನುಷ್ಯನು ಅರಿತು ಬಾಳಬೇಕು. ಧರ್ಮಮಾರ್ಗವನ್ನು ತಿಳಿದು ನಡೆಯಬೇಕು.
ಮೂಢನಂಬಿಕೆಯಾಗಲಿ, ಅನಾಚಾರವಾಗಲಿ ಸಲ್ಲದು ಎನ್ನುವ ಹಲವಾರು ಸಂಗತಿಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು. ಜಿಲ್ಲಾ ವಾರ್ತಾ ಧಿಕಾರಿ ಗವಿಸಿದ್ದ ಹೊಸಮನಿ ವಿಶೇಷ ಉಪನ್ಯಾಸ ನೀಡಿ, ಅಂಬಿಗರ ಚೌಡಯ್ಯನವರ ವಚನಗಳ ಮೂಲ ದೃವ್ಯವು ಪ್ರಜ್ಞೆ, ನಿರಂತರ ಪ್ರಜ್ಞೆ, ಸದಾ ಜಾಗೃತಿ ಮತ್ತು ಆಕ್ರೋಶವಾಗಿದೆ. ಅವರು ಶರಣ ಧರ್ಮದ ಹರಿಕಾರರಾಗಿದ್ದಾರೆ. ಚೌಡಯ್ಯನವರು ರಚಿಸಿದ 279 ವಚನಗಳು ಮಾತ್ರ ದೊರಕಿದ್ದು, ಅವರು ತಮ್ಮ ಹೆಸರನ್ನೇ ಅಂಕಿತವಾಗಿ ತಮ್ಮ ವಚನಗಳಿಗೆ ಬಳಿಸಿಕೊಂಡಿದ್ದು ಇವರ ವಿಶೇಷತೆಯಾಗಿದೆ.

ಇವರದು ದಡ ಸೇರಿಸುವ ಪವಿತ್ರವಾದ ಅಂಬಿಗ ಕಾಯಕವಾಗಿತ್ತು. ದೋಣಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲರನ್ನೂ ಕೂಡಿಸಿಕೊಂಡು ಸರ್ವಧರ್ಮ ಸಮನ್ವಯ ಕಾಯಕ ಮಾಡಿದ ಚೌಡಯ್ಯನವರ ಜೀವನ ಮೌಲ್ಯಗಳು ಇಂದು ನಮಗೆಲ್ಲಾ ಮಾದರಿ ಎಂದರು.
ಚೌಡಯ್ಯನವರು ಅನಿಸಿದ್ದನ್ನು ನಿಷ್ಠುರವಾಗಿಯೇ ಹೇಳಿದ ವಚನಕಾರರಾಗಿದ್ದಾರೆ. ವಚನಗಳ ಮೂಲಕ ಎಚ್ಚರಿಕೆ ಬಾಣವನ್ನು ಬಿಡುತ್ತಾರೆ. ಅವರ ವಚನಗಳು ಪ್ರಜ್ಞಾಪ್ರವೃತ್ತಿಯಿಂದಾಗಿ ಒಮ್ಮೊಮ್ಮೆ ಕಟುವಾಗಿ ತೋರುತ್ತವೆ. ಅವರು ನುಡಿಗಳಲ್ಲಿ ಕಂಡು ಬರುವ ಉಪಮೆ, ಅನುಪಮ ಬೆಡಗು, ಸಾಹಿತ್ಯದ ವಿಶಿಷ್ಟ ಲಕ್ಷಣವಾಗಿದೆ. ನಮ್ಮ ಬಂಡಾಯ ಸಾಹಿತ್ಯದ ಮೂಲ ಬೇರು ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಣಿಸುತ್ತದೆ. ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಮೊನಚುಗಳಿಂದಲೇ ತಿವಿದ ಅಂಬಿಗರ ಚೌಡಯ್ಯನವರೇ ನಿಜವಾದ ಬಂಡಾಯ ಸಾಹಿತಿ. ಅವರೆ ಬಂಡಾಯದ ಗಟ್ಟಿಧ್ವನಿ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಆಶ್ರಮದ
ಶ್ರೀ ದತ್ತಾತ್ರೇಯ ಗುರೂಜಿ, ಜಿಲ್ಲಾ ಟೋಕರಿ ಕೋಳಿ ಸಮುದಾಯದ ಅಧ್ಯಕ್ಷ ಜಗನ್ನಾಥ ಜಮಾದಾರ, ಸಂಘದ ಕಾರ್ಯದರ್ಶಿ ಪಾಂಡುರಂಗ ಗುರೂಜಿ, ಪ್ರಮುಖರಾದ ಅಮೃತರಾವ್‌ ಚಿಮಕೊಡೆ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್‌, ಷಣ್ಮುಖಪ್ಪ ಕಾರಕಪಳ್ಳಿ, ಸಂತೋಷ ಜೋಳದಾಪಕೆ, ಎಂ.ಪಿ.ಮುದಾಳೆ, ಬಲವಂತ ಮಂದಕನಹಳ್ಳಿ, ಅನೀಲ ಅಣದೂರ ಮತ್ತಿತರರು ವೇದಿಕೆಯಲ್ಲಿದ್ದರು. ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಸ್ವಾಗತಿಸಿದರು. ಚನ್ನಬಸವ ಹೆಡೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next