Advertisement

ಜೇನು ಕೃಷಿ ಲಾಭದಾಯಕ ಉದ್ದಿಮೆ

03:01 PM Aug 21, 2017 | |

ಲಿಂಗಸುಗೂರು: ತಾಲೂಕಿನ ನಾಗರಹಾಳ ಗ್ರಾಮದಲ್ಲಿ ವಿಶ್ವ ಜೇನು ಕೃಷಿ ದಿನಾಚರಣೆ ಹಾಗೂ ಸೂರ್ಯಕಾಂತಿ ಬೆಳೆ
ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಕೃಷಿ ವಿಸ್ತರಣಾ ಘಟಕದ ಮುಖಂಡ ಡಾ| ಶ್ಯಾಮರಾವ್‌ ಕುಲಕರ್ಣಿ ಮಾತನಾಡಿ, ಜೇನು ಕೃಷಿ ಎಲ್ಲ ಪ್ರದೇಶಗಳ ಉಪ ಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿಂದ ನಿರ್ವಹಿಸಬಹುದಾದ ಒಂದು ಲಾಭಾದಾಯಕ ಉದ್ದಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು, ವಿದ್ಯುತ್ಛಕ್ತಿಯ ಅವಶ್ಯಕತೆ ಇಲ್ಲ. ಅಲ್ಲದೆ ಈ ಉದ್ದಿಮೆಯು ಅರಣ್ಯ, ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೇ, ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆ ಇರುವ ಇದನ್ನು ಆಸಕ್ತಿ ಇರುವ ಯಾರು ಬೇಕಾದರೂ ಮಾಡಬಹುದು ಎಂದು ಹೇಳಿದರು. ಜೇನು ಕುಟುಂಬದ ಮುಖ್ಯ ಉತ್ಪನ್ನವಾದ ಜೇನುತುಪ್ಪವು ಹಲವಾರು ಔಷಧಿ ಗುಣಗಳನ್ನು ಹೊಂದಿದ್ದು, ಇದರ ನಿಯಮಿತ ಸೇವನೆ ಆರೋಗ್ಯ ವರ್ಧಿಸುತ್ತದೆ. ಜೇನುಗೂಡಿನಿಂದ ದೊರೆಯಬಹುದಾದ ಇನ್ನಿತರ ಉತ್ಪನ್ನಗಳಾದ ಮೇಣ, ಜೇನುಅಂಟು, ಜೇನು ವಿಷ, ಪರಾಗ, ಮುಂತಾದವು ಕೂಡಾ ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲವು ಎಂದರು. ರಾಷ್ಟ್ರೀಯ ಎಣ್ಣೆಕಾಳು ಹಾಗೂ ತಾಳೆ ಬೆಳೆ ಯೋಜನೆ ಅಡಿಯಲ್ಲಿ ಸೂರ್ಯಕಾಂತಿ ಉತ್ಪಾದಕತೆ ಹೆಚ್ಚಿಸುವ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆಗೊಂಡ ಆಧುನಿಕ ತಂತ್ರಜ್ಞಾನಗಳಾದ ಸುಧಾರಿತ ಸಂಕರಣ ತಳಿಗಳು, ಜೈವಿಕ ಗೊಬ್ಬರದಿಂದ ಬೀಜೋಪಚಾರ, ಸಮತೋಲಿತ ಪೋಷಕಾಂಶಗಳ ಬಳಕೆ, ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು. ಕೀಟ ತಜ್ಞರಾದ ಡಾ| ರೇಣುಕಾ ಬಿರಾದಾರ, ಗ್ರಾಮದ ಮುಖಂಡರಾದ ಕರಿಯಪ್ಪ ಕನಕೇರಿ, ದೊಡ್ಡಪ್ಪ ರಾಂಪುರು, ಮುರುಗೇಶ, ಬಾಲಪ್ಪ ಕನಕೇರಿ, ನಿಂಗಪ್ಪ, ದ್ಯಾಮಣ್ಣ ಬಡಿಗೇರ, ಸುಭಾಶ, ಕರಿಯಪ್ಪ ಸೇರಿದಂತೆ ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next