Advertisement

ಆಸ್ತಿ, ಕೀರ್ತಿ ಹಿಂದೆ ಬೀಳದೇ ಸಮಾಜದ ಧ್ವನಿಯಾಗಿ

09:39 PM Jun 29, 2019 | Team Udayavani |

ಚಿಕ್ಕಬಳ್ಳಾಪುರ: ಆಸ್ತಿ, ಅಂತಸ್ತು, ಕೀರ್ತಿಯ ಬೆನ್ನು ಬೀಳದೆ ವಕೀಲರು ಸಮಾಜದಲ್ಲಿ ಅನ್ಯಾಯಕ್ಕೆ ಒಳಾಗದ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಿದಾಗ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಕ್ಕಿ ಜನರಲ್ಲಿ ನ್ಯಾಯಾಲಯದ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಮಾಜಿ ಸಚಿವ, ಸಂಸದರಾದ ಪ್ರೊ.ಲಕ್ಷ್ಮಿಸಾಗರ್‌ ರವರ ಸ್ಮರಣಾರ್ಥ ರಾಜ್ಯ ವಕೀಲರ ಪರಿಷತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬದುಕಿಗಾಗಿ ವಕೀಲ ವೃತ್ತಿ ಬೇಡ: ಹಿಂದಿನ ತಲೆಮಾರಿನ ವಕೀಲರಿಗೂ ಈಗಿನ ವಕೀಲರಿಗೂ ಸಮಾಜದ ಬಗ್ಗೆ ಇರುವ ಕಳಕಳಿ, ಬದ್ಧತೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾಜದ ಬಗ್ಗೆ ತುಡಿತ ಇರುವ ವಕೀಲರ ಬಗ್ಗೆ ಮಾತ್ರ ಸಮಾಜದಲ್ಲಿ ಗೌರವ ಹೆಚ್ಚಾಗಲು ಸಾಧ್ಯವೇ ಹೊರತು ಬದುಕಿಗಾಗಿ ವಕೀಲ ವೃತ್ತಿ ನಡೆಸುವವರಿಂದ ಸಮಾಜಕ್ಕೆ ಲಾಭವಿಲ್ಲ ಎಂದರು.

ಅಪರೂಪದ ವ್ಯಕ್ತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್‌ ಮಾತನಾಡಿ, ಪ್ರೊ.ಲಕ್ಷ್ಮೀಸಾಗರ್‌ಗೆ ಇದ್ದ ಸಾಮಾಜಿಕ ನ್ಯಾಯದ ಬಗ್ಗೆ ಇದ್ದ ಕಳಕಳಿ, ಬದ್ಧತೆ ಅವರನ್ನು ವಕೀಲ ವೃತ್ತಿಯಿಂದ ಶಾಸಕರಾಗಿ, ಸಂಸದರಾಗಿ ಮಂತ್ರಿಯನ್ನಾಗಿಸಿತು. ರಾಜ್ಯದಲ್ಲಿ ಸಾಗರ್‌ ಅಪರೂಪದ ವ್ಯಕ್ತಿಯಾಗಿದ್ದರು. ಅವರ ಸಮಾಜಮುಖೀ ಚಿಂತನೆಗಳು ಇಂದಿನ ಯುವ ವಕೀಲರಿಗೆ ಮಾರ್ಗದರ್ಶನವಾಬೇಕೆಂದರು.

ವಕೀಲರು ಸ್ವಹಿತಸಾಕ್ತಿಯಿಂದ ಜನಪರವಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಗೌರವ, ಸ್ಥಾನಮಾನಗಳು ಸಿಗುತ್ತವೆ. ಸ್ವಂತದ ಬಗ್ಗೆ ಕಾಳಜಿ ತೋರುವರು ಸಮಾಜದಲ್ಲಿ ಬೆಳಕಿಗೆ ಬರಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

Advertisement

ಅಧ್ಯಯನಶೀಲತೆ ಅಗತ್ಯ: ರಾಜ್ಯ ಉಚ್ಚ ನ್ಯಾಯಾಲಯದ ಜಿಲ್ಲಾ ಉಸ್ತುವಾರಿ ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಮಾತನಾಡಿ, ಕಾನೂನುಗಳು ಸಂವಿಧಾನದ ಅಡಿಪಾಯವಾಗಿದ್ದು, ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಆಯಾಮಗಳಲ್ಲಿ ಎದುರಾಗುವ ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಲು ವಕೀಲರು ಕಾನೂನುಗಳ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಪ್ರಕರಣಗಳಿಗೆ ಸಕಾಲದಲ್ಲಿ ಸೂಕ್ತ ದಾಖಲನೆಗಳನ್ನು ಒದಗಿಸಿ ತ್ವರಿತವಾಗಿ ನ್ಯಾಯದಾನ ಮಾಡಲು ನ್ಯಾಯಧೀಶರಿಗೆ ಸಹಕರಿಸಬೇಕೆಂದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್‌.ಬೆಳ್ಳುಂಕೆ ಮಾತನಾಡಿ, ವೃತ್ತಿಯ ಬಗ್ಗೆ ಬಲವಾದ ಇಚ್ಚೆ ಇದ್ದವರು ಮಾತ್ರ ವಕೀಲ ಕೆಲಸಕ್ಕೆ ಬರಬೇಕು. ಒಂದು ಕಾಲಕ್ಕೆ ಎಲ್ಲೂ ಸಲ್ಲದವರು ವಕೀಲ ವೃತ್ತಿಗೆ ಬರುತ್ತಾರೆಂಬ ಅಪವಾದ ಇತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಡಾಕ್ಟರ್‌, ಎಂಜಿನಿಯರಿಂಗ್‌ ಕೋರ್ಸ್‌ ಅರ್ಧಕ್ಕೆ ಬಿಟ್ಟು ಕಾನೂನು ಪದವಿ ಪಡೆದು ವಕೀಲರಾದವರು ನಮ್ಮ ಮುಂದಿದ್ದಾರೆ ಎಂದರು.

ಪ್ರಖರವಾಗಿ ಬೆಳೆದವರು: ರಾಜ್ಯ ವಕೀಲ ಪರಿಷತ್‌ ಅಧ್ಯಕ್ಷ ಕೆ.ವಿ.ನಾಯಿಕ ಮಾತನಾಡಿ, ಸರಳತೆಯೊಂದಿಗೆ ಸಮಾಜಮುಖೀಯಾಗಿ ಬದುಕಿದ ಪ್ರೊ.ಲಕ್ಷ್ಮೀಸಾಗರ್‌, ಸಮಾಜದ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದರು. ಆ ಕಾಲಕ್ಕೆ ವಕೀಲರ ಕ್ಷೇಮಾಭಿವೃದ್ಧಿಗೆ 15 ಲಕ್ಷ ಆರ್ಥಿಕ ನೆರವು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕೆಲಸ ಮಾಡಿದ ಲಕ್ಷ್ಮೀಸಾಗರ್‌ ವಕೀಲ ವೃತ್ತಿಯಲ್ಲಿ ಪ್ರಖರವಾಗಿ ಬೆಳೆದವರು. ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ವಕೀಲರು ಸಾಗಬೇಕಿದೆ ಎಂದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜ್‌, ಅಖೀಲ ಭಾರತ ವಕೀಲ ಪರಿಷತ್‌ ಸದಸ್ಯ ವೈ.ಆರ್‌.ಸದಾಶಿವ, ರಾಜ್ಯ ವಕೀಲ ಪರಿಷತ್‌ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್‌, ವಕೀಲರ ಸಂಘದ ಜಿಲ್ಲಾದ್ಯಕ್ಷ ಕೆ.ಎಚ್‌.ತಮ್ಮೇಗೌಡ, ಜಿಲ್ಲಾ ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ನವೀನ್‌ ಕುಮಾರ್‌ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವಕೀಲರ ಸಂಘದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ದೇಶದ ಪ್ರಜಾಪ್ರಭುತ್ವ ಹದಗೆಟ್ಟಿದೆ – ನ್ಯಾ.ವಿಗೋಪಾಲಗೌಡ ಕಳವಳ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಹದಗೆಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೀಗೆ ಮುಂದುವರಿದರೆ ನ್ಯಾಯಾಂಗ ವ್ಯವಸ್ಥೆಗೆ ಕಂಟಕ ತಪ್ಪಿದ್ದಲ್ಲ ಎಂದು ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ತೀವ್ರ ಕಳವಳ ವ್ಯಕ್ತಪಡಿಸಿದರು.

ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದ ಪ್ರಮುಖ ವಿರೋಧ ಪಕ್ಷಗಳು ಇವಿಎಂ ಮತಯಂತ್ರಗಳ ಬಗ್ಗೆ ಸಾಕಷ್ಟು ಸಂಶಯ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೂ ಕೋರ್ಟ್‌ ಸಕಾರತ್ಮಕವಾಗಿ ಸ್ಪಂದಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಬಂದರೆ ದೇಶದಲ್ಲಿ ನಾಗರಿಕ ಸಮಾಜಕ್ಕೆ ಅಪಾಯ ನಿಶ್ಚಿತ. ನಾಗರಿಕ ಸಮಾಜದ ವ್ಯವಸ್ಥೆ ಇಲ್ಲ ಅಂದರೆ ಯಾರೂ ಈ ದೇಶವನ್ನು ಆಳುತ್ತಾರೆಂಬುದು ತಿಳಿಯುವುದಿಲ್ಲ ಎಂದರು.

ಸ್ವಾರ್ಥಿಗಳಾಗುತ್ತಿರುವ ವಕೀಲರು: ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗವಹಿಸಿ ತ್ಯಾಗ, ಬಲಿದಾನ ಮಾಡಿದ ಕೀರ್ತಿ ವಕೀಲರಿಗೆ ಇದೆ. ಆದರೆ ಇತ್ತೀಚೆಗೆ ವಕೀಲರು ಸಾಕಷ್ಟು ಸ್ವಾರ್ಥಿಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜಕ್ಕೆ ದೀಪ: ವಕೀಲರ ಧೀಮಂತಿಕೆ, ಜ್ಞಾರ್ನಾಜನೆ ನ್ಯಾಯಾಧೀಶರ ಹೃದಯಕ್ಕೆ ನಾಟಬೇಕು. ವಕೀಲರು ಸಮಾಜಕ್ಕೆ ದೀಪ ಇದ್ದಾಗೆ. ಸಂವಿಧಾನ ಬದ್ಧವಾದ ಸಾಮಾಜಿಕ ನ್ಯಾಯವನ್ನು ಕೆಲಪಟ್ಟಭದ್ರ ಹಿತಸಾಕ್ತಿಗಳು ಟೀಕೆ, ಟಿಪ್ಪಣೆ ಮೂಲಕ ಕಸಿಯುವ ಪ್ರಯತ್ನದಲ್ಲಿವೆ. ದೇಶದಲ್ಲಿ 100 ಕೋಟಿಗೆ ಬರೀ 20 ಕುಟುಂಬಗಳು ಶ್ರೀಮಂತವಾಗಿವೆ. ಬಡವರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.

ದೇಶದಲ್ಲಿ ಉಳ್ಳವನಿಗೆ ಸಿಗುವ ನ್ಯಾಯ ಉಳ್ಳದವನಿಗೆ ಸಿಗುತ್ತಿಲ್ಲ ಎಂದು ನ್ಯಾ.ವಿ.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು. ಕಕ್ಷಿದಾರನಿಗೆ ನ್ಯಾಯ ಕೊಡಿಸುವುದು ಮಾತ್ರವಲ್ಲದೇ ಅವನಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ವಕೀಲರ ಮಾಡಬೇಕೆಂದು ಸಲಹೆ ನೀಡಿದರು.

ಸ್ವಸ್ಥ ಸಮಾಜ ನಿರ್ಮಾಣ ಆಗಬೇಕಾದರೆ ಕಾನೂನು ಪಾಲನೆ ಬಹಳ ಮುಖ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು ಮೂಡಿಸುವುದು ವಕೀಲರ ಜವಾಬ್ದಾರಿ. ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಕೀಲರು ನಿರಂತರ ಅಧ್ಯಯನ ಮಾಡಬೇಕು. ಹಿರಿಯ ವಕೀಲರ ಮಾರ್ಗದರ್ಶನ ಪಡೆಯಬೇಕು.
-ಬಿ.ವೀರಪ್ಪ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next