Advertisement

ಖಾಸಗಿತನ ಹಂಚಿಕೊಳ್ಳುವಾಗ ಎಚ್ಚರ

10:44 PM Jul 10, 2019 | Team Udayavani |

ಪುತ್ತೂರು: ಯಾವ ಮಟ್ಟದ ಸ್ನೇಹಿತರಾದರೂ ಶೇ. 100 ನಂಬಬೇಡಿ. ಪರಿಚಿತರಲ್ಲೂ ಖಾಸಗಿತನ ಹಂಚಿಕೊಳ್ಳುವಾಗ ಜಾಗೃತರಾಗಿರಿ. ಹೆಣ್ಣು ಮಕ್ಕಳು ಪ್ರತಿ ಕ್ಷಣವೂ ಮೈಯೆಲ್ಲ ಜಾಗೃತರಾಗಿರಬೇಕು ಎಂದು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಹೇಳಿದ್ದಾರೆ.

Advertisement

ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯವರ್ಧನ ಸಂಘದ ಆಶ್ರಯದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್‌ ಇಲಾಖೆ ವತಿಯಿಂದ ಬುಧವಾರ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ವಿದ್ಯಾರ್ಥಿನಿಯರಿಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆತ್ತವರ ಕಾಳಜಿ ಅರಿಯಿರಿ
ಹೆತ್ತವರು ಮಕ್ಕಳ ಕುರಿತು ಬೆಟ್ಟದಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮೊದಲು ತಂದೆ-ತಾಯಿ ನಮ್ಮ ಮೇಲೆ ಇಟ್ಟಿರುವ ಕಾಳಜಿಯನ್ನು ಅರಿತು ಕೊಳ್ಳಬೇಕು. ಯಾವುದಕ್ಕೆ ಮಹತ್ವ ನೀಡ ಬೇಕು ಎನ್ನುವುದು ನಮಗೆ ತಿಳಿದಿರಬೇಕು. ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಹಲವು ಕಠಿನ ಕಾನೂನುಗಳು ಇವೆ. ಆದರೆ ಕಾನೂನಿಗಿಂತಲೂ ಸ್ವಯಂ ಜಾಗೃತಿಯ ಅರಿವು ನಮ್ಮಲ್ಲಿರಬೇಕು ಎಂದರು.

ಪತ್ತೆ ಕಾರ್ಯ ದೊಡ್ಡ ವಿಚಾರವಲ್ಲ
ಪೊಲೀಸ್‌ ಇಲಾಖೆಗೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ದೊಡ್ಡ ವಿಚಾರವಲ್ಲ. ಆದರೆ ಚಿಕ್ಕ ವಯಸ್ಸಿನ ಅಪರಾಧಿಗಳ ಭವಿಷ್ಯವೇನು ಎನ್ನುವ ಚಿಂತೆ ಕಾಡುತ್ತದೆ. ನಾವು ಮಾಡುವ ಚಾಟ್, ವೀಡಿಯೋ ಎಲ್ಲಿಯೋ ಸೇವ್‌ ಆಗಿರುತ್ತದೆ. ಮೊಬೈಲ್ ಇದೆ ಎಂದರೆ ಖಾಸಗಿತನವೇ ಹೋಗುತ್ತದೆ ಎಂದರ್ಥ. ಈ ಕಾರಣದಿಂದ ಖಾಸಗಿತನವನ್ನು ಯಾರಲ್ಲೂ ಹಂಚಿಕೊಳ್ಳಬಾರದು ಎಂದು ದಿನಕರ ಶೆಟ್ಟಿ ಸಲಹೆ ನೀಡಿದರು.

ಪ್ರಕರಣ ದಾಖಲಿಸುತ್ತೇವೆ
ಕಾಲೇಜು ಕ್ಯಾಂಪಸ್‌ಗಳಲ್ಲಿ ಡ್ರಗ್ಸ್‌ ಬಳಕೆ ಮಾಡುವುದು ಕಂಡುಬಂದರೆ ಮಾಹಿತಿ ನೀಡಿ. ಆ ಮೂಲಕ ಸಹಪಾಠಿಗಳ ಬದುಕನ್ನು ರಕ್ಷಿಸಿ ಎಂದು ಹೇಳಿದ ಅವರು, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ಗಳನ್ನು ಚೆಕ್‌ ಮಾಡಲಾಗುತ್ತಿದೆ. ಈಗ ಎಚ್ಚರಿಕೆ ಮಾತ್ರ ನೀಡುತ್ತಿದ್ದೇವೆ. ಮುಂದೆ ಮಕ್ಕಳ ಮೊಬೈಲ್ಗಳನ್ನು ಇರಿಸಲು ಅವಕಾಶ ಕಲ್ಪಿಸುವ ಅಂಗಡಿಗಳ ಮಾಲಕರ ಮೇಲೂ ಪ್ರಕರಣ ದಾಖಲಿಸುತ್ತೇವೆ. ಮಕ್ಕಳನ್ನು ಸಮಸ್ಯೆಗಳಿಂದ ದೂರ ಇರಿಸುವ ಪ್ರಯತ್ನ ಇದು ಎಂದು ಹೇಳಿದರು.

Advertisement

ಸಮಾಲೋಚನೆ
ಡಿವೈಎಸ್ಪಿ ದಿನಕರ ಶೆಟ್ಟಿ ಅವರು ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು. ಡ್ರಗ್ಸ್‌ ಬಳಕೆ ಮಾಡುವ ಕುರಿತು ಚಲನಚಿತ್ರಗಳಲ್ಲಿ ತೋರಿಸುವುದಕ್ಕೆ ಕಡಿವಾಣ ಹಾಕಬಾರದು ಎನ್ನುವ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯದ್ದು, ಕೆಟ್ಟದ್ದನ್ನು ತಿಳಿದುಕೊಂಡು ಬಳಸುವುದನ್ನು ವಿದ್ಯಾರ್ಥಿಗಳು ಅರಿತಿರಬೇಕು. ಎಲ್ಲವೂ ಅನುಸರಣೆಗೆ ಪೂರಕವಲ್ಲ ಎಂದರು. ಅತ್ಯಾಚಾರ ಮಾಡಿದವರನ್ನು ವಿದೇಶಗಳಲ್ಲಿರುವಂತೆ ಸಾರ್ವಜನಿಕವಾಗಿ ಶಿಕ್ಷೆಗೆ ಒಳಪಡಿಸಬೇಕು. ಕಾನೂನಿನ ಅರಿವು ಇಲ್ಲ ಎನ್ನುವುದಕ್ಕೆ ಕ್ಷಮೆ ಇಲ್ಲ ಎನ್ನುವ ಕುರಿತು ಚರ್ಚೆ ನಡೆಯಿತು.

ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯ ಪಿಎಸ್‌ಐ ಸೇಸಮ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ| ಝೇವಿಯರ್‌ ಡಿ’ಸೋಜಾ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೊ| ಸ್ಟೀವನ್‌ ಕ್ವಾಡ್ರಸ್‌ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 700 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ತತ್‌ಕ್ಷಣ ಪೊಲೀಸ್‌ ದೂರು ನೀಡಿ
ಸ್ನೇಹಿತರು, ಪಾರ್ಟಿ, ಅಪರಿಚಿತರ ಮನೆಗೆ ಹೋಗುವ ಕುರಿತು ಎಚ್ಚರಿಕೆ ಇರಬೇಕು. ಒಮ್ಮೆ ತಪ್ಪಾದರೆ ಆದ ಹಾನಿ ಸರಿಪಡಿಸಲು ಸಾಧ್ಯವಿಲ್ಲ. ಪುತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರಂಭದಲ್ಲೇ ದೂರು ನೀಡಿದ್ದರೆ ವೀಡಿಯೋ ಪ್ರಸಾರವಾಗುವುದನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಿಸಿದ ಅವರು, ವಿದ್ಯಾರ್ಥಿನಿಯರು ಶೋಷಣೆ, ಬ್ಲಾ ್ಯಕ್‌ವೆುೕಲ್ನಂತಹ ಪ್ರಕರಣಗಳ ಕುರಿತು ತತ್‌ಕ್ಷಣ ದೂರು ನೀಡಬೇಕು. ದೂರು ನೀಡಿದವರ ಹೆಸರೂ ಬಹಿರಂಗಪಡಿಸುವುದಿಲ್ಲ. ತನಿಖೆಗೂ ಒಳಪಡಿಸುವುದಿಲ್ಲ. ಮಹಿಳಾ ಪೊಲೀಸರೇ ಈ ಕುರಿತ ತನಿಖೆ ನಡೆಸುತ್ತಾರೆ ಎಂದು ಡಿವೈಎಸ್ಪಿ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next