Advertisement

ಬಿಸಿಎಂ ಹಾಸ್ಟೆಲ್‌ನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ಅನಾಹುತ, ತುರ್ತು ನಿರ್ಗಮನ ಇಲ್ಲದ ಕಟ್ಟಡ

12:16 PM Jan 15, 2022 | Team Udayavani |

ಕುಂದಾಪುರ : ಇಲ್ಲಿನ ತಾ.ಪಂ. ಬಳಿ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಅಗ್ನಿ ಆಕಸ್ಮಿಕ ಆಗಿದ್ದು ಸಕಾಲಿಕ ಸಮಯ ಚಾತುರ್ಯದಿಂದ ಸಂಭಾವ್ಯ ಅನಾಹುತ ತಪ್ಪಿದೆ. ಆದರೆ ತುರ್ತು ನಿರ್ಗಮನ ಇಲ್ಲದ ಈ ಹಾಸ್ಟೆಲ್‌ ಕಟ್ಟಡದಲ್ಲಿ ಇದ್ದ ಒಂದೇ ಪ್ರವೇಶ ನಿರ್ಗಮನ ದ್ವಾರದಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿನಿಯರು ಹೊರ ತೆರಳಲು ಪ್ರಯತ್ನಪಟ್ಟ ಕಾರಣ ಸಮಸ್ಯೆ, ಗೊಂದಲ ಉಂಟಾಯಿತು.

Advertisement

ಒಂದೇ ಬಾಗಿಲು
ಕಟ್ಟಡದಲ್ಲಿ ಸಭಾಂಗಣ ಅಥವಾ ಪ್ರಾರ್ಥನಾ ಹಾಲ್‌ ಇದೆ. ಊಟದ ಕೊಠಡಿ, ಅಡುಗೆ ಕೋಣೆ, ಸ್ಟೋರ್‌ ರೂಂ, ಬಟ್ಟೆ ಒಗೆಯಲು ಕೊಠಡಿ, ಶೌಚಾಲಯ, ಸ್ನಾನದ ಕೊಠಡಿಗಳು, ವಾರ್ಡನ್‌ ಕಚೇರಿ ಇವೆ. ವಿಶಾಲ ಗಾಳಿ ಬೆಳಕಿನ ವ್ಯವಸ್ಥೆಗೆ ಬೇಕಾದಂತೆ ಕಟ್ಟಡದ ವಿನ್ಯಾಸ ರೂಪಿಸಲಾಗಿದೆ. ಆದರೆ ಒಂದೇ ಪ್ರವೇಶ ದ್ವಾರ ಇದೆ. ಪ್ರವೇಶ ನಿರ್ಗಮನ ಎರಡೂ ಇದರಲ್ಲೇ.
ರಾಜ್ಯಾದ್ಯಂತ ಏಕವಿನ್ಯಾಸದಲ್ಲಿ ಹಾಸ್ಟೆಲ್‌ ಕಟ್ಟಡಗಳನ್ನು ಇಲಾಖೆಯ ಎಂಜಿನಿಯರ್‌ ವಿನ್ಯಾಸಗೊಳಿಸುವ ಕಾರಣ ಹೀಗಾಗಿದೆ. ವಿದ್ಯಾರ್ಥಿನಿ ನಿಲಯಗಳಾದ ಕಾರಣ ಭದ್ರತೆಯ ದೃಷ್ಟಿಯಿಂದ ಒಂದೇ ಬಾಗಿಲು ಮಾಡಲಾಗುತ್ತದೆ.

ಗೊಂದಲ
ಒಂದೇ ಬಾಗಿಲು ಮಾಡಿರುವುದು ಭದ್ರತೆ ದೃಷ್ಟಿಯಿಂದ ಸೂಕ್ತ. ಆದರೆ ಅಡುಗೆ ಸಾಮಗ್ರಿ, ಅಡುಗೆ ಅನಿಲ ಸೇರಿದಂತೆ ವಸ್ತುಗಳು ಬಂದಾಗ ಲಾರಿ ಕಟ್ಟಡದ ಹಿಂದೆ ವರೆಗೆ ಹೋಗಲು ವ್ಯವಸ್ಥೆ ಇದೆ. ಬಾಗಿಲ ಬಳಿ ಲಾರಿ ನಿಲ್ಲಿಸಲು, ಲಾರಿ ತಲುಪಲು ಅವಕಾಶವೇ ಇಲ್ಲ. ಒಂದೋ ಕಾಂಪೌಂಡ್‌ನ‌
ಹೊರಗೆ ರಸ್ತೆಯಲ್ಲಿ ನಿಲ್ಲಿಸಬೇಕು ಅಥವಾ ಕಾಂಪೌಂಡ್‌ ಒಳಗೆ ತಂದರೆ ಕಟ್ಟಡದ ಹಿಂದೆವರೆಗೆ ಹೋಗಬೇಕು. ಆದರೆ ಮುಂಬಾಗಿಲವರೆಗೆ ಹೊತ್ತು ತರಬೇಕು. ಇದು ಹೆಚ್ಚುವರಿ ಕೆಲಸ.

ಅಗ್ನಿ ಆಕಸ್ಮಿಕ
ಕಟ್ಟಡದಲ್ಲಿ ಒಳಗೆ ಮೇನ್‌ ಸ್ವಿಚ್‌ ಬಳಿ ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಉಂಟಾಯಿತು. ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತು. ಆಗ ಹಾಸ್ಟೆಲ್‌ ಒಳಗಿದ್ದ 130 ಮಂದಿ (10 ಮಂದಿ ಇರಲಿಲ್ಲ) ವಿದ್ಯಾರ್ಥಿನಿಯರು ಕಟ್ಟಡದ ಹೊರಹೋಗಲು ಪಡಿಪಾಟಲು ಪಡಬೇಕಾಯಿತು. ಒಂದೇ ಬಾಗಿಲು ಇದ್ದ ಕಾರಣ ನೂಕು ನುಗ್ಗಲಾಯಿತು. ಈ ಮಧ್ಯೆಯೇ ಅದನ್ನು ಸರಿಪಡಿಸುವ, ಆರಿಸುವ ಕೆಲಸವೂ ನಡೆಯಬೇಕಿತ್ತು. ಕಾಲು¤ಳಿತವೂ ಆಯಿತು. ಇಂತಹ ಸಂದರ್ಭದಲ್ಲಿ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರ ಒಂದು ಇರಬೇಕು ಎಂಬ ಅಭಿಪ್ರಾಯ ಕೇಳಿ ಬಂತು. ಸ್ಥಳೀಯರು ಸೇರಿ ಬೆಂಕಿ ನಂದಿಸುವ, ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರುವ ಕೆಲಸ ಮಾಡಿದರು.

ಇಲಾಖೆ ನಿರ್ಲಕ್ಷ್ಯ
ಕಟ್ಟಡಕ್ಕೆ ತಾಗಿಕೊಂಡೇ ವಿದ್ಯುತ್‌ ಹೈ ಟೆಂಷನ್ ಲೈನ್‌ ಹಾದು ಹೋಗಿತ್ತು. ವಿದ್ಯುತ್‌ ಕಂಬ ಸ್ಥಳಾಂತರಿಸಬೇಕಿತ್ತು. ಶಾಸಕರು ಮೆಸ್ಕಾಂಗೆ ಪತ್ರ ಬರೆದಾಗ ಸ್ವಂತ ಅನುದಾನದಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ ಬಿಸಿಎಂ ಇಲಾಖೆ ಹಣ ಕಟ್ಟಿದರೆ ಕಂಬ ಸ್ಥಳಾಂತರಿಸಲಾಗುವುದು ಎಂದು ಮೆಸ್ಕಾಂ ಇಲಾಖೆ ಉತ್ತರಿಸಿತ್ತು. ಎರಡು ವರ್ಷಗಳಾದರೂ ಇಲಾಖೆ ಹಣವೂ ಕಟ್ಟಿರಲಿಲ್ಲ, ಸ್ಥಳಾಂತರಕ್ಕೆ ಕ್ರಮವೂ ಕೈಗೊಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಮರ ಬಿದ್ದು ಕಂಬ ತುಂಡಾಯಿತು. ಅದೃಷ್ಟವಶಾತ್‌ ತಂತಿ ಹಾಸ್ಟೆಲ್‌ ಮೇಲೆ ಬೀಳಲಿಲ್ಲ. ಮೆಸ್ಕಾಂನವರು ಮಾನವೀಯತೆ ನೆಲೆಯಲ್ಲಿ ಕಂಬವನ್ನು ತುಸು ದೂರ ಹಾಕಿದ್ದಾರಾದರೂ ಪೂರ್ಣ ಸುರಕ್ಷಿತವಲ್ಲ. ಹಾಗಿದ್ದರೂ ಬಿಸಿಎಂ ಇಲಾಖೆ ಮೌನಕ್ಕೆ ಶರಣಾಗಿದೆ. ಈಗ ತುರ್ತುನಿರ್ಗಮನ ದ್ವಾರದ ಸರದಿ. ಇಲಾಖೆ ಸ್ಥಳೀಯವಾಗಿ ಇದನ್ನು ಸರಿಪಡಿಸುವಂತಿಲ್ಲ. ಬಾಗಿಲು ಅಳವಡಿಸುವಂತಿಲ್ಲ. ಮೇಲಧಿಕಾರಿಗಳು ಮುತುವರ್ಜಿ ವಹಿಸಬೇಕು. ಹಿರಿಯ ಅಧಿಕಾರಿಗಳಿಂದ ಅನುಮತಿ ಬರಬೇಕು. ಆಗಷ್ಟೇ ಸಾಧ್ಯ. ಇಂತಹ ನಿರ್ಲಕ್ಷ್ಯ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ತೊಡಕೆಂದು ಯಾಕೆ ಅನಿಸುವುದಿಲ್ಲ.

Advertisement

ಭೇಟಿ ನೀಡಿದ್ದೇನೆ
ವಿದ್ಯಾರ್ಥಿನಿ ನಿಲಯದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆ. ಅಗ್ನಿ ಆಕಸ್ಮಿಕ ನಡೆದ ಬಳಿಕ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಏಕರೂಪದ ವಿನ್ಯಾಸ ಇರುವ ಕಾರಣ ಸ್ಥಳೀಯವಾಗಿ ನಾವು ಕಟ್ಟಡದ ವಿನ್ಯಾಸ ಬದಲಿಸುವಂತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

-ದೇವೀಂದ್ರ ಎಸ್‌. ಬಿರಾದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next