Advertisement

ಕಾಂಗ್ರೆಸ್ ಪಕ್ಷವೇ ನಾಶವಾಗುತ್ತೆ ಎಂಬ ಭಯ ಪಕ್ಷದ ನಾಯಕರಿಗೆ ಕಾಡತೊಡಗಿದೆ : ಬಿ.ಸಿ. ನಾಗೇಶ್

08:59 PM May 25, 2022 | Team Udayavani |

ಚಾಮರಾಜನಗರ : ಪಠ್ಯ ಪುಸ್ತಕ ವಿಚಾರವನ್ನು ರಾಜಕೀಯಗೊಳಿಸಲು ಹಾಗೂ ಹಿಂದೂ ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.

Advertisement

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರವಾಗಿ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಮತ ಯಾಚಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಸಮಯದಲ್ಲೂ ಯಾವುದೇ ಪರಿಷ್ಕರಣೆಯಾದಾಗ ಗೊಂದಲಗಳಿರುತ್ತವೆ. ವೈಚಾರಿಕವಾಗಿ ವಸ್ತುನಿಷ್ಠವಾಗಿ ವಾದ ಮಾಡಲು ಹತಾಶರಾಗಿ ಮಾತನಾಡಿದ್ದಾರೆ. ಕಾಂಗ್ರೆಸ್‌ನವರು ಹಿಜಾಬ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಕೋವಿಡ್ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಿದಾಗ ಈ ರೀತಿಯ ಮಾತುಗಳನ್ನಾಡಿ ವಿಫಲರಾದರು. ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಎಲ್ಲೂ ಇಲ್ಲದಾಗಿಬಿಡುತ್ತದೆಯೋ ಎಂಬ ಭಯ ಶುರುವಾಗಿ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಶಿಕ್ಷಣದಲ್ಲಿ ವೈಚಾರಿಕ ಹೋರಾಟಗಳು ನಡೆಯಲಿ. ಭಿನ್ನತೆ ಯಾವತ್ತೂ ಇರುತ್ತದೆ. ತಾತ್ವಿಕ ಭಿನ್ನತೆಯ ಚರ್ಚೆಗೆ ಸಿದ್ಧರಿದ್ದೇವೆ. ಸುಳ್ಳನ್ನು ದಿನ ಪ್ರಚಾರ ಮಾಡಿ ಸುಳ್ಳನ್ನು ನಿಜ ಮಾಡುತ್ತೇವೆ ಎಂದು ಹೋದಾಗ ಜವಾಬ್ದಾರಿಯುತ ಸರ್ಕಾರವಾಗಿ ಹೇಳಲಾಗಿದೆ. ಪರಿಷ್ಕರಣಾ ಸಮಿತಿ ರಚನೆ ಮಾಡಿ 8 ತಿಂಗಳಾಗಿದ್ದು ಪಠ್ಯ ಕೈಬಿಟ್ಟಿದ್ದಾರೆ ಎಂಬ ಸುಳ್ಳು ಆರೋಪವನ್ನು ಮಾಡಿದರು. ಆದರೆ, ಪಠ್ಯ ಪುಸ್ತಕ ಆಚೆ ಬಂದು ಕಾಂಗ್ರೆಸ್ ನವರು ಹೇಳಿದ್ದೆಲ್ಲ ಸುಳ್ಳು ಎಂದು ಯಾವಾಗ ಗೊತ್ತಾಯಿತೋ ಆಗ ಟಿಪ್ಪು ಸುಲ್ತಾನ್, ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣ, ಕುವೆಂಪು ಅವರನ್ನು ಪಠ್ಯದಿಂದ ಕೈ ಬಿಡಲಾಗಿದೆ ಎಂದು ಆರೋಪಿಸಲಾಯಿತು. ಈ ಆರೋಪಗಳೆಲ್ಲ ಸುಳ್ಳು ಎಂದು ಗೊತ್ತಾದಾಗ ಕೊನೆಗೆ ಜಾತಿಯ ಹೋರಾಟಕ್ಕೆ ಮುಂದಾದರು ಎಂದರು.

ಇದನ್ನೂ ಓದಿ : ತಂಬಾಕು ಮಂಡಳಿ ನೀಡಿದ್ದು ರಸಗೊಬ್ಬರ, ಚೀಲದಲ್ಲಿ ಸಿಕ್ಕಿದ್ದು ರಂಗೂಲಿಪುಡಿ: ಆತಂಕದಲ್ಲಿ ರೈತರು

ಕಾಂಗ್ರೆಸ್ ಗೆ ವೈಚಾರಿಕ ಅಧಃಪತನಕ್ಕೆ ಬಂದಿದೆ. ಏಕ ವಚನದಲ್ಲಿ ವ್ಯಕ್ತಿಗಳನ್ನು ಮಾತನಾಡಿಸುವುದು ಕಾಂಗ್ರೆಸ್ ಗೆ ಶೋಭೆ ತರುವುದಿಲ್ಲ. ಪಠ್ಯ ಪುಸ್ತಕ ಈಗಾಗಲೇ ಬಂದಿದ್ದು ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಯಾರು ಬೇಕಾದರೂ ತೆಗೆದು ನೋಡಬಹುದು. ಹಳೆಯದರಲ್ಲಿ ಕಾಂಗ್ರೆಸ್‌ನವರು ಮೈಸೂರು ಮಹಾರಾಜರ ಬಗೆಗಿನ ಪಠ್ಯವನ್ನು ತೆಗೆದಿದ್ದಾರೆ. ಒಂದು ಪುಟ ಇದ್ದ ಟಿಪ್ಪು ಸುಲ್ತಾನ್ ಪಠ್ಯ 5 ಪುಟ ಮಾಡಿದ್ದಾರೆ ಎಂದರು.

Advertisement

ಪ್ರಶ್ನೆಗೆ ಉತ್ತರಿಸಿದ ಅವರು, ದೇವನೂರು ಮಹಾದೇವ ಅವರ ಬಗ್ಗೆ ಅಪಾರವಾದ ವಿಶ್ವಾಸವಿದೆ. ಅಲ್ಲದೇ ಅವರ ಬುದ್ದಿವಂತಿಕೆ, ಹೋರಾಟದ ಬಗ್ಗೆ ಕಳಕಳಿಯೂ ಇದೆ. ಅವರು ಯಾವ ಒತ್ತಡದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡಲಿದ್ದೇನೆ. ಪರಿಷ್ಕರಣಾ ಸಮಿತಿ ಆಗಿ ತುಂಬಾ ತಿಂಗಳಾಗಿದೆ. ಪುಸ್ತಕಗಳೆಲ್ಲ ಪ್ರಿಂಟ್ ಆಗಿ ಆಚೆ ಬಂದಿದ್ದು ಮಕ್ಕಳ ಕೈ ಸೇರುವ ಹಂತದಲ್ಲಿದೆ ಎಂದರು.

ಚುನಾವಣೆಯಲ್ಲಿ ಮೈ.ವಿ.ರವಿಶಂಕರ್ ಪರ ವಾತಾವರಣ ತುಂಬಾ ಚೆನ್ನಾಗಿದ್ದು ರವಿ ಅವರು ಗೆಲ್ಲುವ ವಿಶ್ವಾಸವಿದೆ. ಕಳೆದ 30 ವರ್ಷಗಳಿಂದಲೂ ಒಂದೇ ವಿಚಾರಕ್ಕೋಸ್ಕರ ಪೂರ್ಣ ಸಮಯ ಕೊಟ್ಟು ಸಂಘಟನೆ ಕಟ್ಟಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 150 ಮತಗಳಿಂದ ಸೋತರೂ ಜನರ ಪರವಾಗಿ ಕೆಲಸ ಮಾಡಲು ಯಾವುದೇ ರೀತಿಯ ಹಿಂದೇಟು ಹಾಕದೆ ಪ್ರಾಮಾಣಿಕ ಕಾರ್ಯಕರ್ತನಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಎಲ್ಲ ಕಡೆ ಶಿಕ್ಷಕರನ್ನು ಹಾಗೂ ಪದವೀಧರರನ್ನು ಭೇಟಿ ಮಾಡಿದಾಗ ಎಲ್ಲ ಕಡೆ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿವರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಪದವೀಧರರ ಬಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್. ಬಿಜೆಪಿ ಮುಖಂಡರಾದ ದತ್ತೇಶ್ ಕುಮಾರ್, ನಾಗಶ್ರೀ ಪ್ರತಾಪ್, ಸಿ.ಎನ್. ಬಾಲರಾಜ್, ಬಾಲಸುಬ್ರಹ್ಮಣ್ಯ, ಮಂಜುನಾಥ್, ಆಲೂರು ಮಲ್ಲು ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದು ಪಕ್ಷದ ಒಳಗಿನ ತೀರ್ಮಾನ. ಹಿರಿಯರೆಲ್ಲ ಕೂತು ನಿಶ್ಚಯ ಮಾಡಿರುವಂಥದ್ದು. ಯಡಿಯೂರಪ್ಪ ಅವರು ಸಹ ಅಲ್ಲೇ ಇದ್ದರು. ಪಕ್ಷದಲ್ಲಿ ಎಲ್ಲವೂ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತದೆ. ಟಿಕೆಟ್ ಕೈ ತಪ್ಪಿರುವ ಸಂಬಂಧ ವಿಜಯೇಂದ್ರ ಅವರು ಮಾತನಾಡಿಲ್ಲ. ವಿಜಯೇಂದ್ರ ಅವರು ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರಿಗೆ ಅವಕಾಶ ಸಿಗಲಿದೆ ಎಂದರು.

ಶೇ.80 ರಷ್ಟು ಪುಸ್ತಕಗಳು ಪೂರೈಕೆ:
ಈಗಾಗಲೇ ಶೇ.80 ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಕಲಿಕಾ ಚೇತರಿಕೆ ಒಂದು ತಿಂಗಳ ಕಾರ್ಯಕ್ರಮವಿದೆ. ಮೊದಲ ಬಾರಿ ಶಿಕ್ಷಣ ಇಲಾಖೆಯಲ್ಲಿ ಇಷ್ಟು ಮುಂದೆ ಆಲೋಚನೆ ಮಾಡಿ ಮಾಡಲಾಗಿದೆ. ನಮ್ಮ ಆಲೋಚನೆಉಕ್ರೇನ್ ಯುದ್ದ ಅಡಚಣೆಯಾಯಿತು. ಕಾಗದ ಸಿಗದ ಹಿನ್ನೆಲೆಯಲ್ಲಿ ನಿಧಾನವಾಗಿದೆ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಉಪಕರಣಗಳನ್ನು ಪೂರೈಕೆ ಮಾಡಲಾಗಿದ್ದು ಕಲಿಕಾ ಚೇತರಿಕೆ ಎಲ್ಲ ಕಡೆ ಶುರುವಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next