Advertisement

ಜಾಹೀರಾತು ನೀತಿಗೆ ಪಾಲಿಕೆ ಹಿಂದೇಟು

01:22 AM Jul 31, 2019 | Lakshmi GovindaRaj |

ಬೆಂಗಳೂರು: ನಗರದ ಹೊರಾಂಗಣ ಜಾಹೀರಾತಿನ ಬಗ್ಗೆ ನಗರಾಭಿವೃದ್ಧಿ ಇಲಾಖೆಯು “ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಿಯಮ-2019’ರ ಕರಡಿನಲ್ಲಿನ ಲೋಪವಿದೆ ಎಂದು ಪಾಲಿಕೆಯ ಸದಸ್ಯರು ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ಎತ್ತಿತೋರಿಸಿದರು. ಕರಡು ತಿರಸ್ಕಾರಕ್ಕೆ ಒಕ್ಕೊರಲ ಧ್ವನಿಯೂ ವ್ಯಕ್ತವಾಯಿತು. ಆದರೆ, ಈ ಸಂಬಂಧ ನಿರ್ಣಯ ಕೈಗೊಳ್ಳುವಲ್ಲಿ ಪಾಲಿಕೆ ವಿಫ‌ಲವಾಯಿತು.

Advertisement

ಮಂಗಳವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಾಹೀರಾತು ನೀತಿ, ತ್ಯಾಜ್ಯ ಸಮಸ್ಯೆ, ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುವುದು, ಎಲ್‌ಇಡಿ ಬಲ್ಪ್ ಅಳವಡಿಕೆ, ಅಧಿಕಾರಿಗಳು ಕಮಿಟಿ ಸಭೆಗಳಲ್ಲಿ ಭಾಗವಹಿಸದೆ ಇರುವುದು, ಪಾಲಿಕೆಯ ಹೊಲಿಗೆ ಯಂತ್ರ ಹಾಗೂ ಒಂಟಿ ಯೋಜನೆ ಸೇರಿದಂತೆ ಹಲವು ವಿಷಯಗಳನ್ನು ಚರ್ಚೆ ಮಾಡಲಾಯಿತು. ಇದರೊಂದಿಗೆ ಸದಸ್ಯರ ಆಕ್ರೋಶ, ಆರೋಪ, ಪ್ರತ್ಯಾರೋಪ, ಕಣ್ಣೀರು, ಬೈಗುಳ, ಹಾಗೂ ಪಾಲಿಕೆ ಸದಸ್ಯರ ಅಸಹಾಯಕತೆಗೂ ಸಭೆ ಸಾಕ್ಷಿಯಾಯಿತು.

ಮುಂದೂಡಿದ ನಿರ್ಣಯ: “ಕಳೆದ ಒಂದು ವರ್ಷದಿಂದ ನಗರ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಹೋìಡಿಂಗ್‌ಗಳಿಲ್ಲದೆ ನಗರ ಸುಂದರವಾಗಿದೆ. ಇದೇ ರೀತಿಯಲ್ಲಿ ಮುಂದುವರಿಯಲಿ ಜಾಹೀರಾತು ಮಾಫಿಯಾಗೆ ಮಣಿಯುವುದು ಬೇಡ’ ಎಂದು ಪಾಲಿಕೆಯ ಸದಸ್ಯರು ಒತ್ತಾಯಿಸಿದ್ದರು. ಇಷ್ಟಾದರೂ ನಗರಾಭಿವೃದ್ಧಿ ಇಲಾಖೆಯ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳದೆ ಜಾಹೀರಾತು ನಿರ್ಣಯ ಅಂಗೀಕಾರವನ್ನು ಮಂದೂಡಲಾಗಿದೆ.

ಸಭೆ ಪ್ರಾರಂಭದಲ್ಲಿ ನಗರದಲ್ಲಿ ಸ್ಕೈವಾಕ್‌ ಮತ್ತು ಬಸ್‌ ನಿಲ್ದಾಣದ ಕಾಮಗಾರಿ ಸಂಬಂಧ ಮಾಜಿ ಉಪ ಮುಖ್ಯಮಂತ್ರಿಗಳು ಪಾಲಿಕೆಗೆ ಬರೆದಿರುವ ಪತ್ರ ಮತ್ತು ಜಾಹೀರಾತಿನ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಕೆ. ಉಮೇಶ್‌ ಶೆಟ್ಟಿ ಹಾಗೂ ಮಂಜುನಾಥ ರಾಜು ವಿಷಯ ಪ್ರಸ್ತಾಪಿಸಿದರು.

ಟೆಂಡರ್‌ ರದ್ದು: ವಿವರಣೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, “ಸಾರ್ವಜನಿಕ ಸಂಚಾರಕ್ಕೆ ನೆರವಾಗುವ ಉದ್ದೇಶದಿಂದ ಪ್ರಮುಖ ರಸ್ತೆಗಳಲ್ಲಿರುವ ಮಾರ್ಗಸೂಚಿಗಳನ್ನು ಸರಿಪಡಿಸಿ, ಹಾಳಾಗಿರುವ ಮಾರ್ಗಸೂಚಿಗಳನ್ನು ಹೊಸದಾಗಿ ಅಳವಡಿಸುವಂತೆ ಪಾರದರ್ಶಕ ಕಾಯ್ದೆ ನಿಯಮದಂತೆ ಕ್ರಮತೆಗೆದುಕೊಳ್ಳುವಂತೆ ಮಾ.1ರಂದು ಮಾಜಿ ಉಪಮುಖ್ಯಮಂತ್ರಿಗಳು ಖಾಸಗಿ ಸಹಭಾಗಿತ್ವದಲ್ಲಿ ಟೆಂಡರ್‌ ಕರೆಯಲು ಪತ್ರ ಬರೆದಿದ್ದರು’ ಎಂದರು.

Advertisement

ಚುನಾವಣಾ ಸಮಯವಾದ್ದರಿಂದ ಟೆಂಡರ್‌ ಕರೆಯಲು ಮತ್ತು ಟೆಂಡರ್‌ ಪ್ರಕ್ರಿಯೆ ನಡೆಸಲು ಸಾಧ್ಯವಿರಲಿಲ್ಲ. ಸಂಚಾರ ಪೊಲೀಸರೊಂದಿಗೆ ಚರ್ಚಿಸಿ, ಸರ್ಮಪಕ ನಾಮಫ‌ಲಕವಿಲ್ಲದ 600 ಜಂಕ್ಷನ್‌ಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 1,200 ಗುಣಮಟ್ಟದ ಕ್ಯಾಮರಾ, ವೈಪೈ ಮತ್ತು 10 ಬೈಸಿಕಲ್‌ ಶೇರಿಂಗ್‌ ಅಳವಡಿಸುವ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪ ಕಾಣಿಸಿಕೊಂಡಿದ್ದರಿಂದ ಇದನ್ನು ರದ್ದುಪಡಿಸಲಾಗಿದೆ’ಎಂದು ಮಾಹಿತಿ ನೀಡಿದರು.

ಎಲ್ಲ ಎಲ್‌ಡಿಇ ಡಿಸ್‌ಪ್ಲೆ ನಿಷೇಧ: “ನಗರದ ಯಾವುದೇ ಮಾಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಎಲ್‌ಎಡಿಗಳನ್ನು ಅಳವಡಿಸಲು ಅನುಮತಿ ನೀಡಿಲ್ಲ. ಎಲ್‌ಇಡಿ ವ್ಯವಸ್ಥೆ ಅಳವಡಿಸಿಕೊಂಡ ಮಾಲೀಕರ ಮೇಲೆ ಎಫ್ಐಆರ್‌ ದಾಖಲಿಸಲಾಗುವುದು. ನಿರ್ದಾಕ್ಷ್ಯಣವಾಗಿ ಅದನ್ನು ತೆರವುಗೊಳಿಸಲಾಗುವುದು’ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

ಒಂಟಿ ಮನೆ ಯೋಜನೆ ಸದ್ದು: ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ಒಂಟಿ ಮನೆಯೋಜನೆ ಹಲವು ತೊಡಕುಗಳು ಉಂಟಾಗಿರುವ ಬಗ್ಗೆ ಪಾಲಿಕೆಯ ಸರ್ವಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಯೋಜನೆಯ ಚರ್ಚೆ ವೇಳೆ ಪಾಲಿಕೆ ಸದಸ್ಯ ಶಶಿರೇಖಾ. ಎಂ. “ಒಂಟಿ ಮನೆ ಯೋಜನೆ ಸರ್ಮಪಕವಾಗಿ ಅನುಷ್ಠಾನವಾಗುತ್ತಿಲ್ಲ, ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಗದ್ಗಿತರಾದರು.

ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಮಧ್ಯ ಪ್ರವೇಶಿಸುವುದನ್ನು ವಿರೋಧ ಪಕ್ಷದ ಸದಸ್ಯೆ ಶಾಂತಕುಮಾರಿ ವಿರೋಧಿಸಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಹಂತದಲ್ಲಿ ಶಾಂತಕುಮಾರಿ ಅವರು ಆಡಳಿತ ಪಕ್ಷದ ನಾಯಕ ವಾಜೀದ್‌ ಅವರನ್ನು “ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಿದ ಆಯುಕ್ತರು, “ಒಂಟಿ ಮನೆ ಯೋಜನೆಗೆ ಯಾವುದೇ ಕಮಿಟಿಯಿಂದ ಅನುಮತಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲವೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಫ‌ಲಾನುಭವಿಗಳಾಗುವುದಕ್ಕೆ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ಯಾವುದೇ ವ್ಯಕ್ತಿ ಒಂದು ಪ್ರದೇಶದಲ್ಲಿ ಹತ್ತು ವರ್ಷಗಳಿಂದ ವಾಸವಿದ್ದು, ಅದಕ್ಕೆ ನೀರಿನ ಅಥವಾ ವಿದ್ಯುತ್‌ ಶುಲ್ಕದ ಬಿಲ್‌ ತೋರಿಸಿದರೆ ಸಾಕು. ಈ ಯೋಜನೆಯನ್ನು ಸರಳೀಕರಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್‌ ಗಂಗಾಂಬಿಕೆ, ಒಂಟಿ ಮನೆ ಯೋಜನೆಯ ಸಮಸ್ಯೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪಾಲಿಕೆ ಸದಸ್ಯರು ಬಗೆಹರಿಸಿಕೊಳ್ಳಿ ಎಂದರು.

ಪಾಲಿಕೆಯಲ್ಲಿ ಹೊಲಿಗೆ ಯಂತ್ರ!: “ಪಾಲಿಕೆಯಿಂದ ಈಗ ನೀಡಲಾಗುತ್ತಿರುವ ಹೊಲಿಗೆ ಯಂತ್ರಗಳು ಹೆಚ್ಚು ಬಾಳಿಕೆ ಬರುವುದಿಲ್ಲ’ ಎಂದು ಮಾಜಿ ಮೇಯರ್‌ ಶಾಂತಕುಮಾರಿ ಪಾಲಿಕೆ ಸಭೆಗೆ ಹೊಲಿಗೆ ಯಂತ್ರವನ್ನು ತಂದು ತೋರಿಸಿದರು. ಹೊಲಿಗೆ ಯಂತ್ರ ಖಾಸಗಿ ಬಳಕೆಗೆ ಮಾತ್ರ ಯೋಗ್ಯವಾಗಿದೆ. ಇದರಿಂದ ಉದ್ಯೋಗ ನಡೆಸಲು ಸಾಧ್ಯವಿಲ್ಲ. ಉತ್ತಮ ಹೊಲಿಗೆ ಯಂತ್ರ ನೀಡಬೇಕೆಂದು ಒತ್ತಾಯಿಸಿದರು. ಈ ವಿಷಯಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

ಮರಗಳ ಸರ್ವೇ ಬಗ್ಗೆ ವಿವರಣೆ ನೀಡಿ: “ಕಳೆದ ಬಜೆಟ್‌ನಲ್ಲಿ ಮರಗಳ ಬಗ್ಗೆ ಸರ್ವೇ ಮಾಡುವುದಕ್ಕೆ 4 ಕೋಟಿ ರೂ. ಮೀಸಲಿಡಲಾಗಿತ್ತು. ಸರ್ವೇ ಬಗ್ಗೆ ವಿವರಣೆ ನೀಡಬೇಕು’ಎಂದು ಪಾಲಿಕೆ ಸದಸ್ಯ ಗುಣಶೇಖರ್‌ ಒತ್ತಾಯಿಸಿದರು. “ಮರಗಳ ಸರ್ವೇಗೆ ತಜ್ಞರು ಇಲ್ಲದೆ ಇರುವುದರಿಂದ ಇನ್ಸ್‌ಟಿಟ್ಯೂಟ್‌ ಆಫ್ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿನೊಂದಿಗೆ ಚರ್ಚೆ ಮಾಡಲಾಗಿದೆ. ಶ್ರೀಘ್ರದಲ್ಲಿ ಮರಗಳ ಸರ್ವೇ ಪ್ರಾರಂಭವಾಗಲಿದೆ’ ಎಂದು ಎನ್‌ ಮಂಜುನಾಥ್‌ ಪ್ರಸಾದ್‌ ಮಾಹಿತಿ ನೀಡಿದರು.

ಪೂಜ್ಯ ಮಹಾಪೌರರೇ, ಮೆಡಿಕಲ್‌ ನಿಧಿ ಶೀಘ್ರ ಬಿಡುಗಡೆಯಾಗುವಂತೆ ಕ್ರಮವಹಿಸಿ.
-ಶಿವರಾಜು ಮಾಜಿ ಆಡಳಿತ ಪಕ್ಷದ ನಾಯಕ

ಪಾಲಿಕೆ ಸದಸ್ಯರ ವಿವೇಚನಾ ನಿಧಿಯನ್ನು ವಲಯವಾರು ಬಿಡುಗಡೆ ಮಾಡಿಸಿ.
-ಶಾಂತಕುಮಾರಿ, ಮಾಜಿ ಮೇಯರ್‌

ಕೆಂಪೇಗೌಡ ಪ್ರಶಸ್ತಿಯನ್ನು ಪಾಲಿಕೆಯ ಅಧಿಕಾರಿಗಳಿಗೂ ನೀಡಿ.
-ಜಿ.ಕೆ ವೆಂಕಟೇಶ್‌ (ಎನ್‌ಟಿಆರ್‌)

ನಗರದಲ್ಲಿ ಈಗಾಗಲೇ ಎಲ್‌ಇಡಿ ಬಲ್ಪ್ಗಳನ್ನು ಅಳವಡಿಸಲಾಗಿದೆ. ಈಗ ಹೊಸ ಟೆಂಡರ್‌ ಕರೆದಿರುವುದರಿಂದ ಈಗ ಇರುವ ಎಲ್‌ಇಡಿಗಳನ್ನು ಗ್ರಾಮಾಂತರ ಪ್ರದೇಶಕ್ಕೆ ನೀಡಿ.
-ಉಮೇಶ್‌ ಶೆಟ್ಟಿ

ಮಹಾಪೌರರೇ ಬೇಗ ಉತ್ತರ ಕೊಡಿಸಿ, ಊಟಕ್ಕೆ ಹೋಗಬೇಕು!
-ಗುಣಶೇಖರ್‌

ಜಾಹೀರಾತಿನ ವಿಷಯ ಮತ್ತೂಮ್ಮೆ ಚರ್ಚೆಯಾಗಬೇಕಿದೆ. ಈಗ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಸ್ಕೈವಾಕ್‌, ಬಸ್‌ ನಿಲ್ದಾಣ ಮತ್ತು ಶೌಚಾಲಯ ಭಾಗಗಳಲ್ಲಿ ಜಾಹೀರಾತಿಗೆ ಅವಕಾಶ ನೀಡಲಾಗಿದೆ. ದುರುಪಯೋಗವಾಗುವ ಸಾಧ್ಯತೆ ಇದೆ.
-ಅಬ್ದುಲ್‌ ವಾಜೀದ್‌, ಆಡಳಿತ ಪಕ್ಷದ ನಾಯಕ

ಉದ್ದೇಶಪೂರ್ವಕವಾಗಿ ನಿರ್ಣಯ ತೆಗೆದುಕೊಳ್ಳುವುದನ್ನು ಆಡಳಿತ ಪಕ್ಷ ಮುಂದೂಡಿದೆ. ಈ ಬಗ್ಗೆ ಮೇಯರ್‌ ಅವರಿಗೆ ಪತ್ರ ಬರೆಯಲಾಗುವುದು.
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next