ಬೆಂಗಳೂರು: ಕಂಟೈನ್ಮೆಂಟ್ ವಲಯಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು (ಎಸ್ಓಪಿ) ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಹಾಗೂ ಅಲ್ಲಿನ ಜನರಿಗೆ ಆಹಾರ ಪದಾರ್ಥಗಳನ್ನು ಪೂರೈಸುವಲ್ಲಿ ವಿಫಲವಾಗಿರುವ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಕೋವಿಡ್-19 ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರಿಗೆ ನ್ಯಾಯಪೀಠ ಪ್ರಶ್ನೆ-ಉತ್ತರ ರೂಪದಲ್ಲಿ ವಿವರಣೆ ಕೇಳಿತು. ಬಿಬಿಎಂಪಿ ವಕೀಲರಿಂದ ಸಮಾಧಾನಕರ ಉತ್ತರ ಬಾರದೇ ಇರುವುದರಿಂದ ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹಾಗೂ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವ ಪೈಕಿ ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಬಿಬಿಎಂಪಿ ತನ್ನ ಹೊಣೆಗಾರಿಕೆ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಅದ್ದರಿಂದ, ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ತನ್ನದೇ ಆಡಳಿತ ಯಂತ್ರವನ್ನು ಬಳಸಿಕೊಂಡು ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು ಅಲ್ಲಿನ ಜನರಿಗೆ ಆಹಾರ ಪದಾರ್ಥ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿತು. ಇದಕ್ಕೂ ಮೊದಲು ಬಿಬಿಎಂಪಿ ಪರ ವಕೀಲರು, ಕೋವಿಡ್ ಮಾರ್ಗಸೂಚಿಗಳ ನ್ನು ಪಾಲಿಸುವುದು ಪಾಲಿಕೆಯ ಹೊಣೆಗಾರಿಕೆಯಾಗಿದೆ.
ಆದರೆ, ಕಂಟೈನ್ಮೆಂಟ್ ವಲಯಗಳ ಮಾನದಂಡಗಳು ಬದಲಾಗಿವೆ. ನಗರದಲ್ಲಿ ಸದ್ಯ 3 ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ವಲಯಗಳಿವೆ. ವಾರ್ಡ್ ಮಟ್ಟದಲ್ಲಿ ಮಾರ್ಗಸೂಚಿಗಳು ನಿರ್ವಹಣೆ ಆಗುತ್ತಿರುವುದರಿಂದ ವಾರ್ಡ್ಗಳನ್ನು ಗುರುತಿಸಿ, ಅಲ್ಲಿನ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯವಿರುವ ವರು ಯಾರು ಎಂದು ಗುರುತಿಸುವುದು ವಾಲಿನ ಕೆಲಸ. ಆದರೆ, ಕಂಟೈನ್ಮೆಂಟ್ ವಲಯಗಳಲ್ಲಿನ ಪಡಿತರ ಅಂಗಡಿಗಳು ತೆರೆದಿರುತ್ತವೆ.
ಅದಲ್ಲದೇ ಕಂಟೈನ್ಮೆಂಟ್ ಪ್ರದೇಶಗಳ ಜನರಿಗೆ ದಿನ ಬಳಕೆಯ ವಸ್ತುಗಳ ಖರೀದಿಗೆ ಹೋಗಿ-ಬರಲು ಅವಕಾಶವಿದೆ. ಮಾರ್ಗಸೂಚಿಗಳು ನಿಜ ಅರ್ಥದಲ್ಲಿ ಜನರು ಪಾಲಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಕೋಪಗೊಂಡ ನ್ಯಾಯಪೀಠ, ತನ್ನದೇ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಲು ಬಿಎಂಪಿಯಿಂದ ಆಗುತ್ತಿಲ್ಲ. ವಾರ್ಡ್ಗಳನ್ನು ಗುರುತಿಸಬೇಕು ಎಂದು ವಕೀಲರು ಹೇಳುತ್ತಿದ್ದಾರೆ. ಇದೇರೀತಿಯಾದರೆ ಮುಂದಿನ ಪರಿಸ್ಥಿತಿ ಹೇಗೆ ಎಂದು ಬಿಬಿಎಂಪಿಗೆ ತಾಕೀತು ಮಾಡಿದ ಪಾಲಿಕೆ, ಸರ್ಕಾರ ಮಾರ್ಗಸೂಚಿಗಳನ್ನು ವಾರ್ಡ್ಗಳಿಗೆ ಪಾಲಿಸುವಂತೆ ಸೂಚಿಸಿತು.
900 ಕುಟುಂಬಗಳಿಗೆ ಆಹಾರ ಪೂರೈಸಿ: ವಾರ್ಡ್ಗಳಿರುವುದು ಬಿಬಿಎಂಪಿ ವ್ಯಾಪ್ತಿಯಲ್ಲಿಯೆ ಹೊರತು ವಿದೇಶದಲ್ಲಿ ಅಲ್ಲ. ಅರ್ಜಿದಾರರು ಕೊಟ್ಟಿರುವ 900 ಕುಟುಂಬಗಳಿಗೆ ಈವರೆಗೆ ಆಹಾರ ಪದಾರ್ಥಕೊಟ್ಟಿಲ್ಲ. ಪ್ರತಿಯೊಂದಕ್ಕೂ ಬಿಬಿಎಂಪಿ ನೆಪ ಹೇಳುವುದು, ಹೊಣೆಗಾರಿಕೆಯಿಂದ ಜಾರಿ ಕೊಳ್ಳುವುದು ಮಾಡುತ್ತಿದೆ. ಕಂಟೈನ್ಮೆಂಟ್ ವಲಯಗಳ ಜನರ ಹೊರಗಡೆ ಹೋಗಿ ಬರಲು ಅವಕಾಶವಿದೆ ಎಂದಾದರೆ, ಈಗಾಗಲೇ ಪಾಸಿಟಿವ್ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತಕಾರಿ ಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಬೇಕು. ಅರ್ಜಿದಾರರು ಕೊಟ್ಟಿರುವ 900 ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು.