Advertisement

ಗುಮ್ಮಟದಲ್ಲಿ ಬ್ಯಾಟರಿ ಚಾಲಿತ ವಾಹನ ಸೇವೆ

01:59 PM Oct 07, 2019 | Suhan S |

ವಿಜಯಪುರ: ಐತಿಹಾಸಿಕ ಗೋಲಗುಮ್ಮಟ ವೀಕ್ಷಣೆಗೆ ಬರುವ ವೃದ್ಧರು, ದೈಹಿಕ ದುರ್ಬಲರು, ವಿಕಲಚೇತನರಂಥ ಪ್ರವಾಸಿಗರನ್ನು ಗೋಲಗುಮ್ಮಟ ಆವರಣದ ಮುಂಭಾಗದವರೆಗೆ ಹೋಗುವಂತೆ ನೆರವಾಗಲು ಸರ್ಕಾರ ಬ್ಯಾಟರಿ ಚಾಲಿತ ವಾಹನಗಳನ್ನು ಒದಿಸಿದ್ದು ಉತ್ತಮ ಸೇವೆ ನೀಡುತ್ತಿವೆ.

Advertisement

ಪರಿಸರ ಸ್ನೇಹಿಯಾಗಿರುವ ಈ ವಾಹನ ಸೇವೆ ವಿಜಯಪುರ ಗೋಲಗುಮ್ಮಟ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ವಿಶಿಷ್ಟ ಅನುಭವನ್ನೂ ನೀಡುತ್ತಿದೆ. ಗೋಲಗುಮ್ಮಟ ಪ್ರವೇಶ ದ್ವಾರದಿಂದ ಗುಮ್ಮಟ ಆವರಣದವರೆಗೆ ನಡೆದುಕೊಂಡು ಹೋಗಲು ವೃದ್ಧರು, ವಿಕಲಚೇತನರಿಗೆ ಸಾಧ್ಯವಿಲ್ಲ. ಏಳು ಅಂತಸ್ತಿತ ವಿಶಾಲವಾಗಿರುವ ಗೋಲಗುಮ್ಮಟವನ್ನು ದೈಹಿಕ ನ್ಯೂನ್ಯತೆ ಇರುವ ಹಾಗೂ ವೃದ್ಧರಿಂದ ಏರಲು ಅಸಾಧ್ಯವಾದರೂ ಗುಮ್ಮಟವನ್ನು ಕೆಳಭಾಗದಿಂದ ಹತ್ತಿರದಲ್ಲೇ ನಿಂತು ನೋಡುವ ಅವಕಾಶ ಮಾಡಿಕೊಡಲು ಸರ್ಕಾರ ಈ ಉಚಿತ ಸೇವೆ ನೀಡುತ್ತಿದೆ.

ಜಿಲ್ಲೆಯ ಪ್ರವಾಸಕ್ಕೆ ಬರುವ ಅದರಲ್ಲೂ ಗೋಲಗುಮ್ಮಟ ಹಾಗೂ ಇಬ್ರಾಹೀಂ ರೋಜಾ ಸ್ಮಾರಕ ವೀಕ್ಷಣೆಗೆ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಇರುತ್ತಾರೆ. ಹೀಗೆ ಬರುವ ಪ್ರವಾಸಿಗರಲ್ಲಿ ಕೆಲವರು ವೃದ್ಧರು, ವಿಕಲಚೇತನರು ಇರುತ್ತಾರೆ. ದೈಹಿಕವಾಗಿ ಅಸಹಾಯಕರಾಗಿರುವ ಇಂಥ ಜನರಿಗೆ ಸ್ಮಾರಕಗಳನ್ನು ಹತ್ತಲು ಸಾಧ್ಯವಿಲ್ಲದೇ ಬೇಸರದಿಂದ ನೊಂದುಕೊಳ್ಳುತ್ತಿದ್ದರು. ಇದನ್ನು ಮನಗಂಡ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗೋಲಗುಮ್ಮಟ, ಇಬ್ರಾಹೀಂ ರೋಜಾ ಸ್ಮಾರಕಗಳನ್ನು ಹತ್ತಿ ಇಳಿಯುವುದಕ್ಕೆ ಸಾಧ್ಯವಿಲ್ಲದಿದ್ದರೂ ಹತ್ತಿರದಿಂದ ನೋಡುವುದಕ್ಕೆ ಅವಕಾಶ ಕಲ್ಪಿಸಲು ಯೋಚಿಸಿತ್ತು.

ದೇಶ-ವಿದೇಶಗಳ ಪ್ರವಾಸಿ ತಾಣಗಳಲ್ಲಿ ದೈಹಿಕ ದುರ್ಬಲರಿಗೆ ಬ್ಯಾಟರಿ ಚಾಲಿತ ವಾಹನಗಳು ಕಾರ್ಯಾಚರಣೆ ಮಾಡುತ್ತಿರುವ ಅಂಶವನ್ನು ಅಧ್ಯಯನ ಮಾಡಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ವಿಜಯಪುರ ಪ್ರವಾಸಿ ತಾಣದಲ್ಲೂ ಈ ಸೇವೆ ನೀಡಲು ಮುಂದಾದರು. ಪ್ರತಿ ವಾಹನದಲ್ಲಿ 11-14 ಜನರು ಪ್ರಯಾಣಿಸಲು ಅವಕಾಶ ಇದ್ದು, ಯಾವುದೇ ಅಪಾಯವಿಲ್ಲದ ಹಾಗೂ ಸುಲಭ ಪ್ರಯಾಣ ಮಾಡಬಹುದಾದ ಈ ವಾಹನ ಪ್ರವಾಸಿಗರನ್ನು ಆಕರ್ಷಿಸುವಲ್ಲಿಯೂ ಯಶಸ್ವಿಯಾಗಿರುವುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಂಡಿದ್ದರು.

ಎರಡು ಬಾರಿ ಅನುದಾನ: ಇದರ ಫ‌ಲವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯ ಕಚೇರಿಗೆ ಬ್ಯಾಟರಿ ಚಾಲಿತ 3 ವಾಹನಗಳನ್ನು ನೀಡಲಾಗಿದೆ. 8,43,889 ರೂ.ಗೆ ಒಂದರಂತೆ ಬ್ಯಾಟರಿ ಚಾಲಿತ 2 ವಾಹನಗಳ ಖರೀದಿಗೆ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ 2012 ಸೆಪ್ಟೆಂಬರ್‌ 15ರಂದು ಪ್ರವಾಸೋದ್ಯಮ ಇಲಾಖೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 14 ಸೀಟುಗಳ 2 ವಾಹನ ಖರೀದಿಗೆ 16,87,778 ರೂ. ಅನುದಾನ ಬಿಡುಗಡೆ ಮಂಜೂರಾತಿ ನೀಡಿತ್ತು.

Advertisement

ಇದಾದ ಬಳಿಕ ಅನುದಾನ ಬಿಡುಗಡೆ ಹಾಗೂ ಬಳಕೆಯಲ್ಲಿ ವಿಳಂಬವಾದ ಕಾರಣ ಬ್ಯಾಟರಿ ಚಾಲಿತ ವಾಹನ ಖರೀದಿ ಆಗಲೇ ಇಲ್ಲ. ಇದಾದ ಬಳಿಕ 2013 ಮಾರ್ಚ್‌ 7ರಂದು ಆರ್ಥಿಕ ವರ್ಷದ ಕೊನೆಯಲ್ಲಿ ಹಿಂದಿನ ಅನುದಾನ ಸೇರಿ

ಒಟ್ಟು ಬ್ಯಾಟರಿ ಚಾಲಿತ 3 ವಾಹಗನಳ ಖರೀದಿಗೆ ಮಂಜೂರಾತಿ ನೀಡಿತು. 11 ಸೀಟುಗಳ ಬ್ಯಾಟರಿ ಚಾಲಿತ ವಾಹನಗಳನ್ನು ತಲಾ ಒಂದಕ್ಕೆ 7,64,956 ರೂ.ಗಳಂತೆ 22,94,868 ರೂ. ಅನುದಾನ ನೀಡಿತು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ಅಧೀಕ್ಷಕರಿಗೆ ಮಾಹಿತಿ ನೀಡಿತ್ತು.

ವಾಹನದ ವೈಶಿಷ್ಟ್ಯ: ಬ್ಯಾಟರಿ ಚಾಲಿತ ಈ ವಾಹನದಲ್ಲಿ 14 ಜನರು ಕುಳಿತುಕೊಳ್ಳಲು ಅವಕಾಶವಿದ್ದು, ಹೆಚ್ಚಿನ ವೇಗ ಇರುವುದಿಲ್ಲ. ನಿಗದಿತ ಕಡಿಮೆ ಅಂತರದಲ್ಲಿ ಸುಲಭವಾಗಿ ಈ ವಾಹನವನ್ನು ಓಡಿಸಲು ಸಾಧ್ಯವಿದ್ದು ಪ್ರವಾಸಿ ತಾಣಗಳಲ್ಲಿ ಈ ವಾಹನ ಹೆಚ್ಚು ಬಳಕೆ ಹಾಗೂ ಜನಪ್ರೀಯತೆ ಹೊಂದಿದೆ. ಈ ವಾಹನಕ್ಕೆ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ನಂಥ ಯಾವ ಇಂಧನದ ಅಗತ್ಯವೂ ಇಲ್ಲ. ಕೇವಲ ವಿದ್ಯುತ್‌ ಸಂಪರ್ಕದ ಮೂಲಕ ಬ್ಯಾಟರಿಗಳನ್ನು ಚಾರ್ಜ್‌ ಮಾಡಿ ಅಳವಡಿಸಿದರೆ ಸಾಕು. ಇದರಿಂದ ಸ್ಮಾರಕ ಆವರಣದಲ್ಲಿ ವಾಹನ ಶಬ್ದ ಮಾಲಿನ್ಯವಿಲ್ಲ, ಇಂಧನ ಬಳಕೆ ಇಲ್ಲದ ಕಾರಣಕ್ಕೆ ವಾಯು ಮಾಲಿನ್ಯವೂ ಇಲ್ಲ.

ತುಕ್ಕು ಹಿಡಿದ್ದಿದ ವಾಹನ: ಪರಿಣಾಮ ಬಳಿಕ 2013ರಲ್ಲಿ ಬ್ಯಾಟರಿ ಚಾಲಿತ 3 ವಾಹನಗಳು ಗೋಲಗುಮ್ಮಟ ಆವರಣಕ್ಕೆ ಬಂದಿದ್ದು ಚಾಲಕರಿಲ್ಲ ಎಂಬ ಕಾರಣಕ್ಕೆ ಆರಂಭಿಸಿರಲೇ ಇಲ್ಲ. ಚಾಲಕರಿಲ್ಲ ಎಂಬ ಒಂದೇ ಕಾರಣಕ್ಕೆ ಬ್ಯಾಟರಿ ಚಾಲಿತ ವಾಹನಗಳು ಬಳಕೆ ಇಲ್ಲದೇ ತುಕ್ಕು ಹಿಡಿಯಲು ಆರಂಭಿಸಿದ್ದವು. ಇದನ್ನು ಗಮನಿಸಿದ ಉದಯವಾಣಿ ಪತ್ರಿಕೆ ಆಗಲೂ ಈ ಕುರಿತು ವಿಶೇಷ ವರದಿಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಲೇ ಭಾರತೀಯ ಪುರಾತತ್ವ ಇಲಾಖೆ ಇದು ಪ್ರವಾಸೋದ್ಯಮ ಇಲಾಖೆಯ ಸೇವೆ ಆಗಿರುವುದರಿಂದ ಚಾಲಕರನ್ನು ಒದಗಿಸಬೇಕು ಎಂದು ವಾದ ಮಾಡಿತು. ಇತ್ತ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಹಸ್ತಾಂತರಿಸಿರುವ ಕಾರಣ ಇದರ ಚಾಲನೆ ಹಾಗೂ ನಿರ್ವಹಣೆ ಎಎಸ್‌ಐ ಅಧಿಕಾರಿಗಳಿಗೆ ಸೇರಿದ್ದು ಎಂದು ವಾದಿಸಿದ್ದರು.  ಅಂತಿಮವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ತಮ್ಮ ಸ್ಮಾರಕಗಳ ಕಾವಲಿಗೆ ಇರುವ ಹೊರ ಗುತ್ತಿಗೆ ನೌಕರರನ್ನು ಬಳಸಿಕೊಂಡು ಬ್ಯಾಟರಿ ಚಾಲಿತ ವಾಹನ ಸೇವೆಯನ್ನು ಆರಂಭಿಸಿತ್ತು.

ಉಚಿತ ಸೇವೆ: ವೃದ್ಧರು, ಅಸಹಾಯಕರು, ವಿಕಲಚೇತನರು ಸೇರಿದಂತೆ ಎಲ್ಲರಿಗೂ ಈ ಸೇವೆ ಸಿಗುತ್ತಿದೆ. ಆದರೆ ವಿಕಲಚೇತರಿಗೆ ವಿಶೇಷ ಆದ್ಯತೆ ಇದೆ. ಪ್ರವಾಸಿಗರಿಗೆ ಗೋಲಗುಮ್ಮಟ ಪ್ರವೇಶ ದ್ವಾರದಿಂದ ಸ್ಮಾರಕದ ಆವರಣದ ವರೆಗೆ ಈ ವಾಹನ ಸೇವೆ ನೀಡಲಾಗುತ್ತಿದೆ. ಬ್ಯಾಟರಿ ಚಾಲಿತ ವಾಹನ ಸೇವೆ ಪಡೆಯುವ ಪ್ರವಾಸಿಗರು ಶುಲ್ಕ ತೆರಬೇಕಿಲ್ಲ. ಏಕೆಂದರೆ ಈ ಸೇವೆ ಸಂಪೂರ್ಣ ಉಚಿತವಾಗಿದೆ. ಕಳೆದ ಸುಮಾರು 3 ವರ್ಷಗಳಿಂದ ಬ್ಯಾಟರಿ ಚಾಲಿತ ವಾಹನಗಳು ಪ್ರವಾಸಿಗರಿಗೆ ಸೇವೆ ನೀಡುತ್ತಿವೆ. 3

ವಾಹನಗಳಲ್ಲಿ 2 ವಾಹನಗಳು ಮಾತ್ರ ಸೇವೆ ನೀಡುತ್ತಿವೆ. ಸೇವೆ ನೀಡುತ್ತಿರುವ ಎರಡು ವಾಹನಗಳಲ್ಲಿ ನಿತ್ಯವೂ ಕನಿಷ್ಠ ಒಂದು ವಾಹನ 20-25 ಬಾರಿ ಗೋಲಗುಮ್ಮಟ ಪ್ರವೇಶ ದ್ವಾರದಿಂದ ಸ್ಮಾರಕ ಮುಂಭಾಗದ ಆವರಣದವರೆಗೆ ಓಡಾಡುತ್ತದೆ. ಎರಡೂ ವಾಹನಗಳು ನಿತ್ಯವೂ ಸುಮಾರು 500 ಪ್ರವಾಸಿಗರಿಗೆ ಉಚಿತ ಸೇವೆ ನೀಡುತ್ತಿವೆ. ಚಾಲಕರಿಲ್ಲದೇ ಒಂದು ವಾಹನ ಗೋಲಗುಮ್ಮಟ ಮುಂಭಾಗದಲ್ಲಿರುವ ಐತಿಹಾಸಿಕ ವಸ್ತು ಸಂಗ್ರಹಾಲಯದ ನಕ್ಕರಖಾನಾ ಸ್ಮಾರಕದ ಹಿಂಭಾಗದಲ್ಲಿ ಬಳಕೆ ಇಲ್ಲದೇ ನಿಂತಿದೆ. ವಾಹನ ಸೌಲಭ್ಯ ನೀಡಿರುವ ಪ್ರವಾಸೋದ್ಯಮ ಇಲಾಖೆ ಅಥವಾ ಪ್ರವಾಸಿಗರಿಗೆ ವಾಹನ ಸೇವೆ ನೀಡುತ್ತಿರುವ ಭಾರತೀಯ ಪುರಾತ್ತವ ಸರ್ವೇಕ್ಷಣಾ ಇಲಾಖೆ ಕನಿಷ್ಠ ಇಬ್ಬರು ಚಾಲಕರನ್ನು ಪೂರ್ಣ ಪ್ರಮಾಣದಲ್ಲಿ ನೀಡಿದರೆ 3 ವಾಹನಗಳು ಪ್ರವಾಸಿಗರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಪ್ರವಾಸಿಗರು ಆಗ್ರಹಿಸುತ್ತಿದ್ದಾರೆ.

 

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next