Advertisement

ನಾಳೆ ಐತಿಹಾಸಿಕ ಕೊತ್ತಲ ಬಸವೇಶ್ವರ ರಥೋತ್ಸವ

12:17 PM Apr 30, 2019 | pallavi |

ಸೇಡಂ: ಹೈದ್ರಾಬಾದ್‌-ಕರ್ನಾಟಕ ಭಾಗದಲ್ಲಿ ಪ್ರಸಿದ್ಧ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ಈಗಾಗಲೇ ಆರಂಭವಾಗಿದ್ದು, ಮೇ 1ರಂದು ರಥೋತ್ಸವ ಜರುಗಲಿದೆ.

Advertisement

ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಅಂದು ಬೆಳಗ್ಗೆ 8:05ಕ್ಕೆ ಅಗ್ನಿ ಪ್ರವೇಶ, ಸಂಜೆ 5:45ಕ್ಕೆ ರಥೋತ್ಸವ ಜರುಗಲಿದೆ. ಮೇ 1,2,3ರಂದು ರಾತ್ರಿ 10ಕ್ಕೆ ಮೂರು ದಿನಗಳ ಕಾಲ ಸಪ್ಪಣ್ಣಾರ್ಯರ ಜೀವನ ಚರಿತ್ರೆಯ ಸದ್ಭಾವನಾ ಮೂರ್ತಿ ಸಪ್ಪಣಾರ್ಯರು ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತರಿಗೆ ವಿಶೇಷವಾಗಿ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿದೆ.

ಏ.27ರಿಂದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮೇ 7ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಮಿಕ ವರ್ಗದಲ್ಲಿ ದುಡಿದು ಸಾಧನೆಗೈದ ಶಿವಶರಣಪ್ಪ ಕಲ್ಯಾಣಿ, ಶಿವಪುತ್ರಪ್ಪ ಪೂಜಾರಿ, ಸುಭಾಷ ಮಿಟ್ಟಿ, ದೇವಣ್ಣ ಮುನ್ನೂರ, ತಿಪ್ಪಣ್ಣ ಇದಲಾಯಿ, ಬಸವರಾಜ ಕೊಳ್ಳಿ, ಕಮಲಾಬಾಯಿ, ಕಾಶಮ್ಮ ಇಂಜಳ್ಳಿ, ನಾಗಮ್ಮ ಉಡಗಿ, ಶಿವರಾಯ ಮೈಲ್ವಾರ, ಪಾರ್ವತಮ್ಮ ಒಟ್ಟು 11 ಜನರಿಗೆ ಕಾರ್ಮಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಶಿವಶಂಕರ ಮಠದ ಪೂಜ್ಯ ಷ.ಬ್ರ ಶಿವಶಂಕರ ಶಿವಾಚಾರ್ಯರು, ಮಹಾಂತೇಶ್ವರ ಮಠದ ಡಾ| ತ್ರಿಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಬೆಳಗುಂಪಾ ಬ್ರಹ್ಮನ ಮಠದ ಅಭಿನವ ಚರಂತೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ.

ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಮ್‌, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಒಳಗೊಂಡು ಅನೇಕರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಸಿದ್ಧ ದೇವಾಲಯ

ಕಂಟಿ ಕಮರಿಗಳಲ್ಲಿ, ಕಗ್ಗತ್ತಲಲ್ಲಿ ಮರೆಯಾಗಿದ್ದ ಕೊತ್ತಲ ಬಸವೇಶ್ವರ ದೇವರನ್ನು ಪರಿಚಯಿಸಲು ಅವತರಿಸಿದ ದೈವಿ ಪುರುಷ ಪೂಜ್ಯ ಸಪ್ಪಣ್ಣಾರ್ಯರಿಂದ ದೇವಾಲಯ ಹೊರ ಜಗತ್ತಿಗೆ ಪರಿಚಯವಾಯಿತು. ನಂತರದಲ್ಲಿ ಬಂದ ಮಡಿವಾಳಯ್ಯ ಸ್ವಾಮಿಗಳು ಅಕ್ಷರ, ಅನ್ನ ದಾಸೋಹದ ಮೂಲಕ ಇಂದಿಗೂ ಸಹ ಭಕ್ತರ ಪಾಲಿನ ಆರಾಧ್ಯ ಶಕ್ತಿಯಾಗಿ ಕೊತ್ತಲ ಬಸವೇಶ್ವರ ಬೆಳಗುವಂತೆ ಮಾಡಿದ್ದರು. ಈಗಿನ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹಿರಿಯ ಶ್ರೀಗಳ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಕೊತ್ತಲ ಬಸವೇಶ್ವರ ದೇವಾಲಯ ಶತಮಾನಗಳ ಇತಿಹಾಸ ಹೊಂದಿದೆ. ಪ್ರತಿ ವರ್ಷ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ 11 ಜನ ಕಾರ್ಮಿಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿಯ ಜಾತ್ರೆಯ ಹಲವು ವಿಭಿನ್ನತೆಗಳನ್ನು ಒಳಗೊಂಡಿರುವುದು ಸಂತಸ ತಂದಿದೆ.
•ಚಂದ್ರಶೆಟ್ಟಿ ಬಂಗಾರ, ಅಖೀಲ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ
Advertisement
Advertisement

Udayavani is now on Telegram. Click here to join our channel and stay updated with the latest news.

Next