Advertisement

ಇಂದು ದೊಡ್ಡ ಬಸವೇಶ್ವರ ದೇವರ ರಥೋತ್ಸವ

04:53 PM Mar 18, 2022 | Team Udayavani |

ಕುರುಗೋಡು: ವಿಶ್ವವಿಖ್ಯಾತ ಹಂಪಿಯಲ್ಲಿರುವ ವಿರೂಪಾಕ್ಷ ಸ್ವಾಮಿಗೆ ಎದುರು ಬಸವಣ್ಣ ಎಂದೇ ಪ್ರತೀತಿ ಪಡೆದಿರುವ ಕುರುಗೋಡು ದೊಡ್ಡಬಸವೇಶ್ವರ ದೇವರ ರಥೋತ್ಸವ ಮಾ. 18ರಂದು ಅದ್ಧೂರಿಯಾಗಿ ನೆರವೇರಲಿದೆ.

Advertisement

ದಕ್ಷಿಣ ಭಾಗದ ರಾಜ್ಯದಲ್ಲಿ ಅಪರೂಪವಾಗಿರುವ ಏಕ ಶಿಲೆಯ ಬೃಹತ್‌ ನಂದಿ ವಿಗ್ರಹ ಇದಾಗಿದ್ದು, ಕಿರಿದಾದ ಕೋಡುಗಳಿವೆ. ಹೀಗಾಗಿ ಈ ಊರಿಗೆ ಆಡುಮಾತಿನಲ್ಲಿ ಕುರುಗೋಡು ಎಂಬ ಹೆಸರು ಬಂತು ಎನ್ನಲಾಗುತ್ತದೆ. ಪ್ರತಿವರ್ಷ ಮಾರ್ಚ್‌ ತಿಂಗಳ ಹೋಳಿ ಹುಣ್ಣಿಮೆ ದಿನ ದೊಡ್ಡಬಸವೇಶ್ವರ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮದಿಂದ ಬರುವ ಭಕ್ತರು ಚಕ್ಕಡಿ, ಟ್ರಾಕ್ಟರ್‌, ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಾರೆ.

ಶಿವರಾತ್ರಿಯಿಂದಲೇ ಈ ರಥೋತ್ಸವದ ತಯಾರಿ ಆರಂಭಗೊಳ್ಳುತ್ತದೆ. ದೇವಸ್ಥಾನದ ಮತ್ತು ರಥ ನಿರ್ಮಾಣದ ಕಾರ್ಯಗಳಲ್ಲಿ ಗ್ರಾಮಸ್ಥರು ತಮ್ಮದೇಯಾದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪಕ್ಕದ ಕೆರೆಕೆರೆ, ಮುಷ್ಟಗಟ್ಟೆ, ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ಜಾತ್ರೆ ಹಿಂದಿನ ದಿನದಿಂದಲೇ ಉಪವಾಸವಿದ್ದು ಬೆಳಗ್ಗೆ ಎದ್ದು ಶ್ರದ್ಧಾ ಭಕ್ತಿಯಿಂದ ಬರಿಗಾಲಿನಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ಬಂದು ಧೂಳುಗಾಯಿ ಒಡೆದು ಕುಂಭವನ್ನು ಮೆರವಣಿಗೆ ಯಲ್ಲಿ ತಂದು ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡುವುದು ಇಲ್ಲಿನ ಪದ್ಧತಿ. ಹಿರಿಯರ ಪ್ರಕಾರ ತಿಂಗಳ ಪರ್ಯಂತ ನಡೆಯುತ್ತಿದ್ದ ರಥೋತ್ಸವ ದಿನಗಳಿಗೆ ಸೀಮಿತವಾಗಿದೆ.

ಪ್ರತಿವರ್ಷ ಶಿವರಾತ್ರಿಯಂದು ರಥದ ಗಡ್ಡೆಯನ್ನು ಹೊರ ತೆಗೆಯಲಾಗುತ್ತದೆ. ನಂತರ ಸುಮಾರು 60 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ರಥವನ್ನು ಕಟ್ಟಿ ಬಣ್ಣಬಣ್ಣದ ಬಟ್ಟೆ, ಹೂವು, ಕಾಗದ, ಗೊಂಬೆ ಮತ್ತು ತಳಿರುತೋರಣಗಳಿಂದ ಸಿಂಗರಿಸುತ್ತಾರೆ. ರಥೋತ್ಸವ ನಡೆಯುವ 8 ದಿನಗಳ ಮುಂಚೆ ದೊಡ್ಡಬಸವೇಶ್ವರ ಮತ್ತು ನೀಲಮ್ಮನಿಗೆ ಕಂಕಣ ಕಟ್ಟುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ. ಇತಿಹಾಸ: ಸಿಂದಿಗೇರಿ ಮೂಲದ ಶರಣೆ ನೀಲಮ್ಮ ದೊಡ್ಡಬಸವೇಶ್ವರನ ಪರಮ ಭಕ್ತೆಯಾಗಿದ್ದ ಸಿಂದಿಗೇರಿಯಲ್ಲಿ ಮಾಯವಾಗಿ ಕುರುಗೋಡಿನಲ್ಲಿರುತ್ತಿದ್ದಳಂತೆ ಎಂಬುವುದನ್ನು ಕೆಲ ಹಿರಿಯ ತಲೆಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಸಿಂದಿಗೇರಿಯ ಲಿಂಗಾಯತ ಸಮುದಾಯದ ಲಾಳಗೊಂಡರ ಕುಟುಂಬದ ಕೆಂಚಮ್ಮ (ನಿಲ್ಲಮ್ಮನ ಮೊದಲ ಹೆಸರು) ಬಾಲ್ಯದಿಂದಲೂ ಪರಮ ದೈವಭಕ್ತೆ. ಒಮ್ಮೆ ಹತ್ತಿ ಹೊಲದಲ್ಲಿ ಬೃಹದಾಕಾರದ ಬಸವಣ್ಣನ ಮೂರ್ತಿಯನ್ನು ನೋಡಿ ಪುರಾಣಗಳಲ್ಲಿ ಕೇಳುತ್ತಿದ್ದ ಬಸವಣ್ಣನೇ ಈತನೆಂದು ಗ್ರಹಿಸಿ ಇದನ್ನು ಯೋಗದ ಮೂಲಕ ಅರಿಯಲು ಯೋಗ ಸಾಧನೆಯಲ್ಲಿ ತೊಡಗುತ್ತಾಳೆ. ಬಸವೇಶ್ವರ ನನ್ನ ಪತಿ ಕುರುಗೋಡಿನಲ್ಲಿಯೇ ನನ್ನ ವಾಸ ಎಂದು ವಾದಿಸಿ ಕುರುಗೋಡಿನಲ್ಲಿಯೇ ನೆಲೆ ನಿಲ್ಲುತ್ತಾಳೆ. ಕಾಲ ಕಳೆದಂತೆ ತಪೋನಿಷ್ಟೆವಹಿಸಿ ಅಧಿಕಾರವನ್ನು ಪಡೆದು ಅಂತರ್ಧಾನಳಾಗುತ್ತಾಳೆ.

Advertisement

ಹೇಮಕೂಟ ಪೀಠದ ದ್ವೀತಿಯ ಶಂಭು ಎನಿಸಿದ ಕಪ್ಪಿನ ಚನ್ನಬಸವ ಮಹಾಸ್ವಾಮಿಗಳು ಈಕೆಯ ಯೋಗ ವ್ಯಕ್ತಿತ್ವ ಅರಿತು ಇಷ್ಟಲಿಂಗ ಸಂಸ್ಕಾರ ನೀಡಿ ದೊಡ್ಡಬಸವೇಶ್ವರನ ಹಿಂದೆ ಇದ್ದ ಬೇವಿನ ಮರದಡಿಯಲ್ಲಿ ಪೂಜಾ ಆಚರಣೆಗಳಿಗೆ ಅನುಕೂಲ ಮಾಡಿಕೊಟ್ಟು ಕೆಂಚ್ಚಮ್ಮನಿಗೆ ನೀಲಮ್ಮ ಎಂದು ಪುನರ್‌ ನಾಮಾಕರಣ ಮಾಡಿದರಂತೆ. ಇವರು ರಥೋತ್ಸವದಲ್ಲಿ ದೊಡ್ಡಬಸವೇಶ್ವರರ ಜೊತೆ ನೀಲಮ್ಮನ ಇರುವಿಕೆಯನ್ನು ರೂಢಿಗೆ ತಂದರಂತೆ ಎಂದು ಇತಿಹಾಸ ಲೇಖಕ ಡಾ| ಕೆ.ಎಂ. ಮೈತ್ರಿ ಹಾಗೂ ಡಾ| ಮೃತುಂಜಯ ರುಮಾಲೆ ಬರೆದಿರುವ “ಕುರುಗೋಡು ನೀಲಮ್ಮನವರ ಸಾಂಸ್ಕೃತಿಕ ಅಧ್ಯಯನ’ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next