Advertisement

Basaveshwar District; ಅನಗತ್ಯ ಗಿಮಿಕ್ ಬೇಡ : ಸಚಿವ ಶಿವಾನಂದ ಪಾಟೀಲ್ ಕಿಡಿ

10:59 PM Oct 28, 2023 | Team Udayavani |

ವಿಜಯಪುರ : ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಷಯದಲ್ಲಿ ಅನಗತ್ಯವಾಗಿ ಯಾರೂ ಗಿಮಿಕ್ ಮಾಡುವುದು ಬೇಡ. ಚುನಾವಣೆ ಹೊಸ್ತಿಲಲ್ಲಿ ಇಂಥ ನಡೆ ರಾಜಕೀಯ ಅಭಾಸ ಎನಿಸಲಿದೆ. ವಿಜಯಪುರ ಜಿಲ್ಲೆ ಬಸವೇಶ್ವರರ ತವರು ಜಿಲ್ಲೆ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇರಲಿ, ಬಸವೇಶ್ವರರ ಜನ್ಮಭೂಮಿ ಅಭಿವೃದ್ಧಿ ವಿಷಯದಲ್ಲಿ ನೈಜ ಕಾಳಜಿ ತೋರುತ್ತಿಲ್ಲ. ನಾವೇ ಶಾಸಕರು, ಸಚಿವರೆ ಸರ್ಕಾರದೊಂದಿಗೆ ಜಗಳಕ್ಕಿಳಿದು ಅಭಿವೃದ್ಧಿಗೆ ಅನುದಾನ ತರುವ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಪರಿವರ್ತನೆ ಮೂಲಕ ಬಸವಣ್ಣ ವಿಶ್ವಗುರು ಎನಿಸಿದ್ದಾರೆ. ಕೇವಲ ಅವರ ಬಸವೇಶ್ವರರ ನಾಮಕರಣದಿಂದ ಹಿರಿಮೆ, ಗರಿಮೆ ಹೆಚ್ಚಳವಾಗಲಿ, ಜಗತ್ತಿಗೆ ಬಸವಣ್ಣನನ್ನು ಪರಿಚಯಿಸುತ್ತೇವೆ ಎಂಬುದಾಗಲಿ ಕಷ್ಟದ ಕೆಲಸ ಎಂದರು.

ಬಸವೇಶ್ವರರು ಮಾಡಿರುವ ಕೆಲಸ, ನೀಡಿರುವ ಸಂದೇಶಗಳು, ಬಿಟ್ಟುಹೋಗಿರುವ ಕುರುಹುಗಳು ಸಮಾಜಕ್ಕೆ ತಿಳಿಯಬೇಕಿದೆ, ಜನ್ಮಭೂಮಿ ಬಸವನಬಾಗೇವಾಡಿ, ಐಕ್ಯಸ್ಥಳ ಕೂಡಲಸಂಗಮ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಮೊದಲು ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ನಾನು ಕೂಡ ಬಸವಣ್ಣನ ಅಭಿಮಾನಿ, ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ರೆ ಅದು ಸಾಧನೆ ಅಲ್ಲ. ಯಾರೇ ಮುಖ್ಯಮಂತ್ರಿ ಇರಲಿ ಅಧಿಕಾರ, ಅವಕಾಶ ಇದ್ದಾಗ ಬಸವ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಕಾಳಜಿ ತೋರಬೇಕು ಎಂದರು.

Advertisement

ಹೀಗಾಗಿ ವಿಜಯಪುರ ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣದಿಂದ ವಿಶೇಷ ಏನೂ ಬದಲಾವಣೆ ಆಗದು. ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣ ಮಾಡಿದ ಮೇಲೆ ಕರೆಯುವುದೂ ಕಷ್ಟವಾಗುತ್ತದೆ ಎಂದರು.

ರಾಜ್ಯಕ್ಕೆ ಬಸವನಾಡು ಎಂದು ಹೆಸರಿಡುವ ವಿಚಾರಕ್ಕೂ ಸಹಮತ ವ್ಯಕ್ತಪಡಿಸದ ಸಚಿವ ಶಿವಾನಂದ,
ಇದು ಸ್ತ್ಯೂಕ್ತ ವಿಚಾರವೇ ಅಲ್ಲ. ರಾಜಕೀಯ ಗಿಮಿಕ್ ಗಾಗಿ ಇಂಥ ನಡೆ ಅನುಸರಿಸುವುದು ಸರಿಯಾದ ಕ್ರಮವಲ್ಲ ಎಂದರು.

ಮಹಾನ್ ಸಂತರನ್ನು ಮಹಾಪುರುಷರನ್ನು ರಾಷ್ಟ್ರೀಯ ದೃಷ್ಠಿಕೋನದಿಂದ ನೋಡಬೇಕೇ ಹೊರತು ರಾಜಕೀಯ ದೃಷ್ಠಿಕೋನದಿಂದಲ್ಲ ಎಂದರು.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇಂಥ ವಿಷಯ ಪ್ರಸ್ತಾಪಿಸುವುದೇ ಸರಿಯಲ್ಲ. ಆ ರೀತಿ ಮಾಡುವುದೇ ತಪ್ಪು. ಇಂಥದ್ದನ್ನು ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ, ಅದು ತಪ್ಪೇ ಎಂದರು

ಬಸವೇಶ್ವರರ ಕರ್ಮಭೂಮಿ ಬೀದರ ಜಿಲ್ಲೆ ಇದ್ದು, ನಮ್ಮ ಜಿಲ್ಲೆಗೆ ಹೆಸರಿಡಿ ಎಂಬ ಬೇಡಿಕೆ ಬಾರದೇ ಇರದು. ಒಂದಕ್ಕೊಂದು ಇತಿಹಾಸ ತಿರುಚಲು ನಾವು ಪ್ರಯತ್ನ ಮಾಡಬಾರದು ಎಂದರು.

ಬಸವೇಶ್ವರ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸುವುದಾಗಿ ಚುನಾವಣೆ ಪ್ರಚಾರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದರು. ನಾವು ಕೂಡ ಈ ವಿಷಯವಾಗಿ ಮುಖ್ಯಮಂತ್ರಿಗೆ ಒತ್ತಾಯಿಸುತ್ತೇವೆ. ಹಾಗಂತ ಕೇವಲ ಪ್ರಾಧಿಕಾರ ಘೋಷಿಸಿದರೆ ಸಾಲದಯ, ಅಗತ್ಯ ಅನುದಾನವನ್ನೂ ನೀಡಿದರೆ ಅಭಿನಂದಿಸುವುದಾಗಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನೇಕಾರರ ಮಕ್ಕಳಿಗೂ ಕಟ್ಟಡ ಕಾರ್ಮಿಕರ ಮಕ್ಕಳ ಸೌಲಭ್ಯ ಕಲ್ಪಿಸಲು ಯತ್ನ
ನೇಕಾರರ ಮಕ್ಕಳಿಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಸೌಲಭ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ, ಅದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜವಳಿ ನೀತಿ ಇದೆ. ಕಟ್ಟಡ ಕಾರ್ಮಿಕರ ಪಟ್ಟಿಗೆ ಜವಳಿ ಕಾರ್ಮಿಕರನ್ನು ಸೇರಿಸಿ ಎಂಬುದು ನಮ್ಮ ಒತ್ತಾಯ. ಕಾರ್ಮಿಕ ಸಚಿವರಿಗೆ ಈ ವಿಷಯವಾಗಿ ಒತ್ತಾಯ ಮಾಡಿದ್ದೇನೆ ಎಂದರು.

ನಮ್ಮ ಮನವಿಗೆ ಕಾರ್ಮಿಕ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ನಮ್ಮ ಬೇಡಿಕೆ ಈಡೇರಿದರೆ ದೇಶದ ನೇಕಾರರ ಮಕ್ಕಳಿಗೆ ಅನುಕೂಲ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next