Advertisement

ಹಣಕಾಸು ಪರಿಸ್ಥಿತಿ ಅವಲೋಕಿಸಿ ಖಾಸಗಿ ಶಾಲೆಗಳಿಗೆ ವೇತನಾನುದಾನ : ಬಸವರಾಜ್ ಬೊಮ್ಮಾಯಿ

05:51 PM Dec 21, 2021 | Team Udayavani |

ಬೆಳಗಾವಿ : ರಾಜ್ಯದ ಹಣಕಾಸು ಪರಿಸ್ಥಿತಿ ಅವಲೋಕಿಸಿ 1995 ಕ್ಕೂ ಮುನ್ನ ಹಾಗೂ ನಂತರದ ಖಾಸಗಿ ಶಾಲೆಗಳನ್ನು ಸರ್ಕಾರದ ವೇತನಾನುದಾನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

Advertisement

ಬೆಳಗಾವಿ ಸುವರ್ಣ ಸೌಧ ಸಮಿತಿ ಸಭಾಂಗಣದಲ್ಲಿ , ವಿಧಾನ ಪರಿಷತ್ ಸಭಾಪತಿ ಬಸವರಾಜ.ಎಸ್ .ಹೊರಟ್ಟಿ ಅಧ್ಯಕ್ಷತೆಯಲ್ಲಿ, ಜರುಗಿದ ಖಾಸಗಿ ಅನುದಾನಿತ , ಅನದಾನ ರಹಿತ ಶಿಕ್ಷಣ ಸಂಸ್ಥೆಗಳ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

ಜನವರಿ 30 ರ ಒಳಗಾಗಿ 1995 ಕ್ಕೂ ಮುನ್ನ ಸ್ಥಾಪಿಸಿದ ಖಾಸಗಿ ಶಾಲೆಗಳನ್ನು ಸರ್ಕಾರದ ಸಹಾಯಧನಕ್ಕೆ ಒಳಪಡಿಸಲು ಹಣಕಾಸು ಇಲಾಖೆಗೆ ಸೂಕ್ತ ದಾಖಲೆ ಹಾಗೂ ಅಂಕೆ ಸಂಖ್ಯೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಶಾಶ್ವತ ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ಇವುಗಳಿಗೂ ಸಹ ಸಹಾಯಧನ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಅನುದಾನಿತ ಶಾಲೆಗಳ 500 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಜಾಹಿರಾತು ನೀತಿ ನಿಯಮ ಪಾಲನೆಯಾಗಿಲ್ಲ ಎಂದು ಶಿಕ್ಷಣ ಇಲಾಖೆ ತಡೆ ಹಿಡಿದಿದೆ. ಶಾಲಾ ಆಡಳಿತ ಮಂಡಳಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಒಂದೊಂದು ಪತ್ರಿಕೆಯಲ್ಲಿ ನೇಮಕಾತಿ ಕುರಿತು ಜಾಹಿರಾತು ನೀಡಿವೆ. ಆದರೆ ಪ್ರತಿಕೆಗಳ ರಾಜ್ಯಪುಟಗಳಲ್ಲಿವೇ ಜಾಹಿರಾತು ಪ್ರಕಟವಾಗಬೇಕು ಎಂದು ಅಧಿಕಾರಿಗಳು ಕಡ್ಡಾಯ ಮಾಡಿ ನೇಮಕಾತಿಗೆ ತಡೆ ನೀಡಿದ್ದಾರೆ. ಇದನ್ನು ತಕ್ಷಣವೇ ಸರಿ ಪಡಿಸಬೇಕು ಎಂದು ಸಭಾಪತಿ ಬಸವಾರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸಭಾಪತಿಗಳ ಮಾತಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ನೇಮಕಾತಿ ಜಾಹಿರಾತು ನೀಡಿರುವ ಶಾಲಾ ಆಡಳಿತ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲು ಅನುಮತಿ ನೀಡಿ. ಇಂತಹದೇ ಪುಟದಲ್ಲಿ ಜಾಹಿರಾತು ಬರಬೇಕು ಎಂಬ ನಿಯಮವಿಲ್ಲ. ಯಾವುದೇ ಪುಟದಲ್ಲಿ ಜಾಹಿರಾತು ಪ್ರಕಟಗೊಂಡರು ಅದನ್ನು ಪರಿಗಣಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣ ಪತ್ರ ಪಡೆಯುವ ನಿಯಮಗಳನ್ನು ಸರಳಗೊಳಿಸಿ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಶಿಕ್ಷಣ ಸಂಸ್ಥೆಗಳಿಂದ ಇಂಡೆಮ್ನಿಟಿ ಬಾಂಡ್(ನಷ್ಟ ಪರಿಹಾರ) ಪಡೆದು ಶಾಲೆಗಳಿಗೆ ಮಾನ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

150 ಜನ ಸಿಬ್ಬಂದಿ ಖಾಯಂಮಾತಿ ಕ್ರಮ

ಶಿಕ್ಷಣ ಇಲಾಖೆಯಲ್ಲಿ 1997-98 ನೇ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ.ಪಿ.ಇ.ಪಿ.ಯೋಜನೆಯಡಿ ನೇಮಕೊಂಡ 150 ಜನ ಸಿಬ್ಬಂದಿಯನ್ನು ಸಕ್ರಮಗೊಳಿಸುವ ಕುರಿತಂತೆ ಕಾನೂನಾತ್ಮಕ ವಿಷಯಗಳನ್ನು ಪರಿಶೀಲಿಸಿ ಖಾಯಂಮಾತಿಗೆ ಕ್ರಮಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಎನ್.ಪಿ.ಎಸ್. ಯೋಜನೆಯಡಿ ಖಾಸಗಿ ಶಾಲಾ ಶಿಕ್ಷಕರು

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಖಾಸಗಿ ವ್ಯಕ್ತಿಗಳು ಸಹ ಪ್ರಾನ್ ಖಾತೆ ತೆರೆದು ಉಳಿತಾಯ ಮಾಡಬಹುದು. ಖಾಸಗಿ ಶಾಲಾ ಶಿಕ್ಷಕರನ್ನು ಸಹ ಎನ್.ಪಿ.ಎಸ್.ಯೋಜನೆಯಡಿ ತರಬೇಕು. ಶಾಲಾ ಆಡಳಿತ ಮಂಡಳಿಗಳು ಉದ್ಯೋಗಿಯ ವೇತನದಲ್ಲಿ ಶೇ.10 ರಷ್ಟು‌ ಹಣವನ್ನು ಕಟಾಯಿಸಿ, ಇದಕ್ಕೆ ಆಡಳಿತ ಮಂಡಳಿಯಿಂದ ಶೇ.10 ರಷ್ಟು ಹಣವನ್ನು ತುಂಬಬೇಕು. ಈ ಕುರಿತು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ತಿಳಿಸಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು‌ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next