Advertisement

ಗುಲಬರ್ಗಾ ವಿವಿಗೆ ಬಸವಣ್ಣ ಹೆಸರು: ಸಿದ್ದು

12:04 PM Jul 12, 2017 | Team Udayavani |

ಕಲಬುರಗಿ: ಬಹುದಿನಗಳ ಬೇಡಿಕೆಯಂತೆ ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿ ಹೆಸರು ಇಡಲಾಗಿದ್ದು, ಅದೇ ರೀತಿಯಾಗಿ ಗುಲಬರ್ಗಾ ವಿವಿಗೆ ಬಸವಣ್ಣ,  ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಅಂಬೇಡ್ಕರ್‌ ಹೆಸರುಗಳನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಮಂಗಳವಾರ ಇಲ್ಲಿನ ಸಾರ್ವಜನಿಕ ಉದ್ಯಾನವನದ ಆವರಣದಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ
ಆಯೋಜಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಬಯಸಿದಂತೆ ಸಾಮಾಜಿಕ ಚಳವಳಿಯಲ್ಲಿ ಕೈಂಕರ್ಯ ಮಾಡಿದ ದಾರ್ಶನೀಕರ ಹೆಸರುಗಳನ್ನು ನಾಡಿನ ಎಲ್ಲ ವಿವಿಗಳಿಗೆ ಹೆಸರಿಡಲು ಚಿಂತನೆ ಮಾಡಲಾಗುತ್ತಿದೆ. ಹೊಸದಾಗಿ ಆರಂಭಿಸುವ ರಾಯಚೂರು ವಿವಿಗೂ ಮಹರ್ಷಿ ವಾಲ್ಮೀಕಿ ಹೆಸರು
ಇಡಲು ಯೋಚನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇಂತಹದರಲ್ಲೂ ರಾಜಕೀಯ ಮಾಡುವ ಯಡಿಯೂರಪ್ಪನವರೇ ಮುಖ್ಯಮಂತ್ರಿ ಇದ್ದರೂ ಇದನ್ನು ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ಕಲ್ಯಾಣ ನಾಡಿನ ಜನರು ಅರ್ಥ ಮಾಡಿಕೊಳ್ಳಬೇಕು. ಇವರಿಗೆ ಕಾಯಕಯೋಗಿ ಬಸವಣ್ಣ ಎಷ್ಟು ಮಹತ್ವದ
ವ್ಯಕ್ತಿ ಎನ್ನುವುದು ಇವರ ವಿಚಾರಗಳಿಂದಲೇ ತಿಳಿಯುತ್ತದೆ ಎಂದು ಕಟುಕಿದರು.

29 ಸ್ಥಾನ ಗೆಲ್ಲಿಸಿ: 2013ರಲ್ಲಿ ನಡೆದ ಚುನಾವಣೆಯಲ್ಲಿ ಹೈದ್ರಾಬಾದ ಕರ್ನಾಟಕದ 40 ಸ್ಥಾನಗಳಲ್ಲಿ 29 ಸ್ಥಾನಗಳನ್ನು ನೀವುಗಳು ಗೆಲ್ಲಿಸಿ ಕಳುಹಿಸಿದ್ದಿರಿ. ಅಷ್ಟು ಜನರನ್ನು ಶಾಸಕರನ್ನಾಗಿ ಮಾಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಂತೆ ಮಾಡಿದ್ದಿರಿ. ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಪುನಃ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮೋಡಿ.. ಮೋದಿಗೆ ಅಂಜುವ ಅಗತ್ಯವಿಲ್ಲ: 
ಈ ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ದೊಡ್ಡ ಶಕ್ತಿ ಇಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತರು ಯಾವ ಮೋಡಿ, ಮೋದಿಗಳಿಗೆ ಅಂಜುವ ಅಗತ್ಯವಿಲ್ಲ. ಅವರದ್ದೇನು ನಡೆಯೋದಿಲ್ಲ. ಕರ್ನಾಟಕ ಪ್ರಜ್ಞಾವಂತ ನೆಲ. ನಮಗೆ ಆತ್ಮವಿಶ್ವಾಸವಿದೆ. ನಾವು ನುಡಿದಂತೆ
ನಡೆದಿದ್ದೇವೆ. ಚುನಾವಣೆ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 155 ಈಡೇರಿಸಿದ್ದೇವೆ. ಜನರಿಗೆ ಉತ್ತಮ ಆಡಳಿತ ಹಾಗೂ ಸೌಕರ್ಯಗಳನ್ನು ನೀಡಿದ್ದೇವೆ. ಅದರ ಕೂಲಿಯನ್ನು ಜನರಿಂದ ಕೇಳಲಿಕ್ಕೆ ನಮಗೆ ಯಾವುದೇ ಅಂಜಿಕೆಯಾಗಲಿ, ಅಳುಕಾಗಲಿ
ಇಲ್ಲ. ನೇರವಾಗಿ ಮತದಾರರ ಮನೆಗಳಿಗೆ ಹೋಗಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಮತ್ತು ವಿಕಾಸವನ್ನು ತಿಳಿ ಹೇಳಿ ಮತ ಕೇಳಿ ಎಂದರು.

Advertisement

ಇವತ್ತು ಯಾರು ಬಸವಣ್ಣನ ಹೆಸರು ಹೇಳುತ್ತಾರೋ, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತಾರೋ, ಯಾರಿಗೆ ಜಾತ್ಯತೀತ
ಮನೋಭಾವ ಇದೆಯೋ ಅವರ್ಯಾರು ಬಿಜೆಪಿಯೊಂದಿಗೆ ಹೋಗುವುದಿಲ್ಲ. ಯಡಿಯೂರಪ್ಪ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಕೂಡಲೇ ಜಗತ್ತು ಬದಲಾಗುವುದಿಲ್ಲ. ಇವರೆಲ್ಲಾ ಚುನಾವಣೆಯ ಸಂದರ್ಭದಲ್ಲಿ ಜಾತಿಯತೆಯ ವಿಷ ಬೀಜಗಳನ್ನು ಬಿತ್ತಿ ಜನರನ್ನು ಮರಳು ಮಾಡಿ ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಾರೆ. ಇವರಿಗೇನು ನೈತಿಕತೆ ಇದೆ. ಈ ಹಿಂದೆ ಅಧಿಕಾರಕ್ಕೆ 
ಬಂದಿರುವ ಮೋದಿ ಏನು ಮಾಡಿದ್ದಾರೆ. ಚುನಾವಣೆಯಲ್ಲಿ ನೀಡಿದರೆ ಭರವಸೆಗಳೆಲ್ಲೂ ಸುಳ್ಳಾಗಿವೆಯಲ್ಲ.. ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಜನರ ಬಳಿಯಲ್ಲಿ ಹೋಗಿ ಮತ ಕೇಳುತ್ತಾರೋ ಎಂದು ಛೇಡಿಸಿದರು.

ನಾಟಕವಾಡಿದ್ರೆ ಜನ ನಂಬತಾರೇನ್ರಿ?:
ಸಂವಿಧಾನದ 73-74ಕೆ ವಿಧಿಯನ್ನು ತಿದ್ದುಪಡಿ ಮಾಡಿ ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ದೊರಕಿಸಿಕೊಟ್ಟಿದ್ದು ಕಾಂಗ್ರೆಸ್‌ ಪಕ್ಷವೇ ಹೊರತು 1950ರಲ್ಲಿ ಕಣ್ಣು ತೆರೆದ ಜನಸಂಘವಲ್ಲ. ಅದಾದ ಬಳಿಕ ರೂಪಾಂತರ
ಹೊಂದಿದ ಬಿಜೆಪಿಯಲ್ಲ. ಮಂಡಲ ವರದಿ ಜಾರಿ ಮಾಡುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ರಾಮಾ ಜೋಯಿಸ್‌ ನ್ಯಾಯಾಲಯದಲ್ಲಿ ಪ್ರಕರಣ ಹೂಡಿ, ಮೀಸಲಾತಿ ಸಂವಿಧಾನ ವಿರೋಧಿಯಾಗಿದೆ ಎಂದು ಖುದ್ದು ನ್ಯಾಯಾಲಯದಲ್ಲಿ ಅವರೇ ವಾದಿಸಿದ್ದರು. ಆವತ್ತು ಒಂದೂ ಮಾತನ್ನಾಡದ ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ, ಸದಾನಂದಗೌಡ, ಜಗದೀಶ
ಶೆಟ್ಟರ್‌ ಈಗ ದಲಿತರ ಪರ ನಾಟಕವಾಡಿದರೆ ಜನರು ನಂಬುತ್ತಾರೇನ್ರಿ ಎಂದು ಪ್ರಶ್ನಿಸಿದರು. 

ದಲಿತರಿಗಾಗಿ ಎಸ್‌ಇಪಿ/ಜೆಎಸ್‌ಪಿ ಯೋಜನೆ ಅಡಿಯಲ್ಲಿ 5 ವರ್ಷದಲ್ಲಿ ಬಿಜೆಪಿ 21ಸಾವಿರ ಕೋಟಿ ರೂ. ವ್ಯಯ ಮಾಡಿದರೆ, ಕಾಂಗ್ರೆಸ್‌ ಸರಕಾರ ನಾಲ್ಕು ವರ್ಷದಲ್ಲಿ 85ಸಾವಿರ ಕೋಟಿ ರೂ. ವ್ಯಯಿಸಿದೆ. ಎಸ್ಸಿ,ಎಸ್ಟಿ ನಿರುದ್ಯೋಗ ಗುತ್ತಿಗೆದಾರರಿಗೆ ಶೇ.ವಾರುಗುತ್ತಿಗೆ ಮೀಸಲಿಗೆ ಕಾನೂನು ಮಾಡಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ನೀರಾವರಿ ಯೋಜನೆಗಳಿಗಾಗಿ ನಾವು 58 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ 18ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. ಸಾಲದ್ದಕ್ಕೆ
ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಮುಖ್ಯಮಂತ್ರಿಯಾಗಿದ್ದರು. ಸೈಕಲ್‌, ಸೀರೆ ಕೊಟ್ಟರೆ ರಾಜ್ಯದಲ್ಲಿ ಬಡತನ ನೀಗೀತೆ.. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೇನ್ರಿ ಎಂದು ಪ್ರಶ್ನಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಎಐಸಿಸಿ ಕಾರ್ಯದರ್ಶಿಗಳಾದ ಸತೀಶ
ಜಾರಕಿಹೊಳಿ, ಶೈಲೇಜ್‌ನಾಥ, ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸಚಿವ ಡಿ.ಕೆ. ಶಿವಕುಮಾರ, ಸಚಿವರಾದ ಬಸವರಾಜ ರಾಯರೆಡ್ಡಿ, ಈಶ್ವರ ಖಂಡ್ರೆ, ಶಿವರಾಜ ತಂಗಡಗಿ, ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು, ಶಾಸಕರಾದ ಅಜಯಸಿಂಗ್‌, ಉಮೇಶ ಜಾಧವ್‌, ಎನ್‌.ಎಸ್‌
.ಭೋಸರಾಜು, ಇಕ್ಬಾಲ್‌ ಅಹ್ಮದ್‌ ಸರಡಗಿ, ಅಲ್ಲಂ ವೀರಭದ್ರಪ್ಪ, ಅಲ್ಲಮಪ್ರಭು ಪಾಟೀಲ, ಮಾಲೀಕಯ್ಯ ಗುತ್ತೇದಾರ, ಬಿ.ಆರ್‌.ಪಾಟೀಲ, ರಾಜಶೇಖರ ಪಾಟೀಲ ಹುಮನಾಬಾದ, ಬಿ.ವಿ.ನಾಯಕ, ತೊಗರಿ  ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ಡಿಸಿಸಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಅಂಬಾರಾಯ ಅಷ್ಟಗಿ, ರಾಯಚೂರು, ಬೀದರ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ವಿವಿಧ ಬ್ಲಾಕ್‌, ಬೂತ್‌ ಮಟ್ಟದ ಅಧ್ಯಕ್ಷರು ಹಾಜರಿದ್ದರು. 

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next