Advertisement

ಬಸವಣ್ಣ ಜಗತ್ಣು ಕಂಡ ಮಹಾನ್‌ ಚಿಂತಕ; ಜಿಲ್ಲಾಧಿಕಾರಿ ಆರ್‌.ಗಿರೀಶ್‌

03:53 PM May 04, 2022 | Team Udayavani |

ಹಾಸನ: ಭಕ್ತಿ ಬಂಡಾರಿ ಬಸವಣ್ಣ ಜಗತ್ತು ಕಂಡ ಅತಿದೊಡ್ಡ ಸಾಮಾಜಿಕ ಚಿಂತಕ. ಸಮಸಮಾಜ ನಿರ್ಮಾಣಕ್ಕಾಗಿ ಅವರು 12ನೇ ಶತಮಾನದಲ್ಲೇ ವಿಚಾರಕ್ರಾಂತಿಗೆ ನಾಂದಿ ಹಾಡಿದರು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಭಿಪ್ರಾಯಪಟ್ಟರು.

Advertisement

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಸವಣ್ಣನವರ ಜಯಂತಿ ಮತ್ತು ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣತಮ್ಮ ವಿಚಾರಗಳನ್ನು ಆಚಾರದಲ್ಲಿ ತಂದು ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಡ್ಯತೆ ತೊಡೆದು ಹಾಕಲು ಶ್ರಮಿಸಿದ್ದಾರೆ ಎಂದರು. ಬಸವಣ್ಣನವರು ವಚನಗಳ ಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸಿದರು. ಅವರ ಸಂದೇಶ ಎಂದೆಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ಇಂದಿನ ಎಲ್ಲ ಸಮುದಾಯದವರು ಅರಿತು, ಅನುಷ್ಠಾನಕ್ಕೆ ತಂದರೆ ಇನ್ನಷ್ಟು ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ದಯೆಯೇ ಧರ್ಮದ ಮೂಲ: ಪ್ರಸ್ತುತ ಸಮಾಜದಲ್ಲಿ ಧರ್ಮ ಧರ್ಮದ ನಡುವೆ ಅಶಾಂತಿ ಉಂಟಾಗುತ್ತಿದ್ದು, ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ತತ್ವ ಪಾಲಿಸಿದರೆ ಸಾಮಾಜಿಕ ಸಾಮರಸ್ಯ ಸಾಧ್ಯ ಎಂದು ಅವರು ಹೇಳಿದರು. ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮನವರೂ ಸಹ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದು, ಸಾಮಾಜಿಕ ಅನಿಷ್ಟಗಳ ವಿರುದ್ಧ ಅರಿವು ಮೂಡಿಸಿದ ಮಹಾನ್‌ ದೈವ ಭಕ್ತೆ ಎಂದು ಆರ್‌ ಗಿರೀಶ್‌ ಬಣ್ಣಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಮಾತನಾಡಿ, ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಬಸವಣ್ಣನವರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲೇಶಗೌಡ ಅವರು ಮಾತನಾಡಿ, ಬಸವಣ್ಣನ ತಳ ಸಮುದಾಯದವರ ಬದುಕನ್ನು ಗಟ್ಟಿ ಮಾಡಿಕೊಳ್ಳಲು ಅಡಿಪಾಯ ಹಾಕಿಕೊಟ್ಟಿದ್ದಾರೆ.ಅಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹ ಮಾಡಿ ಸಮಾನತೆ ಸಾರಿದರು. ವಿಪರ್ಯಾಸ ಎಂದರೆ ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿಯೂ ಸಾಮಾಜಿಕ, ಶೈಕ್ಷಣಿಕ, ಲಿಂಗ ಸಮಾನತೆ ಕೊರತೆ ಇದೆ ಎಂದು ವಿಷಾದಿಸಿದರು.

Advertisement

ಹಾಸನ ಜಿಲ್ಲಾ ವೀರ ಶೈವ ಲಿಂಗಾಯತ ಸಂಘದ ಅಧ್ಯಕ್ಷ ಐಸಾಮಿಗೌಡ ಅವರು ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್‌ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಿ. ಆರ್‌.ಗುರುದೇವ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಎಸ್‌.ಎನ್‌ ಈಶ್ವರಪ್ಪ, ವೀರಶೈವ ಲಿಂಗಾಯತ ಯುವ ಸೇನೆಯ ಉಪಾಧ್ಯಕ್ಷ ಶರತ್‌
ಭೂಷಣ್‌, ರಾಜ್ಯ ಯುವ ನೀತಿ ರಚನಾ ಸಮಿತಿ ಸದಸ್ಯ ಸಂತೋಷ ಕೆಂಚಾಂಬಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಆಕರ್ಷಕ ಮೆರವಣಿಗೆಗೆ ಚಾಲನೆ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಸವಣ ಹಾಗೂ ಹೇಮರೆಡ್ಡಿ ಮಲ್ಲಮ್ಮರವರ ಭಾವಚಿತ್ರದೊಂದಿಗೆ ಬೆಳ್ಳಿ ರಥದಲ್ಲಿ ಹೊರಟ ಮೆರವಣಿಗೆಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಪಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಿವ ತಾಂಡವ ಕುಣಿತ, ನಂದಿ ಕೋಲು, ವೀರಗಾಸೆ ಕುಣಿತ, ಡೋಲು ಕುಣಿತ ಇತರ ಸಾಂಸ್ಕೃತಿ ಕಲಾ ತಂಡಗಳು ಭಾಗವಹಿಸಿದ್ದವು. ಆಟೋ ಚಾಲಕರು ಕೂಡ ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next