Advertisement

ಅಂಗನವಾಡಿಗೆ ಮೂಲ ಸೌಲಭ್ಯ ಮರೀಚಿಕೆ

11:38 AM Mar 13, 2020 | Naveen |

ಬಸವಕಲ್ಯಾಣ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಉನ್ನತ ಶಿಕ್ಷಣ ಎಷ್ಟು ಮುಖ್ಯವೊ ಅದೇ ರೀತಿ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಅಡಿಪಾಯದ ಶಿಕ್ಷಣವೂ ಅಷ್ಟೆ ಮುಖ್ಯವಾಗಿದೆ ಎಂದು ಸರ್ಕಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ, ವಿವಿಧ ಯೋಜನೆಗಳಿಗಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳು ಮಾತ್ರ ಮೂಲ ಸೌಕರ್ಯಗಳ ಕೊರತೆಗಳಿಂದ ನರಳುತ್ತಿವೆ.

Advertisement

ತಾಲೂಕಿನ ವ್ಯಾಪ್ತಿಗೆ ಒಳಪಡುವ ಅಂಗನವಾಡಿ ಕೇಂದ್ರಗಳಿಗೆ ಅಡುಣೆ ಕೋಣೆ, ವಿದ್ಯುತ್‌, ಸಂಪರ್ಕ, ಫ್ಯಾನ್‌, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ, ಕೈತೋಟ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಕಲ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಬಹುತೇಕ ಅಂಗನವಾಡಿ ಕೇಂದ್ರಗಳು ಕನಿಷ್ಟ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೆಲವು ಸಂರಕ್ಷಣೆ ಇಲ್ಲದೇ ಸಂಪೂರ್ಣವಾಗಿ ಹಾಳಾಗಿವೆ. ಮತ್ತೆ ಕೆಲವುಕಡೆ ಸ್ವ ಆಸಕ್ತಿಯಿಂದ ಅಂಗನವಾಡಿ ಕೇಂದ್ರಗಳನ್ನು ಇತರರಿಗೆ ಮಾದರಿ ಆಗುವಂತೆ ಆಕರ್ಷಕವಾಗಿ ನಿರ್ಮಿಸಲಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಲುವಾಗಿ ಅಳವಡಿಸಲಾದ ಟ್ಯಾಂಕ್‌, ಪೈಪ್‌ಲೈನ್‌ ಸಂಪೂರ್ಣ ಹಾಳಾಗಿವೆ. ಕೆಲವು ಕಡೆ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿದ್ದು, ನೀರು ಬೇಕಾದರೆ ಬೇರೆ ಕಡೆಯಿಂದ ತರಬೇಕಾದ ಅನಿವಾರ್ಯತೆ ಇದೆ. ವಿದ್ಯುತ್‌ ಬಿಲ್‌ ಬಾಕಿ ಇರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿವೆ ಮತ್ತು ಅಡುಗೆ ಕೋಣೆ ಇಲ್ಲದ ಕಾರಣ ತರಗತಿಯಲ್ಲೇ ಅಡುಗೆ ಮಾಡುವಂತ ಸ್ಥಿತಿ ಇದೆ. ಆದರೂ ಸರ್ಕಾರವಾಗಲಿ ಅಥವಾ ಸಂಬಂಧ ಪಟ್ಟ ಜಿಲ್ಲಾ ಅಧಿಕಾರಿಗಳಾಗಲಿ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಸೌಲಭ್ಯಗಳನ್ನು ನೀಡಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ಪೋಷಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 411 ಅಂಗನವಾಡಿ ಕೇಂದ್ರಗಳಿವೆ. ಸ್ವಂತ ಕಟ್ಟಡಗಳು 286, ಬಾಡಿಗೆ ಕಟ್ಟಡಗಳು 90, ಶಾಲೆ 18, ಪಂಚಾಯತ್‌ 2, ಸಮುದಾಯ ಭವನ 8, ಇತರೆ 7, ಅಡುಗೆ ಕೋಣೆ 171 , ಕಂಪೌಂಡ್‌ 79 , ವಿದ್ಯುತ್‌ 6, ಫ್ಯಾನ್‌ 167, ಶೌಚಾಲಯ 54, ವಾಟರ್‌ ಫಿಲ್ಟರ್‌ 140, ಕೈತೋಟ 35 ಕೇಂದ್ರಗಳಲ್ಲಿ ಇವೆ.

ಒಟ್ಟು 411 ಅಂಗನವಾಡಿ ಕೇಂದ್ರಗಳ ಪೈಕಿ 90 ಅಂಗವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡದ ಭಾಗ್ಯವಿಲ್ಲ. ಹೀಗಾಗಿ 44 ನಗರ ಪ್ರದೇಶದಲ್ಲಿ, 46 ಗ್ರಾಮೀಣ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ನಗರ ಕೇಂದ್ರಗಳಿಗೆ ಪ್ರತಿ ತಿಂಗಳು ತಲಾ ಒಂದಂತೆ 3 ಸಾವಿರ ಮತ್ತು ಗ್ರಾಮೀಣ ಕೇಂದ್ರಗಳಿಗೆ 7.50 ರೂ. ಬಾಡಿಗೆಗಾಗಿ ಖರ್ಚು ಮಾಡಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತ ರೂ. ಸರ್ಕಾರದ ದುಡ್ಡು ಪೋಲಾಗುತ್ತಿದೆ.

Advertisement

240 ಅಂಗನವಾಡಿ ಕೇಂದ್ರಗಲ್ಲಿ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳಿಗೆ ಕಲಿಸುವ ಕೋಣೆಗಳಲ್ಲಿ ಅಥವಾ ಹೊರಗಡೆ ಮಕ್ಕಳಿಗಾಗಿ ಅಡುಗೆ ಮಾಡುವ ಅನಿವಾರ್ಯತೆ ಇದೆ. ಆದರೂ ಅಡುಗೆ ಕೋಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲು ಮುಂದಾಗುತ್ತಿಲ್ಲ ಎಂಬುದು ಸಿಬ್ಬಂದಿಗಳ ಆರೋಪವಾಗಿದೆ.

ಕೇಂದ್ರ ಸರ್ಕಾರ ದೇಶವನ್ನು ಬಯಲು ಬಹಿರ್ದೆಶೆ ಮುಕ್ತವಾಗಿಸಲು ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ಅಂಗನವಾಡಿ ಕೇಂದ್ರದ ಸಿಬ್ಬಂದಿ ಶೌಚಕ್ಕಾಗಿ ಬಯಲು ಪ್ರದೇಶವನ್ನೆ ಅವಲಂಬಿಸಿದ್ದಾರೆ.

411 ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ 54 ಕೇಂದ್ರಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇರುವುದು ಶೋಚನೀಯ ಸಂಗತಿಯಾಗಿದೆ. 140 ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ಬಾವಿ ಹಾಗೂ ಕೊಳವೆ ಬಾವಿಗಳ ನೀರೆ ಗತಿಯಾಗಿದೆ. ಇದರಿಂದ ಮಕ್ಕಳಿಗೆ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಬರಾಜು ಮಾಡುವುದು ಅವಶ್ಯವಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಕಲ್ಪಿಸಲಾದ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧ ಪಟ್ಟ ಇಲಾಖೆ ಬಿಲ್‌ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ. ಇದರಿಂದ ವಿದ್ಯುತ್‌ ತಂತಿಗಳು ಅಲ್ಲಲ್ಲಿ ಜೋತು ಬಿದ್ದಿವೆ ಹಾಗೂ ಬೋರ್ಡ್‌ ಸಂಪೂರ್ಣವಾಗಿ ಹಾಳಾಗಿವೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲಾದ ಫ್ಯಾನ್‌ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ. ಜಿಪಂ ರಾಜೇಶ್ವರ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.

ಅಂಗನವಾಡಿ ಕೇಂದ್ರಗಳ ನವೀಕರಣಕ್ಕಾಗಿ ಜಿಪಂನಿಂದ ಬಂದ ಅನುದಾನವನ್ನು ರಾಜೇಶ್ವರ ಕ್ಷೇತ್ರದಲ್ಲಿ ಜಿಪಂ ಸದಸ್ಯ ಗುಂಡುರೆಡ್ಡಿ ಕಮಲಾಪೂರೆ ಅವರ ಆಸಕ್ತಿಯಿಂದ, ಮಕ್ಕಳನ್ನು ಅಂಗನವಾಡಿ ಕೇಂದ್ರದ ಕಡೆ ಸೇಳೆಯಲು ರೈಲ್ವೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಇತರರಿಗೆ ಮಾದರಿಯಾಗಿವೆ.

ಅಂಗನವಾಡಿ ಕೇಂದ್ರಗಳ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಾಗ ಅಥವಾ ಸಾರ್ವಜನಿಕರಿಂದ ದೂರು ಬಂದಾಗ ನಾವು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಸರ್ಕಾರಿ ಜಾಗವಿಲ್ಲದ ಕಾರಣ ನೂತನ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಆಗುತ್ತಿಲ್ಲ. ಹೀಗಾಗಿ ಹಂತ-ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
ಶಾರದಾ ಎನ್‌. ಕಲಮಲ್ಕರ್‌
ಸಿಡಿಪಿಒ, ಬಸವಕಲ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next