Advertisement

ಶರಣರ ಸ್ಮಾರಕ ಅಭಿವೃದ್ಧಿ ಕಾರ್ಯ ಕುಂಠಿತ

10:29 AM Jun 16, 2019 | Naveen |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ವಿಶ್ವಗುರು ಬಸವಣ್ಣ ಹಾಗೂ ಶರಣ-ಶರಣೆಯರ ಕರ್ಮಭೂಮಿಯಾದ ಕಲ್ಯಾಣ ನಾಡನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಆರಂಭಿಸಿದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಟುತ್ತ ಸಾಗಿವೆ.

Advertisement

ವಿಶ್ವದ ಮೊದಲನೇ ಸಂಸತ್ತು ಎಂದು ಹೆಗ್ಗಳಿಕೆಗೆ ಪಾತ್ರವಾದ ಕಲ್ಯಾಣದ ನಾಡಿನ ಕಡೆ ಮತ್ತೂಮ್ಮೆ ಎಲ್ಲರೂ ತಿರುಗಿ ನೋಡಬೇಕು ಹಾಗೂ ಶರಣರ ಸ್ಮಾರಕ ಸ್ಥಳಗಳು ಪ್ರವಾಸಿಗರನ್ನು ಸೆಳೆಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರ ಆರಂಭದಲ್ಲಿ ಮಂಡಳಿಗೆ ಕೋಟ್ಯಂತರ ರೂ. ಅನುದಾನ ನೀಡುತ್ತಿತ್ತು. ಅದರಂತೆ ಅಭಿವೃದ್ಧಿ ಕಾರ್ಯಗಳೂ ನಡೆದವು.

ವರ್ಷ ಕಳೆದಂತೆ ಸರ್ಕಾರ ಅನುದಾನ ಕಡಿತಗೊಳುತ್ತಿರುವುದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನನೆಗುದ್ದಿಗೆ ಬಿದ್ದಿದ್ದು, ಆರಂಭದಲ್ಲಿ ಅಭಿವೃದ್ಧಿಗೊಳಿಸಲಾದ ಶರಣರ ಸ್ಮಾರಕಗಳನ್ನು ನಿರ್ವಹಣೆ ಮಾಡುವುದಕ್ಕೂ ಆಗುತ್ತಿಲ್ಲ. ಕೆಲ ಗವಿಗಳು ಹಾಳಾಗಿರುವುದೇ ಇದಕ್ಕೆ ಸಾಕ್ಷಿ.

2005ರಿಂದ 2018ರ ವರೆಗೆ ಸರ್ಕಾರದಿಂದ ಅಭಿವೃದ್ಧಿ ಮಂಡಳಿಗೆ ಒಟ್ಟು 76.78 ಕೋಟಿ ಅನುದಾನ ಬಂದಿದೆ. ಅದರಲ್ಲಿ ವಿವಿಧ ಕಾಮಗಾರಿಗಳಿಗೆ 71.99 ಕೋಟಿ ಖರ್ಚು ಮಾಡಲಾಗಿದೆ. ಹಾಗೂ ಮುಂದುವರಿದ ಕಾಮಗಾರಿಗಳ ಬಾಕಿ ಉಳಿದ ಮೊತ್ತ 4.79 ಕೋಟಿಯಾಗಿದೆ.

2006-7ರಲ್ಲಿ 45 ಲಕ್ಷ, 2008ರಲ್ಲಿ 6.99 ಕೋಟಿ, 2009ರಲ್ಲಿ 8.87 ಕೋಟಿ ರೂ. ನೀಡಲಾಗಿತ್ತು. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿರುವುದಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿರುವುದೇ ಸಮಸ್ಯೆ ಕಾರಣವಾಗಿದೆ.

Advertisement

ಈಗಾಗಲೇ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಬರುವ ದೇವರದಾಸಿಮಯ್ನಾ ಗುಡಿ, ಕಂಬಳಿ ಮಠ, ಬಸವ ಭವನ, ಅಂಬೀಗರ ಚೌಡಯ್ಯ ಗವಿ, ಅಕ್ಕಮಹಾದೇವಿ, ಗುರುಲಿಂಗ ಪೆದ್ದಿ, ಹರಳಯ್ಯ ಗವಿ ಮತ್ತು ಗುಡಿ ಜಾತ್ರೆ ಮೈದಾನ, ಪ್ರಭುದೇವ ಗುದ್ದಗೆ, ಮಡಿವಾಳ ಮಾಚಿದೇವರ ಹೊಂಡ ಸೇರಿದಂತೆ 20ಕ್ಕೂ ಹೆಚ್ಚು ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿರುವ ಸ್ಮಾರಕಗಳಲ್ಲಿ ನಿರ್ವಹಣೆ ಕೊರತೆಯಿಂದ ಕೆಲವು ಹಾಳಾಗಿರುವುದು ಪ್ರವಾಸಿಗರಿಗೆ ನೋವಾಗುವಂತೆ ಮಾಡಿದೆ.

ನಗರದ ಭೀಮನಗರ ಬಡಾವಣೆಯಲ್ಲಿರುವ ಉರಿಲಿಂಗ ಪೆದ್ದಿಮಠದ ಆವರಣದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಆವರಣದಲ್ಲಿ ಮದ್ಯದ ಬಾಟಲ್ ಹಾಗೂ ಕಸಕಡ್ಡಿ ಹಾಕಲಾಗಿದೆ. ಬಂದವರ ಒಣಿಯ ಉದ್ಯಾನ ಪಕ್ಕದ ಹಳ್ಳಕ್ಕೆ ಅಳವಡಿಸಲಾದ ಕಂಬಗಳು ಕೆಳಗೆ ಹಾಳಾಗಿ ಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿವೆ.

ಹಾಗಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ತಾಣವಾಗಬೇಕಾದ ಬಸವಕಲ್ಯಾಣ ಅನುದಾನ ಕೊರತೆಯಿಂದ ಅಭಿವೃದ್ಧಿ ಮಾಡಲಾದ ಸ್ಮಾರಕಗಳು ಪಾಳು ಬೀಳತೊಡಗಿವೆ. ಆದ್ದರಿಂದ ಜೂ.27ರಂದು ಗ್ರಾವ ವಾಸ್ತವ್ಯ ಮಾಡಲು ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಚ್ಚು ಅನುದಾನ ಘೋಷಣೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂಬುವುದು ಜನರ ಆಶಯವಾಗಿದೆ.

ಕೋಟೆ ಅಭಿವೃದ್ಧಿಗಿಲ್ಲ ಹಣ
ನಗರದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ಕೋಟೆಯ ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ರೂ. ಹಾಗೂ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಅವಶ್ಯಕತೆ ಇರುವ ಅನುದಾನ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಆದರೂ ಈವರೆಗೂ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.

ಗೈಡ್‌-ಕಾವಲು ಸಿಬ್ಬಂದಿ ಇಲ್ಲ
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಸ್ಮಾರಕಗಳನ್ನು ಪ್ರವಾಸಿಗರಿಗಾಗಿ ಅಭಿವೃದ್ಧಿ ಗೊಳಿಸಲಾಗಿದೆ. ಆದರೆ ಕೆಲವು ಸ್ಮಾರಕ ಸ್ಥಳದಲ್ಲಿ ಮಾತ್ರ ಕಾವಲು ಸಿಬ್ಬಂದಿ ಹಾಗೂ ಗೈಡ್‌ಗಳನ್ನು ನೇಮಕ ಮಾಡಲಾಗಿದೆ. ಉಳಿದ ಶರಣ, ಶರಣೆಯರ ಸ್ಮಾರಕಗಳ ಬಗ್ಗೆ ಮಾಹಿತಿ ನೀಡಲು ಯಾರು ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next