Advertisement

ಶಿರಸಿ: ಲೋಕಾರ್ಪಣೆಗೆ ಸಜ್ಜಾದ ಬರೂರು ಲಕ್ಷ್ಮೀನೃಸಿಂಹ ದೇಗುಲ

01:39 PM Jan 31, 2022 | Team Udayavani |

ಶಿರಸಿ: ಗ್ರಾಮಸ್ಥರ ಇಚ್ಛಾ ಶಕ್ತಿ, ಶ್ರದ್ಧೆಯ ಕರ ಸೇವೆ, ಭಕ್ತಿ ಭಾವದ ಕಾರಣದಿಂದ ಶಿಲಾನ್ಯಾಸಗೊಂಡ ಕೇವಲ ಒಂಬತ್ತೇ ತಿಂಗಳಲ್ಲಿ ಶಿಲಾಮಯ ದೇವಾಲಯ ಆಕರ್ಷಕವಾಗಿ ಎದ್ದು ನಿಂತು, ದೇಗುಲ ಲೋಕಾರ್ಪಣೆ ಹಾಗೂ ಅಷ್ಟ ಬಂಧ ಮಹೋತ್ಸವಕ್ಕೆ ಸಜ್ಜಾಗಿದೆ.

Advertisement

ಬರೂರಿನಲ್ಲಿ ಗ್ರಾಮ ದೇವರಾದರೂ ಅಸಂಖ್ಯಾತ ಭಕ್ತರನ್ನು ಒಳಗೊಂಡ ಲಕ್ಷ್ಮೀ ನೃಸಿಂಹ ದೇವರ ನೂತನ ಆಲಯ ಹಾಗೂ ನೂತನ ವಿಗ್ರಹದ ಪ್ರತಿಷ್ಠಾಪನೆ ಫೆ.4ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.

ಕರ್ನಾಟಕ ವಿಧಾನ ಸಭೆಯ ಸ್ಪೀಕರ್, ದೇವಸ್ಥಾನ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಬರೂರು ದೇವಸ್ಥಾನದ ಅಭಿವೃದ್ಧಿ ಹಾಗೂ  ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸುದ್ದಿಗೋಷ್ಠಿ ನಡೆಸಿ  ಮಾಹಿತಿ ಹಂಚಿಕೊಂಡರು.

ಒಂಬತ್ತು ತಿಂಗಳಲ್ಲಿ…:

ದೇವಾಲಯದ ಅಭಿವೃದ್ಧಿ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಆಶಯದಲ್ಲಿ ಕಳೆದ ಜುಲೈ 17ರಂದು ಶಿಲಾನ್ಯಾಸ ನೆರವೇರಿಸಿ ಅಲ್ಲಿಂತ ಕೇವಲ 9 ತಿಂಗಳಲ್ಲಿ ಅತ್ಯಂತ  ಆಕರ್ಷಕ ಮೂಲ ಲಕ್ಷ್ಮೀ ನೃಸಿಂಹ ದೇವರ ಮಾದರಿಯಲ್ಲೇ ಬೆಂಗಳೂರಿನ ಶಿಲ್ಪಿ  ಜಿ.ಎಲ್.ಭಟ್ಟ  ನಿರ್ಮಾಣ ಮಾಡಿದ್ದಾರೆ. ದೇವಾಲಯ ಕಳಚಿ, ನೂತನ ದೇವಾಲಯ ನಿರ್ಮಾಣಕ್ಕೆ ಸುತ್ತಲಿನ ಗ್ರಾಮಗಳ ಭಕ್ತರು ೨೫೦೦ಕ್ಕೂ ಹೆಚ್ಚು ಜನರು ಶ್ರಮದಾನ ಮಾಡಿದ್ದಾರೆ. ಈಗಲೂ ಕರ ಸೇವೆಯಲ್ಲಿ ಭಕ್ತಾದಿಗಳು ತೊಡಗಿಕೊಂಡಿದ್ದಾರೆ.

Advertisement

ಶಿರಸಿಯ ಶಿಲ್ಪ ಸೃಷ್ಟಿಯ ಪ್ರಶಾಂತ ಗುಡಿಗಾರ ನೇತೃತ್ವದಲ್ಲಿ ಶಿಲಾಮಯ ದೇವಾಲಯದ ನಿರ್ಮಾಣ ಕಾರ್ಯ ನಡೆದಿದ್ದು, ತಾಮ್ರದ ಹೊದಿಕೆ ಕೂಡ ಮಾಡಲಾಗಿದೆ. ಹನುಮಂತ ದೇವರು ಕುಳಿತ ಗರುಡಗಂಭ ಕೂಡ ನಿಲ್ಲಿಸಲಾಗಿದ್ದು, 27 ಅಡಿ ಉದ್ದ ಹಾಗೂ 27 ಅಡಿ ಎತ್ತರದ ದೇವಾಲಯ ಇದಾಗಲಿದೆ. 1960ರ ದಶಕ ಹಾಗೂ 1996 ರಲ್ಲಿ ಅಭಿವೃದ್ದಿಗೊಂಡಿದ್ದ ದೇವಾಲಯವನ್ನು ಈಗ ಮತ್ತೆ ಸುಮಾರು 2 ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಸುತ್ತಲಿನ ಆರು ಗ್ರಾಮದ ೮೮೫ ಮನೆಯವರು ಹಾಗೂ ಭಕ್ತರ ಸಹಕಾರದಿಂದ 50 ಲಕ್ಷ ರೂ.  ಸಂಗ್ರಹರಣೆ ಆಗಿದೆ. ರಾಜ್ಯ ಸರಕಾರ 50 ಲಕ್ಷ ರೂ. ನೀಡಿದೆ. ದೇವಸ್ಥಾನದ ಅಭಿವೃದ್ಧಿಗೆ ಧಾರ್ಮಿಕ, ದೇವಾಲಯ ನಿರ್ಮಾಣ ಸೇರಿದಂತೆ ವಿವಿಧ ಸಮಿತಿ ರಚಿಸಿಕೊಂಡು ಸಂಘಟಿತವಾಗಿ ಕಾರ್ಯ ಮಾಡಿದ್ದರ ಪರಿಣಾಮವೇ ಇದು ಸಾಧ್ಯವಾಗಿದೆ.

ಅಭಿವೃದ್ಧಿಯ ಪರ್ವ: ದೇವಸ್ಥಾನಕ್ಕೆ ಬರುವ ಮಾರ್ಗದಿಂದಲೂ ನೇರವಾಗಿ ಮಾಡಲಾಗಿದೆ. ವಿನಾಯಕ ಭಟ್ಟ ಅವರು ರಸ್ತೆಯ ಇಕ್ಕೆಲದಲ್ಲಿ ದಾರಿ ಅಗಲಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ವಿವಿಧ ಸಮಿತಿಗಳ ಪ್ರಮುಖರು, ಭಕ್ತಾದಿಗಳು ಮನೆಗೂ ಹೋಗಿದ್ದು ಸುಳ್ಳು, ಅಷ್ಟು ಶ್ರಮಿಸಿದ್ದರ ಪರಿಣಾಮ ಈ ಕಾರ್ಯ ಸಾಧ್ಯವಾಗಿದೆ.

ದೇವಸ್ಥಾನಕ್ಕೆ ಬರುವ ಮಾರ್ಗದ ಡಾಮರೀಕರಣ ಕೂಡ ಆಗುತ್ತಿದೆ. ಊರಿನ ಇನ್ನೊಂದು ಪಾರ್ಶ್ವದಲ್ಲಿ ಇರುವ ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿ ಕೂಡ ನಡೆಯುತ್ತಿದೆ. ಇನ್ನೂ ಚಂದ್ರಶಾಲೆ, ಪವಿತ್ರವನ, ಪುಷ್ಕರಣಿ ಆಗಬೇಕಿದೆ. ಭಕ್ತಾದಿಗಳು ಈ ಕೈಂಕರ್ಯದಲ್ಲಿ ತನು ಮನ ಧನದ ಸೇವೆ ಸಲ್ಲಿಸಲು ಅವಕಾಶ ಇದೆ. ಸುತ್ತಲಿನ ಗ್ರಾಮಗಳ ಭಕ್ತಾದಿಗಳು ಮಹಿಳೆಯರೂ ಕೂಡ ಕರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿರುವದು ವಿಶೇಷವಾಗಿದೆ. ಪಂಡಿತ ಮಂಜುಗುಣಿ ಶ್ರೀನಿವಾಸ ಭಟ್ಟ, ಕಿಬ್ಬಳ್ಳಿ ಗಣಪತಿ ಭಟ್ಟ, ಕುಮಾರ ಭಟ್ಟ ಕೊಳಗಿಬೀಸ್ ಇತರ ವೈದಿಕರ ತಂಡ, ದೇಗುಲದ ಅರ್ಚಕರ ನೇತೃತ್ವದಲ್ಲಿ ನಡೆಯುತ್ತಿದೆ.

ಅಷ್ಟಬಂಧ, ವಿವಿಧ ಧಾರ್ಮಿಕ ಕಾರ್ಯಕ್ರಮ:

ಶ್ರೀದೇವರ ಪುನರ್ ನಿರ್ಮಿತ ನೂತನ ಶಿಲಾಮಯ ದೇವಾಲಯದ ಸಮರ್ಪಣೆ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಫೆ 4ರಿಂದ 7ರ ತನಕ ನಡೆಯಲಿದೆ. ೮ರ ನಂತರ ಶ್ರೀದೇವರಿಗೆ ಭಕ್ತಾದಿಗಳ ಹಣ್ಣುಕಾಯಿ ಸಮರ್ಪಣೆ, ಇತರ ಸೇವೆ ನಡೆಯಲಿದೆ. ಫೆ1, 2ರಂದು ಕುಂಭ ಸಮರ್ಪಣೆ ನಡೆಯಲಿದೆ. 4ಕ್ಕೆ ಪ್ರತಿಷ್ಠಾಪನಾ ಪೂರ್ವಾಂಗ ಧಾರ್ಮಿಕ ಕಾರ್ಯಕ್ರಮಗಳು, ಬಳಿಕ ಶ್ರೀಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠೆ,ಶ್ರೀದೇವರ  ಯಂತ್ರ ಸ್ಥಾನೆ,ಷಡಾಧಾರ ಪ್ರತಿಷ್ಠೆ, ಬಿಂಬಶುದ್ದಿ, ನಡೆಯಲಿದೆ.

ರವಿವಾರ ಬೆಳಿಗ್ಗೆ 9:26 ಕ್ಕೆ ಶ್ರೀದೇವರ ನೂತನ ವಿಗ್ರಹ ಪ್ರತಿಷ್ಠಾಪನೆ, ಅಷ್ಟಬಂಧ, ಧ್ವಜಸ್ಥಾಪನೆ, ಧ್ವಜಬಲಿ ಇತರ ಕಾರ್ಯಕ್ರಮ ನಡೆಯಲಿದೆ. 7ರಂದು ಯಾಗಗಳ ಪೂರ್ಣಾಹುತಿ, ಪ್ರಾರ್ಥನೆ, ಮಂತ್ರಾಕ್ಷತೆ, ಆಶೀರ್ವಚನ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ಮಾತೆಯರಿಂದ ಮಹಾವಿಷ್ಣು ಸಹಸ್ರನಾಮಾವಳಿ, ಕರಾವಲಂಬನ ಸ್ತೋತ್ರ ಪಠಣ, ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಈ ವೇಳೆ ಪ್ರಮುಖರಾದ ಭಾಸ್ಕರ ಹೆಗಡೆ ಕಾಗೇರಿ, ಎಂ.ವಿ.ಜೋಶಿ ಕಾನಮೂಲೆ, ದೇವಸ್ಥಾನದ ಮೊಕ್ತೇಸರ ಮಂಜುನಾಥ ಭಟ್ಟ ಬೆಳಖಂಡ, ಪರಮೇಶ್ವರ ಹೆಗಡೆ ಕಾಗೇರಿ, ಮಹೇಶ ಹೆಗಡೆ ನೇಗಾರು, ಬಿ.ಜಿ.ಹೆಗಡೆ, ಅರ್ಚಕ ದತ್ತಾತ್ರಯ ಭಟ್ಟ, ವಿನಯ ಭಟ್ಟ ಇತರರು ಇದ್ದರು.

ಸಂಕಲ್ಪಿತ ಮೊತ್ತ ಕೊಟ್ಟ ಭಿಕ್ಷಾ ಜೋಳಿಗೆ!:

ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಲಿರುವ ಮೂರ್ತಿಗೆ ಎಲ್ಲರ ಕೊಡುಗೆ ಇರಬೇಕು ಎಂಬ ಕಾರಣಕ್ಕೆ ಸಂಬಂಧಿತ ಆರೂ ಗ್ರಾಮಗಳ ಪ್ರತಿ ಮನೆಗೆ ತೆರಳಿ, ಮೊದಲೇ ವಿನಂತಿಸಿದಂತೆ ದೇವರ ಮುಂದೆ ದೀಪ ಇಟ್ಟು ಅದರ ಎದುರು ಇಟ್ಟ ಹಣವನ್ನು ಸಂಗ್ರಹಿಸಿದ್ದರ ಪರಿಣಾಮ ಮೂರ್ತಿಗೆ ಬೇಕಾದ ಮೊತ್ತ ಒಟ್ಟಾಗಿದ್ದು ಸುಮಾರು ೬ ಲಕ್ಷ ರೂಪಾಯಿ. ನ್ಯಾಯವಾದಿ, ಗ್ರಾಮಸ್ಥ ಜಿ.ಎ.ಹೆಗಡೆ ಹಾಗೂ ಇತರರ ನೇತೃತ್ವದ ತಂಡ ಪ್ರತೀ ಮನೆಗೂ ತೆರಳಿ ಈ ಜೋಳಿಗಾ ಭಿಕ್ಷಾ ಅಭಿಯಾನ ನಡೆಸಿತ್ತು.-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

ಯಾರು ಎಷ್ಟೇ ದಾನ ನೀಡಿದರೂ ದೇವಾಲಯದಲ್ಲಿ ಯಾದಿ ಹಾಕುವದಿಲ್ಲ. ಎಲ್ಲರ ಶ್ರಮವೂ, ದಾನವೂ ಒಂದೇ. ಲಕ್ಷ ರೂಪಾಯಿ ಕೊಟ್ಟರೂ ಸಮಿತಿಯ ಪಟ್ಟಿಯಲ್ಲಿ ಹೆಸರು ಇರುತ್ತದೆ. ಫಲಕದಲ್ಲಿ ಅಲ್ಲ. ಭಾಸ್ಕರ ಹೆಗಡೆ ಕಾಗೇರಿ, ಸಮಿತಿ ಪ್ರಮುಖ

ಇದು ಗ್ರಾಮ ದೇವರಾದರೂ ಜಿಲ್ಲೆ, ಹೊರ ಜಿಲ್ಲೆಯ ಭಕ್ತಾದಿಗಳು ಇದ್ದಾರೆ. ದೇವರಿಗೆ ಹರಕೆ ಹೇಳಿಕೊಳ್ಳುವವರೂ, ಪ್ರಸಾದ ಕೇಳುವವರೂ ಇದ್ದಾರೆ. ಎಲ್ಲರಿಗೂ ಆಮಂತ್ರಣ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಎಲ್ಲರ ಸಹಕಾರದಿಂದ ಇಷ್ಟು ಅಭಿವೃದ್ಧಿ ಆಗಿದೆ. ಆಗುತ್ತಿದೆ. ಮಂಜುನಾಥ ಭಟ್ಟ ಬೆಳಖಂಡ, ಮೊಕ್ತೇಸರ

Advertisement

Udayavani is now on Telegram. Click here to join our channel and stay updated with the latest news.

Next