Advertisement

ಹೆದ್ದಾರಿ ಬದಿ ಮತ್ತೆ ಬಾಗಿಲು ತೆರೆಯಲು ಬಾರ್‌ಗಳು ಸಿದ್ಧ

10:24 AM Sep 24, 2018 | |

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದ ಮದ್ಯದಂಗಡಿ/ಬಾರ್‌ಗಳು ಮತ್ತೆ ಬಾಗಿಲು ತೆರೆದುಕೊಳ್ಳಲಿವೆ. ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದ ಮೇರೆಗೆ ರಾಜ್ಯ ಸರಕಾರದ ನಿಯಮಾವಳಿಯಂತೆ ಹೆದ್ದಾರಿ ಬದಿ ವ್ಯವಹಾರ ನಡೆಸುತ್ತಿದ್ದು ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಮುಚ್ಚಿದ್ದ ಬಾರ್‌ಗಳ ಪರವಾನಿಗೆ (ಸನ್ನದು) ನವೀಕರಣದ ಜತೆ ವ್ಯವಹಾರ ಆರಂಭಕ್ಕೆ ಅನುಮತಿಸಲಾಗುತ್ತಿದೆ. 

Advertisement

ಐದು ಸಾವಿರಕ್ಕೆ ಮಿತಿ
ಹೊಸ ನಿಯಮಾವಳಿ ಪ್ರಕಾರ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ಹಾಗೂ ಬಾರ್‌ಗಳನ್ನು ಆರಂಭಿಸುವಂತಿಲ್ಲ ಎಂದು ಮಾರ್ಪಾಡು ಮಾಡಲಾಗಿದೆ. ಅದರಂತೆ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯ ಗ್ರಾ.ಪಂ. ಗಳು ಬಹಳ ಕಡಿಮೆಯಲ್ಲಿರುವುದರಿಂದ ಬಹುತೇಕ ಬಾರ್‌ಗಳು ಮತ್ತೆ ವ್ಯವಹಾರ ಆರಂಭಿಸಲಿವೆ.

ಇಪ್ಪತ್ತು ಸಾವಿರದಿಂದ ಇಳಿಕೆ
ಹೆದ್ದಾರಿಗಳಲ್ಲಿ ನಡೆಯುವ ಅಪಘಾತಕ್ಕೆ “ಮದ್ಯದ ನಶೆ’ ಕೂಡ ಕಾರಣ ಎಂದು ಉಲ್ಲೇಖೀಸಿ ಸರ್ವೋಚ್ಚ ನ್ಯಾಯಾಲಯವು ಹೆದ್ದಾರಿ ಬದಿಗಳಲ್ಲಿನ ಮದ್ಯದಂಗಡಿ/ಬಾರ್‌ಗಳನ್ನು ಮುಚ್ಚಲು ಆದೇಶಿಸಿತ್ತು. ಅದರಂತೆ ನಿಯಮಾವಳಿ ರೂಪಿಸಿ ಮೊದಲು ನಗರ ಮತ್ತು ಗ್ರಾಮೀಣ ಭಾಗಗಳಿಗೆ ಅನ್ವಯಿಸಲಾಗಿತ್ತು. ಬಳಿಕ ನಗರ ಪ್ರದೇಶಗಳಿಗೆ ವಿನಾಯಿತಿ ನೀಡಲಾಯಿತು.  ಗ್ರಾಮೀಣ ಪ್ರದೇಶಗಳ ಪೈಕಿ 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಮತ್ತು ರಾಜಹೆದ್ದಾರಿಯ 500 ಮೀಟರ್‌ ಹಾಗೂ ಅದಕ್ಕಿಂತ ಕಡಿಮೆ ಸಂಖ್ಯೆ ಇರುವ ಗ್ರಾ.ಪಂ.ಗಳ ವ್ಯಾಪ್ತಿಯರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 220
ಮೀಟರ್‌ ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಜನಸಂಖ್ಯೆಯೊಂದನ್ನು ಹೊರತುಪಡಿಸಿದರೆ ಬೇರೆ ಷರತ್ತು ಹೊಸ ನಿಯಮಾವಳಿಯಲ್ಲಿಲ್ಲ. 

ಸ್ಥಳಾಂತರಗೊಂಡ ಬಾರ್‌ಗಳು ಬಾಕಿ
ಹೆದ್ದಾರಿಯಲ್ಲಿದ್ದು ನ್ಯಾಯಾಲಯದ ಆದೇಶದಂತೆ ವ್ಯವಹಾರ ಸ್ಥಗಿತಗೊಳಿಸಿದ್ದ ಮದ್ಯದಂಗಡಿ/ ಬಾರ್‌ಗಳಿಗೆ ಸದ್ಯ ಪರವಾನಿಗೆ ನವೀಕರಣಗೊಳಿಸಿ ವ್ಯವಹಾರ ಆರಂಭಿಸಲು ಅನುಮತಿಸಲಾಗುತ್ತಿದೆ. ಈ ಹಿಂದೆ ಹೆದ್ದಾರಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ನ್ಯಾಯಾಲಯದ ಆದೇಶದ ಬಳಿಕ ಅಲ್ಲಿಂದ ದೂರಕ್ಕೆ (500/220 ಮೀಟರ್‌)ಹೋಗಿ ವ್ಯವಹಾರ ನಡೆಸುತ್ತಿದ್ದ ಮದ್ಯದಂಗಡಿ, ಬಾರ್‌ಗಳಿಗೆ ಮತ್ತೆ ಮೊದಲಿನ ಸ್ಥಳದಲ್ಲೇ ವ್ಯವಹಾರ ನಡೆಸಲು ಅವಕಾಶ ನೀಡುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. 

ದ.ಕ .13, ಉಡುಪಿ 18
ಹೊಸ ನಿಯಮಾವಳಿಯಂತೆ ದ.ಕ. ಜಿಲ್ಲೆಯಲ್ಲಿ 13 ಬಾರ್‌ಗಳಿಗೆ ನವೀಕರಣ ಅವಕಾಶವಿದ್ದು, 6 ಮಂದಿ ಅನುಮತಿ ಕೋರಿದ್ದಾರೆ. ಈ ಹಿಂದೆ ಸ್ಥಗಿತಗೊಂಡಿದ್ದ ಒಟ್ಟು 15 ಮದ್ಯದಂಗಡಿ/ ಬಾರ್‌ಗಳ ಪೈಕಿ ಎರಡು ಬಾರ್‌ಗಳು ಇರುವ ಗ್ರಾ.ಪಂ.ನ ಜನಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಇರುವುದರಿಂದ ಅನುಮತಿ ಸಾಧ್ಯವಿಲ್ಲ ಎಂದು ದ.ಕ. ಅಬಕಾರಿ ಡಿ.ಸಿ ತಿಳಿಸಿದ್ದಾರೆ. 
ಉಡುಪಿಯಲ್ಲಿ 18 ಸನ್ನದುಗಳು ನವೀಕರಣಗೊಳ್ಳಲಿವೆ. ನವೀಕರಣ ವೇಳೆ ಜನಸಂಖ್ಯೆಯ ಬಗ್ಗೆ ತಹಶೀಲ್ದಾರ್‌ರಿಂದ ಪಡೆದ ಪ್ರಮಾಣಪತ್ರವನ್ನು ಒದಗಿಸುವುದು ಕಡ್ಡಾಯ ಎಂದು ಅಬಕಾರಿ ಉಡುಪಿ ಡಿಸಿ ಪ್ರತಿಕ್ರಿಯಿಸಿದ್ದಾರೆ.  ಉಡುಪಿ ತಾಲೂಕಿನಲ್ಲಿ 5,000ಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ 14 ಗ್ರಾ.ಪಂ.ಗಳಿವೆ. ಜಿಲ್ಲೆಯಲ್ಲಿ ಇಂತಹ ಸುಮಾರು 50 ಗ್ರಾ.ಪಂ.ಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಆದೇಶದಲ್ಲೇನಿದೆ?
ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ “ಸಾಕಷ್ಟು ಅಭಿವೃದ್ಧಿ’ ಪರಿಭಾಷೆಯಲ್ಲಿ 2011ರ ಜನಗಣತಿಯಂತೆ 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಬರುವ ಸನ್ನದುಗಳಿಗೆ ವಿನಾಯಿತಿ ನೀಡಲು ಸರಕಾರ ತೀರ್ಮಾನಿಸಿದೆ ಎಂದು ಆರ್ಥಿಕ ಇಲಾಖೆ (ಅಬಕಾರಿ)ಯ ಅಧೀನ ಕಾರ್ಯದರ್ಶಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. 

* ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next