Advertisement

Barkur: ಮೀನು ಹಿಡಿಯಲು ನದಿಗಿಳಿದ ಯುವಕರಿಬ್ಬರು ಸಾವು

08:44 PM Mar 26, 2024 | Team Udayavani |

ಬಾರಕೂರು: ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

Advertisement

ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್‌ ಪೂಜಾರಿ (34) ಮೃತಪಟ್ಟವರು. ಅವರು ಮಂಗಳವಾರ ಬೆಳಗ್ಗೆ ಮೀನು ಹಿಡಿಯಲೆಂದು ಸಮೀಪದ ನಾಗರಮಠದ ಸೀತಾ ನದಿಗೆ ಹೋಗಿದ್ದು ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದರು. ಅವರಿಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಸ್ಥಳೀಯರೊಬ್ಬರು ರಕ್ಷಿಸಲು ಬಂದರೂ ನೀರಿನ ಸೆಳೆತ ಜೋರಾಗಿದ್ದರಿಂದ ಯುವಕರು ನೀರುಪಾಲಾದರು.

ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ, ಈಜು ತಜ್ಞ ಈಶ್ವರ ಮಲ್ಪೆ ಹಾಗೂ ಸ್ಥಳೀಯರು ಆಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲೆತ್ತಿದರು. ಜೀವನ್‌ ಮಿತ್ರ ನಾಗರಾಜ ಪುತ್ರನ್‌ ಅವರು ಮೃತ ದೇಹಗಳನ್ನು ಶವಾಗಾರಕ್ಕೆ ಸಾಗಿಸಿದರು.

ಬ್ರಹ್ಮಾವರ ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ ಹಾಗೂ ಠಾಣಾಧಿಕಾರಿ ಮಧು ಬಿ.ಇ. ಸ್ಥಳಕ್ಕೆ ಭೇಟಿ ನೀಡಿದರು.

ಹುಣ್ಣಿಮೆ ಪಾಡ್ಯ
ಹುಣ್ಣಿಮೆಯ ಮಾರನೇ ದಿನವಾದ್ದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಯುವಕರು ಸ್ಥಳೀಯರೇ ಆಗಿದ್ದು, ಪರಿಚಯದ ಜಾಗವಾದರೂ ಆಳ ಅರಿಯದೆ ಮುಳುಗಿದರು ಎನ್ನಲಾಗಿದೆ.

Advertisement

ಶ್ರಮ ಜೀವಿಗಳು
ಯುವಕರಿಬ್ಬರೂ ಶ್ರಮಜೀವಿಗಳಾಗಿದ್ದರು. ಪ್ರಶಾಂತ ತೆಂಗಿನಕಾಯಿ, ಎಳನೀರು ತೆಗೆಯುವ ಕಾರ್ಯ ಮಾಡುತ್ತಿದ್ದರೆ, ಶ್ರೀಶ ಐಟಿಐ ಮುಗಿಸಿ ಉದ್ಯೋಗ ಅರಸುತ್ತಿದ್ದು ನಡುವೆ ಗಾರೆ, ಬೋಟ್‌ ಕೆಲಸಕ್ಕೆ ತೆರಳುತ್ತಿದ್ದರು. ಇಬ್ಬರೂ ಬಿಡುವಿನ ವೇಳೆಯಲ್ಲಿ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗುತ್ತಿದ್ದರು.

ಪ್ರಶಾಂತ ಅವರು ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಶ್ರೀಶ ಅವರು ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next