Advertisement

ಬರ್ಕಣಾ ಜಲಪಾತದ ವೈಭೋಗ

03:59 PM Jun 27, 2021 | Team Udayavani |

ಸುತ್ತ ಹಸುರ ಕೇಶರಾಶಿಯ ಮಧ್ಯೆ ಬೈತಲೆಯಂತೆ ಸಾಗುವ ಕಣಿವೆ. ಬೆಟ್ಟ – ಗುಡ್ಡಗಳ ಸಾಲು, ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಹಸುರ ಬೆಟ್ಟಗಳ ಸಾಲಿನಿಂದ, ಕಲ್ಲು- ಬಂಡೆಗಳ ಮಧ್ಯದಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ. ಇದು ದಕ್ಷಿಣದ ಚಿರಾಪುಂಜಿಯೆಂದೇ ಹೆಸರುವಾಸಿಯಾದ ಆಗುಂಬೆ ಸಮೀಪದ ಮಲ್ಲಂದೂರಿನಲ್ಲಿ ವೈಭವದಿ ಹರಿಯುವ ಬರ್ಕಣಾ ಜಲಪಾತದ ಸೊಬಗು.

Advertisement

ಆಗುಂಬೆ ಎಂದರೆ ಸಾಕು ಸಾಲು – ಸಾಲು ಜಲಪಾತಗಳು ನಮ್ಮನ್ನು ಕೈ ಬೀಸಿ ಕರೆಯುತ್ತವೆ. ಬರ್ಕಣಾ, ಒನಕಿ ಅಬ್ಬಿ, ಜೋಗಿ ಗುಂಡಿ, ಕುಂಚಿಕಲ್‌ ಹೀಗೆ ಮುಂದುವರಿಯುತ್ತದೆ. ಅದರಲ್ಲೂ ಡಾ| ರಾಜಕುಮಾರ್‌ ಅಭಿನಯದ ಆಕಸ್ಮಿಕ ಸಿನೆಮಾ ಚಿತ್ರೀಕರಣಗೊಂಡ ಬರ್ಕಣಾ ಜಲಪಾತವಂತೂ ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಬಂಡೆಗಳ ಮೇಲಿನಿಂದ ಜುಳು – ಜುಳು ನಿನಾದಗೈಯ್ಯುತ್ತಾ, ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ಆಗಾಗ ಬರುವ ಮಳೆಗೆ ಬೆಟ್ಟಗಳ ಸಾಲು ಹಸಿರೊದ್ದು ಝೇಂಕರಿಸುತ್ತಿದ್ದರೆ, ಮಂಜಿನ ಕಣ್ಣಮುಚ್ಚಾಲೆ ಆಟವು ನಿಸರ್ಗದ ನೈಜ ಸಂಪತ್ತನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.

ಬರ್ಕಣಾ ಜಲಪಾತವು ದೇಶದ 11ನೇ ಅತೀ ಎತ್ತರದ ಜಲಪಾತವಾಗಿದ್ದು, ಇಲ್ಲಿ ಸುಮಾರು 850 ಅಡಿ ಎತ್ತರದಿಂದ ಕಲ್ಲು, ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶಗಳ ಮಧ್ಯೆ ಇರುವ ಈ ಜಲಪಾತವು ಇಲ್ಲಿಗೆ ಬರುವ ಪ್ರವಾಸಿಗರು, ಚಾರಣಿಗರಿಗೆ ವಿಶಿಷ್ಟ ಅನುಮತಿಯನ್ನು ನೀಡುತ್ತದೆ. ಬರ್ಕಣಾ ವೀಕ್ಷಕ ತಾಣ (ಬರ್ಕಣಾ ವ್ಯೂ ಪಾಯಿಂಟ್)ವು ಪಶ್ಚಿಮ ಘಟ್ಟಗಳ ರುದ್ರರಮಣೀಯ ಸೌಂದರ್ಯವನ್ನು ತೆರೆದಿಡುತ್ತದೆ.

Advertisement

ನರಸಿಂಹ ಪರ್ವತದಲ್ಲಿ ಹುಟ್ಟಿ, ಆಗುಂಬೆಯನ್ನು ದಾಟಿಕೊಂಡು, ಸೋಮೇಶ್ವರದಲ್ಲಿ ಹರಿದು, ಉಡುಪಿಯಲ್ಲಿ ಸಮುದ್ರ ಸೇರುವ ಸೀತಾ ನದಿಯು ಈ ಬರ್ಕಣಾ ಜಲಪಾತವನ್ನು ದಾಟಿಯೇ ಮುನ್ನಡೆಯುವುದು ವಿಶೇಷ.

ಈ ಬರ್ಕಣಾ ಜಲಪಾತವು ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯವರ ಅನುಮತಿ ತೆಗೆದುಕೊಂಡೇ ಹೋಗುವುದು ಸೂಕ್ತ.

ಯಾವಾಗ ಸೂಕ್ತ?:

ಇಲ್ಲಿಗೆ ವರ್ಷದ ಎಲ್ಲ ದಿನಗಳಲ್ಲೂ ಭೇಟಿ ನೀಡಬಹುದಾದರೂ, ಸಪ್ಟೆಂಬರ್‌, ಡಿಸೆಂಬರ್‌, ಜನವರಿ ತಿಂಗಳಲ್ಲಿ ಇಲ್ಲಿಗೆ ಬಂದಲ್ಲಿ ಅತ್ಯದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಬೇಸಿಗೆಯಲ್ಲಿ ಜಲಪಾತದಲ್ಲಿ ಅಷ್ಟೇನು ನೀರಿನ ಹರಿವು ಇರುವುದಿಲ್ಲ. ಅಷ್ಟೊಂದು ಆಕರ್ಷಕವಾಗಿಯೂ ಇರುವುದಿಲ್ಲ.

ದಾರಿ ಹೇಗೆ?:

ಬರ್ಕಣಾ ಜಲಪಾತವು ಆಗುಂಬೆಯಿಂದ 8 ಕಿ.ಮೀ. ದೂರದಲ್ಲಿದ್ದು, ಅಲ್ಲಿಂದ ಶೃಂಗೇರಿಗೆ ಹೋಗುವ ಮಾರ್ಗದ ಕಡೆಗೆ ಬರುವಾಗ ಮಲ್ಲಂದೂರು ಗ್ರಾಮದ ಕಡೆಗೆ ಸಂಚರಿಸುವ ರಸ್ತೆ ಸಿಗುತ್ತದೆ. ಆ ಮಾರ್ಗದಲ್ಲಿ ಸುಮಾರು 3 ಕಿ.ಮೀ. ಪರ್ವತ ಹಾದಿಗಳ ಮಧ್ಯೆ, ಚಾರಣ ಮಾಡಿಕೊಂಡು ಬರ್ಕಣಾ ಜಲಪಾತವನ್ನು ತಲುಪಬಹುದು. ಈ ಜಲಪಾತವನ್ನು ತಲುಪಲು ಸುಮಾರು 5 ಕಿ.ಮೀ.ವರೆಗೆ ದಾರಿಯಿದ್ದು, ಅಲ್ಲಿಂದ ಮುಂದಕ್ಕೆ 3 ಕಿ.ಮೀ. ಕಾಲ್ನಡಿಗೆಯಿಂದಲೇ ಸಂಚರಿಸಬೇಕು. ಇನ್ನು ಉಡುಪಿಯಿಂದ 60 ಕಿ.ಮೀ., ಮಂಗಳೂರಿನಿಂದ 105 ಕಿ.ಮೀ., ಶಿವಮೊಗ್ಗದಿಂದ 100 ಕಿ.ಮೀ., ತೀರ್ಥಹಳ್ಳಿಯಿಂದ 38 ಕಿ.ಮೀ., ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿದೆ. ಟ್ರೆಕ್ಕಿಂಗ್‌ ಮಾಡುವವರಿಗೆ ಇದು ಒಳ್ಳೆಯ ಪ್ರವಾಸಿ ತಾಣ.

 

ಸಿಂಚನಾ ಎಂ.ಆರ್‌.

ಆಗುಂಬೆ

Advertisement

Udayavani is now on Telegram. Click here to join our channel and stay updated with the latest news.

Next