Advertisement

Crime: ಸ್ನೇಹಿತನ ಬರ್ಬರ ಹತ್ಯೆ: ರೌಡಿ ಶೀಟರ್‌ ಸೇರಿ ಇಬ್ಬರ ಬಂಧನ

01:16 PM Aug 04, 2024 | Team Udayavani |

ಬೆಂಗಳೂರು: ಮಹಿಳೆಯ ಜೊತೆಗಿನ ಅಕ್ರಮ ಸಂಬಂಧದ ವಿಚಾರವಾಗಿ ಸಹಚರರೊಂದಿಗೆ ಸೇರಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್‌ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದಯಾನಂದನಗರ ಸ್ಲಂ ನಿವಾಸಿ ಸೈಯದ್‌ ಇಸಾಕ್‌ (31) ಹತ್ಯೆಯಾದವನು.

ಸಿದ್ದಾಪುರ ಠಾಣಾ ರೌಡಿ ಶೀಟರ್‌ ವೆಂಕಟೇಶ ಅಲಿಯಾಸ್‌ ಒಂಟಿ ಕೈ ವೆಂಕಟೇಶ್‌, ಅಜಯ್‌ ಬಂಧಿತರು. ಗೋದ್ರೇಜ್‌ ಬೀರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಸಾಕ್‌, ರೌಡಿಶೀಟರ್‌ ಒಂಟಿ ಕೈ ವೆಂಕಟೇಶ್‌ ಹಾಗೂ ಅಜಯ್‌ ಮೂವರೂ ಸ್ನೇಹಿತರಾಗಿದ್ದರು. ಈ ಹಿಂದೆ ಈ ಮೂವರು ಕೊಲೆ ಯತ್ನ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಇಸಾಕ್‌ಗೆ ಮದುವೆಯಾಗಿ ಒಂದು ಮಗು ಇದ್ದರೂ ಇವರ ಗುಂಪಿನಲ್ಲೇ ಗುರುತಿಸಿಕೊಂಡಿದ್ದ ಸ್ನೇಹಿತನೊಬ್ಬನ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವು ಸ್ನೇಹಿತನ ಗಮನಕ್ಕೆ ಬಂದು ಆತ ಒಂಟಿ ಕೈ ವೆಂಕಟೇಶ್‌ ಬಳಿ ಈ ವಿಚಾರ ಹೇಳಿಕೊಂಡಿದ್ದ. ಇಸಾಕ್‌ನನ್ನು ಕರೆಸಿಕೊಂಡ ವೆಂಕಟೇಶ್‌ ಸ್ನೇಹಿತನ ಪತ್ನಿಯ ಜೊತೆಗೆ ಸಲುಗೆಯಿಂದ ಇರುವುದನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದ.

ಇದರಿಂದ ಆಕ್ರೋಶಗೊಂಡ ಇಸಾಕ್‌ ವೆಂಕಟೇಶ್‌ನನ್ನು ಕೊಲೆ ಮಾಡುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಇದು ವೆಂಕಟೇಶ್‌ ಗಮನಕ್ಕೂ ಬಂದಿತ್ತು. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಸೈಯದ್‌ ಇಸಾಕ್‌ ನಡೆದು ಹೋಗುತ್ತಿದ್ದಾಗ ರೌಡಿ ವೆಂಕಟೇಶ್‌ ಎದುರಾಗಿದ್ದ. ಆ ವೇಳೆ ನೀನು ನನ್ನನ್ನು ಕೊಲೆ ಮಾಡುವುದಾಗಿ ಹೇಳಿದ್ದಿಯಂತೆ ಎಂದು ಪ್ರಶ್ನಿಸಿದ್ದ. ಕೊಲೆ ಮಾಡುತ್ತೀಯಾ ಬಾ ಎಂದು ಬೆದರಿಸಿ ಜಗಳವಾಡಿದ್ದ. ಇಬ್ಬರೂ ಜಗಳವಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ್ದರು. ಇದರಿಂದ ಕೆರಳಿದ ವೆಂಕಟೇಶ್‌ ತನ್ನ ಸಹಚರ ಅಜಯ್‌ ಜೊತೆಗೆ ಸೇರಿ ಇಸಾಕ್‌ ಹತ್ಯೆಗೆ ಸಂಚು ರೂಪಿಸಿದ್ದ. ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ದಯಾನಂದನಗರದ ಸ್ಲಂ ಬಳಿಯ ಮೋರಿ ಬಳಿ ಇಸಾಕ್‌ ಜತೆ ಮತ್ತೆ ಜಗಳ ತೆಗೆದು ಮಾರಕಾಸ್ತ್ರದಿಂದ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next