ಪುಂಜಾಲಕಟ್ಟೆ: ಗ್ರಾಮ ಪಂಚಾಯತ್ಗಳು, ಪುರಸಭೆಯು ಮನೆ ಮನೆಗೆ ಬಂದು ಹಸಿ ಕಸ ಒಣ ಕಸವನ್ನು ಪ್ರತ್ಯೇಕಿಸಿ ಕಸ ವಿಲೇವಾರಿಗೆ ಹಲವಾರು ಕ್ರಮ ಕೈಗೊಂಡಿದ್ದರೂ ರಸ್ತೆ ಬದಿ ಕಸ, ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷé ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬಂಟ್ವಾಳ -ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಕಸದ ರಾಶಿ ಕಂಡು ಬರುತ್ತದೆ. ಪಂಚಾಯತ್ಗಳು, ಬಂಟ್ವಾಳ ಪುರಸಭೆ ಇದನ್ನು ತೆರವುಗೊಳಿಸಿದರೂ ಮತ್ತೆ ಮತ್ತೆ ಕಸದ ರಾಶಿ ಪ್ರತ್ಯಕ್ಷವಾಗುತ್ತದೆ. ಹೊಟೇಲ್ಗಳು, ಅಂಗಡಿ ವ್ಯಾಪಾರಸ್ಥರು, ವಾಹನ ಪ್ರಯಾಣಿಕರು ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿ ಎಸೆಯುವುದು ಜತೆಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಜನರಹಿತ ರಸ್ತೆ ಬದಿಗಳಲ್ಲಿ ಬಿಸಾಡುತ್ತಾರೆ. ಹಲವೆಡೆ ಇಂತಹ ತ್ಯಾಜ್ಯಗಳ ರಾಶಿಯೇ ತುಂಬಿರುತ್ತದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುವವರಿಗೆ ದಂಡದ ಜತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಇದ್ದರೂ ರಸ್ತೆ ಬದಿ ಕಸ ಎಸೆಯುವವರು ನಿರಾತಂಕವಾಗಿ ತಮ್ಮ ಕಾರ್ಯ ನಡೆಸುತ್ತಲೇ ಇದ್ದಾರೆ.
ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ, ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ರಸ್ತೆ ಬದಿ ಇಂತಹ ಕಸ ಶೇಖರಣೆಯಾಗಿದೆ. ಕಾವಳಕಟ್ಟೆ, ಎನ್.ಸಿ. ರೋಡ್ಗಳಲ್ಲಿ ಜೆಸಿಬಿ ಯಂತ್ರದಿಂದ ಕಸ ತೆಗೆದು ಚರಂಡಿ ದುರಸ್ತಿಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೂ ಕೆಲವರು ಅದೇ ಚರಂಡಿಗೆ ಕಸ ತಂದು ಎಸೆದಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಕಸ ಬಿಸಾಡದಂತೆ ಎಚ್ಚರಿಕೆ ಬೋರ್ಡ್ ಹಾಕಿದ್ದರೂ ಅಲ್ಲಿಯೇ ಕಸ ಎಸೆಯುವುದನ್ನು ತಡೆಯುವುದು ಸವಾ ಲಾಗಿದೆ. ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ವಿಧಿಸಬೇಕಾಗಿದೆ.
Related Articles
ಪರಿಸರ ಮಾಲಿನ್ಯ
ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಜನರಹಿತ ಪ್ರದೇಶಗಳು ಇಂತಹ ಅಕ್ರಮ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ. ನಿರ್ಜನ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳಿರುವ ಪ್ಲಾಸ್ಟಿಕ್ ಚೀಲಗಳನ್ನು ಎಸೆದು ಪರಾರಿಯಾಗುತ್ತಾರೆ. ಇದರಲ್ಲಿ ಕೋಳಿ ತ್ಯಾಜ್ಯಗಳೂ ತುಂಬಿರುತ್ತದೆ. ಇದು ದುರ್ನಾತವನ್ನು ಬೀರಿ ಪರಿಸರವನ್ನು ಮಾಲಿನ್ಯಗೊಳಿಸುತ್ತವೆ.