Advertisement
ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಂಗಾಧರ ಪೂಜಾರಿ ವಿಷಯ ಪ್ರಸ್ತಾವಿಸಿ, ಪುರಸಭಾ ಪಂಪುಹೌಸ್ಗೆ ಸಿಬಂದಿ ನೇಮಕಕ್ಕೆ ಕಳೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದು ಏನಾಗಿದೆ ಎಂದರು. ಇನ್ವರ್ಟರ್ ಅಳವಡಿಕೆಯ ನಿರ್ಣಯವೂ ಪ್ರಸ್ತಾವವಾಯಿತು. ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದೇ ಇದ್ದಾಗ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ಎಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ ಮಾತನಾಡಿ, ತನಗೆ ಹಲವು ಜವಾಬ್ದಾರಿಗಳನ್ನು ನೀಡಿದ ಪರಿಣಾಮ ಯಾವುದೇ ಕೆಲಸಗಳನ್ನು ಮಾಡಲು ಆಗುತ್ತಿಲ್ಲ ಎಂದರು. ಇಲ್ಲಿ ಯಾವುದೇ ಕೆಲಸಕ್ಕೆ ಸಮರ್ಪಕ ಸಿಬಂದಿಯಿಲ್ಲ ಎಂದು ಸಿಬಂದಿ ರಝಾಕ್ ಹೇಳಿದರು. ನಿರ್ಣಯಗಳು ಅನುಷ್ಠಾನ ಆಗದೇ ಇರುವ ಕುರಿತು ಸದಸ್ಯ ಎ.ಗೋವಿಂದ ಪ್ರಭು ಅಧ್ಯಕ್ಷರ ವಿರುದ್ಧ ಆರೋಪಿಸಿದಾಗ, ಅಧಿಕಾರಿಗಳು ಯಾಕೆ ಇರುವುದು, ಕೇವಲ ಸಂಬಳ ತೆಗೆದುಕೊಳ್ಳುವುದಕ್ಕಾ ಎಂದು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಸಂಚಾರ ಸಮಸ್ಯೆ ಪ್ರಸ್ತಾವ
ಮೆಲ್ಕಾರ್ ಭಾಗದಲ್ಲಿ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಸಿಬಂದಿಯನ್ನು ನೇಮಿಸುವಂತೆ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಆಗ್ರಹಿಸಿದರು. ಬಂಟ್ವಾಳ ಪೇಟೆಯಲ್ಲಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಗೋವಿಂದ ಪ್ರಭು ಹೇಳಿದರು. ಜಕ್ರಿಬೆಟ್ಟು ಭಾಗದಲ್ಲಿ ಹೆಚ್ಚಿನ ಅಪಘಾತಗಳು ಉಂಟಾಗುತ್ತಿದೆ ಎಂದು ಸದಸ್ಯ ಜರ್ನಾರ್ದನ ಚಂಡ್ತಿಮಾರ್ ಪ್ರಸ್ತಾವಿಸಿದರು. ಟ್ರಾಫಿಕ್ ಜಾಮ್ ಹಾಗೂ ವಾಹನಗಳ ಪಾರ್ಕಿಂಗ್ ಸಮಸ್ಯೆಗಳ ಕುರಿತು ಸದಸ್ಯರ ದೂರುಗಳನ್ನು ದಾಖಲಿಸಿಕೊಂಡ ಸಂಚಾರ ಪೊಲೀಸ್ ಠಾಣೆಯ ವಿಜಯ್ ಗರಿಷ್ಠ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.