ಉಡುಪಿ: ಒಂದೆಡೆ ನೀರಿನ ಕೊರತೆ ಅನುಭವಿಸುತ್ತಿದ್ದರೆ ಇನ್ನೊಂದೆಡೆ ನೀರು ಪೋಲಾಗುತ್ತಿರುವುದನ್ನು ಕಂಡೂ ಉತ್ತರದಾಯಿಗಳು ಸುಮ್ಮನಾಗಿರುವುದು ಕಂಡುಬರುತ್ತಿದೆ.
ಬನ್ನಂಜೆಯ ಮಂಜುನಾಥ ಆಸ್ಪತ್ರೆ ಬಳಿ, ವಿಜಯ ಜುವೆಲರ್ ಎದುರಿನಲ್ಲಿ ರಾ.ಹೆ.ಯ ಎಡ ಪಾರ್ಶ್ವದ ಫುಟ್ಪಾತ್ಗೆ ತಾಗಿಕೊಂಡ ಭಾಗದಲ್ಲಿ ನಗರಸಭೆಗೆ ಸಂಬಂಧಿಸಿದ ನೀರಿನ ಪೈಪ್ಲೈನ್ ಆಗಸ್ಟ್ನಲ್ಲಿಯೇ ಒಡೆದು ಹೋಗಿದ್ದು, ಹಗಲು ರಾತ್ರಿಯೆನ್ನದೆ ಕುಡಿಯುವ ನೀರು ಪೋಲಾಗುತ್ತಿದೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದ್ದರೂ ಇನ್ನೂ ರಿಪೇರಿಗೊಳಿಸಿಲ್ಲ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನಹರಿಸಿ ಪೈಪ್ಲೈನ್ ರಿಪೇರಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೀರು ಪೋಲಾಗುತ್ತಿರುವ ಇಲ್ಲಿ ಅಳವಡಿಸಲಾದ ಇಂಟರ್ಲಾಕ್ ಕಿತ್ತು ಹೋಗಿ ಸುಮಾರು 2-3 ಅಡಿಯ ಹೊಂಡ ನಿರ್ಮಾಣವಾಗಿದೆ. ಇದಕ್ಕೆ ಆಗಾಗ ಹಲವಾರು ಕಾರು, ರಿಕ್ಷಾ, ದ್ವಿಚಕ್ರವಾಹನಗಳು ಬಿದ್ದ ಘಟನೆಯೂ ನಡೆದಿದೆ. ಈ ಕುರಿತು ನಗರಸಭೆಗೆ ಆ. 20ಕ್ಕೆ ದೂರು ನೀಡಲಾಗಿದ್ದು, ನಗರಸಭೆ ಅಧಿಕಾರಿಗಳು ಮಳೆಗಾಲ, ಚುನಾವಣೆಯ ನೆಪವೊಡ್ಡಿ ಪೈಪ್ಲೈನ್ ರಿಪೇರಿಗೊಳಿಸದೆ, ಇದುವರೆಗೂ ಸಮಸ್ಯೆ ಜೀವಂತವಾಗಿ ಉಳಿದುಕೊಂಡಿದೆ. ಫುಟ್ಪಾತ್ನಲ್ಲಿ ನಿರಂತರವಾಗಿ ಸಂಚರಿಸುವ ಪಾದಾಚಾರಿಗಳು, ಬೆಳಗ್ಗೆ, ಸಂಜೆ ಸಮಯ ಶಾಲಾ ಮಕ್ಕಳು ನಡೆದಾಡುತ್ತಾರೆ. ವಯೋವೃದ್ಧರು, ಶಾಲಾ ಮಕ್ಕಳು ಆಯ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸುವ ಮೊದಲು ನಗರಸಭೆ ಪೈಪ್ಲೈನ್ ರಿಪೇರಿಗೊಳಿಸಿ, ಹೊಂಡ ಮುಚ್ಚಿ, ಇಂಟರ್ಲಾಕ್ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೊನೆಗೂ ಬ್ಯಾರಿಕೇಡ್ ಅಳವಡಿಕೆ
ಅಪಾಯ ಎದುರಿಸುತ್ತಿರುವ ಈ ಭಾಗಕ್ಕೆ ಬ್ಯಾರಿಕೇಡನ್ನಾದರೂ ಅಳವಡಿಸುವಂತೆ ನಗರಸಭೆಗೆ ಹಲವು ಬಾರಿ ದೂರವಾಣಿ ಮೂಲಕ ಭಿನ್ನವಿಸಿಕೊಂಡ 10 ದಿನಗಳ ಬಳಿಕ ಬ್ಯಾರಿಕೇಡ್ ಅಳವಡಿಸಿದ್ದಾರೆ. 2 ತಿಂಗಳಿಂದಲೂ ಕುಡಿಯುವ ನೀರು ಅನಾವಶ್ಯಕವಾಗಿ ಹರಿದು ಪೋಲಾಗುತ್ತಿರುವ ಬಗ್ಗೆ ಹಲವು ಬಾರಿ ಹೇಳಿಕೊಂಡರೂ ಪ್ರಯೋಜನವಾಗಿಲ್ಲ.
– ಜೀವನ ಕುಮಾರ್ ಶೆಟ್ಟಿ, ಸ್ಥಳೀಯರು