Advertisement

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

12:49 AM May 01, 2024 | Team Udayavani |

ಮಣಿಪಾಲ: ಜಿಲ್ಲಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನಸಾಮಾನ್ಯರು ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿ, ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.

ನಗರ ಅಥವಾ ಗ್ರಾಮೀಣ ಭಾಗದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆಗೆ ಸಂಬಂಧಿಸಿದ ದೂರು ಬಂದ 24 ಗಂಟೆಯೊಳಗೆ ಅದಕ್ಕೆ ಪರಿಹಾರ ನೀಡಬೇಕು. ಮಳೆ ಬರುವವರೆಗೂ ನೀರಿನ ಸಮಸ್ಯೆಗೆ ಸ್ಪಂದಿಸಲು ಸದಾ ಸನ್ನದ್ಧರಾಗಿರಬೇಕು ಎಂದರು.

ಮೇವಿನ ಕೊರತೆ ಇಲ್ಲ
ಜಾನುವಾರುಗಳಿಗೆ ಮೇವಿನ ಕೊರತೆ ಈವರೆಗೂ ಕಂಡುಬಂದಿಲ್ಲ. ಜಿಲ್ಲೆಯಲ್ಲಿ 2.20 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು, ಮುಂದಿನ 14 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ರೈತರು ತಮ್ಮ ಜಾನುವಾರುಗಳಿಗೆ ಮೇವಿನ ಅಭಾವವಾದಲ್ಲಿ ಜಿಲ್ಲೆಯ ಗೋಶಾಲೆ ಗಳಿಗೆ ದನ-ಕರುಗಳನ್ನು ಬಿಡಬಹುದು. ಮೇವಿನ ಕೊರತೆ ಉಂಟಾದ ರೈತರ ಜಾನುವಾರುಗಳಿಗೆ ಸರಕಾರಿ ದರದಲ್ಲಿ ಮೇವು ಒದಗಿಸಲಾಗುವುದು. ಹಾಲು ಉತ್ಪಾದಕರ ಒಕ್ಕೂಟದ ಮೂಲಕ ಮೇವು ಮಿನಿಕಿಟ್‌ಗಳನ್ನು ರೈತರಿಗೆ ವಿತರಿಸಿದ್ದು, 979.5 ಎಕ್ರೆ ಪ್ರದೇಶದಲ್ಲಿ ಮೇವನ್ನು ಬೆಳೆಸಲಾಗಿದ್ದು, ಸುಮಾರು 9,795 ಮೆಟ್ರಿಕ್‌ನಷ್ಟು ಉತ್ಪಾದನೆ ಮಾಡಲಾಗಿದೆ. ಇವುಗಳ ಜತೆಯಲ್ಲಿ ಪಶು ಆಹಾರಗಳನ್ನು ಸಹ ರೈತರಿಗೆ ಒದಗಿಸಲಾಗಿದೆ ಎಂದರು.

ವಿದ್ಯುತ್‌ ಸಂಪರ್ಕ
ಬಾಧಿತವಾಗದಿರಲಿ
ಮಳೆ-ಗಾಳಿಯಿಂದ ವಿದ್ಯುತ್‌ ಕಂಬಗಳು ಹಾಗೂ ವಿದ್ಯುತ್‌ ತಂತಿಗಳು ತುಂಡಾದಲ್ಲಿ ಕೂಡಲೇ ಅವುಗಳನ್ನು ಬದಲಾಯಿಸಲು ಸಿದ್ಧರಾಗಿ, ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆ ಬದಿಯಲ್ಲಿರುವ ಅಪಾಯಕಾರಿಯಾಗುವಂತಹ ಹಾಗೂ ವಿದ್ಯುತ್‌ ಲೈನ್‌ಗಳಿಗೆ ತೊಂದರೆ ಉಂಟು ಮಾಡುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸ ಬೇಕೆಂದು ಸೂಚನೆ ನೀಡಿದರು.

Advertisement

ನೀರು ಸರಬರಾಜು
ನೀರೆ, ಪೆರ್ಡೂರು, ಮುದ್ರಾಡಿ, ಬೆಳ್ವೆ, ಉಪ್ಪುಂದದ ಗ್ರಾಮದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಈಗಾಗಲೇ ಉಂಟಾಗಿದೆ. ಎಸ್‌ಎಲ್‌ಆರ್‌ಎಂ ವಾಹನಗಳಲ್ಲಿ ಸಿಂಟಟೆಕ್ಸ್‌ಗಳನ್ನು ಅಳವಡಿಸಿಕೊಂಡು ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಲೂಕು ಮಟ್ಟದಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್‌ ಸಮಿತಿಗಳು ನಿರಂತರವಾಗಿ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ್ದಲ್ಲಿ, ಸರಬರಾಜು ಮಾಡಿದ 15 ದಿನಗಳ ಒಳಗಾಗಿ ಹಣ ಪಾವತಿ ಮಾಡಬೇಕು. ಪಾವತಿಗೂ ಮುನ್ನ ಸರಕಾರದ ಕಾರ್ಯಸೂಚಿಯನ್ವಯ ನಿಗದಿತ ದಾಖಲೆಗಳನ್ನು ಒದಗಿಸಿ, ಅನುಮೋದನೆ ಪಡೆಯಬೇಕು ಎಂದು ನಿರ್ದೇಶಿಸಿದರು.

ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವುಗೊಳಿಸಬೇಕು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಮನೆಗಳಿಗೆ ನುಗ್ಗದಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾ ವಿಪತ್ತು ನಿರ್ವಹಣ ಕ್ರಮಕ್ಕೆ ಪಿಡಿ ಖಾತೆಯಲ್ಲಿ 16.94 ಕೋಟಿ ರೂ. ಲಭ್ಯವಿದೆ. ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿಡಿ ಖಾತೆಯಲ್ಲಿ 2.21 ಕೋಟಿ ಹಾಗೂ ಜಿಲ್ಲೆಯ ಬರಪ್ರದೇಶ ಎಂದು ಘೋಷಿಸಿದ ಮೂರು ತಾಲೂಕುಗಳ ಬರ ನಿರ್ವಹಣೆಗೆ 4.5 ಕೋಟಿ ರೂ. ಲಭ್ಯವಿದ್ದು, ಬರ ನಿರ್ವಹಣೆಗೆ ಯಾವುದೇ ಕೊರತೆ ಇರದು. ಬಿಸಿಲಿನ ತಾಪದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು.

ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರ್‌ಗಳು, ತಾ.ಪಂ. ಇಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next