Advertisement

ಸುದೀರ್ಘ‌ ಮುಷ್ಕರದ ಹಾದಿಯಲ್ಲಿ ಬ್ಯಾಂಕ್‌ ಸಿಬಂದಿ 

10:14 AM Feb 02, 2020 | mahesh |

ತೆರಿಗೆ ಇಲಾಖೆಯವರಿಗೆ ಅವರು ಗಳಿಸಿದ ತೆರಿಗೆ ಸಂಗ್ರಹದ ಮೇಲೆ, ರಿಸರ್ವ್‌ ಬ್ಯಾಂಕ್‌, ನಬಾರ್ಡ್‌ ಮತ್ತು ಸೆಬಿ ನೌಕರರಿಗೆ ಅವರು ಗಳಿಸಿದ ಆದಾಯದ ಮೇಲೆ ಸಂಬಳ ನಿಗದಿಯಾಗದಿರುವಾಗ, ಬ್ಯಾಂಕ್‌ ನೌಕರರಿಗೆ ಮಾತ್ರ ಸಂಬಳ ಪರಿಷ್ಕರಣೆಗೆ ಏಕೆ ಈ ಅರ್ಥಿಕ ಸಂಕಷ್ಟದ ಮಾನದಂಡ ಮತ್ತು ಅಳತೆಗೋಲು

Advertisement

ಜನವರಿ 31ರಿಂದ ಬ್ಯಾಂಕ್‌ ಸಿಬ್ಬಂದಿ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಎರಡು ದಿನದ ಮುಷ್ಕರದಲ್ಲಿ ಇದ್ದಾರೆ. ಹಾಗೆಯೇ ಮಾರ್ಚ್‌ 11, 12 ಮತ್ತು 13ರಂದು ಮೂರು ದಿನಗಳ ಮುಷ್ಕರಕ್ಕೂ ನೊಟೀಸು ನೀಡಿದ್ದಾರೆ. ಆದರೂ, ತಮ್ಮ ಬೇಡಿಕೆಗಳು ಈಡೇರದಿದ್ದರೆ, ಏಪ್ರಿಲ್‌ 1, 2020ರಿಂದ ಅನಿರ್ದಿಷ್ಟ ಕಾಲದ ಮುಷ್ಕರ ಹೂಡುವ ಬೆದರಿಕೆ ಹಾಕಿದ್ದಾರೆ. ಈ ಮುಷ್ಕರಗಳು ನಡೆದರೆ, ಈ ದಿನಗಳಲ್ಲಿ ದೇಶದ ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗುವುದರೊಂದಿಗೆ , ಜನ ಸಾಮಾನ್ಯರು ತಮ್ಮ ದಿನನಿತ್ಯದ ವ್ಯವಹಾರಗಳಿಗೆ ಪರದಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಬ್ಯಾಂಕಿಂಗ್‌ ಉದ್ಯಮದಲ್ಲಿ ಮುಷ್ಕರಗಳು ಹೊಸ ಬೆಳವಣಿಗೆ ಏನಲ್ಲ. ಬ್ಯಾಂಕ್‌ ಕಾರ್ಮಿಕ ಧುರೀಣರ ಪ್ರಕಾರ ಅವರಿಗೆ ಈವರೆಗೆ ದೊರಕಿದ ಸೌಲಭ್ಯಗಳ ಹಿಂದೆ ದೀರ್ಘ‌ ಏಳು ದಶಕಗಳ ಹೋರಾಟದ ಇತಿಹಾಸವಿದ್ದು, ಅವರಿಗೂ ಮುಷ್ಕರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ. ಈ ಬಾರಿಯ ಮುಷ್ಕರದ ವಿಶೇಷವೆಂದರೆ, ಅದು ದೇಶದ ವಾರ್ಷಿಕ ಆಯವ್ಯಯವನ್ನು ಸಂಸತ್ತಿನಲ್ಲಿ ಮಂಡಿಸುವ ದಿನ ಇದು ನಡೆಯುತ್ತಿದೆ ಮತ್ತು ಇದು ಮಾಡು ಇಲ್ಲವೇ ಮಡಿ ಎನ್ನುವಂತೆ ಸುದೀರ್ಘ‌ ನಡೆಯುವಸಂಭವ ಇದೆ.

ಈ ಮುಷ್ಕರ ಏಕೆ?: ಬ್ಯಾಂಕ್‌ ಸಿಬ್ಬಂದಿ ಮುಷ್ಕರದ ಹಿಂದೆ ಬ್ಯಾಂಕುಗಳ ವಿಲೀನ, ಸುಸ್ತಿ ಸಾಲ ವಸೂಲಿ, ಸಾಲ ಮನ್ನಾ, ಹೊಸ ಪಿಂಚಣಿ ಸ್ಕೀಮ್‌ ರದ್ದತಿ, ಐದು ದಿವಸಗಳ ವಾರ ಮುಂತಾದ 12 ಬೇಡಿಕೆಗಳು ಇದ್ದರೂ, ವೇತನದಲ್ಲಿ 20% ಹೆಚ್ಚಳ, ರಿಸರ್ವ್‌ ಬ್ಯಾಂಕ್‌ ರೀತಿ ಪಿಂಚಣಿ ನವೀಕರಣ (pension updation) ಮತ್ತು ಕುಟುಂಬ ಪಿಂಚಣಿ ಹೆಚ್ಚಳ ಬೇಡಿಕೆಗಳು ಮುಖ್ಯವಾಗಿರುತ್ತವೆ. ಬ್ಯಾಂಕ್‌ ಸಿಬ್ಬಂದಿಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಬ್ಯಾಂಕ್‌ ಕಾರ್ಮಿಕರ ಸಂಘಗಳ ಮತ್ತು ಭಾರತೀಯ ಬ್ಯಾಂಕುಗಳ ಒಕ್ಕೂಟದ ಮದ್ಯದ ದ್ವಿಪಕ್ಷೀಯ ಒಪ್ಪಂದದ ಮೂಲಕ ಅವರ ವೇತನ ಪರಿಷ್ಕರಣೆ (ಹೆಚ್ಚಳ)ಯಾಗುತ್ತದೆ. ಕಳೆದ ಒಪ್ಪಂದ 31.10.2017ಕ್ಕೆ ಮುಗಿದಿದ್ದು, ಇನ್ನೊಂದು ಒಪ್ಪಂದ 01.11.2017ರಿಂದ ಆಗಬೇಕಿತ್ತು. ಬ್ಯಾಂಕ್‌ ಕಾರ್ಮಿಕ ಸಂಘಗಳು ತಮ್ಮ ಬೇಡಿಕೆಯನ್ನು ಹಿಂದಿನ ಒಪ್ಪಂದದ ಅವಧಿ ಮುಗಿಯುವುದರೊಳಗೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಹಣಕಾಸು ಸೇವಾ ಇಲಾಖೆ ಕೂಡ ಜನವರಿ 2018ರಲ್ಲಿಯೇ ಭಾರತೀಯ ಬ್ಯಾಂಕುಗಳ ಒಕ್ಕೂಟಕ್ಕೆ ಆದಷ್ಟು ಬೇಗ ಹೊಸ ಒಪ್ಪಂದ ವನ್ನು ಮಾಡಿಕೊಳ್ಳುವಂತೆ ನಿರ್ದೇಶನವನ್ನೂ ನೀಡಿತ್ತು. ಆದರೂ, ಸುಮಾರು 30 ತಿಂಗಳು ಗತಿಸಿದರೂ, 38 ಸುತ್ತಿನ ಮಾತುಕತೆಗಳು ನಡೆದರೂ ವೇತನ ಪರಿಷ್ಕರಣೆಯಾಗಿಲ್ಲ. ಸದಾ ಉತ್ತರಮುಖೀ ಯಾಗಿರುವ ಹಣದುಬ್ಬರಕ್ಕೆ ಸ್ಪಂದಿಸದೇ, ಬ್ಯಾಂಕುಗಳ ಅರ್ಥಿಕ ಸ್ಥಿತಿ ಸದೃಢವಾಗಿಲ್ಲ, ಸುಸ್ತಿ ಸಾಲ-ಅನುತ್ಪಾದಕ ಸಾಲಗಳು ಹೆಚ್ಚುತ್ತಿವೆ, ಬ್ಯಾಂಕುಗಳ ನಿರ್ವಹಣಾ ವೆಚ್ಚ ಏರುತ್ತಿದೆ ಎನ್ನುವ ಕಾರಣಗಳನ್ನು ಮುಂದೆ ಮಾಡಿ ಸಿಬ್ಬಂದಿಗೆ 2% ಸಂಬಳ ಹೆಚ್ಚಿಸುವುದಾಗಿ ಹೇಳಿದ್ದು, ಇದು ಕಾಟಾಚಾರದ ಹೆಚ್ಚಳ ಎಂದು ಬ್ಯಾಂಕ್‌ ಸಿಬ್ಬಂದಿ ಬೀದಿಗೆ ಇಳಿದಿದ್ದಾರೆ. ಈ 2% ಹೆಚ್ಚಳದ ನೀಡಿಕೆಯನ್ನು ತಿರಸ್ಕರಿಸಿ ಬ್ಯಾಂಕ್‌ ಸಿಬ್ಬಂದಿ ಐದಾರು ದಿನಗಳ ಮುಷ್ಕರ ನಡೆಸಿದ ನಂತರ ಈ ಹೆಚ್ಚಳ 13.50%ಗೆ ಬಂದು ನಿಂತಿದೆ. ಬ್ಯಾಂಕು ಸಿಬ್ಬಂದಿ 20% ಹೆಚ್ಚಳ ಕೇಳಿದರೂ, ಅವರು 15%ಗೆ ತೃಪ್ತರಾಗುವ ಸಂಭವ ಇದ್ದು, ಭಾರತೀಯ ಬ್ಯಾಂಕುಗಳ ಒಕ್ಕೂಟ ತನ್ನ ಬಿಗಿ ಮುಷ್ಟಿಯನ್ನು ಸಡಿಲಗೊಳಿಸಬೇಕಾಗಿದೆ. ಹಾಗೆಯೇ ಪ್ರತಿ ವೇತನ ಪರಿಷ್ಕರಣೆಯಲ್ಲಿ ಪಿಂಚಣಿಯನ್ನೂ ಪರಿಷ್ಕರಿಸಬೇಕು ಎನ್ನುವ ಒಪ್ಪಂದ ಇದ್ದರೂ 1995ರಿಂದ ಪಿಂಚಣಿ ನವೀಕರಣವಾಗಿಲ್ಲ. ಕಳೆದ ಮಾರ್ಚ್‌ 2019ರಲ್ಲಿ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿಯ ಪಿಂಚಣಿ ನವೀಕರಿಸಿದ ಸರ್ಕಾರ, ಉಳಿದ ಬ್ಯಾಂಕುಗಳ ನಿವೃತ್ತರ ದೃಷ್ಟಿಯಲ್ಲಿ ಮೌನವಹಿಸಿದೆ. ಕುಟುಂಬ ಪಿಂಚಣಿ ಸಾಮಾನ್ಯವಾಗಿ ಪಿಂಚಣಿಯ 50% ಇರುತ್ತಿದ್ದು, ಬ್ಯಾಂಕ್‌ ಉದ್ಯೋಗಿ ಗಳಿಗೆ 15%ಗೆ ಸೀಮಿತಗೊಳಿಸಲಾಗಿದೆ. ಪಿಂಚಣಿ ಹೆಚ್ಚಳದಿಂದ ಬ್ಯಾಂಕುಗಳ ಬ್ಯಾಲೆನ್ಸ್‌ಶೀಟ್‌ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಪಿಂಚಣಿಯು ಅಧಿಕಾರ ವರ್ಗ ನೀಡುವ ಯಾವುದೇ ಬಕ್ಷೀಸ್‌ ಆಗಿರದೇ, ಇದು ಮುಂದುವರಿದ ಸಂಬಳವಾಗಿದ್ದು, (deferred wage), ಸಿಬ್ಬಂದಿ ದುಡಿತದ ಭಾಗವೇ ಆಗಿರುತ್ತದೆ. ಬ್ಯಾಂಕುಗಳಲ್ಲಿ 2. 40 ಲಕ್ಷ ಕೋಟಿ ಪಿಂಚಣಿ ಫ‌ಂಡ್‌ ಇದ್ದು, ಅದರ ಮೇಲೆ ವಾರ್ಷಿಕ ಬಡ್ಡಿ ಆದಾಯವೇ 18,400 ಕೋಟಿ ಎನ್ನಲಾಗುತ್ತಿದೆ. ಇದಕ್ಕೆ ಹೊರತಾಗಿ ಸಿಬ್ಬಂದಿ ಸಂಬಳದಿಂದ ಪಿಂಚಣಿ ಫ‌ಂಡ್‌ಗೆ ಪ್ರತಿ ತಿಂಗಳು ಜಮಾ ಆಗುವ ಮೊತ್ತ ಬೇರೆ.

ಬ್ಯಾಂಕ್‌ ಕಾರ್ಮಿಕ ಸಂಘಗಳ ಪ್ರಕಾರ ಪಿಂಚಣಿ ಫ‌ಂಡ್ಸ್‌ಗೆ ದೊರಕುವ ಬಡ್ಡಿಯ 75% ಮೊತ್ತವು 1.20 ಲಕ್ಷ ಕುಟುಂಬ ಪಿಂಚಣಿದಾರರು ಸೇರಿ 6.91 ಲಕ್ಷ ನಿವೃತ್ತರಿಗೆ ಪಿಂಚಣಿ ನೀಡಲು ಸಾಕು. ವಾಸ್ತವವನ್ನು ನೋಡದೇ ಭಾರತೀಯ ಬ್ಯಾಂಕುಗಳ ಒಕ್ಕೂಟ 93000 ಕೋಟಿ ಬೇಕಾಗುತ್ತದೆ ಎಂದು ವರ್ಷಗಳಿಂದ ಪಿಂಚಣಿ ಹೆಚ್ಚಳದಿಂದ ಆಗುವ ಹಣಕಾಸು ಭಾರವನ್ನು ಲೆಕ್ಕಹಾಕುತ್ತಿದೆ ಎಂದು ಬ್ಯಾಂಕ್‌ ಸಿಬ್ಬಂದಿ ಆರೋಪಿಸುತ್ತಿದ್ದಾರೆ. ಪಿಂಚಣಿ ಭಾರ 13,300 ಕೋಟಿ ಮೀರದು ಮತ್ತು ಅದು ಬ್ಯಾಲೆನ್ಸ್‌ ಶೀಟ್‌ನಿಂದ ಕೊರೆದು ನೀಡುವುದಲ್ಲ ಎಂದು ಅವರು ವಾದಿಸುತ್ತಿ¨ªಾರೆ.

ಕೆಲವು ಮಾಧ್ಯಮಗಳ ವರದಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಕಂಪನಿಗಳ 4.93 ಲಕ್ಷ ಸಾಲವನ್ನು ಮತ್ತು ಕಳೆದ 10 ವರ್ಷಗಳಲ್ಲಿ ರೈತರ 4.70 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ಅದರೆ, ತನ್ನ ಸಿಬ್ಬಂದಿಗೆ ಐದು ವರ್ಷಕ್ಕೊಮ್ಮೆ 15% ಸಂಬಳ ಹೆಚ್ಚಿಸಲು ಅರ್ಥಿಕ ಸಂಕಟ ಎದುರಾಗುತ್ತದೆ ಎಂದು ಸಿಬ್ಬಂದಿ ವ್ಯಾಕುಲತೆ ವ್ಯಕ್ತಮಾಡುತ್ತಾರೆ. ಕಳೆದ ಏಳು ದಶಕಗಳಲ್ಲಿ ಒಂದೇ ಒಂದು ಬಾರಿ 78 ದಿನಗಲ್ಲಿ ವೇತನ ಪರಿಷ್ಕರಣೆಯಾಗಿದ್ದು ಬಿಟ್ಟರೆ, ಉಳಿದ 9 ಬಾರಿ ಸರಾಸರಿ 450-500 ದಿನಗಳ ವಿಳಂಬ ಮತ್ತು ದೀರ್ಘ‌ ಹೋರಾಟದ ನಂತರವೇ ವೇತನ ಪರಿಷ್ಕರಣೆಯಾಗಿದೆ ಎಂದು ಅವರು ಎತ್ತಿ ತೋರಿಸುತ್ತಾರೆ. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಗಳಿಗೆ ಹಲವಾರು ಮನವಿಗಳನ್ನು ನೀಡಿದರೂ,. ಅರ್ಥಿಕ ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದರೂ ಮತ್ತು ಹಣಕಾಸು ಮಂತ್ರಾಲಯದ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟರೂ, ನೂರಾರು ಸಂಸದರ ಮೂಲಕ ಲಾಬಿ ನಡೆಸಿದರೂ ಸಹಾನುಭೂತಿಯಂದ ಪರಿಶೀಲಿಸುವ ಭರವಸೆ ಸಿಕ್ಕಿತೇ ವಿನಹ ಪರಿಹಾರ ಸಿಗದಿರುವುದರಿಂದ ಕೊನೆ ಅಸ್ತ್ರವಾಗಿ ಬೀದಿಗೆ ಇಳಿದಿದ್ದೇವೆ ಎಂದು ಅವರು ಹೇಳುತ್ತಾರೆ. ಶಾಲಾ ಶಿಕ್ಷಕರ ಸಂಬಳಕ್ಕೆ ಉತ್ತೀರ್ಣದ ಪ್ರಮಾಣದ ಮಾನದಂಡವಿಲ್ಲ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸಂಬಳಕ್ಕೆ ರೋಗಿಗಳ ಸಂಖ್ಯೆ ಮತ್ತು ಆದಾಯದ ನಂಟು ಇರುವುದಿಲ್ಲ., ಪೊಲೀಸರ ಸಂಬಳಕ್ಕೆ ಅವರು ವಸೂಲು ಮಾಡಿದ ದಂಡಕ್ಕೆ ಸಂಬಂಧವಿಲ್ಲ, ನ್ಯಾಯಾಧೀಶರ ಸಂಬಳಕ್ಕೆ ಅವರು ಡಿಸ್‌ಪೋಸ್‌ ಮಾಡಿದ ಪ್ರಕರಣಗಳಿಗೆ ಗಂಟುಹಾಕುವುದಿಲ್ಲ, ರೈಲು ಇಲಾಖೆಯವರಿಗೆ ಅವರು ಗಳಿಸಿದ ಅದಾಯದ ಮೇಲೆ, ತೆರಿಗೆ ಇಲಾಖೆಯವರಿಗೆ ಅವರು ಗಳಿಸಿದ ತೆರಿಗೆ ಸಂಗ್ರಹದ ಮೇಲೆ, ರಿಸರ್ವ್‌ ಬ್ಯಾಂಕ್‌, ನಬಾರ್ಡ್‌ ಮತ್ತು ಸೆಬಿ ನೌಕರರಿಗೆ ಅವರು ಗಳಿಸಿದ ಆದಾಯದ ಮೇಲೆ ಸಂಬಳ ನಿಗದಿಯಾಗದಿರುವಾಗ, ಬ್ಯಾಂಕ್‌ ನೌಕರರಿಗೆ ಮಾತ್ರ ಸಂಬಳ ಪರಿಷ್ಕರಣೆಗೆ ಏಕೆ ಈ ಅರ್ಥಿಕ ಸಂಕಷ್ಟದ ಮಾನದಂಡ ಮತ್ತು ಅಳತೆಗೋಲು ಎಂದು ಅವರು ಪ್ರಶ್ನಿಸುತ್ತಾರೆ. ಪ್ರತಿ ಬ್ಯಾಂಕೂ ಲಾಭಗಳಿಸುತ್ತಿದ್ದು, ಅದು ಸುಸ್ತಿ ಸಾಲಕ್ಕೆ ಟ್ರಾನ್ಸಫ‌ರ್‌ ಆಗುತ್ತಿರುವುದರಿಂದ ಬ್ಯಾಂಕುಗಳು ಸಂಕಷ್ಟದಲ್ಲಿವೆ, ಸುಸ್ತಿ ಸಾಲ ವಸೂಲಿಗೆ ಪರಿಣಾಮಕಾರಿ ಕಾನೂನು ಇಲ್ಲದಿರುವುದು ತಮ್ಮ ತಪ್ಪಲ್ಲ ಎಂದು ಅವರು ಹೇಳುತ್ತಾರೆ.

Advertisement

ಈ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ, ನ್ಯಾಯಾ ಧೀಶರುಗಳಿಗೆ, ರಾಷ್ಟ್ರಪತಿ-ಉಪರಾಷ್ಟ್ರಪತಿಗಳಿಗೆ ಸರ್ಕಾರಿ ನೌಕರರಿಗೆ ಧಾರಾಳವಾಗಿ 40% ನಿಂದ 200% ವರೆಗೆ ಸಂಬಳ ಪರಿಷ್ಕರಣೆ ಆಗಿರುವಾಗ, ಬ್ಯಾಂಕ್‌ ಸಿಬ್ಬಂದಿಗಳಿಗೆ ಮಾತ್ರ ಏಕೆ ಈ ಶಿಕ್ಷೆ ಎಂದು ಅವರು ಧ್ವನಿ ಎತ್ತಿ ಕೇಳುತ್ತಿ¨ªಾರೆ. ಜನವರಿ 27ರಂದು ಮತ್ತು 30ರಂದು ಮುಖ್ಯ ಕಾರ್ಮಿಕ ಆಯುಕ್ತರು ಬ್ಯಾಂಕ್‌ ಕಾರ್ಮಿಕ ಸಂಘಗಳು, ಹಣಕಾಸು ಮಂತ್ರಾಲಯ ಮತ್ತು ಭಾರತೀಯ ಬ್ಯಾಂಕುಗಳ ಒಕ್ಕೂಟಗಳ ಸಂಧಾನ ನಡೆಸಿದರೂ, ಮುಷ್ಕರ ನಿಲ್ಲಿಸುವ ಪ್ರಯತ್ನ ವಿಫ‌ಲವಾಗಿದೆ. ಸಂಬಂಧಪಟ್ಟ ಪಕ್ಷಗಳು ತಮ್ಮ ನಿಲುವಿಗೆ ದೃಢವಾಗಿ ಅಂಟಿಕೊಂಡಿವೆ.

ಅಂತಿಮ ಮತ್ತು ಸ್ಪಷ್ಟ ನಿಲುವು ಪ್ರಕಟಿಸಬೇಕಾದ ಹಣಕಾಸು ಮಂತ್ರಾಲಯ ಮೀನಮೇಷ ಎಣಿಸುತ್ತಿರುವುದರಿಂದ ಸಂಧಾನ ಯಶಸ್ವಿ ಆಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಜನಸಾಮಾನ್ಯ ಗ್ರಾಹಕರ ಹಿತದೃಷ್ಟಿಯಲ್ಲಿ ಮತ್ತು ಮುಷ್ಕರ ದಿಂದಾಗಿ ದೇಶದ ಅರ್ಥಿಕತೆ ಇನ್ನೂ ಹೆಚ್ಚಿನ ತೊಂದರೆ ಅನುಭವಿಸದಂತೆ ಸರ್ಕಾರ ತ್ವರಿತವಾಗಿ ದೃಢವಾದ ಕ್ರಮ ತೆಗೆದುಕೊಳ್ಳುವ ಕಾಲ ಸನ್ನಿಹಿತ ಆಗಿದೆ.

– ರಮಾನಂದ ಶರ್ಮಾ, ನಿವೃತ್ತ ಬ್ಯಾಂಕರ್‌

Advertisement

Udayavani is now on Telegram. Click here to join our channel and stay updated with the latest news.

Next