Advertisement

ಬೆಂಗಳೂರಿಗೆ ಸ್ವಚ್ಛತೆಯೇ ಹಬ್ಬವಾಗಬೇಕು: ಹೈಕೋರ್ಟ್‌

12:23 PM Sep 18, 2018 | Team Udayavani |

ಬೆಂಗಳೂರು: “ಹಬ್ಬದ ದಿನಗಳಲ್ಲಿ ಜಾಹೀರಾತುಗಳಿಂದ ಆದಾಯ ಬರುವುದು ಮುಖ್ಯವಲ್ಲ, ಬೆಂಗಳೂರಿಗೆ ಸ್ವಚ್ಛತೆಯೇ ಹಬ್ಬವಾಗಬೇಕು’ ಹೀಗೆಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಅನಧೀಕೃತ ಜಾಹೀರಾತು ಫ‌ಲಕಗಳ ತೆರವಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ಜಾಹೀರಾತು ಫ‌ಲಕಗಳ ಮಾಲೀಕರ ಪರ ವಕೀಲರು, “ನಗರದಲ್ಲಿ ಜಾಹೀರಾತು ಫ‌ಲಕಗಳಿಗೆ ಒಂದು ವರ್ಷ ನಿಷೇಧ ಹೇರಲಾಗಿದೆ. ಆದರೆ, ಹಬ್ಬಗಳ ಸಂದರ್ಭದಲ್ಲಿ ಜಾಹೀರಾತುಗಳಿಂದಲೇ ಬಿಬಿಎಂಪಿಗೆ ಸಾಕಷ್ಟು ಆದಾಯ ಬರುತ್ತದೆ ಎಂದರು.

ಇದಕ್ಕೆ ತೀಕ್ಷ್ಣ ಮಾತುಗಳಲ್ಲಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾಹೀರಾತುಗಳಿಂದ ಬರುವ ಆದಾಯ ಮುಖ್ಯವಲ್ಲ. ಹೋರ್ಡಿಂಗ್ಸ್‌, ಫ್ಲೆಕ್ಸ್‌, ಬ್ಯಾನರ್‌ಗಳಿಲ್ಲದ ಬೆಂಗಳೂರು ನಗರ ಸ್ವಚ್ಛ ಹಾಗೂ ಸುಂದರವಾಗಿ ಕಾಣುತ್ತದೆ. ಈ ಸ್ವಚ್ಛತೆ ಮತ್ತು ಸೌಂದರ್ಯವೇ ಬೆಂಗಳೂರಿನ ಹಬ್ಬವಾಗಬೇಕು. ಸ್ವಚ್ಛತೆಗೆ ಅಭಿಯಾನ ಬೇಕಿಲ್ಲ, ಬಿಬಿಎಂಪಿ ಪ್ರತಿನಿತ್ಯ ಸ್ವಚ್ಛತೆಯ ಮಂತ್ರ ಜಪಿಸಬೇಕು. ಆದೇ ರೀತಿ ನಗರದ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಗಮನ ಹರಿಸಬೇಕು ಎಂದು ಬಿಬಿಎಂಪಿಗೆ ಕಿವಿಮಾತು ಹೇಳಿತು.

ನಗರದಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರಿದ್ದ ವಿಭಾಗೀಯಪೀಠ ವಿಚಾರಣೆ ಮುಂದುವರಿಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದಿಸಿ, ನಗರದಲ್ಲಿ 1,600 ಅನಧಿಕೃತ ಹೋರ್ಡಿಂಗ್‌ಗಳಿವೆ. ಇವುಗಳ ಅಳವಡಿಕೆಗೆ ಪಡೆದ ಪರವಾನಗಿ ಕುರಿತ ದಾಖಲೆ ಸಲ್ಲಿಸುವಂತೆ ಸೂಚಿಸಿ ಜಾರಿ ಮಾಡಿದ್ದ ನೋಟಿಸ್‌ಗಳಿಗೆ ಹೋರ್ಡಿಂಗ್‌ಗಳ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು 212 ಅನಧಿಕೃತ ಹೋರ್ಡಿಂಗ್‌ಗಳನ್ನು ಅವುಗಳ ಮಾಲೀಕರೇ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ ಎಂದು ವಿವರಿಸಿದರು.

Advertisement

ಈ ವೇಳೆ ನಗರದಲ್ಲಿನ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿಯಿಂದ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಕೇಳಿತು. ಬಿಬಿಎಂಪಿ ಪರ ವಕೀಲರು ಉತ್ತರಿಸಿ, ಪ್ರತಿ ದಿನ ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಟಿಪ್ಪರ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಆದರೆ, ಈ ವಿಷಯದಲ್ಲಿ ತಕರಾರು ಏರ್ಪಟ್ಟಿದ್ದು, ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಜಾಹೀರಾತು ಫ‌ಲಕಗಳು ಹಾಗೂ ಅವುಗಳ ತೆರವಿಗೆ ಇರುವ ಅಡಚಣೆಗಳೇನು? ಹಾಗು ಸಿವಿಲ್‌ ಕೋರ್ಟ್‌ಗಳಲ್ಲಿ ಈ ಸಂಬಂಧ ಬಾಕಿ ಇರುವ ವ್ಯಾಜ್ಯಗಳ ವಿವರ ಒದಗಿಸುವಂತೆ ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆಯನ್ನು ಅ.1ಕ್ಕೆ ಮುಂದೂಡಿತು.

ಆದೇಶ ತಡೆಗೆ ನಕಾರ: ನಗರದಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಸೇರಿ ಎಲ್ಲ ಮಾದರಿ ಜಾಹೀರಾತು ಫಲಕಗಳ ಅಳವಡಿಕೆಯನ್ನು ಒಂದು ವರ್ಷ ಕಾಲ ನಿಷೇಧಿಸಿ ಬಿಬಿಎಂಪಿ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಈ ಕುರಿತು ಮೆಸರ್ಸ್‌ ಪಾಪ್ಯುಲರ್‌ ಅಡ್ವಟೈìಸರ್ ಸೇರಿ 11 ಜಾಹೀರಾತು ಏಜೆನ್ಸಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್‌ ಕೋಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next